'ಒಬ್ಬನೇ ಶಿವ.. ಒಬ್ಬನೇ ಯುವ' ; ಮಾರ್ಚ್ ನಲ್ಲಿ 'ಯುವ' ಜಪ ..ತಪ...!
ಮಾರ್ಚ್ 29ಕ್ಕೆ 'ಯುವ'ರಾಜನ ಪಟ್ಟಾಭಿಷೇಕಕ್ಕೆ ಕರುನಾಡು ಸಾಕ್ಷಿಯಾಗಲಿದೆ. ಕನ್ನಡ ಚಿತ್ರರಂಗದಲ್ಲಿ ಹೊಸದೊಂದು ಪರ್ವವೂ ಆರಂಭವಾಗಲಿದೆ. ಆದರೆ ಅದಕ್ಕೂ ಮುನ್ನ 'ಯುವ ' ಮೆರವಣಿಗೆ ನಡೆಯಲಿದೆ. ಅದರ ಆರಂಭ 'ಚಾಮರಾಜನಗರ'ದಲ್ಲಿ ಅನ್ನುವುದು ಈ ಕ್ಷಣದ ಬ್ಲಾಕ್ ಬಸ್ಟರ್ ಸಮಾಚಾರ
ಹೌದು. ಮಾರ್ಚ್ 02ರಿಂದ 'ಯುವ ' ಘರ್ಜನೆ ಆರಂಭವಾಗಲಿದೆ. ಚಾಮರಾಜನಗರ ಟೆಂಪಲ್ ಮೈದಾನದಲ್ಲಿ ಹಾಡಿನ ದಿಬ್ಬಣ ಹೊರೆಡಲಿದೆ. 'ಒಬ್ಬನೇ ಶಿವ.. ಒಬ್ಬನೇ ಯುವ'.. ಎಂಬ ಘೋಷವಾಕ್ಯ ಮೊಳಗಲಿದೆ. ಇನ್ನೂ ಹೇಳಿ..ಕೇಳಿ ಇದು ಯುವ ಪಾಲಿಗೆ ಮೊದಲ ಸಂಭ್ರಮ.. ಸಡಗರ.. ಅಭಿಮಾನಿಗಳ ಪಾಲಿಗೂ ಕೂಡ ಅವಿಸ್ಮರಣೀಯ ಘಳಿಗೆ. ಹೀಗಾಗಿ ಮಾರ್ಚ್ 02ಕ್ಕೆ ಚಾಮರಾಜನಗರದಲ್ಲಿ ಹಬ್ಬ ನಡೆಯುವುದು ಪಕ್ಕಾ

ಮಾರ್ಚ್ 02ರಂದು ಮೊದಲ ಹಾಡನ್ನ ಕನ್ನಡಿಗರ ಮಡಿಲಿಗೆ ಹಾಕಲಿರುವ 'ಯುವ', ಆ ನಂತರ 'ದೊಡ್ಮನೆ'ಯ ಭದ್ರಕೋಟೆ 'ಹೊಸಪೇಟೆ'ಗೆ ಕಾಲಿಡಲಿದ್ದಾರೆ. 'ಅಪ್ಪು' ಹುಟ್ಟಿದ ಹಬ್ಬಕ್ಕೂ ಮುನ್ನ ಅಂದರೆ 'ಮಾರ್ಚ್ 16'ರಂದು, ಚಿಕ್ಕಪ್ಪ 'ಪುನೀತ್ ರಾಜ್ ಕುಮಾರ್ ' ಅವರ ಆಶೀರ್ವಾದ ಪಡೆದು ಚಿತ್ರರಂಗದವರ ಜೊತೆ ಕುಣಿಯಲಿದ್ದಾರೆ.
ಮನರಂಜನೆಯ ರಸದೌತಣ ಬಡಿಸಲಿದ್ದಾರೆ. ಇನ್ನೂ ಮಾರ್ಚ್ 16ರ ನಂತರ, ಇನ್ನೂ ಮೂರು ಕಡೆ 'ಯುವ ಜಾತ್ರೆ' ನಡೆಯಲಿದೆ ಅನ್ನುವ ಮಾತು ಕೂಡ ಇದೆ. ಆದರೆ ಎಲ್ಲಿ..? ಯಾವತ್ತು..? ಅನ್ನುವುದಕ್ಕೆ ಸದ್ಯಕ್ಕೆ ಉತ್ತರ ಇಲ್ಲ.

