Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಆಸಿಡ್ ದಾಳಿ ವಿರುದ್ಧ ಕ್ರಾಂತಿ ಮೊಳಗಿಸಿದ ಮಾದರಿ ಹೆಣ್ಣು ಲಕ್ಷ್ಮಿ ಅಗರ್ವಾಲ್
ಹೆಣ್ಣಿಗೆ ಸೌಂದರ್ಯ ಎನ್ನುವುದು ಅತಿ ಮುಖ್ಯ. ಆ ಸೌಂದರ್ಯಕ್ಕೆ ಒಂದು ಸಾಸಿವೆಯಷ್ಟು ಕಪ್ಪು ಚುಕ್ಕೆ ಆದರೂ ಆಕೆಯ ಮನಸ್ಸು ತಡೆದುಕೊಳ್ಳುವುದಿಲ್ಲ. ಅಂತಹದ್ರಲ್ಲಿ ಆಸಿಡ್ ದಾಳಿಯಾದ್ರೆ ಆ ಹೆಣ್ಣಿನ ಸ್ಥಿತಿ ಹೇಗಾಗಬೇಡ. ತನಗೊಬ್ಬ ರಾಜಕುಮಾರ, ಒಂದು ಪುಟ್ಟ ಸಂಸಾರ, ಮಕ್ಕಳು ಹೀಗೆ ನೂರಾರು ಕನಸು ಹೊತ್ತು, ಸುಂದರ ಭವಿಷ್ಯವನ್ನ ರೂಪಿಸಿಕೊಳ್ಳಬೇಕಿದ್ದ ಯುವತಿ ಬಾಳಲ್ಲಿ ಆ ಪಾಪಿ ಯುವಕ ಮರೆಯಲಾಗದ ಅಧ್ಯಾಯವಾಗಿಬಿಟ್ಟ.
ಆಸಿಡ್ ದಾಳಿ ಬಳಿಕ ಆಕೆಯ ಮನಸ್ಸಲ್ಲಿ ನೂರಾರು ಯೋಚನೆ ಬಂದಿರಬಹುದು. ನನ್ನ ಮುಖವನ್ನ ಹೇಗೆ ತೋರಿಸಲಿ. ನನ್ನನ್ನು ಯಾರು ಮದುವೆ ಆಗ್ತಾರೆ, ನನಗೆ ಈ ಬದುಕೇ ಬೇಡ ಎಂಬ ಯೋಚನೆಗಳು ಬಂದಿರಬಹುದು. ಆ ಹಿಂಸೆ ಆಕೆಗೆ ಮಾತ್ರ ಗೊತ್ತಿರುತ್ತೆ. ಅದೇನೇ ಇದ್ದರೂ ಆ ಯುವತಿ ಧೈರ್ಯ ಕಳೆದುಕೊಂಡಿಲ್ಲ. ನೋವು, ಸಂಕಟ, ಅವಮಾನ ಎಲ್ಲವನ್ನ ಮೀರಿ ಬೆಳೆದಳು. ಅನೇಕ ಯುವತಿಯರಿಗೆ ಮಾದರಿಯಾದರು. ಇಂತಹ ದಿಟ್ಟೆದೆಯ ಹೆಣ್ಣಿನ ಕಥೆ ಈಗ ತೆರೆಮೇಲೆ ಬರ್ತಿದೆ.
