ಸೌಜನ್ಯ ಕೇಸ್ ವಿಡಿಯೋ.. ಸಮೀರ್ ಎಂಡಿ ಯಾರು? ಬಳ್ಳಾರಿಯಲ್ಲಿ ಕೇಸ್.. ವಿಡಿಯೋ ಡಿಲೀಟ್.. ಏನಿದು ಕಥೆ?
ಕಳೆದ ಕೆಲವು ದಿನಗಳಿಂದ ಧರ್ಮಸ್ಥಳದ ಸೌಜನ್ಯ ಕೇಸ್ ವಿವಾದ ಮತ್ತೆ ಬುಗಿಲೆದ್ದಿದೆ. ಕಳೆದ 13 ವರ್ಷಗಳಿಂದ ಈ ಕೇಸ್ ಬಗ್ಗೆ ಹೋರಾಟ ನಡೆಯುತ್ತಲೇ ಇದೆ. ಇನ್ನೂ ಮುಕ್ತಿ ಅನ್ನೋದು ಸಿಕ್ಕಿಲ್ಲ. ಈ ಕೇಸ್ ಅನ್ನು ಭೇದಿಸುವುದಕ್ಕೆ ಸಾಧ್ಯವಾಗಿಲ್ಲ. ಹಾಗೇ ಸೌಜನ್ಯಗೆ ನ್ಯಾಯ ಸಿಗಬೇಕು ಅಂತ ಹೋರಾಟ ಮಾಡುವುದೂ ನಿಂತಿಲ್ಲ. ಇದ್ದಕ್ಕಿದ್ದ ಹಾಗೇ ಯಾವುದೋ ಮೂಲೆಯಿಂದ ಸೈಲೆಂಟ್ ಆಗಿದ್ದ ಹೋರಾಟ ಬುಗಿಲೆದ್ದು ಬಿಡುತ್ತೆ.
ಈಗ ಆಗಿದ್ದೂ ಅದೇ. ಸಮೀರ್ ಎಂಡಿ ಅನ್ನುವ ಯೂಟ್ಯೂಬರ್ ಸೌಜನ್ಯ ಅತ್ಯಾಚಾರ ಹಾಗೂ ಹತ್ಯೆ ಕೇಸ್ಗೆ ಸಂಬಂಧಿಸಿದ ವಿಡಿಯೋ ಮಾಡಿ ತನ್ನ ಯೂಟ್ಯೂಬ್ ಚಾನೆಲ್ನಲ್ಲಿ ಪೋಸ್ಟ್ ಮಾಡಿದ್ದರು. ಆ ವಿಡಿಯೋ ಕೇವಲ ಒಂದು ವಾರದೊಳಗೆ ಒಂದೂವರೆ ಕೋಟಿಗೂ ಅಧಿಕ ಮಂದಿ ವೀಕ್ಷಿಸಿದ್ದರು. ನೋಡುತ್ತಿದ್ದಂತೆ ಈ ವಿಡಿಯೋ ವೈರಲ್ ಆಗಿತ್ತು.

2012ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದ 17 ವರ್ಷ ವಿದ್ಯಾರ್ಥಿನಿ ಸೌಜನ್ಯ ಕ್ಲಾಸ್ ಮುಗಿಸಿಕೊಂಡು ಮನೆಗೆ ಹಿಂತಿರುಗುತ್ತಿದ್ದಳು. ಆದರೆ, ಸಂಜೆಯಾದರೂ ಸೌಜನ್ಯ ಮನೆಗೆ ಬರಲಿಲ್ಲ. ಎಷ್ಟು ಹುಡುಕಾಡಿದರೂ ಸಿಕ್ಕಿರಲಿಲ್ಲ. ಮರುದಿನ ಸೌಜನ್ಯ ಶವವಾಗಿ ಪತ್ತೆಯಾಗಿದ್ದಳು. ಈ ಕೇಸ್ 13 ವರ್ಷಗಳ ಹಿಂದೆ ಇಡೀ ಕರ್ನಾಟಕವನ್ನೇ ಬೆಚ್ಚಿಬೀಳಿಸಿತ್ತು. ಅಲ್ಲಿಂದ ಸೌಜನ್ಯಗೆ ನ್ಯಾಯ ಸಿಗಬೇಕು ಅಂತ ಹೋರಾಟ ನಡೆಯುತ್ತಲೇ ಇದೆ. ಸೌಜನ್ಯ ಕುಟುಂಬ ಹಾಗೂ ಹೋರಾಟಗಾರರು ನೇರವಾಗಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಕುಟುಂಬದ ಸದಸ್ಯರ ಮೇಲೆ ಆರೋಪ ಮಾಡಿದ್ದರು. ಇಲ್ಲಿಂದ ಈ ಪ್ರಕರಣ ಮತ್ತಷ್ಟು ಜಟಿಲವಾಗುತ್ತಾ ಸಾಗುತ್ತಿದೆ.
