ಗಣೇಶ್ ಹುಟ್ಟುಹಬ್ಬ ವಿಶ್ ನಲ್ಲಿ ತಪ್ಪು: ಯೋಗರಾಜ್ ಭಟ್ ಕೊಟ್ಟ ಕಾರಣ
ಗಾಳಿಪಟ 2 ಚಿತ್ರತಂಡ ಗೋಲ್ಡನ್ ಸ್ಟಾರ್ ಗಣೇಶ್ ಹುಟ್ಟುಹಬ್ಬಕ್ಕೆ ಶುಭಾಶಯ ತಿಳಿಸಿದೆ. ಆದರೆ ಈ ಶುಭಾಶಯ ಸಣ್ಣ ಮಟ್ಟಿನ ಚರ್ಚೆ ಹುಟ್ಟುಹಾಕಿದೆ.
Recommended Video
ದಿನಪತ್ರಿಕೆಗಳಿಗೆ ಶುಭಾಶಯ ಜಾಹೀರಾತು ನೀಡಿರುವ ಚಿತ್ರತಂಡ, ಜಾಹೀರಾತಿನಲ್ಲಿ ಕನ್ನಡ ಪದಗಳನ್ನು ತಪ್ಪಾಗಿ ಬಳಸಿದೆ. ಇದು ಚರ್ಚೆಗೆ ಕಾರಣವಾಗಿದೆ.
ಹುಟ್ಟುಹಬ್ಬದ ಶುಭಾಶಯಗಳು ಎಂಬುದನ್ನು 'ಹುದ್ಟಿಟಹಬ್ಬದ ಶುಶಾಭಯ' ಎಂದು ಗಾಳಿಪಟ 2 ಚಿತ್ರತಂಡ ಜಾಹೀರಾತಿನಲ್ಲಿ ಹೇಳಿದೆ. ಈ ಬಗ್ಗೆ ಚರ್ಚೆ ಪ್ರಾರಂಭವಾಗಿದ್ದು, ಹೀಗೆ ಕನ್ನಡವನ್ನು ತಪ್ಪಾಗಿ ಬಳಸಿದ್ದರ ಬಗ್ಗೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಇದನ್ನು ಉದ್ದೇಶಪೂರ್ವಕವಾಗಿಯೇ ಬಳಸಲಾಗಿದೆ ಎಂದಿದ್ದಾರೆ.
ಆದರೆ ಇದಕ್ಕೆಲ್ಲಾ ಗಾಳಿಪಟ 2 ಚಿತ್ರದ ನಿರ್ದೇಶಕ ಯೋಗರಾಜ್ ಭಟ್ ಅವರು ಫೇಸ್ಬುಕ್ನಲ್ಲಿ ಲೈವ್ ನಡೆಸಿ ಸ್ಪಷ್ಟನೆ ನೀಡಿದ್ದಾರೆ.

'ಹುದ್ಟಿಟಹಬ್ಬದ ಶುಶಾಭಯ' ಎಂದು ತಪ್ಪಾಗಿ ಬರೆಯಲಾಗಿದೆ
'ಹುದ್ಟಿಟಹಬ್ಬದ ಶುಶಾಭಯ' ಎಂದು ತಪ್ಪಾಗಿ ಬರೆದಿರುವುದು ಉದ್ದೇಶಪೂರ್ವಕವಾಗಿಯೇ ಎಂದು ಯೋಗರಾಜ್ ಭಟ್ ಹೇಳಿದ್ದು, ಗಾಳಿಪಟ 2 ಸಿನಿಮಾದಲ್ಲಿ ಗಣೇಶ್ ಅವರ ಪಾತ್ರ ಹಾಗೂ ಒಟ್ಟಾರೆ ಕತೆಯಲ್ಲಿ ಕನ್ನಡದ ತಪ್ಪಾದ ಬಳಕೆ ಸಹ ಭಾಗವೇ ಆಗಿದ್ದು, ಅದನ್ನು ಸೂಚಿಸುವ ಸಲುವಾಗಿ ಹೀಗೆ ತಪ್ಪಾಗಿ ಬರೆಯಲಾಗಿದೆ ಎಂದಿದ್ದಾರೆ.

