Yuva Rajkumar: ಅದ್ಧೂರಿ ಸೆಟ್ಟು.. ಪವರ್ಫುಲ್ ಆಕ್ಷನ್.. ಜೂ.ಪವರ್ಸ್ಟಾರ್ ಎಂಟ್ರಿಗೆ ಅಖಾಡ ರೆಡಿ!
ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಅಗಲಿದ ಬಳಿಕ ಅವರ ಸ್ಥಾನದಲ್ಲಿ ಯುವರಾಜ್ಕುಮಾರ್ ಅವರನ್ನೇ ನೋಡುತ್ತಿದ್ದಾರೆ. ಅಪ್ಪು ಅಭಿಮಾನಿಗಳು ಜೂ.ಪವರ್ಸ್ಟಾರ್ ಅನ್ನು ತೆರೆಮೇಲೆ ನೋಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ. ಇತ್ತೀಚೆಗಷ್ಟೇ ರಿಲೀಸ್ ಆಗಿದ್ದ ಟೈಟಲ್ ಟೀಸರ್ ಅನ್ನು ಕಣ್ತುಂಬಿಕೊಂಡು, ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಯುವರಾಜ್ಕುಮಾರ್ ಚೊಚ್ಚಲ ಸಿನಿಮಾ ಕುತೂಹಲ ಮೂಡಿಸುವುದಕ್ಕೆ ಪ್ರಮುಖ ಕಾರಣ ಅಪ್ಪುನೇ. ಅಪ್ಪು ಅಂತೆಯೇ ಪವರ್ಫುಲ್ ಪಾತ್ರಗಳಲ್ಲಿ ಯುವರಾಜ್ಕುಮಾರ್ ಕಾಣಿಸಿಕೊಳ್ಳಬೇಕು ಅಂತ ಬಯಸಿದ್ದಾರೆ. ಜೊತೆಗೆ ಹೊಂಬಾಳೆ ಫಿಲ್ಮ್ಸ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ಸಂತೋಷ್ ಆನಂದ್ರಾಮ್ ನಿರ್ದೇಶನಕ್ಕೆ ಕೈ ಹಾಕಿದ್ದಾರೆ. ಹೀಗಾಗಿ ಯುವ ಮೊದಲ ಸಿನಿಮಾದಲ್ಲಿಯೇ ಅಪ್ಪು ಅಭಿಮಾನಿಗಳ ಮನಗೆಲ್ಲಲು ಸಕಲ ಪ್ರಯತ್ನಗಳನ್ನೂ ಮಾಡುತ್ತಿದ್ದಾರೆ.

ಯುವ ರಾಜ್ಕುಮಾರ್ ಚೊಚ್ಚಲ ಸಿನಿಮಾ ಟೈಟಲ್ನಿಂದಲೇ ಗಮನ ಸೆಳೆಯುತ್ತಿದೆ. 'ಯುವ' ಟೈಟಲ್ ಮೂಲಕವೇ ಚಿತ್ರರಂಗಕ್ಕೆ ಗ್ರ್ಯಾಂಡ್ ಎಂಟ್ರಿ ಕೊಡುತ್ತಿರೋದು ಮತ್ತೊಂದು ವಿಶೇಷ. ಸದ್ಯ ಯುವ ರಾಜ್ಕುಮಾರ್ ಚೊಚ್ಚಲ ಸಿನಿಮಾದ ಶೂಟಿಂಗ್ ಶೀಘ್ರದಲ್ಲಿಯೇ ಆರಂಭ ಆಗುತ್ತಿದೆ ಅನ್ನೋ ಸುದ್ದಿ ಓಡಾಡುತ್ತಿದೆ. ಯಾವಾಗ? ಎಲ್ಲಿ? ಅನ್ನೋ ಡಿಟೈಲ್ಸ್ ಇಲ್ಲಿದೆ.
'ಯುವ' ಶೂಟಿಂಗ್ ಯಾವಾಗ ಶುರು?
ಜೂ.ಪವರ್ಸ್ಟಾರ್ ಅಖಾಡಕ್ಕೆ ಇಳಿಯೋದಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ನಿರ್ದೇಶಕ ಸಂತೋಷ್ ಆನಂದ್ರಾಮ್ ಚಿತ್ರೀಕರಣ ಮಾಡುವುದಕ್ಕೆ ಕೊನೆಯ ಹಂತದ ತಯಾರಿ ಮಾಡಿಕೊಂಡಿದ್ದಾರೆ. ಯುವ ರಾಜ್ಕುಮಾರ್ ಹಾಗೂ ಸಂತೋಷ್ ಆನಂದ್ರಾಮ್ ಕಾಂಬಿನೇಷನ್ನಲ್ಲಿ ಅದ್ಧೂರಿಯಾಗಿಯೇ ಸಿನಿಮಾ ಸೆಟ್ಟೇರುತ್ತಿದೆ.
ಇದೇ ಏಪ್ರಿಲ್ 9 ರಿಂದ ಯುವ ರಾಜ್ಕುಮಾರ್ ನಟನೆಯ ಚೊಚ್ಚಲ ಸಿನಿಮಾ 'ಯುವ' ಶೂಟಿಂಗ್ ಆರಂಭ ಆಗುತ್ತಿದೆ ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ. ಅದ್ಧೂರಿ ಆಕ್ಷನ್ ಸೀನ್ನಿಂದಲೇ ಶೂಟಿಂಗ್ ಆರಂಭ ಆಗುತ್ತಿದೆ ಎನ್ನಲಾಗಿದೆ. ಈ ಮೂಲಕ ಯುವರಾಜ್ಕುಮಾರ್ ಸ್ಯಾಂಡಲ್ವುಡ್ ಗ್ರ್ಯಾಂಡ್ ಎಂಟ್ರಿಗೆ ವೇದಿಕೆ ಸಜ್ಜಾಗುತ್ತಿದೆ.

