ಪ್ಯಾಕಪ್ ಎಂದ ಆನಂದ್ರಾಮ್; 4 ಗ್ರ್ಯಾಂಡ್ ಈವೆಂಟ್, 'ಯುವ' ಫಸ್ಟ್ ಸಾಂಗ್ ಎಲ್ಲಿ, ಯಾವಾಗ ರಿಲೀಸ್?
ದೊಡ್ಮನೆ ಅಭಿಮಾನಿಗಳಿಗೆ ಸಿಹಿಸುದ್ದಿ ಸಿಕ್ಕಿದೆ. 'ಯುವ' ಚಿತ್ರಮಂದಿರಕ್ಕೆ ಬರುವ ಸಮಯ ಹತ್ತಿರವಾಗ್ತಿದೆ. ಸದ್ಯ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಇನ್ನು ಸಿನಿಮಾ ಪ್ರಚಾರಕ್ಕೆ ಅಧಿಕೃತವಾಗಿ ಚಾಲನೆ ಕೊಡಲಿದೆ ಚಿತ್ರತಂಡ. ಮಾರ್ಚ್ 28ಕ್ಕೆ ಸಿನಿಮಾ ಅದ್ಧೂರಿಯಾಗಿ ತೆರೆಗಪ್ಪಳಿಸಲಿದೆ.
97 ದಿನಗಳ ಚಿತ್ರೀಕರಣದ ಬಳಿಕ ಕುಂಬಳಕಾಯಿ ಒಡೆದಿದೆ ಚಿತ್ರತಂಡ. ಸೆಟ್ನಲ್ಲಿ ಇಡೀ ತಂಡ ಕೂತು ನಿರ್ದೇಶಕ ಆನಂದ್ ರಾಮ್ ಪ್ಯಾಕಪ್ ಎಂದು ಹೇಳಿರುವ ವಿಡಿಯೋ ವೈರಲ್ ಆಗುತ್ತಿದೆ. ಶೂಟಿಂಗ್ ಜೊತೆ ಜೊತೆಗೆ ಪ್ರೀ ಪ್ರೊಡಕ್ಷನ್ ವರ್ಕ್ ಮಾಡ್ತಾ ಬಂದಿದೆ ಚಿತ್ರತಂಡ. ಇನ್ನು ಪ್ರಮೋಷನ್ ಮಾತ್ರ ಶುರುವಾಗಬೇಕಿದೆ. ದೊಡ್ಡಮಟ್ಟದಲ್ಲೇ 'ಯುವ' ಚಿತ್ರವನ್ನು ಪ್ರೇಕ್ಷಕರಿಗೆ ತಲುಪಿಸುವ ಪ್ರಯತ್ನ ನಡೀತಿದೆ.

