ರತ್ನಗಾಗಿ ಯುವ ರಕ್ತಚರಿತ್ರೆ? ಏನಿದು ದೊಡ್ಮನೆ ಕುಡಿಯ ಲಾಂಗ್ ಸ್ಟೋರಿ?
ದೊಡ್ಮನೆ ಅಭಿಮಾನಿಗಳು ಕಾಯುತ್ತಿದ್ದ ಆ ದಿನ ಬಂದಿದೆ. ಆಯುಧ ಪೂಜೆ ಸಂಭ್ರಮದಲ್ಲಿ ಯುವ ರಾಜ್ಕುಮಾರ್ 2ನೇ ಸಿನಿಮಾ ಘೋಷಣೆ ಆಗಿದೆ. ರೋಹಿತ್ ಪದಕಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಕೆಆರ್ಜಿ ಸ್ಟುಡಿಯೋ, ಪಿಆರ್ಕೆ ಪ್ರೊಡಕ್ಷನ್ಸ್ ಹಾಗೂ ಜಯಣ್ಣ ಫಿಲ್ಮ್ಸ್ ಬ್ಯಾನರ್ನಲ್ಲಿ ಸಿನಿಮಾ ನಿರ್ಮಾಣವಾಗಲಿದೆ.
ಫಸ್ಟ್ ಲುಕ್ ಪೋಸ್ಟರ್ ಸಮೇತ ಕನ್ನಡ ರಾಜ್ಯೋತ್ಸವ ಸಂಭ್ರಮದಲ್ಲಿ ಚಿತ್ರದ ಟೈಟಲ್ ರಿವೀಲ್ ಮಾಡುವುದಾಗಿ ಹೇಳಿದ್ದಾರೆ. ಇನ್ನು ರಕ್ತ ಮೆತ್ತಿದ ಕೈಯಲ್ಲಿ ಯುವ ಲಾಂಗ್ ಹಿಡಿದ ಪೋಸ್ಟರ್ ಅನ್ನು ಚಿತ್ರತಂಡ ಹಂಚಿಕೊಂಡಿದೆ. ಸದ್ಯ ರಿಲೀಸ್ ಆಗಿರುವ ಪೋಸ್ಟರ್ ಸಖತ್ ಸದ್ದು ಮಾಡ್ತಿದೆ.

'ಯುವ' ಸಿನಿಮಾ ಬಳಿಯ ರಾಘಣ್ಣನ ಕಿರಿಮಗ ಯಾವ ಚಿತ್ರದಲ್ಲಿ ನಟಿಸ್ತಾರೆ? ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿತ್ತು. ಇದೀಗ ಆ ಪ್ರಶ್ನೆಗೆ ಉತ್ತರ ಸಿಕ್ಕಂತಾಗಿದೆ. ಕನ್ನಡ ಚಿತ್ರರಂಗದಲ್ಲಿ ರೌಡಿಸಂ ಸಿನಿಮಾಗಳಿಗೆ ನಾಂದಿ ಹಾಡಿದ್ದು 'ಓಂ'. ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದ ಈ ಚಿತ್ರದಲ್ಲಿ ಶಿವರಾಜ್ಕುಮಾರ್ ಲಾಂಗ್ ಹಿಡಿದಿದ್ದರು. ಆ ಬಳಿಕ ಕೂಡ ಸಾಕಷ್ಟು ಸಿನಿಮಾಗಳಲ್ಲಿ ಲಾಂಗ್ ಹಿಡಿದು ಶಿವಣ್ಣ ಅಬ್ಬರಿಸಿದ್ದರು. 'ಜೋಗಿ' ಚಿತ್ರದಲ್ಲಿ ಸೆಂಚುರಿ ಸ್ಟಾರ್ ಲಾಂಗ್ ಝಳಪಿಳಿಸಿದ ಪರಿ ಪ್ರೇಕ್ಷಕರು ಮರೆತ್ತಿಲ್ಲ.
ಪುನೀತ್ ರಾಜ್ಕುಮಾರ್ ಲಾಂಗ್ ಹಿಡಿದು ತೆರೆಮೇಲೆ ಕಾಣಿಸಿಕೊಂಡಿದ್ದು ಕಮ್ಮಿ. 'ವಂಶಿ' ಚಿತ್ರದ ಆಕ್ಷನ್ ಸನ್ನಿವೇಶವೊಂದರಲ್ಲಿ ಲಾಂಗ್ ಉಲ್ಟಾ ಹಿಡಿದು ಗಮನ ಸೆಳೆದಿದ್ದರು. ಇದೀಗ 'ಯುವ' ಎರಡನೇ ಚಿತ್ರದಲ್ಲೇ ಲಾಂಗ್ ಹಿಡಿದಿರುವಂತೆ ಕಾಣುತ್ತಿದೆ. ಪೋಸ್ಟರ್ನಲ್ಲಿ ಲಾಂಗ್ ಹಿಡಿ ಹಿಡಿದಿರುವುದು ಗೊತ್ತಾಗುತ್ತಿದೆ. ಇದೀಗ ಪಕ್ಕಾ ರಾ ಆಕ್ಷನ್ ಥ್ರಿಲ್ಲರ್ ಸಿನಿಮಾ ಎನ್ನುವುದು ಅರ್ಥವಾಗುತ್ತದೆ.
