ರಾಮನಗರದಲ್ಲಿ ಚಲನಚಿತ್ರ ನಟನ ಮೇಲೆ ಹಲ್ಲೆಗೆ ಯತ್ನ: ಕಾರು ಜಖಂ
'ಯುಗಪುರುಷ' ಸಿನಿಮಾದಲ್ಲಿ ನಾಯಕ ನಟನಾಗಿ ಅಭಿನಯಿಸಿರುವ ಅರ್ಜುನ್ ದೇವ್ ಮೇಲೆ ಇಂದು ದುಷ್ಕರ್ಮಿಗಳು ಅಟ್ಯಾಕ್ ಮಾಡಿದ್ದಾರೆ.
'ಯುಗಪುರುಷ' ಎಂದಕೂಡಲೆ ನಿಮಗೆ ಕ್ರೇಜಿ ಸ್ಟಾರ್ ರವಿಚಂದ್ರನ್ ನಟಿಸಿದ 'ಯುಗಪುರುಷ' ಸಿನಿಮಾ ನೆನಪಾಗಬಹುದು. ಆದ್ರೆ, ನಾವು ಹೇಳುತ್ತಿರುವುದು ಸ್ಯಾಂಡಲ್ ವುಡ್ ನಲ್ಲಿ ಇನ್ನೂ ಬಿಡುಗಡೆ ಆಗದೇ ಇರುವ 'ಯುಗಪುರುಷ' ಎಂಬ ಹೊಸಬರ ಚಿತ್ರದ ಬಗ್ಗೆ.
ಯುವ ಪ್ರತಿಭೆಗಳೆಲ್ಲ ಸೇರಿ ಗಾಂಧಿನಗರದಲ್ಲಿ ಹೊಸದಾಗಿ 'ಯುಗಪುರುಷ' ಎಂಬ ಮತ್ತೊಂದು ಸಿನಿಮಾ ತಯಾರು ಮಾಡಿದ್ದಾರೆ. ಬಿಡುಗಡೆಯ ಹೊಸ್ತಿಲಲ್ಲಿ ಇರುವ 'ಯುಗಪುರುಷ' ಚಿತ್ರದ ನಾಯಕ ಅರ್ಜುನ್ ದೇವ್ ಮೇಲೆ ಇವತ್ತು ದುಷ್ಕರ್ಮಿಗಳು ರಾಮನಗರದಲ್ಲಿ ಹಲ್ಲೆಗೆ ಯತ್ನಿಸಿದ್ದಾರೆ. ಮುಂದೆ ಓದಿ....

ಘಟನೆಯ ಹಿನ್ನಲೆ...
ಕೆಎ 56 ಎಂ 6669 ಅಡಿ ರಿಜಿಸ್ಟರ್ ಆಗಿರುವ I20 ಕಾರ್ ನಲ್ಲಿ ಬೆಂಗಳೂರಿನಿಂದ ರಾಮನಗರಕ್ಕೆ ಅರ್ಜುನ್ ದೇವ್ ಇಂದು ಬೆಳಗ್ಗೆ ಪ್ರಯಾಣ ಆರಂಭಿಸಿದರು. ರಾಮನಗರ ಜಿಲ್ಲಾ ಕೋರ್ಟ್ ಕಛೇರಿ ಮುಂಭಾಗ ಅರ್ಜುನ್ ದೇವ್ ರವರ ಮೇಲೆ ಹಲ್ಲೆಗೆ ಯತ್ನಿಸಿದ ದುಷ್ಕರ್ಮಿಗಳು, ರಾಡ್ ನಿಂದ ಕಾರಿನ ಗಾಜು ಒಡೆದು ಪುಡಿ ಪುಡಿ ಮಾಡಿದ್ದಾರೆ.

ಬೆಂಗಳೂರಿನಿಂದ ಫಾಲೋ ಮಾಡಿದ್ರಂತೆ
ಬೆಂಗಳೂರಿನಿಂದ ಮೂರ್ನಾಲ್ಕು ಬೈಕ್ ಗಳಲ್ಲಿ ನಾಲ್ಕೈದು ದುಷ್ಕರ್ಮಿಗಳು ಅರ್ಜುನ್ ದೇವ್ ರವರನ್ನ ಫಾಲೋ ಮಾಡಿಕೊಂಡು ಬಂದಿದ್ದಾರೆ. ರಾಮನಗರ ಸಿಗ್ನಲ್ ದಾಟುತ್ತಿದ್ದಂತೆಯೇ, ಅರ್ಜುನ್ ದೇವ್ ರವರ ಕಾರ್ ನ ಜಖಂ ಗೊಳಿಸಿದ್ದಾರೆ.

ಎಚ್ಚರಿಕೆ ಕೊಟ್ಟಿದ್ದಾರೆ.!
ಕಾರಿನ ಗಾಜು ಒಡೆದು ಹಾಕಿ, ಅರ್ಜುನ್ ದೇವ್ ರವರಿಗೆ ದುಷ್ಕರ್ಮಿಗಳು ಎಚ್ಚರಿಕೆ ಕೊಟ್ಟಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದೆ. ಜೊತೆಗೆ, ದುಷ್ಕರ್ಮಿಗಳ ಕೈಯಲ್ಲಿ ಗನ್ ಇತ್ತು ಎಂದು ತಿಳಿದು ಬಂದಿದೆ.

ರಾಮನಗರಕ್ಕೆ ಹೋಗಿದ್ಯಾಕೆ.?
ಅಷ್ಟಕ್ಕೂ, ಅರ್ಜುನ್ ದೇವ್ ರಾಮನಗರಕ್ಕೆ ಹೋಗಿದ್ಯಾಕೆ.? ಆ ದುಷ್ಕರ್ಮಿಗಳು ಯಾರು.? ಹಲ್ಲೆಗೆ ಯತ್ನಿಸಲು ಕಾರಣವೇನು.? ಎಂಬುದರ ಬಗ್ಗೆ ಖಚಿತ ಮಾಹಿತಿ ಇಲ್ಲ. ಘಟನೆ ನಡೆದ ಬಳಿಕ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ನಟ ಅರ್ಜುನ್ ದೇವ್. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.


Click it and Unblock the Notifications