'ಚಪಾಕ್' ಸಿನಿಮಾದ ಫಸ್ಟ್ ಲುಕ್ ನಲ್ಲಿ ದೀಪಿಕಾ
ಹೌದು, 2005ರಲ್ಲಿ ಆಸಿಡ್ ದಾಳಿಗೆ ಒಳಗಾಗಿದ್ದ ಲಕ್ಷ್ಮೀ ಅಗರ್ ವಾಲ್ ಅವರ ಯಶೋಗಾಥೆ ಈಗ ಸಿನಿಮಾ ಆಗ್ತಿದೆ. ನಟಿ ದೀಪಿಕಾ ಪಡುಕೋಣೆ ಈ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ದೀಪಿಕಾ ಫಸ್ಟ್ ಲುಕ್ ರಿಲೀಸ್ ಆಗಿದ್ದು, ಚಿತ್ರಪ್ರೇಮಿಗಳ ಹೃದಯ ಮುಟ್ಟಿದೆ. ಈ ಸಿನಿಮಾಗಾಗಿ ಕಾಯುವಂತೆ ಮಾಡಿದೆ. ಅಂದ್ಹಾಗೆ, ಸ್ಫೂರ್ತಿದಾಯಕ ಚಿತ್ರವನ್ನ ತೆರೆಮೇಲೆ ನೋಡುವುದಕ್ಕೂ ಮೊದಲು ಆ ಮಾದರಿ ಹೆಣ್ಣಿನ ಬಗ್ಗೆ ತಿಳಿದುಕೊಳ್ಳಬೇಕು. ಯಾರು ಆಕೆ? ಯಾಕೆ ಆಸಿಡ್ ದಾಳಿ ಆಯ್ತು? ಅದನ್ನ ಹೇಗೆ ಎದುರಿಸಿದರು ಎಂಬ ಹಲವು ರೋಚಕ ವಿಷ್ಯಗಳ ಬಗ್ಗೆ ವಿಶೇಷ ವರದಿ ಇದು. ಮುಂದೆ ಓದಿ......
ದೇಶವನ್ನೇ ಬೆಚ್ಚಿಬೀಳಿಸಿದ್ದ ದಾಳಿ ಅದು
ಅದು 2005, ಇಡೀ ದೇಶವನ್ನೇ ಬೆಚ್ಚಿಬೀಳಿಸುವಂತಹ ಆಸಿಡ್ ದಾಳಿ ನಡೆದ ವರ್ಷ. ಲಕ್ಷ್ಮೀ ಅಗರ್ ವಾಲ್ (15) ಎಂದಿನಂತೆ ಮ್ಯೂಸಿಕ್ ಕ್ಲಾಸ್ ಗೆ ಹೋಗುತ್ತಿದ್ದ ವೇಳೆ, ಪ್ರೀತಿಸು ಎಂದು ಪೀಡಿಸುತ್ತಿದ್ದ ಯುವಕ ಆಕೆಯ ಮೇಲೆ ಆಸಿಡ್ ದಾಳಿ ಮಾಡಿದ್ದ. ಈ ಘಟನೆಯಿಂದ ಲಕ್ಷ್ಮಿ ಅವರ ಮುಖ ಮತ್ತು ದೇಹಕ್ಕೆ ಗಂಭೀರ ಗಾಯಗಳಾಯಿತು. ಸರಿಯಾದ ಸಮಯಕ್ಕೆ ಚಿಕಿತ್ಸೆ ಪದೆದ ಕಾರಣ ಸ್ವಲ್ಪ ಮಟ್ಟಿಗೆ ಚೇತರಿಕೆ ಕಾಣಲು ಸಾಧ್ಯವಾಯಿತು. ಸುಮಾರು 10 ವರ್ಷ, ಹಲವು ಸರ್ಜರಿಗೆ ಲಕ್ಷ್ಮಿ ಒಳಗಾಗಿದ್ದಾರೆ. ಇದರಿಂದ ಮಾನಸಿಕವಾಗಿ ಆಕೆಯೆ ಮೇಲೆ ಪರಿಣಾಮ ಬೀರಿದೆ. ಆದ್ರೆ, ಅದ್ಯಾವುದಕ್ಕೂ ಸೋಲದ ಲಕ್ಷ್ಮಿ ಬದುಕನ್ನ ಸವಾಲಾಗಿ ಸ್ವೀಕರಿಸಿ ಮುಂದೆ ಹೋದರು.
