ಹಿಂದೆ ಸರಿದ 'ಭಜರಂಗಿ': ಧೈರ್ಯ ತೋರಿದ ಯೋಗಿಯ 'ಲಂಕೆ'
ಕರ್ನಾಟಕದಲ್ಲಿ ಕೋವಿಡ್ ಸದ್ಯಕ್ಕೆ ನಿಯಂತ್ರಣದಲ್ಲಿದ್ದರೂ ಹೊರರಾಜ್ಯಗಳಲ್ಲಿ ಹೊಸ ಕೇಸ್ ಏರಿಕೆಯಾಗುತ್ತಿರುವುದು ಸಹಜವಾಗಿ ಆತಂಕ ಮೂಡಿಸಿದೆ. ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಪ್ರತಿನಿತ್ಯ ಹೆಚ್ಚು ಕೋವಿಡ್ ಪ್ರಕರಣ ವರದಿಯಾಗುತ್ತಿದೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸಲಾಗುತ್ತಿದೆ. ಗಡಿ ರಾಜ್ಯಗಳಲ್ಲಿ ವೀಕೆಂಡ್ ಲಾಕ್ಡೌನ್, ಪ್ರತಿನಿತ್ಯ ನೈಟ್ ಕರ್ಫ್ಯೂ ಜಾರಿಯಲ್ಲಿದೆ.
Recommended Video
ಇಂತಹ ಆತಂಕದ ಪರಿಸ್ಥಿತಿಯಲ್ಲೂ ಚಿತ್ರಮಂದಿರಗಳು ಕಾರ್ಯನಿರ್ವಹಿಸಲು ಅನುಮತಿ ನೀಡಿದೆ ರಾಜ್ಯ ಸರ್ಕಾರ. ಆದರೆ, ಕೇವಲ 50 ಪರ್ಸೆಂಟ್ ಆಸನ ಭರ್ತಿಗೆ ಅವಕಾಶ ಕೊಟ್ಟಿದೆ. ಇದರಿಂದ ಸ್ಟಾರ್ ನಟರ ಚಿತ್ರಗಳು ಥಿಯೇಟರ್ಗೆ ಬರಲು ಮುಂದಾಗ್ತಿಲ್ಲ. 100 ಪರ್ಸೆಂಟ್ ಮಾಡಿದ್ರೆ ಚಿತ್ರಮಂದಿರಕ್ಕೆ ಬರ್ತೇವೆ ಎಂದು ಕಾದು ಕುಂತಿವೆ. ಈ ನಡುವೆ ಶಿವರಾಜ್ ಕುಮಾರ್ ಅಭಿನಯದ ಭಜರಂಗಿ 2 ಸಿನಿಮಾ ಸೆಪ್ಟೆಂಬರ್ 10ರಂದು ರಿಲೀಸ್ ಆಗುತ್ತದೆ ಎಂದು ಕೊನೆಯವರೆಗೂ ಹೇಳಿಕೊಂಡೆ ಬಂದಿತ್ತು. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚು ಎಂಬ ಕಾರಣಕ್ಕೆ ಬಿಡುಗಡೆಯಿಂದ ಹಿಂದೆ ಸರಿದಿದೆ.
ಆದರೆ ಲೂಸ್ ಮಾದ ಯೋಗೇಶ್ ನಟನೆಯ ಲಂಕೆ ಸಿನಿಮಾ ಬಿಡುಗಡೆಗೆ ಧೈರ್ಯ ತೋರಿದೆ. 50 ಪರ್ಸೆಂಟ್ ಇದ್ದರೂ ಈಗಲೇ ಸಿನಿಮಾ ರಿಲೀಸ್ ಮಾಡುತ್ತೇವೆ ಎಂದು ನಿರ್ಮಾಪಕರು ಮಾಹಿತಿ ನೀಡಿದ್ದಾರೆ. ಹೌದು, ಗೌರಿ-ಗಣೇಶ ಹಬ್ಬದ ಪ್ರಯುಕ್ತ ಲಂಕೆ ಸಿನಿಮಾ ಸೆಪ್ಟೆಂಬರ್ 10 ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ.
ರಾಮ್ ಪ್ರಸಾದ್ ನಿರ್ದೇಶನದಲ್ಲಿ ತಯಾರಾಗಿರುವ ಲಂಕೆ ಸಿನಿಮಾ ಈ ಹಿಂದೆ ಜುಲೈ 19ಕ್ಕೆ ಬಿಡುಗಡೆಯಾಗಬೇಕಿತ್ತು. ಆ ಸಮಯದಲ್ಲಿ ಕೇವಲ 50 ಪರ್ಸೆಂಟ್ಗೆ ಅವಕಾಶ ಸಿಕ್ಕಿತ್ತು. ಆದರೆ 100 ಪರ್ಸೆಂಟ್ ನಿಯಮ ಜಾರಿಯಾಗಲಿ ಎಂದು ಕಾದರು. ಅಗಸ್ಟ್ ತಿಂಗಳಲ್ಲಿ ರಿಲೀಸ್ ಮಾಡಲು ಪ್ಲಾನ್ ಮಾಡಿದರು. ಆದರೆ, ಎರಡನೇ ಬಾರಿಯೂ ರಿಲಿಸ್ ಆಗಲಿಲ್ಲ. ಇದೀಗ, ಸೆಪ್ಟೆಂಬರ್ 10ಕ್ಕೆ ಬರುವುದಾಗಿ ಹೇಳಿದೆ. ಮುಂದೆ ಓದಿ...

