ಪಹಲ್ಗಾಮ್ ದಾಳಿ ಬಗ್ಗೆ ಪಾಕಿಸ್ತಾನಕ್ಕೆ ಹೋಗಿ ಬಂದಿದ್ದ ಗ್ಲೋಬಲ್ ಕನ್ನಡಿಗ ಮಾತು
26 ಮಂದಿ ಪ್ರವಾಸಿಗರ ಹತ್ಯೆಗೆ ಕಾರಣವಾದ ಪಹಲ್ಗಾಮ್ ಉಗ್ರ ದಾಳಿಯನ್ನು ಖಂಡಿಸಿ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ಸಿನಿಮಾ ತಾರೆಯರು ಕೂಡ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಬೇಕು ಎನ್ನುತ್ತಿದ್ದಾರೆ. ಈಗಾಗಲೇ ಉಗ್ರ ವಿರುದ್ಧ ಸರ್ಕಾರ ಸಮರ ಸಾರಿದೆ. ಇನ್ನು ಪಹಲ್ಗಾಮ್ ದಾಳಿ ಬಗ್ಗೆ ಯೂಟ್ಯೂಬರ್ ಗ್ಲೋಬಲ್ ಕನ್ನಡಿಗ ರಾಮ್ ಮಾತನಾಡಿದ್ದಾರೆ.
ತಿಂಗಳ ಹಿಂದೆಯಷ್ಟೆ ಪಾಕಿಸ್ತಾನ ಸೈದ್ಪುರ್ ಎಂಬ ಹಳ್ಳಿಗೆ ರಾಮ್ ಹೋಗಿದ್ದರು. ವ್ಲಾಗ್ ವೀಡಿಯೋ ಮಾಡಿ ಆ ಹಳ್ಳಿಯ ವಿಶೇಷತೆ, ಕಲೆ, ಸಂಸ್ಕೃತಿ, ಆಹಾರ ಎಲ್ಲದರ ಬಗ್ಗೆ ಮಾತನಾಡಿದ್ದರು. ಆ ವೀಡಿಯೋಗೆ ಭರ್ಜರಿ ರೆಸ್ಪಾನ್ಸ್ ಕೂಡ ಸಿಕ್ಕಿತ್ತು. ಪಾಕಿಸ್ತಾನದಲ್ಲಿ ಹಳ್ಳಿಗಳಲ್ಲಿ ದಕ್ಷಿಣದ ಭಾರತ ಸಿನಿಮಾಗಳನ್ನು ನೋಡುತ್ತಾರೆ. ಮುಖ್ಯವಾಗಿ ಯಶ್ ನಟನೆಯ 'KGF' ಚಿತ್ರ ಈ ದೇಶದಲ್ಲೂ ಜನಪ್ರಿಯ. ಇಲ್ಲಿನ ಮಕ್ಕಳು ಕೂಡ ರಾಕಿಭಾಯ್ ಅಭಿಮಾನಿಗಳು ಎಂದು ರಾಮ್ ತಿಳಿಸಿದ್ದರು.

ಸದ್ಯ ಪಹಲ್ಗಾಮ್ ಉಗ್ರ ದಾಳಿಯನ್ನು ಗ್ಲೋಬಲ್ ಕನ್ನಡಿಗ ರಾಮ್ ಖಂಡಿಸಿದ್ದಾರೆ. ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಬೇಕು ಎಂದು ಕಿಡಿಕಾಡಿದ್ದಾರೆ. ರಾಮ್ ಸದ್ಯ ಇರಾಕಿನ ಬಾಗ್ದಾದ್ ನಗರ ಪ್ರವಾಸದಲ್ಲಿದ್ದಾರೆ. ಅಲ್ಲಿ ಇದ್ದಾಗಲೇ ಪಹಲ್ಗಾಮ್ ದಾಳಿ ಸುದ್ದಿ ಗೊತ್ತಾಗಿ ವೀಡಿಯೋ ಮಾಡಿ ಮಾತನಾಡಿದ್ದಾರೆ. "ಷ*ಡ ಪಾಕಿಸ್ತಾನಿ ಆರ್ಮಿಗೆ ಧಿಕ್ಕಾರ. ಪಾಕಿಸ್ತಾನದ ಒಳಗೆ ನುಗ್ಗಿ ಪಾಕ್ ಆರ್ಮಿ ಚೀಫ್ ಅಸಿಮ್ ಮುನೀರ್ನನ್ನು ಎಳೆದು ತಂದು ಆತನ ರುಂಡ ಕ*ಡಿದು ಪಹಲ್ಗಾಮ್ನಲ್ಲಿ ಎಸೆಯಬೇಕು" ಎಂದಿದ್ದಾರೆ.
