Yuva Day 94; 'ಯುವ' ಚಿತ್ರದ ಕ್ರೇಜಿ ಅಪ್ಡೇಟ್ ಕೊಟ್ಟ ಯುವ ರಾಜ್ಕುಮಾರ್
ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ 'ಯುವ' ಕೂಡ ಒಂದು. ಅಣ್ಣಾವ್ರ ಮೊಮ್ಮಗ ಯುವ ರಾಜ್ಕುಮಾರ್ ಹೀರೊ ಆಗಿ ಚಿತ್ರರಂಗಕ್ಕೆ ಪರಿಚಿತರಾಗುತ್ತಿರುವ ಸಿನಿಮಾ ಇದು. ಸಂತೋಷ್ ಆನಂದ್ ರಾಮ್ ನಿರ್ದೇಶನದ ಈ ಆಕ್ಷನ್ ಎಂಟರ್ಟೈನರ್ ಸಿನಿಮಾ ಮುಂದಿ ತಿಂಗಳು ತೆರೆಗೆ ಬರಲಿದೆ.
ಮುಹೂರ್ತದ ಸಮಯದಲ್ಲೇ 'ಯುವ' ಟೀಸರ್ ಮಾಡಿ ಹೈಪ್ ಕ್ರಿಯೇಟ್ ಮಾಡಲಾಗಿತ್ತು. ಮೊದಲ ನೋಟದಲ್ಲೇ ಯುವ ಭರವಸೆ ಮೂಡಿಸಿದ್ದರು. ದೊಡ್ಮನೆ ಅಭಿಮಾನಿಗಳು ಈ ಚಿತ್ರಕ್ಕಾಗಿ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಮಾರ್ಚ್ 28ಕ್ಕೆ ಸಿನಿಮಾ ರಿಲೀಸ್ ಆಗಲಿದೆ. ಮುಹೂರ್ತದ ಬಳಿಕ ಸಿನಿಮಾ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿರಲಿಲ್ಲ.

'ಯುವ' ಅಪ್ಡೇಟ್ ಬಗ್ಗೆ ಸ್ವತಃ ಯುವರಾಜ್ಕುಮಾರ್ ಮಾತನಾಡಿದ್ದಾರೆ. ಇತ್ತೀಚೆಗೆ ಅಣ್ಣನ 'ಒಂದು ಸರಳ ಪ್ರೇಮಕಥೆ' ಸಿನಿಮಾ ವೀಕ್ಷಿಸಲು ಯುವ ಚಿತ್ರಮಂದಿರಕ್ಕೆ ಬಂದಿದ್ದರು. ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಜೊತೆಗೆ ಯುವ ಅಪ್ಡೇಟ್ ಬಗ್ಗೆ ಕೇಳಿದ ಪ್ರಶ್ನೆಗೂ ಪ್ರತಿಕ್ರಿಯಿಸಿದ್ದಾರೆ. ರಾಘಣ್ಣನ ಕಿರಿಮಗನ ಹೇಳಿಕೆ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಕಳೆದ ವರ್ಷ ಡಿಸೆಂಬರ್ 22ಕ್ಕೆ 'ಯುವ' ಸಿನಿಮಾ ತೆರೆಗೆ ಬರಬೇಕಿತ್ತು. ಆದರೆ ಹೊಂಬಾಳೆ ಸಂಸ್ಥೆಯ 'ಸಲಾರ್' ಸಿನಿಮಾ ದಿನಾಂಕ ಬಂದಿದ್ದರಿಂದ 'ಯುವ' ಮುಂದೆ ಬರಬೇಕಾಯಿತು. ಇತ್ತೀಚೆಗೆ ಯಾವುದೇ ಅಪ್ಡೇಟ್ ಸಿಗದ ಕಾರಣ ಮಾರ್ಚ್ 28ಕ್ಕೆ ಸಿನಿಮಾ ರಿಲೀಸ್ ಆಗುತ್ತಾ? ಇಲ್ವಾ? ಎನ್ನುವ ಗೊಂದಲ ಅಭಿಮಾನಿಗಳಲ್ಲಿತ್ತು.
ಸದ್ಯ ತಮ್ಮ ಚೊಚ್ಚಲ ಸಿನಿಮಾ ಬಗ್ಗೆ ಮಾತನಾಡಿರುವ ಯುವ "ಮಾರ್ಚ್ 28ಕ್ಕೆ ಹೇಳಿದಂತೆ ಸಿನಿಮಾ ಬಿಡುಗಡೆ ಆಗಲಿದೆ. ಇನ್ನೊಂದು ವಾರದಲ್ಲಿ ಎಲ್ಲಾ ಅಪ್ಡೇಟ್ ಸಿಗುತ್ತದೆ. ಇನ್ನು 3 ದಿನಗಳ ಚಿತ್ರೀಕರಣ ಮಾತ್ರ ಬಾಕಿಯಿದೆ. ಅದು ಮುಗಿದರೆ ಸಿನಿಮಾ ಕಂಪ್ಲೀಟ್ ಆಗುತ್ತದೆ. ಬಳಿಕ ಅಪ್ಡೇಟ್ ಹೇಳ್ತೀವಿ. ಒಟ್ನಲ್ಲಿ ಮಾರ್ಚ್ 28ಕ್ಕೆ ಅಂತೂ ಸಿನಿಮಾ ರಿಲೀಸ್ ಫಿಕ್ಸು" ಎಂದಿದ್ದಾರೆ.