ಸೌಜನ್ಯ ಹತ್ಯೆ ಪ್ರಕರಣವನ್ನು ಮುಂದಿಟ್ಟುಕೊಂಡು ಹೋರಾಟಗಳು ನಡೆಯುತ್ತವೆ. ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗುತ್ತೆ. ಸಂತೋಷ್ ರಾವ್ ಅನ್ನುವ ವ್ಯಕ್ತಿಯನ್ನು ಬಂಧಿಸಲಾಗುತ್ತೆ. ಪೊಲೀಸರ ತನಿಖೆ ಮೇಲೆ ಅನುಮಾನ ವ್ಯಕ್ತವಾಗುತ್ತೆ. ಹೀಗೆ ಸೌಜನ್ಯ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣ ಬೇರೆ ಬೇರೆ ಆಯಾಮಗಳನ್ನು ಪಡೆಯುತ್ತಾ ಮುಂದೆ ಸಾಗುತ್ತೆ. ಈ 13 ವರ್ಷಗಳಲ್ಲಿ ಮತ್ತೆ ಮತ್ತೆ ಸೌಜನ್ಯ ಪರ ಧ್ವನಿ ಎತ್ತಲಾಗಿದೆ. ವಿವಾದಗಳಾಗಿವೆ, ಹೋರಾಟಗಳು ನಡೆದಿವೆ. ಆದರೆ, ಈ ಕೇಸ್ ಇನ್ನೂ ಅಲ್ಲೇ ಇದೆ.
ಇದೇ ಒಂದು ವಾರದ ಹಿಂದೆ ಸಮೀರ್ ಎಂಡಿ ಎನ್ನುವ ಯೂಟ್ಯೂಬರ್ ಇದೇ ಸೌಜನ್ಯ ಪ್ರಕರಣದ ಬಗ್ಗೆ 39 ನಿಮಿಷಗಳ ವಿಡಿಯೋ ಮಾಡಿದ್ದರು. ಈ ವಿಡಿಯೋದಲ್ಲಿ ಸೌಜನ್ಯ ಅತ್ಯಾಚಾರ ಹಾಗೂ ಹತ್ಯೆಯನ್ನು ಮತ್ತೆ ಮೆಲುಕು ಹಾಕಲಾಗಿತ್ತು. ಸೌಜನ್ಯ ಅತ್ಯಾಚಾರ ಹಾಗೂ ಹತ್ಯೆ ಆಗುವ ದಿನ ಮನೆಯಿಂದ ಕಾಲೇಜಿಗೆ ಹೊರಟ ಕ್ಷಣದಿಂದ ಈ ವಿಡಿಯೋದಲ್ಲಿ ಮಾಹಿತಿಯನ್ನು ನೀಡಲಾಗಿತ್ತು. ವಿಡಿಯೋ ಅಪ್ಲೋಡ್ ಕೆಲವೇ ದಿನಗಳಲ್ಲಿ ವೈರಲ್ ಆಗುವುದಕ್ಕೆ ಶುರುವಾಗಿತ್ತು. ಫೆಬ್ರವರಿ 27ರಂದು ಈ ವಿಡಿಯೋವನ್ನು ಅಪ್ಲೋಡ್ ಮಾಡಲಾಗಿತ್ತು. ಅಲ್ಲಿಂದ ಒಂದು ವಾರದೊಳಗೆ ಯೂಟ್ಯೂಬ್ನಲ್ಲಿ ಹಲ್ಚಲ್ ಎಬ್ಬಿಸುವುದಕ್ಕೆ ಶುರುವಾಗಿತ್ತು.