ಹೆಚ್ಎಂಟಿ ಫ್ಯಾಕ್ಟರಿಯಲ್ಲಿ ಅದ್ಧೂರಿ ಸೆಟ್
ದೊಡ್ಮನೆಯ ಕುಡಿ ಚಿತ್ರರಂಗಕ್ಕೆ ಇಂಟ್ರುಡ್ಯೂಸ್ ಮಾಡುವುದಕ್ಕೆ ಸಕಲ ಸಿದ್ಧತೆಗಳು ನಡೆದಿವೆ. ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಬಳಿಕ ಯುವ ರಾಜ್ಕುಮಾರ್ ಎಂದು ಅಭಿಮಾನಿಗಳೇ ಒಪ್ಪಿಕೊಂಡಿರುವುದರಿಂದ ಚಿತ್ರರಂಗಕ್ಕೆ ಅದ್ಧೂರಿಯಾಗಿ ಪರಿಚಯ ಮಾಡಿಸುವ ಜವಾಬ್ದಾರಿ ಸಂತೋಶ್ ಆನಂದ್ರಾಮ್ ಮೇಲಿದೆ. ಹೀಗಾಗಿ ಹೆಚ್ಎಂಟಿ ಫ್ಯಾಕ್ಟರಿಯಲ್ಲಿ ಅದ್ಧೂರಿ ಸೆಟ್ಟು ಹಾಕಲಾಗಿದೆಯಂತೆ.
ಈ ಸೆಟ್ಟಿನಲ್ಲಿ ಯುವ ರಾಜ್ಕುಮಾರ್ ಆಕ್ಷನ್ ಸೀಕ್ವೆನ್ಸ್ ಅನ್ನು ಶೂಟ್ ಮಾಡಲಾಗುತ್ತೆ. ಸಾಹಸ ನಿರ್ದೇಶಕ ಅರ್ಜುನ್ ಯುವಗಾಗಿ ಆಕ್ಷನ್ ಸೀನ್ಗಳನ್ನು ಕಂಪೋಸ್ ಮಾಡುತ್ತಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಈ ಸಿನಿಮಾವನ್ನು ಅದ್ಧೂರಿ ವೆಚ್ಚದಲ್ಲಿ ನಿರ್ಮಾಣ ಮಾಡುತ್ತಿದೆ. ಏಪ್ರಿಲ್ 9 ರಿಂದ ನಿರಂತರವಾಗಿ ಶೂಟಿಂಗ್ ಆರಂಭ ಆಗುವ ಸಾಧ್ಯತೆಯಿದೆ.
ಯುವ ರಾಜ್ಕುಮಾರ್ಗೆ ಸಪ್ತಮಿಗೌಡ ಹೀರೊಯಿನ್
'ಕಾಂತಾರ' ಸಿನಿಮಾ ಮೂಲಕ ದೇಶಾದ್ಯಂತ ಮನೆ ಮಾತಾಗಿರೋ ಸಪ್ತಮಿ ಗೌಡ 'ಯುವ' ಸಿನಿಮಾಗೆ ಹೀರೊಯಿನ್. ಇವರಿಬ್ಬರ ಕಾಂಬಿನೇಷನ್ ತೆರೆಮೇಲೆ ಹೇಗೆ ವರ್ಕ್ಔಟ್ ಆಗುತ್ತೆ ಅನ್ನೋ ಕ್ಯೂರಿಯಾಸಿಟಿ ಎಲ್ಲರಲ್ಲೂ ಇದೆ. ಈ ಸಿನಿಮಾಗಾಗಿ ನಟಿ ಸಪ್ತಮಿಗೌಡ ಬರೋಬ್ಬರಿ 50 ಲಕ್ಷ ರೂ. ಸಂಭಾವನೆ ಪಡೆದಿದ್ದಾರೆ ಅಂತ ಈ ಹಿಂದೆ ವರದಿಯಾಗಿದೆ.
'ಕೆಜಿಎಫ್', 'ಕಾಂತಾರ'ದಂತಹ ಪ್ಯಾನ್ ಇಂಡಿಯಾ ಸಿನಿಮಾ ನಿರ್ಮಾಣ ಮಾಡಿರುವ ಹೊಂಬಾಳೆ ಫಿಲ್ಮ್ಸ್ 'ಯುವ'ಗೆ ಹಣ ಹೂಡುತ್ತಿದ್ದಾರೆ. ದೊಡ್ಮನೆ ಕುಡಿಯನ್ನು ಚಿತ್ರರಂಗಕ್ಕೆ ಪರಿಚಯಿಸುವುವ ಜವಾಬ್ದಾರಿಯನ್ನು ಹೊತ್ತುಕೊಂಡಿದೆ. ಅಜನೀಶ್ ಲೋಕನಾಥ್ ಟ್ಯೂನ್ ಹಾಕುತ್ತಿದ್ದಾರೆ. ಏನೇ ಇದ್ರೂ, ಸಿನಿಮಾ ಶೂಟಿಂಗ್ ಆರಂಭ ಆಗುತ್ತಿದೆ ಅನ್ನೋ ಸುದ್ದಿ ಮುಟ್ಟುತ್ತಿದ್ದಂತೆ ಅಪ್ಪು ಅಭಿಮಾನಿಗಳು ಕಾತುರ ಮತ್ತಷ್ಟು ಹೆಚ್ಚಾಗಿದೆ.


Click it and Unblock the Notifications