ಆಸಿಡ್ ದಾಳಿಕೋರರ ವಿರುದ್ಧ ಕ್ರಾಂತಿ
ತನಗಾದ ಅನ್ಯಾಯ ಮತ್ತೆ ಯಾವ ಹೆಣ್ಣಿಗೂ ಆಗಬಾರದು ಎಂಬ ಕಾರಣಕ್ಕೆ ಆಸಿಡ್ ದಾಳಿಕೋರರ ವಿರುದ್ಧ ಕ್ರಾಂತಿ ಆರಂಭಿಸಿದರು. ಸುಮಾರು 27,000 ಸಹಿಗಳನ್ನ ಪಡೆದು, ಆಸಿಡ್ ಮಾರಾಟ ನಿಲ್ಲಿಸುವಂತೆ ಸುಪ್ರೀಂ ಕೋರ್ಟ್ ನಲ್ಲಿ ಪಿಐಎಲ್ ಅರ್ಜಿ ಸಲ್ಲಿಸಿದರು. ಲಕ್ಷ್ಮಿ ಮತ್ತು ರೂಪ ಎಂಬುವರ ಮನವಿ ಪುರಸ್ಕರಿಸಿದ ಕೋರ್ಟ್ 2013ರಲ್ಲಿ ಆಸಿಡ್ ಮಾರಾಟದ ಮೇಲೆ ಹೊಸ ನಿರ್ಬಂಧ ರಚಿಸಲು ಸರ್ಕಾರಕ್ಕೆ ಸೂಚಿಸಿತ್ತು. ಈ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಅಧಿಕಾರ ನೀಡಿತ್ತು.
ಸ್ಟಾಪ್ ಸೇಲ್ ಆಸಿಡ್ ಅಭಿಯಾನ
ಆಸಿಡ್ ಮಾರಾಟ ಹಾಗೂ ಆಸಿಡ್ ದಾಳಿ ವಿರೋಧಿಸಿ 'ಸ್ಟಾಪ್ ಸೇಲ್ ಆಸೀಡ್' ಅಭಿಯಾನಕ್ಕೆ ಲಕ್ಷ್ಮಿ ಅಗರ್ ವಾಲ್ ಚಾಲನೆ ನೀಡಿದ್ದರು. ರಾಷ್ಟ್ರಾದ್ಯಂತ ಈ ಅಭಿಯಾನಕ್ಕೆ ಮೆಚ್ಚುಗೆ ಸಿಕ್ಕಿತ್ತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಸಿಡ್ ದಾಳಿ ವಿರುದ್ಧ ಲಕ್ಷ್ಮಿ ಅಭಿಯಾನ ಮಾಡಿದ್ದಾರೆ. ಕೆಲಸದಲ್ಲಿ ಬ್ಯುಸಿ ಇದ್ದರೇ ನೋವುಗಳ ಕಾಣಲ್ಲ ಎಂಬ ಕಾರಣಕ್ಕೆ ಸಂಸ್ಥೆ ಹುಟ್ಟಿಕೊಂಡಿದೆ. ಲಕ್ಷ್ಮಿ ಅವರ ಹೋರಾಟ ಗುರುತಿಸಿ ಹಲವು ಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಿದೆ.
ಜನರು ಬದಲಾಗಬೇಕಿದೆ
''ಆಸಿಡ್ ದಾಳಿ ಬಳಿಕ ಜನರು ಮತ್ತಷ್ಟು ಬಲಿಬಶು ಮಾಡ್ತಾರೆ. ಅಯ್ಯೋ ಪಾಪ ಎನ್ನವವರ ಸಂಖ್ಯೆ ಹೆಚ್ಚಾಗುತ್ತೆ. ಆಕೆಯನ್ನ ಯಾರು ಮದುವೆಯಾಗ್ತಾರೆ ಎನ್ನುವುದು ಅವರ ಬಹುದೊಡ್ಡ ಪ್ರಶ್ನೆಯಾಗುತ್ತೆ. ಆಕೆಗೆ ಆಸೀಡ್ ದಾಳಿಗಿಂತಲೂ ಸುತ್ತಮತ್ತಲಿನವರು ಹೇಳುವ ಮಾತುಗಳೇ ಅರ್ಧ ಕುಗ್ಗಿಸುತ್ತೆ. ಆದ್ರೆ, ನನಗೆ ಆಧಾರವಾಗಿ ನಿಂತಿದ್ದು ನನ್ನ ತಾಯಿ. ನನಗೆ ಧೈರ್ಯ ತುಂಬಿ ನನ್ನ ಜೀವನಕ್ಕೆ ದಾರಿದೀಪವಾಗಿದ್ದು ತಾಯಿ. ನನಗಿಂತ ಹೆಚ್ಚು ನೋವನ್ನು ಅನುಭವಿಸಿದ್ದು ಅಮ್ಮ'' ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.