"ಹಿಂದೂಗಳ ವಿರುದ್ಧ ಕಚಡಾ ಹೇಳಿಕೆ ಕೊಟ್ಟ ಅಸಿಮ್ ಮುನೀರ್ ತಲೆ ಕ*ಡಿದು, ನರಗಳನ್ನು ಎಸೆಯಬೇಕು, ಇದು ನಮಗೆ ಬೇಕಾದ ಸರಿಯಾದ ಪ್ರತಿಕಾರ. ನಾಲ್ಕು ಜನ ಆತಂಕವಾದಿಗಳು ಭಾರತಕ್ಕೆ ಬಂದು ಹತ್ಯಾಕಾಂಡ ಮಾಡಿದ್ದಾರೆ. ನೀನು ಹಿಂದೂಗಳಾ ಎಂದು ಕೇಳಿಕೇಳಿ ಕೊಂದಿದ್ದಾರೆ. ಇದಕ್ಕಿಂತ ವಿಷಾದಕಾರಿ ವಿಷಯ ಕೇಳಿರಲು ಸಾಧ್ಯವಿಲ್ಲ. ಕಾಶ್ಮೀರಿ ಪಂಡಿತರು ಇನ್ನು ಎಷ್ಟು ನೋವು ಅನುಭವಿಸಿರಬಹುದು. 1990ರಲ್ಲಿ ಅವರದ್ದೇ ಜಾಗದಲ್ಲಿ ಅವರ ಹೆಣ್ಣು ಮಕ್ಕಳ ಮೇಲೆ ಅ*ತ್ಯಾಚಾರ ಮಾಡಿ, ಎಷ್ಟೋ ಜನರನ್ನು ಪಾಕಿಸ್ತಾನಕ್ಕೆ ಸಾಗಿಸಿ, ಎಷ್ಟೋ ಜನರನ್ನು ಕೊಂದು, ಗರ್ಭಿಣಿ ಸ್ತ್ರೀಯರ ಹೊಟ್ಟೆ ಕುಯ್ದು ಅಟ್ಟಹಾಸ ಮೆರೆದ ಪಾಕಿಸ್ತಾನಿ ಕ್ರೂರ ಮನಸ್ಥಿತಿಗೆ ನಾವು ತಕ್ಕ ಪಾಠ ಕಲಿಸಬೇಕು" ಎಂದು ಆಗ್ರಹಿಸಿದ್ದಾರೆ.
"ಈಗ ಪಾಕಿಸ್ತಾನಕ್ಕೆ ನಾವು ತಕ್ಕ ಪಾಠ ಕಲಿಸದಿದ್ದರೆ ಮುಂದೆ ತಲೆ ಎತ್ತಿ ನಡೆಯೋಕೆ ಸಾಧ್ಯವಿಲ್ಲ" ಎಂದು ಯೂಟ್ಯೂಬರ್ ಮಹಾಬಲ ರಾಮ್ ಹೇಳಿದ್ದಾರೆ. ಅಂದು ರಾಮ್ ಶರ್ಟು, ಪಂಚೆ ತೊಟ್ಟು ಕನ್ನಡ ಬಾವುಟದ ಬ್ಯಾಡ್ಜ್ ಧರಿಸಿ ಪಾಕಿಸ್ತಾನದ ಸೈದ್ಪುರ್ ಹಳ್ಳಿಯಲ್ಲಿ ಸುತ್ತಾಡಿದ್ದರು. ಅಲ್ಲಿನ ಜನರನ್ನು ಮಾತನಾಡಿಸಿ ಹಳ್ಳಿ ಬಗ್ಗೆ ಮಾಹಿತಿ ಕಲೆ ಹಾಕಿದ್ದರು. ಅಲ್ಲಿನ ಮಕ್ಕಳ ಜೊತೆ ಮಾತನಾಡಿ ಅವರ ಸಿನಿಮಾ ಪ್ರೀತಿ, ಭಾರತದ ಯಾವ ಯಾವ ಸಿನಿಮಾಗಳನ್ನು ನೋಡುತ್ತಾರೆ ಎಂದು ತಿಳಿಸಿದ್ದರು.
ಮಹಾಬಲ ರಾಮ್ ಪಹಲ್ಗಾಮ್ ದಾಳಿಯನ್ನು ಖಂಡಿಸಿರುವ ಬಗ್ಗೆ ನೆಟ್ಟಿಗರು ಬೆಂಬಲ ಸೂಚಿಸುತ್ತಿದ್ದಾರೆ. ಆದರೆ ಈ ಹಿಂದೆ ಪಾಕಿಸ್ತಾನದ ಬಗ್ಗೆ ಹಾಕಿದ್ದ ಪೋಸ್ಟ್ ಅನ್ನು ತೆಗೆಯುವಂತೆ ಆಗ್ರಹಿಸುತ್ತಿದ್ದಾರೆ. ನೀನು ಅಲ್ಲಿಗೆ ಹೋಗಿ ಬಂದಿದ್ದೇ ತಪ್ಪು ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಸೈದ್ಪುರ್ ಮಾತ್ರವಲ್ಲ ಲಾಹೋರ್ವರೆಗೆ ರಾಮ್ ಹೋಗಿ ಬಂದಿದ್ದರು. ಭಾರೀ ಭದ್ರತೆ ನಡುವೆ ಅಲ್ಲಿನ ಮಾರ್ಕೆಟ್, ಬೀದಿಗಳಲ್ಲಿ ಸುತ್ತಾಡಿ ವೀಡಿಯೋ ಮಾಡಿದ್ದರು. ಈ ಸಮಯದಲ್ಲಿ ನೀನು ಅಲ್ಲಿ ಇದ್ದಿದ್ದರೆ ಕಷ್ಟ ಆಗುತ್ತಿತ್ತು, ಬಹಳ ಬೇಗ ಬಂದು ಒಳ್ಳೆ ಕೆಲಸ ಮಾಡಿದೆ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.


Click it and Unblock the Notifications