ಸೌಜನ್ಯ ಪ್ರಕರಣದ ಬಗ್ಗೆ ಈ ಹಿಂದೆ ಹಲವು ಮಂದಿ ಯೂಟ್ಯೂಬರ್ ವಿಡಿಯೋಗಳನ್ನು ಮಾಡಿದ್ದಾರೆ. ಆಗಲೂ ಹೀಗೆ ವಿಡಿಯೋಗಳು ವೈರಲ್ ಆಗಿವೆ. ಆದರೆ, ಈ ವಿಡಿಯೋ ಹುಟ್ಟಾಗಿದಷ್ಟು ಸಂಚಲನವನ್ನು ಕ್ರಿಯೇಟ್ ಮಾಡಿರಲಿಲ್ಲ. ಹಾಗಿದ್ದರೆ, ಇಷ್ಟೊಂದು ಚರ್ಚೆಯಾಗುತ್ತಿರುವ ಈ ಯೂಟ್ಯೂಬರ್ ಯಾರು? ಹಿನ್ನೆಲೆಯೇನು? ಅಂತ ನೋಡುವುದಾರೇ.
ಯೂಟ್ಯೂಬರ್ ಸಮೀರ್ ಎಂಡಿ 'ಧೂತ' ಅನ್ನುವ ಯೂಟ್ಯೂಬ್ ಚಾನೆಲ್ನಲ್ಲಿ ಒಂದಿಷ್ಟು ವಿಡಿಯೋಗಳನ್ನು ಈಗಾಗಲೇ ಅಪ್ಲೋಡ್ ಮಾಡಿದ್ದಾರೆ. ಈ ಚಾನೆಲ್ನಲ್ಲಿ ಇದೂವರೆಗೂ 12 ವಿಡಿಯೋಗಳು ಲಭ್ಯವಿದೆ. ಅದರಲ್ಲಿ ಸ್ಕ್ಯಾಮ್ಗಳು, ವಿವಾದಗಳು, ಕಾಂಟ್ರವರ್ಸಿಗಳು ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚೆ ಮಾಡಲಾಗಿದೆ. 7 ಲಕ್ಷದ 38 ಸಾವಿರಕ್ಕೂ ಅಧಿಕ ಸಬ್ಸ್ಕ್ರೈಬರ್ಗಳು ಇದ್ದಾರೆ. ಈ ಚಾನೆಲ್ನಲ್ಲಿ ಸೌಜನ್ಯ ವಿಡಿಯೋವನ್ನು ಅಪ್ಲೋಡ್ ಮಾಡಲಾಗಿತ್ತು. ಈ ವಿಡಿಯೋದಲ್ಲಿ ಸಮೀರ್ ನಿರೂಪಣೆ ಶೈಲಿ ವೀಕ್ಷಕರ ಗಮನಸೆಳೆದಿತ್ತು.
ಸಮೀರ್ ಎಂ ಡಿಯದ್ದು ಇನ್ನಿಂದು ಯೂಟ್ಯೂಬ್ ಚಾನೆಲ್ ಇದೆ. ಅದರಲ್ಲಿ 3.66 ಲಕ್ಷ ಸಬ್ಸ್ಕ್ರೈಬರ್ ಇದ್ದಾರೆ. ಇದರಲ್ಲಿ ದೆವ್ವಗಳಿಗೆ ಸಂಬಂಧಿಸಿದ ವಿಡಿಯೋಗಳಿವೆ. ಕೆಲವು ಮಾಟ ಮಂತ್ರದ ಬಗ್ಗೆ ವಿಡಿಯೋಗಳು ಇವೆ. ಕೆಲವು ಮರ್ಡರ್ ಕೇಸ್ಗಳು, ಅವಧೂತ, ಸಮುದ್ರ ಮಂಥನ, ಅಮಾವಾಸ್ಯೆ ರಾತ್ರಿ ಹೀಗೆ ಒಂದಿಷ್ಟು ವಿಡಿಯೋಗಳು ಅಪ್ಲೋಡ್ ಆಗಿವೆ. ಆದರೆ, ಸೌಜನ್ಯ ಕೇಸ್ಗೆ ಸಂಬಂಧಿಸಿದ ವಿಡಿಯೋ ಈ ಯೂಟ್ಯೂಬರ್ಗೆ ಬೇರೆ ಲೆವೆಲ್ನಲ್ಲಿ ಜನಪ್ರಿಯತೆಯನ್ನು ತಂದುಕೊಟ್ಟಿದೆ.
