ರಾಜ್ಯೋತ್ಸವದ ಕೊಡುಗೆಯಾಗಿ ಬಂದನಾ ‘ಯುವರಾಜ’
ನಿರ್ಮಾಪಕ ಶ್ರೀನಿವಾಸ್ ಎರಡೂವರೆ ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಿಸಿರುವ 'ಯುವರಾಜ" ರಾಜ್ಯೋತ್ಸವದ ಕೊಡುಗೆಯಾಗಿ ರಜತಪರದೆಯನ್ನಲಂಕರಿಸಿದ್ದಾನೆ. ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಅಭಿನಯದ ಈ ಚಿತ್ರ ನ.2ರ ಶುಕ್ರವಾರ ರಾಜ್ಯಾದ್ಯಂತ ಬಿಡುಗಡೆ ಆಗಿದೆ.
ಆರ್.ಎಸ್. ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಈ ಚಿತ್ರ ಸಂಪೂರ್ಣ ಮನರಂಜನಾತ್ಮಕ ಹಾಗೂ ಸಾಂಸಾರಿಕ ಚಿತ್ರವಂತೆ. ನಿರ್ಮಾಪಕ ಆರ್. ಶ್ರೀನಿವಾಸ್ ಅವರಂತೂ ಚಿತ್ರದ ಮೇಲೆ ಭಾರಿ ವಿಶ್ವಾಸ ಇಟ್ಟುಕೊಂಡಿದ್ದಾರೆ. ನಾಯಕಿ ಲೀಸಾರೇ ಹಾಗೂ ಶಿವರಾಜ್ಕುಮಾರ್ ನಾ ಹೆಚ್ಚು, ತಾ ಹೆಚ್ಚು ಎನ್ನುವಂತೆ ಅದ್ಭುತ ಅಭಿನಯ ನೀಡಿದ್ದಾರೆ, ಲಂಡನ್ನಲ್ಲಿ ಗೀತೆಗಳಿಗೆ ಚಿತ್ರೀಕರಣ ನಡೆದಿದ್ದು, ಒಂದಕ್ಕಿಂತ ಒಂದು ಸೂಪರ್ ಆಗಿದೆ ಅಂತಾರೆ.
ಪ್ರತೀಕಾರಕ್ಕಾಗಿ ಅಲ್ಪಕಾಲಾವಧಿಯಲ್ಲಿ ತನಗೆ ಪರಿಚಯವೇ ಇಲ್ಲದ ಬಾಕ್ಸಿಂಗ್ ಕಲಿತು, ಎದುರಾಳಿಯನ್ನು ಹಣ್ಣುಗಾಯಿ ನೀರುಗಾಯಿ ಮಾಡುವ ನಾಯಕನ ಪಾತ್ರದಲ್ಲಿ ಶಿವರಾಜ್ಕುಮಾರ್, 'ತಾಯಿಗೆತಕ್ಕ ಮಗ" ಚಿತ್ರದ ರಾಜ್ಕುಮಾರ್ರಂತೆಯೇ ಅಭಿನಯಿಸಿದ್ದಾರೆ ಎಂಬುದು ನಿರ್ಮಾಪಕರ ಹೆಮ್ಮೆಯ ನುಡಿ.
ಅಂದಹಾಗೆ ಪುರಿ ಜಗನ್ನಾಥ್ ನಿರ್ದೇಶಿಸಿರುವ ಈ ಚಿತ್ರದ ತಾರಾಬಳಗದಲ್ಲಿ ಶಿವರಾಜ್ ಕುಮಾರ್, ಲೀಸಾ ರೇ, ಶ್ರೀನಾಥ್, ಕುಮಾರ್ ಗೋವಿಂದು, ಕಾಶಿ, ಪ್ರೀತಿ, ಅವಿನಾಶ್, ರಮೇಶ್ ಭಟ್, ಮನ್ದೀಪ್ ರೈ, ಬುಲೆಟ್ ಪ್ರಕಾಶ್ ಮೊದಲಾದವರಿದ್ದಾರೆ.
ಪ್ರದರ್ಶನ: ಬೆಂಗಳೂರು - ಸಂತೋಷ್, ಪ್ರಮೋದ್, ನವರಂಗ್, ನಂದಾ, ನಳಂದಾ, ಗೋವರ್ಧನ್, ಮೋಹನ್, ಬಾಲಾಜಿ, ವೆಂಕಟೇಶ್ವರ, ಸಿದ್ದೇಶ್ವರ. ಮೈಸೂರು - ಸಂಗಂ, ಸರಸ್ವತಿ, ಮಂಗಳೂರು - ಸುಚಿತ್ರ, ಹುಬ್ಬಳ್ಳಿ - ಸಂಜೋತ, ಬೆಳಗಾವಿ - ನಿರ್ಮಲ, ಧಾರವಾಡ - ವಿಜಯ್, ಶಿವಮೊಗ್ಗ- ಮಾಡರ್ನ್, ಭದ್ರಾವತಿ - ವೆಂಕಟೇಶ್ವರ, ಮಂಡ್ಯ - ಗುರುಶ್ರೀ, ಹಾಸನ- ಸಹ್ಯಾದ್ರಿ.
ವಾರ್ತಾ ಸಂಚಯ


Click it and Unblock the Notifications