ಅಜನೀಶ್ ಲೋಕನಾಥ್ ಸಂಗೀತ, ಶ್ರೀಶ ಕುದುವಳ್ಳಿ ಛಾಯಾಗ್ರಹಣ 'ಯುವ' ಚಿತ್ರಕ್ಕಿದೆ. ಆಕ್ಷನ್ ಹೀರೊ ಆಗಿ ಯುವ ಚಿತ್ರರಂಗಕ್ಕೆ ಬರುತ್ತಿದ್ದಾರೆ. ಅಣ್ಣಾವ್ರ ಮೊಮ್ಮಗನ ಡ್ಯಾನ್ಸ್, ಸ್ಟಂಟ್ಸ್ ಬಗ್ಗೆ ಭಾರೀ ನಿರೀಕ್ಷೆಯಿದೆ. ಹೊಂಬಾಳೆ ಸಂಸ್ಥೆ ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಿಸಿದೆ. ಸೂಪರ್ ಹಿಟ್ ಸಿನಿಮಾಗಳ ಸರದಾರ ಸಂತೋಷ್ ಆನಂದ್ ರಾಮ್ ನಿರ್ದೇಶನದ ಬಗ್ಗೆಯೂ ಕುತೂಹಲವಿದೆ.
ಈಗಾಗಲೇ 90 ದಿನಗಳ ಕಾಲ 'ಯುವ' ಚಿತ್ರೀಕರಣ ನಡೆಸಿದೆ. ಹೆಚ್ಎಂಟಿ ಫ್ಯಾಕ್ಟರಿಯಲ್ಲಿ ಸೆಟ್ ಆಗಿ ಹೆಚ್ಚಿನ ಚಿತ್ರೀಕರಣ ನಡೆಸಲಾಗಿದೆ. ಮಾರ್ಚ್ 18ಕ್ಕೆ ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಅದ್ಧೂರಿ ಪ್ರೀ ರಿಲೀಸ್ ಈವೆಂಟ್ ಮಾಡುತ್ತಾರೆ ಎನ್ನುವ ಗುಸುಗುಸು ಶುರುವಾಗಿದೆ.
'ಯುವ' ಚಿತ್ರದಲ್ಲಿ 'ಕಾಂತಾರ' ಸಿನಿಮಾ ಖ್ಯಾತಿಯ ಸಪ್ತಮಿ ಗೌಡ ನಾಯಕಿಯಾಗಿ ನಟಿಸುತ್ತಿದ್ದಾರೆ. ಚಿತ್ರದ ಕಥೆ ಏನು ಎನ್ನುವುದರ ಬಗ್ಗೆ ಯಾವುದೇ ಸುಳಿವು ಬಿಟ್ಟುಕೊಟ್ಟಿಲ್ಲ ಚಿತ್ರತಂಡ. 'ಯುವ ರಣಧೀರ ಕಂಠೀರವ' ಚಿತ್ರದ ಮೂಲಕವೇ ಚಿತ್ರರಂಗಕ್ಕೆ ಬರಬೇಕಿತ್ತು. ಕಾರಣಾಂತರಗಳಿಂದ ಆ ಸಿನಿಮಾ ನಿಂತು ಹೋಗಿತ್ತು.
ಬಹಳ ದಿನಗಳಿಂದ ಯುವ ಚಿತ್ರರಂಗಕ್ಕೆ ಬರುವ ಬಗ್ಗೆ ಗುಸುಗುಸು ಕೇಳಿಬರ್ತಿತ್ತು. ಇನ್ನು ಯುವ ಸ್ಟಂಟ್ಸ್ ಮಾಡಿರುವ ಒಂದಷ್ಟು ವಿಡಿಯೊಗಳು ವೈರಲ್ ಆಗಿತ್ತು. ಅದನ್ನೆಲ್ಲಾ ನೋಡಿ ಆದಷ್ಟು ಬೇಗ ಅವರನ್ನು ತೆರೆಮೇಲೆ ನೋಡಲು ಅಭಿಮಾನಿಗಳು ಬಯಸಿದ್ದರು. ಆ ದಿನ ಹತ್ತಿರವಾಗುತ್ತಿದೆ.


Click it and Unblock the Notifications