200 ಥಿಯೇಟರ್ನಲ್ಲಿ 'ಲಂಕೆ'
ಈ ಕುರಿತು ಇಂಡಿಯನ್ ಎಕ್ಸ್ಪ್ರೆಸ್ ಜೊತೆ ಮಾತನಾಡಿರುವ ನಿರ್ದೇಶಕ ರಾಮ್ ಪ್ರಸಾದ್ ಕರ್ನಾಟಕದ 200 ಚಿತ್ರಮಂದಿರಗಳಲ್ಲಿ ಲಂಕೆ ಸಿನಿಮಾ ಬಿಡುಗಡೆ ಮಾಡುವ ಸಿದ್ಧತೆ ನಡೆದಿದೆ ಎಂದಿದ್ದಾರೆ. ''ನಾವು ಸಾಕಷ್ಟು ಮಾಹಿತಿ ಕಲೆ ಹಾಕಿದ್ದೇವೆ, ಲಂಕೆ ಚಿತ್ರದೊಂದಿಗೆ ಅನೇಕ ಚಿತ್ರಮಂದಿರಗಳು ಮತ್ತೆ ಪುನರಾರಂಭಿಸುವುದಕ್ಕೆ ನಿರ್ಧರಿಸಿದ್ದಾರೆ. ಇದು ಖುಷಿಯ ವಿಚಾರ'' ಎಂದಿದ್ದಾರೆ. ಲೂಸ್ ಮಾದ ನಾಯಕನಾಗಿ ನಟಿಸಿರುವ ಲಂಕೆ ಚಿತ್ರದಲ್ಲಿ ಕೃಷಿ ತಾಪಂಡ, ಕಾವ್ಯ ಶೆಟ್ಟಿ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ದಿವಂಗತ ನಟ ಸಂಚಾರಿ ವಿಜಯ್ ಸಹ ಮುಖ್ಯ ಪಾತ್ರವೊಂದರಲ್ಲಿ ನಟಿಸಿದ್ದಾರೆ. ಕಾರ್ತಿಕ್ ಶರ್ಮಾ ಸಂಗೀತ ಸಂಯೋಜನೆ ಮಾಡಿದ್ದು, ರಮೇಶ್ ಬಾಬು ಛಾಯಾಗ್ರಹಣವಿದೆ.

