ನನ್ನ ಜಾತಿ, ಭಾಷೆಯಿಂದಾಗಿ ನನ್ನನ್ನು ಹೊರಗಿಟ್ಟಿರಿ: ಪವನ್ಗೆ ದಯಾಳ್ ಉತ್ತರ
ನಿರ್ದೇಶಕ ಪವನ್ ಕುಮಾರ್ ಹಾಗೂ ದಯಾಳ್ ಪದ್ಮನಾಭನ್ ನಡುವೆ ವರ್ಷದ ಹಿಂದೆ ಆರಂಭವಾಗಿದ್ದ ಜಗಳ ಇನ್ನೂ ಅಂತ್ಯವಾಗಿಲ್ಲ.
ಕಳೆದ ವರ್ಷ ಪವನ್ ಪ್ರಾರಂಭಿಸಿದ್ದ ನಿರ್ದೇಶಕರ ಕೂಟ 'ಎಫ್ಯುಸಿ'ಗೆ (ಫಿಲಂ ಮೇಕರ್ಸ್ ಯುನೈಟೆಡ್ ಕ್ಲಬ್) ಪ್ರವೇಶ ಪಡೆಯಲು ದಯಾಳ್ ಪದ್ಮನಾಭನ್ ವಿಫಲರಾಗಿದ್ದರು. ಅದರ ಬಳಿಕ ದಯಾಳ್ ಪದ್ಮನಾಭನ್, ಪವನ್ ವಿರುದ್ಧ ಹಾಗೂ ಎಫ್ಯುಸಿ ವಿರುದ್ಧ ಫೇಸ್ಬುಕ್ನಲ್ಲಿ ಆರೋಪಗಳನ್ನು ಮಾಡಿದ್ದರು. ಅದಕ್ಕೆ ಆಗಲೇ ಪವನ್ ಪ್ರತಿಕ್ರಿಯೆ ನೀಡಿ, ದಯಾಳ್ಗೆ ಸದಸ್ಯರ ಒಮ್ಮತದ ಮತಗಳು ಬೀಳದ ಕಾರಣಕ್ಕೆ ಅವರು ಎಫ್ಯುಸಿಗೆ ಸೇರಲಾಗಲಿಲ್ಲ ಎಂದಿದ್ದರು.
ಆದರೆ ಇತ್ತೀಚೆಗೆ ಕ್ಲಬ್ಹೌಸ್ ಚರ್ಚೆಯೊಂದರಲ್ಲಿ ದಯಾಳ್ ಪದ್ಮನಾಭನ್, ಪವನ್ ವಿರುದ್ಧ ಮೂದಲಿಕೆ ಮಾತನಾಡಿದ್ದು ಪವನ್ ಬೇಸರಕ್ಕೆ ಕಾರಣವಾಗಿದೆ. ಇದೀಗ ಪವನ್, ದಯಾಳ್ಗೆ ಖಾಸಗಿಯಾಗಿ ಧ್ವನಿ ಸಂದೇಶವನ್ನು ಕಳಿಸಿ ದಯಾಳ್ಗೆ ಎಫ್ಯುಸಿಯಲ್ಲಿನ ಯಾವ ನಿರ್ದೇಶಕನೂ ಮತ ಹಾಕಿರಲಿಲ್ಲ ಎಂದಿದ್ದಾರೆ.

ಪವನ್ರ ಧ್ವನಿ ಸಂದೇಶಕ್ಕೆ ಫೇಸ್ಬುಕ್ ಮೂಲಕ ಉತ್ತರ ನೀಡಿರುವ ದಯಾಳ್ ಪದ್ಮನಾಭನ್, ''ನನ್ನ ಜಾತಿ ಹಾಗೂ ಭಾಷೆ ನಿಮಗೆ ಸಮಸ್ಯೆ ಎನಿಸಿತು ಹಾಗಾಗಿ ನನಗೆ ಎಫ್ಯುಸಿ ಪ್ರವೇಶ ನಿರಾಕರಿಸಿದಿರಿ. ನನ್ನ ಹೋರಾಡುವ ಛಾತಿ, ಎತ್ತರಕ್ಕೆ ಬೆಳೆಯುವ ಹಂಬಲ, ನೇರ, ನಿಷ್ಠುರ ಮಾತು, ನನ್ನ ಸ್ವತಂತ್ರ ಚಿಂತನೆಗಳು ಸಹ ನಿಮಗೆ ಸಹಿಸಲಾಗದೆ ನನ್ನನ್ನು ಹೊರಗಿಟ್ಟಿರಿ'' ಎಂದಿದ್ದಾರೆ.
''ಎಫ್ಯುಸಿಯ ಆಹ್ವಾನವನ್ನು ನೀವೇ ನನಗೆ ಕಳಿಸಿದಿರಿ. ಈಗ ಅದನ್ನು 'ಪ್ರೊಪೋಸಲ್' ಎಂದು ನೀವು ಕರೆಯುತ್ತಿದ್ದೀರಿ. ನಾನಾಗಿಯೇ ಬಂದು ನನ್ನನ್ನು ತಂಡದಲ್ಲಿ ಸೇರಿಸಿಕೊಳ್ಳಿ ಎಂದು ಕೇಳಿರಲಿಲ್ಲ. ಇದಕ್ಕಿಂತಲೂ ಉತ್ತಮವಾದ ಕೆಲಸಗಳು ನನ್ನ ಬಳಿ ಇದ್ದವು'' ಎಂದು ಪವನ್ಗೆ ಉತ್ತರಿಸಿದ್ದಾರೆ ದಯಾಳ್.
Recommended Video
''ನನಗೆ ಅವಮಾನ ಮಾಡಿದ್ದಕ್ಕೆ ನೀವು ಮತ್ತು ನಿಮ್ಮ ಎಫ್ಯುಸಿ ಸದಸ್ಯರು ತಕ್ಕ ಶಾಸ್ತಿ ಅನುಭವಿಸಿಯೇ ತೀರುತ್ತೀರ. ನಿಮಗೆ ಹಾಗೂ ನಿಮ್ಮ ತಂಡದ ಸದಸ್ಯರಿಗೆ ಸಮಯವೇ ಸೂಕ್ತ ಪಾಠ ಕಲಿಸಲಿದೆ. ಯಾವುದು ಸಹ ನನ್ನನ್ನು ಬದಲಾವಣೆ ಮಾಡಲಾರದು. ಏನಾದರೂ ಎದುರು ಬರಲಿ, ನಾನು ಕೊನೆಯವರೆಗೆ ಕನ್ನಡ ಸಿನಿಮಾ ನಿರ್ದೇಶಕನಾಗಿ ಇರುತ್ತೇನೆ'' ಎಂದಿದ್ದಾರೆ ದಯಾಳ್.


Click it and Unblock the Notifications