ಸಂತೋಷ್ ಆನಂದ್ ರಾಮ್ ಕಟ್ಟಿಕೊಟ್ಟಿರುವ ಪಕ್ಕಾ ಆಕ್ಷನ್ ಎಂಟರ್ಟೈನರ್ ಸಿನಿಮಾ 'ಯುವ'. ಹೊಂಬಾಳೆ ಸಂಸ್ಥೆ ಚಿತ್ರವನ್ನು ನಿರ್ಮಾಣ ಮಾಡಿದೆ. ಈ ಸಿನಿಮಾ ಮೂಲಕ ಅಣ್ಣಾವ್ರ ಮತ್ತೊಬ್ಬ ಮೊಮ್ಮಗ ಯುವ ರಾಜ್ಕುಮಾರ್ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಚಿತ್ರದಲ್ಲಿ ಸಪ್ತಮಿ ಗೌಡ ನಾಯಕಿಯಾಗಿ ಮಿಂಚಿದ್ದಾರೆ.
ನಗರದ ಹೆಚ್ಎಂಟಿ ಫ್ಯಾಕ್ಟರಿಯಲ್ಲಿ 'ಯುವ' ಚಿತ್ರದ ಬಹುತೇಕ ಚಿತ್ರೀಕರಣ ನಡೆದಿದೆ. ಅಜನೀಶ್ ಲೋಕನಾಥ್ ಸಂಗೀತ, ಶ್ರೀಶ ಕುದುವಳ್ಳಿ ಛಾಯಾಗ್ರಹಣ ಚಿತ್ರಕ್ಕಿದೆ. ಪುನೀತ್ ರಾಜ್ಕುಮಾರ್ ಅಗಲಿಕೆ ಬಳಿಕ ಸಾಕಷ್ಟು ಜನ ಅಭಿಮಾನಿಗಳು ಯುವ ರಾಜ್ಕುಮಾರ್ ನಮ್ಮ ಭರವಸೆ ಎಂದು ಹೇಳುತ್ತಾ ಬರುತ್ತಿದ್ದಾರೆ. ಹಾಗಾಗಿ 'ಯುವ' ಸಿನಿಮಾ ಮೇಲೆ ನಿರೀಕ್ಷೆ ಬೆಟ್ಟದಷ್ಟಿದೆ. ಇಡೀ ಚಿತ್ರತಂಡದ ಮೇಲೆ ಆ ಒತ್ತಡ ಇರುವುದು ಸುಳ್ಳಲ್ಲ.
ಅನೌನ್ಸ್ಮೆಂಟ್ ಟೀಸರ್ನಲ್ಲೇ 'ಯುವ' ಸೆನ್ಸೇಷನ್ ಕ್ರಿಯೇಟ್ ಮಾಡಿದ್ದ. ಬರೀ ಡೈಲಾಗ್ಗಳಿಂದಲೇ ಟೀಸರ್ ಗಮನ ಸೆಳೆದಿತ್ತು. ಇದೀಗ ಕಂಪ್ಲೀಟ್ ಸಿನಿಮಾ ನೋಡುವ ಸಮಯ ಹತ್ತಿರ ಬರ್ತಿದೆ. ಕಥೆಯ ಬಗ್ಗೆ ಸುಳಿವು ಬಿಟ್ಟುಕೊಡದೇ ಸಿನಿಮಾ ಶೂಟ್ ಮಾಡಿ ಮುಗಿಸಲಾಗಿದೆ. ಮಾರ್ಚ್ 28ಕ್ಕೆ ತೆರೆಮೇಲೆ 'ಯುವ' ಆರ್ಭಟ ಶುರುವಾಗಲಿದೆ.
ಇನ್ನು ಅಭಿಮಾನಿಗಳು 'ಯುವ' ಅಪ್ಡೇಟ್ ಕೇಳುತ್ತಾ ಬರ್ತಿದ್ದಾರೆ. ಇತ್ತೀಚೆಗೆ ಯುವ ರಾಜ್ಕುಮಾರ್ ಮಾತನಾಡಿ ಇನ್ನೆರಡು ದಿನಗಳಲ್ಲಿ ಚಿತ್ರೀಕರಣ ಮುಗಿಯುತ್ತೆ, ಆಮೇಲೆ ಅಪ್ಡೇಟ್ ಸಿಗುತ್ತೆ ಎಂದಿದ್ದರು. ಸಿನಿಮಾ ಬಿಡುಗಡೆಗೆ 42 ದಿನಗಳು ಬಾಕಿಯಿದೆ. ನಿಧಾನವಾಗಿ ಒಂದೊಂದೇ ಅಪ್ಡೇಟ್ ಜೊತೆಗೆ ಟೀಸರ್, ಟ್ರೈಲರ್, ಸಾಂಗ್ಸ್ ಅಂತ ಭರ್ಜರಿ ಮನರಂಜನೆ ಅಭಿಮಾನಿಗಳಿಗೆ ಸಿದ್ಧವಾಗ್ತಿದೆ.
ಅಧಿಕೃತವಾಗಿ 'ಯುವ' ಪ್ರಚಾರದ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಒಂದಷ್ಟು ಚರ್ಚೆ ನಡೀತಿದೆ. ರಾಜ್ಯದ 4 ಬೇರೆ ಬೇರೆ ಜಿಲ್ಲೆಗಳಲ್ಲಿ 4 ಅದ್ಧೂರಿ ಕಾರ್ಯಕ್ರಮ ನಡೆಸಿ ಸಿನಿಮಾ ಪ್ರಚಾರಕ್ಕೆ ಚಿತ್ರತಂಡ ಮುಂದಾಗಿದೆ ಎನ್ನುವ ಮಾತುಗಳು ಕೇಳಿಬರ್ತಿದೆ. ಮಾರ್ಚ್ 2ರಂದು ಚಾಮರಾಜ ನಗರದಲ್ಲಿ 'ಯುವ' ಟೈಟಲ್ ಸಾಂಗ್ ಬಿಡುಗಡೆ ಆಗುತ್ತದೆ ಎನ್ನಲಾಗ್ತಿದೆ. ಚಾಮರಾಜನಗರದ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಅದಕ್ಕಾಗಿ ವೇದಿಕೆ ಸಿದ್ಧವಾಗುತ್ತೆ ಎನ್ನುವ ಸುದ್ದಿ ಕುತೂಹಲ ಮೂಡಿಸಿದೆ.
ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬದ ಸಂಭ್ರಮದಲ್ಲೇ 'ಯುವ' ಪ್ರೀ ರಿಲೀಸ್ ಈವೆಂಟ್ ನಡೆಯುತ್ತದೆ ಎನ್ನಲಾಗ್ತಿದೆ. ಆದರೆ ಈ ಬಗ್ಗೆ ಖಚಿತ ಮಾಹಿತಿ ಇನ್ನು ಸಿಕ್ಕಿಲ್ಲ. ಒಟ್ನಲ್ಲಿ ದೊಡ್ಡಮಟ್ಟದಲ್ಲೇ 'ಯುವ' ಪ್ರಮೋಷನಲ್ ಪ್ಲ್ಯಾನ್ ನಡೀತಿದೆ. ಕನ್ನಡದಲ್ಲಿ ಮಾತ್ರ ಸಿನಿಮಾ ಬಿಡುಗಡೆ ಆಗಲಿದೆ.

ಪುನೀತ್ ರಾಜ್ಕುಮಾರ್ ಹಾಗೂ ಸಂತೋಷ್ ಆನಂದ್ರಾಮ್ ಕಾಂಬಿನೇಷನ್ನಲ್ಲಿ 'ರಾಜಕುಮಾರ' ಹಾಗೂ 'ಯುವರತ್ನ' ಸಿನಿಮಾಗಳು ಬಂದಿತ್ತು. 3ನೇ ಸಿನಿಮಾ ಮಾಡಲು ಎಲ್ಲಾ ಸಿದ್ಧತೆ ನಡೆದಿತ್ತು. ಆ ಬಳಿಕ 'ಯುವ' ಲಾಂಚಿಂಗ್ ಸಿನಿಮಾ ಜವಾಬ್ದಾರಿಯನ್ನು ಸಂತೋಷ್ ವಹಿಸಿಕೊಂಡಿದ್ದರು.


Click it and Unblock the Notifications