ಪೋಸ್ಟರ್ ಅನ್ನು ಸರಿಯಾಗಿ ಗಮನಿಸಿದರೆ ಯುವ ಕೈ ಮೇಲೆ 'ರತ್ನ' ಎನ್ನುವ ಹಚ್ಚೆ ಇರುವುದನ್ನು ನೋಡಬಹುದು. ಚಿತ್ರದಲ್ಲಿ ರತ್ನ ಯಾರು? ನಾಯಕ ತಾಯಿನಾ? ಅಥವಾ ಸಹೋದರಿನಾ? ಇಲ್ಲ ಪ್ರೇಯಸಿನಾ? ಆಕೆಗಾಗಿಯೇ ಈ ರಕ್ತ ಚರಿತ್ರೆ ನಡೆಯುತ್ತಾ? ಎನ್ನುವ ಪ್ರಶ್ನೆಗಳಿಗೆಲ್ಲಾ ತೆರೆಮೇಲೆ ಉತ್ತರ ಸಿಗಲಿದೆ. ಒಟ್ಟಾರೆ ಪ್ರೀ ಲುಕ್ ಪೋಸ್ಟರ್ನಲ್ಲೇ ಚಿತ್ರತಂಡ ಕುತೂಹಲ ಮೂಡಿಸಿದೆ.
ಧನಂಜಯ ನಟನೆಯ 'ಉತ್ತರಕಾಂಡ' ಚಿತ್ರವನ್ನು ರೋಹಿತ್ ಪದಕಿ ನಿರ್ದೇಶನ ಮಾಡುತ್ತಿದ್ದಾರೆ. ಆದರೆ ದಿಢೀರನೆ ಯುವ 02 ಸಿನಿಮಾ ಒಪ್ಪಿಕೊಂಡಿರುವುದು ಅಚ್ಚರಿ ಮೂಡಿಸುತ್ತಿದೆ. 'ಉತ್ತರಕಾಂಡ' ಸಿನಿಮಾ ಕಥೆ ಏನಾಯ್ತು? ಅರ್ಧಕ್ಕೆ ಸಿನಿಮಾ ನಿಂತು ಹೋಯ್ತಾ? ಎನ್ನುವ ಅನುಮಾನ ಕೆಲವರನ್ನು ಕಾಡುತ್ತಿದೆ.
ಧನಂಜಯ ಸದ್ಯ 'ಜಿಂಗೋ' ಸಿನಿಮಾ ಕಡೆ ಮುಖ ಮಾಡಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ಇನ್ನು ಯುವ 02 ಚಿತ್ರಕ್ಕಾಗಿ ಕನ್ನಡ ಚಿತ್ರರಂಗದ ಮೂರು ದೊಡ್ಡ ಸಿನಿಮಾ ನಿರ್ಮಾಣ ಸಂಸ್ಥೆಗಳು ಕೈ ಜೋಡಿಸಿರುವುದು ಯಾಕೆ? ಎನ್ನುವ ಚರ್ಚೆ ಕೂಡ ನಡೀತಿದೆ. ಚಿತ್ರದ ಬಜೆಟ್ ಹೆಚ್ಚು ಎನ್ನುವ ಕಾರಣಕ್ಕೆ ಹೀಗೆ ಜಂಟಿಯಾಗಿ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರಾ? ಎನ್ನುವ ಪ್ರಶ್ನೆಯೂ ಎದ್ದಿದೆ.
ರೋಹಿತ್ ಪದಕಿ ಈವೆರೆಗೆ ಯಾವುದೇ ದೊಡ್ಡ ಸಿನಿಮಾಗಳನ್ನು ಕಟ್ಟಿಕೊಟ್ಟಿಲ್ಲ. ಧನಂಜಯ್ ನಟನೆಯ 'ರತ್ನನ್ ಪ್ರಪಂಚ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ಸಿನಿಮಾ ನೇರವಾಗಿ ಓಟಿಟಿಗೆ ಬಂದಿತ್ತು. ಇದೀಗ 'ಉತ್ತರಕಾಂಡ' ಸಿನಿಮಾ ಚಿತ್ರೀಕರಣ ನಡೆಯುತ್ತಿದೆ. ಅದರ ನಡುವೆಯೇ ಯುವ 02 ಸಿನಿಮಾ ಶುರುವಾಗುತ್ತಿದೆ.
ರಾಜ್ಸೋತ್ಸವಕ್ಕೆ ಪೋಸ್ಟರ್ ಸಮೇತ ಚಿತ್ರದ ಟೈಟಲ್ ಘೋಷಣೆ ಆಗಲಿದೆ. 'ಎಕ್ಕ ರಾಜ ರಾಣಿ' ಎನ್ನುವ ಟೈಟಲ್ ಅನ್ನು ಚಿತ್ರತಂಡ ಪರಿಶೀಲಿಸುತ್ತಿದೆ ಎನ್ನುವ ಮಾತುಗಳು ಕೇಳಿ ಬರ್ತಿದೆ. ಈ ಟೈಟಲ್ ಅಭಿಮಾನಿಗಳ ಗಮನ ಸೆಳೆದಿದೆ. ವರ್ಷಾಂತ್ಯಕ್ಕೆ ಸಿನಿಮಾ ಸೆಟ್ಟೇರಿ ಮುಂದಿನ ವರ್ಷ ತೆರೆಗೆ ಬರುವ ಸಾಧ್ಯತೆಯಿದೆ. 'ಮನುಷ್ಯತ್ವ ನಮ್ಮೊಳಗಿರೋ ಮೃಗದ ಮುಖವಾಡ' ಎನ್ನುವ ಸಾಲು ಕಥೆ ಬಗ್ಗೆ ನಿರೀಕ್ಷೆ ಮೂಡಿಸಿದೆ.


Click it and Unblock the Notifications











