ಯುವ ರಾಜ್ಕುಮಾರ್ 3ನೇ ಚಿತ್ರಕ್ಕೆ ನರ್ತನ್ ಆಕ್ಷನ್ ಕಟ್? 'ಮಫ್ತಿ' ನಿರ್ದೇಶಕ ಪ್ರತಿಕ್ರಿಯೆ
ರಾಘಣ್ಣನ ಕಿರಿಮಗ ಮುಂದಿನ ಸಿನಿಮಾ ಯಾವ್ದು ಎನ್ನುವ ಚರ್ಚೆ ಜೋರಾಗಿದೆ. 'ಯುವ' ಸಿನಿಮಾ ಮೂಲಕ ನಾಯಕನಾಗಿ ಚಿತ್ರರಂಗ ಪ್ರವೇಶಿಸಿದ ಯುವ ರಾಜ್ಕುಮಾರ್ ಬಳಿಕ 'ಎಕ್ಕ' ಚಿತ್ರದಲ್ಲಿ ನಟಿಸಿದ್ದರು. 9 ತಿಂಗಳು ಕಳೆದರೂ ಯುವ ಮುಂದಿನ ಸಿನಿಮಾ ಅಪ್ಡೇಟ್ ಮಾತ್ರ ಸಿಕ್ಕಿಲ್ಲ.
ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಮಾಡುವುದಾಗಿ ಯುವ ರಾಜ್ಕುಮಾರ್ ಹೇಳ್ತಾ ಬಂದಿದ್ದರು. 'ಎಕ್ಕ' ಬಿಡುಗಡೆಗೂ ಮುನ್ನ ದುನಿಯಾ ಸೂರಿ ನಿರ್ದೇಶನದಲ್ಲಿ ಯುವ-03 ಸಿನಿಮಾ ಸೆಟ್ಟೇರಿತ್ತು. ಆದರೆ ಬಳಿಕ ಸುದ್ದಿಯೇ ಇಲ್ಲ. ಸೂರಿ ಹಾಗೂ ಯುವ ಸಿನಿಮಾ ಕಾರಣಾಂತರಗಳಿಂದ ನಿಂತು ಹೋಗಿದೆ ಎನ್ನಲಾಗ್ತಿದೆ. ಸದ್ಯ ಇಬ್ಬರೂ ಬೇರೆ ಬೇರೆ ಸಿನಿಮಾಗಳತ್ತ ಮುಖ ಮಾಡಿದ್ದಾರೆ. ಧ್ರುವ ಸರ್ಜಾ ಕಾಂಬಿನೇಷನ್ನಲ್ಲಿ ಸಿನಿಮಾ ಮಾಡಲು ಸೂರಿ ಸಜ್ಜಾಗಿದ್ದಾರೆ. ಇತ್ತ ಯುವ ಕೂಡ ಬೇರೆ ಬೇರೆ ಕಥೆಗಳನ್ನು ಕೇಳುತ್ತಿದ್ದಾರೆ.

ಕನ್ನಡ ನಿರ್ದೇಶಕರು ಮಾತ್ರವಲ್ಲ ಪರಭಾಷಾ ನಿರ್ದೇಶಕರು ಕೂಡ ಯುವ ರಾಜ್ಕುಮಾರ್ ಅವರಿಗೆ ಕಥೆ ಹೇಳುತ್ತಿದ್ದಾರೆ. ಸದ್ಯಕ್ಕೆ ಯಾವುದೂ ಫೈನಲ್ ಆಗಿಲ್ಲ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ 'ಯುವ ರಣಧೀರ ಕಂಠೀರವ' ಅವರ ಮೊದಲ ಸಿನಿಮಾ ಆಗಬೇಕಿತ್ತು. ಕಾರಣಾಂತರಗಳಿಂದ ಅದು ನಿಂತಿತ್ತು. ಆ ಕಥೆಯನ್ನು ಕೂಡ ತಿದ್ದಿ ತೀಡುವ ಪ್ರಯತ್ನ ಮಾಡಲಾಗ್ತಿದೆ. ಯುವ ಕೂಡ ಈ ಕಥೆಯ ಬಗ್ಗೆ ಬಹಳ ಆಸಕ್ತಿ ಹೊಂದಿದ್ದು ತಾವೇ ಚಿತ್ರಕಥೆಯಲ್ಲಿ ಕೈಯಾಡಿಸುತ್ತಿದ್ದಾರೆ. ಆದರೆ ಸದ್ಯಕ್ಕೆ ಫೈನಲ್ ಆಗುವ ಲಕ್ಷಣಗಳು ಕಾಣುತ್ತಿಲ್ಲ. ಇದೆಲ್ಲದರ ನಡುವೆ ಯುವ-03 ಚಿತ್ರಕ್ಕೆ ನರ್ತನ್ ಆಕ್ಷನ್ ಕಟ್ ಹೇಳುತ್ತಾರೆ ಎನ್ನುವ ಊಹಾಪೋಹ ಶುರುವಾಗಿದೆ.