'ಕನ್ನಡ ಬಳಕೆ ಬಗ್ಗೆ ಮಜವಾದ ಸಂಗತಿಗಳು ಸಿನಿಮಾದಲ್ಲಿವೆ'
ಈಗಿನ ಯುವಕರ ಕನ್ನಡ, ಕನ್ನಡದ ಬಳಕೆ, ಯುವಕರ ಐಲುಗಳು, ಅವರ ಕನವರಿಕೆಗಳು, ಯೋಚನೆಗಳು ಹೀಗೆ ಹಲವು ವಿಷಯಗಳ ಬಗ್ಗೆ ಗಾಳಿಪಟ 2 ಸಿನಿಮಾ ಮಾತನಾಡುತ್ತದೆ. ಗಾಳಿಪಟ ಸಿನಿಮಾದಲ್ಲಿ ದಯವಿಟ್ಟು ಪದವನ್ನು 'ದಯವಿಣ್ಣು' ಎಂದು ಗಣೇಶ್ ಬರೆದಿರುತ್ತಾರೆ, ಇದು ಜನರಿಗೆ ಇಷ್ಟವಾಗಿತ್ತು ಹಾಗಾಗಿ ಗಾಳಿಪಟ 2 ನಲ್ಲಿ ಕನ್ನಡದ ಬಳಕೆ ಬಗ್ಗೆ ಕೆಲವು ಮಜವಾದ ಸಂಗತಿಗಳು ಇವೆ ಎಂದಿದ್ದಾರೆ.

ಸಿರಿಗನ್ನಡಂ ಗೆಲ್ಗೆ, ಸರಿಗನ್ನಡಂ ಬಾಳ್ಗೆ
ನಾವು ಕನ್ನಡ ಪದವನ್ನು ತಪ್ಪಾಗಿ ಬಳಸಿದ್ದು ಕೆಲವರಿಗೆ ಇಷ್ಟವಾಗಿದೆ, ಕೆಲವರಿಗೆ ಇಷ್ಟವಾಗಿಲ್ಲ. ಆದರೆ ಅದರ ಹಿಂದಿನ ವ್ಯಂಗ್ಯವನ್ನು ಅರ್ಥ ಮಾಡಿಕೊಳ್ಳಬೇಕು ಎಂಬುದು ಪ್ರಾರ್ಥನೆ ಎಂದ ಭಟ್ಟರು, 'ಸಿರಿಗನ್ನಡಂ ಗೆಲ್ಗೆ, ಸರಿಗನ್ನಡಂ ಬಾಳ್ಗೆ' ಎಂಬ ಹೊಸ ಘೋಷವಾಕ್ಯವನ್ನೇ ನೀಡಿದ್ದಾರೆ ಯೋಗರಾಜ್ ಭಟ್.

ಅರ್ಧ ಚಿತ್ರೀಕರಣ ಮುಗಿದಿದೆ
ಸಿನಿಮಾ ಬಗ್ಗೆ ಮಾತನಾಡಿದ ಯೋಗರಾಜ್ ಭಟ್, ಸಿನಿಮಾದಲ್ಲಿ ಗಣೇಶ್ ಅವರ ಪಾತ್ರ ಅದ್ಭುತವಾಗಿದೆ ಸಿನಿಮಾದಲ್ಲಿ ಗಣೇಶ್ ಪಾತ್ರ ಎಷ್ಟು ಲಫಂಗ ಎಂಬುದನ್ನು ತಿಳಿದುಕೊಳ್ಳಲು ನೀವು ಸಿನಿಮಾ ನೋಡಲೇ ಬೇಕು ಎಂದಿರುವ ಯೋಗರಾಜ್ ಭಟ್, ಸಿನಿಮಾದ ಚಿತ್ರೀಕರಣ ಅರ್ಧ ಮುಗಿದಿದೆ, ಲಾಕ್ಡೌನ್ ಮುಗಿದ ನಂತರ ಚಿತ್ರೀಕರಣ ಮುಂದುವರೆಸುತ್ತೇವೆ ಎಂದರು.


Click it and Unblock the Notifications