ಹಾಗಂತ ಸಮೀರ್ ಎಂಡಿ ವಿಡಿಯೋಗೆ ಹೇಗೆ ಮೆಚ್ಚುಗೆ ವ್ಯಕ್ತವಾಗಿತ್ತೋ ಹಾಗೇ ಟೀಕೆಗಳು ಕೂಡ ಕೇಳಿ ಬಂದಿದೆ. ಸೌಜನ್ಯ ಕೇಸ್ಗೆ ಸಂಬಂಧಿಸಿದ ಸಮೀರ್ ವಿಡಿಯೋದಿಂದ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ ಎಂಬ ಕೂಗು ಕೇಳಿಬರುತ್ತಿದೆ. ಈ ಸಂಬಂಧ ಬಳ್ಳಾರಿಯ ಕೌಲ್ ಬಜಾರ್ ಪೊಲೀಸ್ ಠಾಣೆಯಲ್ಲಿ ಸುಮೋಟೋ ಕೇಸ್ ದಾಖಲಾಗಿದೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ಮಾಡಿದ ಆರೋಪದ ಮೇಲೆ ಭಾರತೀಯ ನ್ಯಾಯ ಸಂಹಿತೆ 299 ಸೆಕ್ಷನ್ ಪ್ರಕಾರ ಕೇಸ್ ದಾಖಲಾಗಿದೆ.
ಇದರ ಜೊತೆಗೆ ಸಮೀರ್ ಮೇಲೆ ಸೌಜನ್ಯ ಬಗ್ಗೆ ವಿಡಿಯೋ ಮಾಡುವುದಕ್ಕೆ 35 ಲಕ್ಷ ರೂಪಾಯಿ ಹಣ ಪಡೆದಿರುವ ಆರೋಪ ಕೂಡ ಕೇಳಿ ಬಂದಿದೆ. ಇದನ್ನು ಈಗಾಗಲೇ ಸಮೀರ್ ಇನ್ನೊಂದು ವಿಡಿಯೋದಲ್ಲಿ ತಳ್ಳಿ ಹಾಕಿದ್ದಾರೆ. ಸಮೀರ್ ತನ್ನ ವಿಡಿಯೋದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಕುಟುಂಬದ ಸದಸ್ಯರ ಹೆಸರಗಳನ್ನು ತೆಗೆದುಕೊಂಡಿಲ್ಲ. ಬದಲಾಗಿ 'ಗೌಡರು' ಅನ್ನುವ ಪದವನ್ನು ಬಳಿಸಿದ್ದಾರೆ. ಇದು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರನ್ನೇ ಪರೋಕ್ಷವಾಗಿ ಸಂಭೋಧಿಸಲಾಗಿದೆ ಅನ್ನೋದು ವಿಡಿಯೋ ನೋಡಿದ ಮೇಲೆ ಅರಿವಿಗೆ ಬರುತ್ತೆ.