ಸಿನಿಮಾ ಬಗ್ಗೆ ಖುಷಿ ಇದೆ
''ನನ್ನ ಪಾತ್ರದಲ್ಲಿ ದೀಪಿಕಾ ಪಡುಕೋಣೆ ನಟಿಸುತ್ತಿರುವುದು ಖುಷಿ ತಂದಿದೆ. ಇಂತಹ ಸೂಕ್ಷ್ಮ ವಿಚಾರವನ್ನು ಪ್ರೇಕ್ಷಕರ ಮುಂದೆ ತೆೆಗೆದುಕೊಂಡು ಹೋಗುತ್ತಿರುವುದು ಒಳ್ಳೆಯ ಬೆಳವಣಿಗೆ. ಈ ಚಿತ್ರದಲ್ಲಿ ನಾನೂ ಕೂಡ ತುಂಬಾ ಭಾಗಿಯಾಗಿದ್ದೀನಿ. ನನ್ನ ಜೀವನದ ಬಗ್ಗೆ ತಿಳಿದುಕೊಳ್ಳಲು ನಿರ್ದೇಶಕರು ನನ್ನ ಬಳಿ ಹೆಚ್ಚು ಮಾಹಿತಿ ಕಲೆಹಾಕಿದ್ದಾರೆ. ಪ್ರೇಕ್ಷಕರು ಈ ಸಿನಿಮಾವನ್ನು ತುಂಬಾ ಸೂಕ್ಷ್ಮವಾಗಿ ನೋಡುತ್ತಾರೆ ಎನ್ನುವ ನಂಬಿಕೆ ಇದೆ. ನಿಜವಾದ ಘಟನೆ ಏನಾಯಿತು ಎನ್ನುವುದನ್ನ ತಿಳಿದುಕೊಳ್ಳಲು ಜನ ಕುತೂಹಲದಿಂದ ಕಾಯುತ್ತಿದ್ದಾರೆ'' ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅಲೋಕ್ ದೀಕ್ಷಿತ್ ಜೊತೆ ಜೀವನ
ಸಾಮಾಜಿಕ ಚಿಂತಕ ಅಲೋಕ್ ದೀಕ್ಷಿತ್ ಮತ್ತು ಲಕ್ಷ್ಮಿ ಅಗರ್ ವಾಲ್ ಪ್ರೀತಿಸುತ್ತಿದ್ದರು. ಆದ್ರೆ, ಇಬ್ಬರು ಮದುವೆಯಾಗದೇ ಇರಲು ನಿರ್ಧರಿಸಿ, ಒಮ್ಮತದಿಂದ ಸಹ ಜೀವನ (ಲಿವಿಂಗ್ ಟು ಗೆದರ್) ನಡೆಸಲು ತೀರ್ಮಾನಿಸಿದರು. ಇದಕ್ಕೆ ಲಕ್ಷ್ಮಿ ಅವರ ತಾಯಿ ಕೂಡ ಒಪ್ಪಿಗೆ ನೀಡಿದ್ದಾರೆ. ಸಾಯುವತನಕ ಒಟ್ಟಿಗೆ ಇರಲು ಬಯಿಸಿರುವ ಲಕ್ಷ್ಮಿ ಮತ್ತು ಅಲೋಕ್ ದಂಪತಿಗೆ ಒಂದು ಮಗು ಕೂಡ ಇದೆ.
ಚಪಾಕ್ ಸಿನಿಮಾ ಬಗ್ಗೆ
ಅಂದ್ಹಾಗೆ, ಚಪಾಕ್ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಮಾಲತಿ ಹೆಸರಿನ ಯುವತಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಮೇಘನಾ ಗುಲ್ಜಾರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, 2020ರ ಜನವರಿ 20 ರಂದು ಬಿಡುಗಡೆಯಾಗಲಿದೆ.