ತಮಿಳು ಚಿತ್ರದಿಂದ ಕನ್ನಡ ನಟ ಕಿಕ್ ಔಟ್: ನಟ ಯೋಗಿ ಹೇಳಿದಿಷ್ಟು.!
ತಮಿಳುನಾಡಿನ ಪತ್ರಕರ್ತರು ಹಾಗೂ ಮಾಧ್ಯಮಗಳ ಮುಂದೆ ನಿಂತು ಮಂಡ್ಯದಲ್ಲಿ ಇರುವ ಕಾವೇರಿ ನೀರಿನ ಸಮಸ್ಯೆ ಕುರಿತು ವಿವರಿಸಿದ ಕನ್ನಡ ನಟ ಯೋಗಿಗೆ ಇದೀಗ ದೊಡ್ಡ ಶಾಕ್ ಸಿಕ್ಕಿದೆ. ತಮಿಳು ಚಿತ್ರದಿಂದ ನಟ ಯೋಗಿಯನ್ನ ಕೈಬಿಡಲಾಗಿದೆ.
ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ, ಕೆಲವೇ ದಿನಗಳಲ್ಲಿ ತಮಿಳು ಸಿನಿಮಾ 'ಪಾರ್ತಿಬನ್ ಕಾದಲ್' ಶೂಟಿಂಗ್ ಶುರುವಾಗುತ್ತಿತ್ತು. ಆದ್ರೆ, ಅಷ್ಟರಲ್ಲಿ ಚಿತ್ರದಿಂದ ಯೋಗಿ ಅವರನ್ನ ಹೊರಹಾಕಲಾಗಿದೆ.
ಹಾಗ್ನೋಡಿದ್ರೆ, ಕಾವೇರಿ ಸಮಸ್ಯೆ ಬಗ್ಗೆ ಯೋಗಿ ವಿವರಿಸಿದ್ದಾರೆ ಅಷ್ಟೇ. ಆದ್ರೆ, ಅದೇ ಮುಂದೆ ವಿವಾದ ಆಗಬಹುದು ಎಂದು ಊಹಿಸಿ ಚಿತ್ರತಂಡ ಯೋಗಿಗೆ ಗೇಟ್ ಪಾಸ್ ನೀಡಿದೆ.
ಅವಕಾಶವನ್ನ ಅರಸಿ ಕಾಲಿವುಡ್ ಗೆ ಹೋಗಿದ್ದ ನಟ ಯೋಗಿಗೆ ತಮಿಳು ಚಿತ್ರರಂಗ ಕೊಟ್ಟಿರುವ ಕೊಡುಗೆ ಇದು. ಈ ವಿಚಾರದ ಬಗ್ಗೆ ಯೋಗಿ ಹೇಳಿದಿಷ್ಟು....

ಮುಂದೆ ಗಲಾಟೆ ಆದರೆ...
''ಇದಕ್ಕಿದ್ದಂತೆ ಕಾವೇರಿ ಬಗ್ಗೆ ಪ್ರಶ್ನೆ ಕೇಳಿದರು. ಕಾವೇರಿ ಸಮಸ್ಯೆ ಏನಿದೆ, ಅದರ ಬಗ್ಗೆ ನಾನು ಮಾತನಾಡಿದ್ದೆ. ಅಣ್ಣಾವ್ರು ಇಷ್ಟ ಅಂತ ಹೇಳಿದ್ದೆ ಅಷ್ಟೇ. ಇದರ ಬಗ್ಗೆ ನೀವು ಮಾತನಾಡಬಾರದಿತ್ತು. ಸಿನಿಮಾ ರಿಲೀಸ್ ಟೈಮ್ ನಲ್ಲಿ ಇದನ್ನ ಇಟ್ಟುಕೊಂಡು ಯಾರಾದರೂ ಗಲಾಟೆ ಮಾಡಿದರೆ, ಚಿತ್ರವನ್ನ ಯಾರೂ ನೋಡದೇ ಇದ್ದರೆ.? ಈಗಲೇ ಹೀಗೆ ಮಾತನಾಡಿದರೆ ನಾಳೆ ಸಮಸ್ಯೆ ದೊಡ್ಡದಾಗುತ್ತೆ.. ಹೀಗಾಗಿ ಬೇಡ ಅಂತ ನಿರ್ದೇಶಕರು ಹೇಳಿದರು. ಚಿತ್ರದಿಂದ ನನ್ನ ಕೈಬಿಟ್ಟರು'' ಎನ್ನುತ್ತಾರೆ ನಟ ಯೋಗಿ.

ತಪ್ಪಾಗಿ ಭಾವಿಸಿದರೆ ಹೇಗೆ.?
''ವ್ಯವಸ್ಥಿತವಾಗಿ ನನ್ನನ್ನ ಸಿಲುಕಿಸಿದರು ಅಂತ ಅನ್ಸುತ್ತೆ. ಉದ್ದೇಶಪೂರ್ವಕವಾಗಿ ಹೀಗೆ ಮಾಡಿದ್ದಾರೆ ಅನಿಸುತ್ತಿದೆ. ನಾನೇನೂ ತಪ್ಪಾಗಿ ಮಾತನಾಡಿಲಿಲ್ಲ. ಪರಿಸ್ಥಿತಿಯನ್ನ ವಿವರಿಸಿದೆ. ನಾವೆಲ್ಲ ಅಣ್ಣ-ತಮ್ಮಂದಿರು ಇದ್ದ ಹಾಗೆ ಅಂತಲೂ ಹೇಳಿದ್ದೇನೆ. ಆದರೂ, ಅದನ್ನೇ ತಪ್ಪಾಗಿ ಭಾವಿಸಿದರೆ ಹೇಗೆ.?'' ಎಂದು ಪ್ರಶ್ನಿಸುತ್ತಾರೆ ಯೋಗಿ.

ಕೊರಗು ಇಲ್ಲ.!
''ನನಗೆ ಒಂದು ಅವಕಾಶ ಹೋಯ್ತು ಅನ್ನೋದು ನಿಜ. ಆದ್ರೆ, ಅದರ ಬಗ್ಗೆ ನನಗೆ ಕೊರಗು ಇಲ್ಲ. ಮತ್ತೆ ಅವಕಾಶ ಸಿಕ್ಕರೆ ಹೋಗುವೆ. ಎಲ್ಲೇ ಹೋದರೂ ನನ್ನ ಭಾಷೆ, ಅಭಿಮಾನ ಬಿಡಲ್ಲ'' - ಯೋಗಿ.

ಅವಕಾಶಗಳಿಗಾಗಿ ಎದುರು ನೋಡುತ್ತಿರುವ ನಟ
ಸದ್ಯ ತಮಿಳು ಚಿತ್ರರಂಗದಿಂದ ಅವಕಾಶ ವಂಚಿತರಾಗಿರುವ ಯೋಗಿ ಕನ್ನಡದಲ್ಲೂ ಆಫರ್ ಗಳಿಗಾಗಿ ಕಾಯುತ್ತಿದ್ದಾರೆ. ''ಕನ್ನಡ ಚಿತ್ರರಂಗ ನನಗೊಂದು ಒಳ್ಳೆಯ ಅವಕಾಶ ಕೊಡಲಿ'' ಎಂದು ಕೇಳಿಕೊಳ್ಳುತ್ತಾರೆ ನಟ ಯೋಗಿ.


Click it and Unblock the Notifications