ಸೌಜನ್ಯ ಕೇಸ್ ಜೊತೆ ಬೆಳ್ತಂಗಡಿಯಲ್ಲಿ ಈ ಹಿಂದೆ ನಡೆದ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದ ಬಗ್ಗೆನೂ ಹೇಳಲಾಗಿದೆ. 1979ರಲ್ಲಿ ನಡೆದ ವೇದವಲ್ಲಿ ಹರಳೆ ಹತ್ಯೆ, 1987ರಲ್ಲಿ ನಡೆದ ಪದ್ಮಲತಾ ಹತ್ಯೆ, 2012ರಲ್ಲಿ ನಡೆದ ಯಮುನಾ ಹಾಗೂ ನಾರಾಯಣ ಹತ್ಯೆಗಳ ಬಗ್ಗೆನೂ ಈ ಯೂಟ್ಯೂಬ್ನಲ್ಲಿ ಚರ್ಚೆ ಮಾಡಲಾಗಿದೆ. ಸದ್ಯ ಪೊಲೀಸರು ಸಮೀರ್ ವಿರುದ್ಧ ಎಫ್ಐಆರ್ ದಾಖಲಿಸಿದ್ದು, ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವ ರೀತಿಯಲ್ಲಿ ವಿಡಿಯೋ ಮಾಡಲಾಗಿದೆ ಎಂದಿದ್ದಾರೆ. ಹಾಗೇ ಸಮೀರ್ ಕಚೇರಿಗೆ ತೆರಳಿ ವಿಚಾರಣೆಗೆ ನೋಟೀಸ್ ಅನ್ನು ನೀಡಿದ್ದರು. ಇದನ್ನು ಪ್ರಶ್ನಿಸಿ ಸಮೀರ್ ಹೈಕೋರ್ಟ್ ಮೊರೆ ಹೋಗಿದ್ದರು. ಹೈಕೋರ್ಟ್ಗೆ ನೋಟೀಸ್ಗೆ ತಡೆಯಾಜ್ಞೆ ನೀಡಿದೆ.
ಸುಮಾರು 13 ವರ್ಷಗಳಿಂದ ಸೌಜನ್ಯ ಕೇಸ್ ಕರ್ನಾಟಕ ಅಷ್ಟೇ ಅಲ್ಲ, ದೇಶಾದ್ಯಂತ ಚರ್ಚೆಯ ವಿಷಯವಾಗಿದೆ. ಸಾಕಷ್ಟು ಹೋರಾಟಗಳು ನಡೆದಿವೆ, ತನಿಖೆಗಳಾಗಿವೆ, ಪ್ರತಿಭಟನೆಗಳು ನಡೆದಿವೆ. ಆದರೆ, ಇದೂವರೆಗೂ ಈ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಅನ್ನೋದು ಸಿಕ್ಕಿಲ್ಲ. ಇದ್ದಕ್ಕಿದ್ದ ಹಾಗೇ ಈ ಪ್ರಕರಣ ಹೋರಾಟ ಸ್ವರೂಪ ಪಡೆದುಕೊಳ್ಳುತ್ತೆ. ಮತ್ತೆ ತಣ್ಣಗಾಗುತ್ತೆ. ಮತ್ತೆ ಯಾರೋ ಹೋರಾಟದ ಕಿಚ್ಚು ಹಚ್ಚುತ್ತಾರೆ. ಮತ್ತೆ ಮುನ್ನೆಲೆಗೆ ಬರುತ್ತೆ. ಕಳೆದ ಒಂದೂವರೆ ದಶಕದಿಂದ ಈ ಕೇಸ್ ಹೇಗೆ ಸಾಗುತ್ತಿದೆಯೇ ಹೊರತು. ಪ್ರಕರಣಕ್ಕೆ ಅಂತ್ಯ ಕಂಡಿಲ್ಲ.
ಈಗ ಮತ್ತೆ ಸೌಜನ್ಯ ಪ್ರಕರಣ ದೇಶಾದ್ಯಂತ ಸಂಚಲನ ಸೃಷ್ಟಿಸಿದೆ. ಯುಟ್ಯೂಬರ್ ಸಮೀರ್ ಮಾಡಿದ ವಿಡಿಯೋ ಮತ್ತೆ ಚರ್ಚೆಯನ್ನು ಹುಟ್ಟಾಕಿದೆ. ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಧರ್ಮಸ್ಥಳದ ಧರ್ಮಾಧಿಕಾರಿಗಳ ವಿರುದ್ಧ ಹೋರಾಟಗಾರರು ಆರೋಪ ಮಾಡುವುದಕ್ಕೆ ಶುರು ಮಾಡಿದ್ದಾರೆ.


Click it and Unblock the Notifications