'ಮಫ್ತಿ' ಬಳಿಕ ಬಹಳ ಗ್ಯಾಪ್ ತಗೊಂಡು 'ಭೈರತಿ ರಣಗಲ್' ಸಿನಿಮಾ ಕಟ್ಟಿಕೊಟ್ಟು ನರ್ತನ್ ಗೆದ್ದಿದ್ದರು. ಆ ನಂತರ ಮತ್ತೆ ಸೈಲೆಂಟ್ ಆಗಿದ್ದಾರೆ. ಕೆವಿಎನ್ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ರಾಮ್ಚರಣ್ ಜೊತೆಗೂ ಸಿನಿಮಾ ಮಾಡಲು ನರ್ತನ್ ಪ್ರಯತ್ನಿಸಿದ್ದರು. ಆದರೆ ಯಾವುದೂ ಕೈಗೂಡುತ್ತಿಲ್ಲ. ಇದೆಲ್ಲದರ ನಡುವೆ ಯುವರಾಜ್ಕುಮಾರ್ ಕಾಂಬಿನೇಷನ್ ಬಗ್ಗೆ ಗುಸುಗುಸು ಶುರುವಾಗಿದೆ. ಈ ಬಗ್ಗೆ ಫಿಲ್ಮಿಬೀಟ್ ಕನ್ನಡಕ್ಕೆ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ನರ್ತನ್ ಮಾತನಾಡಿ "ನಾನು ಮೊದಲಿಗೆ ಕೆವಿಎನ್ ಪ್ರೊಡಕ್ಷನ್ ಸಂಸ್ಥೆ ಸಿನಿಮಾ ನಿರ್ದೇಶಿಸಬೇಕಿದೆ. ಅದೇ ಪ್ರಯತ್ನದಲ್ಲಿದ್ದೇನೆ. ಬಾಲಿವುಡ್ ಕಲಾವಿದರಿಗೂ ಕಥೆ ಹೇಳಿದ್ದೀನಿ. ಆದ್ರೆ ಯಾವುದು ಫೈನಲ್ ಆಗಿಲ್ಲ. ಕೆವಿಎನ್ ಸಂಸ್ಥೆ ನಿರ್ಮಾಣದ 'ಜನನಾಯಗನ್' ಸಿನಿಮಾ ವಿವಾದದ ಗೊಂದಲ ಗೊತ್ತೇಯಿದೆ. ಹಾಗಾಗಿ ಸದ್ಯಕ್ಕೆ ಯಾವುದೂ ಸಾಧ್ಯವಾಗ್ತಿಲ್ಲ. ಸ್ವಲ್ಪ ದಿನ ಕಾಯಬೇಕು. 'ಕೆಡಿ' ಸಿನಿಮಾ ರಿಲೀಸ್ ಬಳಿಕ ಗೊತ್ತಾಗಬಹುದು" ಎಂದಿದ್ದಾರೆ.
ಯುವ ರಾಜ್ಕುಮಾರ್ ಜೊತೆ ಸದ್ಯಕ್ಕೆ ಸಿನಿಮಾ ಮಾಡುವ ಆಲೋಚನೆ ಇಲ್ಲ. ಯಾವುದು ಫೈನಲ್ ಆಗಿಲ್ಲ. ಧ್ರುವ ಅವರಿಗಾಗಿ ಕಥೆ ಬರೆದಿರುವುದು ನಿಜ. ಅದೆಲ್ಲದರ ಬಗ್ಗೆ ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆ ಎಂದಿದ್ದಾರೆ. ಇತ್ತೀಚೆಗೆ ಯುವ ರಾಜ್ಕುಮಾರ್ ವೇದಿಕೆಯೊಂದರಲ್ಲಿ ಮಾತನಾಡಿ ತಮ್ಮ 3ನೇ ಸಿನಿಮಾ ಕೆಲಸಗಳು ನಡೀತಿದೆ. ಶೀಘ್ರದಲ್ಲೇ ಸಿನಿಮಾ ಘೋಷಣೆ ಮಾಡುತ್ತೇವೆ ಎಂದಿದ್ದರು.
ಏಪ್ರಿಕ್ 23ರಂದು ಯುವ ರಾಜ್ಕುಮಾರ್ ಹುಟ್ಟುಹಬ್ಬ. ಮರುದಿನ ತಾತ ಡಾ. ರಾಜ್ಕುಮಾರ್ ಜಯಂತೋತ್ಸವ. ಅದೇ ಸಂಭ್ರಮದಲ್ಲಿ ಯುವ-03 ಸಿನಿಮಾ ಘೋಷಣೆ ಆಗುವುದು ಬಹುತೇಕ ಖಚಿತ ಎನ್ನಲಾಗ್ತಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಿಲ್ಲ. 'ಉಸ್ತಾದ್' ಎಂಬ ಟೈಟಲ್ನಲ್ಲಿ ಯುವ ರಾಜ್ಕುಮಾರ್ ಜೊತೆ ತರುಣ್ ಸುಧೀರ್ ಸಿನಿಮಾ ಮಾಡುತ್ತಾರೆ ಎನ್ನುವ ಊಹಾಪೋಹ ಕೂಡ ಕೇಳಿಬಂದಿತ್ತು. ಆದರೆ ಯಾವುದೇ ಖಚಿತವಾಗಿಲ್ಲ. ಶೀಘ್ರದಲ್ಲೇ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ.


Click it and Unblock the Notifications