ಮುಂದಕ್ಕೆ ಹೋಯ್ತು ಭಜರಂಗಿ 2
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯಿಸಿರುವ ಭಜರಂಗಿ 2 ಸಿನಿಮಾ ಸೆಪ್ಟೆಂಬರ್ 10ಕ್ಕೆ ಬರಬೇಕಿತ್ತು. ಆದರೆ ಭಜರಂಗಿ ಸದ್ಯಕ್ಕಿಲ್ಲ ಎಂದು ಸ್ವತಃ ಶಿವರಾಜ್ ಕುಮಾರ್ ವಿಡಿಯೋ ಮೂಲಕ ಸ್ಪಷ್ಟನೆ ಕೊಟ್ಟಿದ್ದಾರೆ. ''ಥಿಯೇಟರ್ ತುಂಬಾ ಜನ ಇದ್ದಾಗ ಆ ಸಿನಿಮಾ ನೋಡೋಕೆ ಒಂದು ಮಜಾ ಇರುತ್ತೆ. ಈಗಿನ ಪರಿಸ್ಥಿತಿಯಲ್ಲಿ ಅದು ಸಾಧ್ಯವಾಗ್ತಿಲ್ಲ. ದಯವಿಟ್ಟು ಯಾರೂ ಬೇಸರ ಮಾಡಿಕೊಳ್ಳಬೇಡಿ. ಆದಷ್ಟೂ ಬೇಗ ಬಿಡುಗಡೆ ಮಾಡಲು ನಾವು ಪ್ರಯತ್ನ ಪಡ್ತೇವೆ. ತುಂಬಾ ವಿಳಂಬನೂ ಮಾಡಲ್ಲ'' ಎಂದು ಶಿವರಾಜ್ ಕುಮಾರ್ ವಿನಂತಿಸಿದರು.

ವರ್ಷದ ನಿರೀಕ್ಷೆಯ ಸಿನಿಮಾ
ಭಜರಂಗಿ 2 ಚಿತ್ರಕ್ಕೆ ಹರ್ಷ ಮಾಸ್ಟರ್ ಆಕ್ಷನ್ ಕಟ್ ಹೇಳಿದ್ದು, ಜಯಣ್ಣ-ಭೋಗೇಂದ್ರ ನಿರ್ಮಾಣ ಮಾಡಿದ್ದಾರೆ. ಅರ್ಜುನ್ ಜನ್ಯ ಮ್ಯೂಸಿಕ್ ಕಂಪೋಸ್ ಮಾಡಿದ್ದು, ನಾಯಕಿಯಾಗಿ 'ಜಾಕಿ' ಭಾವನಾ ನಟಿಸಿದ್ದಾರೆ. ನಟಿ ಶ್ರುತಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 'ಭಜರಂಗಿ' ಸಿನಿಮಾದಲ್ಲಿ ಗಮನ ಸೆಳೆದಿದ್ದ ಸೌರವ್ ಲೋಕೇಶ್ ಈ ಸಿನಿಮಾದಲ್ಲಿಯೂ ಇದ್ದಾರೆ. ಶಿವರಾಜ್ ಕೆ.ಆರ್ ಪೇಟೆ ಸಹ ನಟಿಸಿದ್ದಾರೆ.

ಸಿಎಂ ಬಳಿ ಮನವಿ ಮಾಡಲಾಗಿದೆ
ಕರ್ನಾಟಕದಲ್ಲಿ ಚಿತ್ರಮಂದಿರಗಳಿಗೆ 100 ಪರ್ಸೆಂಟ್ ಅವಕಾಶ ಕೊಡಿ ಎಂದು ವಾಣಿಜ್ಯ ಮಂಡಳಿ ಕಡೆಯಿಂದ ಹಲವರು ಮನವಿ ಮಾಡಿದ್ದಾರೆ. ಸದ್ಯದ ಪರಿಸ್ಥಿತಿ ಅವಲೋಕಿಸಿ, ತಜ್ಞರ ಸಲಹೆ ಪಡೆದಿರುವ ಸಿಎಂ ಬಸವರಾಜ್ ಬೊಮ್ಮಾಯಿ ಸದ್ಯಕ್ಕೆ 100 ಪರ್ಸೆಂಟ್ ಆಗಲ್ಲ. ಇನ್ನಷ್ಟು ದಿನ ಕಾಯಬೇಕು ಎಂದು ತಿಳಿಸಿದ್ದಾರೆ.


Click it and Unblock the Notifications