ಕನ್ನಡದ ಕೀರ್ತಿಯನ್ನ ಜಗದಗಲ ಪಸರಿಸಿದ 'ಹೊಂಬಾಳೆ ' ಸಂಸ್ಥೆ 'ಯುವ' ಚಿತ್ರವನ್ನ ನಿರ್ಮಾಣ ಮಾಡಿದೆ. ಇನ್ನೂ 'ರಾಜಕುಮಾರ'ದಂಥಾ ಸಾರ್ವಕಾಲಿಕ ಹಿಟ್ ಚಿತ್ರದ ನಂತರ ಮತ್ತೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗಾಗಿ ಯುವರತ್ನ ಚಿತ್ರವನ್ನ ನಿರ್ದೇಶಿಸಿದ್ದ 'ಸಂತೋಷ್ ಆನಂದ ರಾಮ್ 'ನಿರ್ದೇಶನದಲ್ಲಿ ಸಿದ್ಧವಾದ 'ಯುವ ' ಚಿತ್ರಕ್ಕೆ, ಅಜನೀಶ್ ಲೋಕನಾಥ್ ' ಸಂಗೀತ ನಿರ್ದೇಶನ ಇದೆ. 'ಶ್ರೀಶಾ ಕುದುವಳ್ಳಿ' ಯುವ ಚಿತ್ರದ ಕಲರ್ ಫುಲ್ ಪ್ರಪಂಚವನ್ನ ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ. 'ಸಪ್ತಮಿ ಗೌಡ' ಯುವ ಜೊತೆ ಇಲ್ಲಿ ನಾಯಕಿಯಾಗಿ ತೆರೆ ಹಂಚಿಕೊಂಡಿದ್ದಾರೆ
03 ಕೋಟಿಗೆ ಯುವ ಆಡಿಯೋ ಹಕ್ಕು ಮಾರಾಟ..?
ಕನ್ನಡದ ಪ್ರತಿಷ್ಠಿತ ಆಡಿಯೋ ಸಂಸ್ಥೆಯಲ್ಲಿ ಒಂದಾದ, ಆನಂದ್ ಆಡಿಯೋ ಯುವ ಚಿತ್ರದ ಆಡಿಯೋ ಹಕ್ಕುಗಳನ್ನ ಖರೀದಿಸಿದೆ. ನಿಜಕ್ಕೂ ವ್ಯಾಪಾರ ಎಷ್ಟು ಕೋಟಿಗೆ ಆಗಿದೆ ಅನ್ನುವುದು ಸದ್ಯಕ್ಕೆ ಗೌಪ್ಯವಾಗಿದ್ದರೂ, ಬೆಂಗಳೂರಿನ ಸೇಂಟ್ ಮಾರ್ಕ್ಸ್ ರಸ್ತೆಯಲ್ಲಿರುವ ಆನಂದ್ ಆಡಿಯೋ ಕಛೇರಿ ಸುತ್ತ ಮುತ್ತು ಯುವ ಚಿತ್ರದ ಆಡಿಯೋ ರೈಟ್ಸ್ ಮೂರು ಕೋಟಿಗೆ ಮಾರಾಟವಾಗಿದೆ ಎಂಬ ಮಾತು ಬಲವಾಗಿ ಕೇಳಿ ಬರುತ್ತಿದೆ.

ನೆನಪಿರಲಿ.. ದಶಕಗಳಿಂದ ಸೂಪರ್ ಸ್ಟಾರ್ ಪಟ್ಟವನ್ನ ಅಲಂಕರಿಸಿರುವ ನಾಯಕರ ಸಿನಿಮಾದ ಹಾಡುಗಳೇ 02 ಕೋಟಿ ಗಡಿ ದಾಟುವುದು ಅಪರೂಪ. ಅಂತದ್ರಲ್ಲಿ ಯುವರಾಜ್ ಕುಮಾರ್ ಮೊದಲ ಸಿನಿಮಾದ ಹಾಡುಗಳು ಇಷ್ಟು ದೊಡ್ಡ ಮೊತ್ತಕ್ಕೆ ಸೇಲ್ ಆಗಿರೋದು ದಾಖಲೆಯೇ ಸರಿ
ಒಟ್ಟಿನಲ್ಲಿ ಇದೇ ಮಾರ್ಚ್ ನಿಂದ 'ಯುವ ಅಧ್ಯಾಯ' ಆರಂಭವಾಗಲಿದೆ. ಹೊಸದೊಂದು ಪರ್ವಕ್ಕೆ ಚಾಮರಾಜನಗರ ಮುನ್ನುಡಿ ಬರೆಯಲಿದೆ. 'ಅಪ್ಪು ಆಶೀರ್ವಾದ, ಅಭಿಮಾನಿಗಳ ಪ್ರೀತಿಯೇ' ' ಯುವ'ಗೆ ಶ್ರೀ ರಕ್ಷೆ...!


Click it and Unblock the Notifications











