"ಬಿಇ ಅಂತ ಸುಳ್ಳು ಹೇಳ್ದ.. ಅವ್ನು ಓದಿರೋದು ಎಸ್ಎಸ್ಎಲ್ಸಿ, ಆದ್ರು ಮಗಳನ್ನು ಕೊಟ್ಟೆ": ಶ್ರೀದೇವಿ ತಂದೆ ಮಾತು
ನಟ ಯುವ ರಾಜ್ಕುಮಾರ್ ಪತ್ನಿ ಶ್ರೀದೇವಿಯಿಂದ ವಿಚ್ಛೇದನ ಕೋರಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಬಗ್ಗೆ ಕಳೆದೆರಡು ದಿನಗಳಿಂದ ಭಾರೀ ಚರ್ಚೆ ನಡೆಯುತ್ತಿದೆ. ಬಹಳ ಹಿಂದೆಯೇ ಯುವ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು ಈಗಾಗಲೇ ಈ ಸಂಬಂಧ ಶ್ರೀದೇವಿ ಅವರಿಗೆ ನೋಟಿಸ್ ನೀಡಲಾಗಿದೆ.
ತಮಗೆ ಸಿಕ್ಕಿರುವ ನೋಟಿಸ್ ಸಂಬಂಧ ವಕೀಲರು ಮೂಲಕ ಶ್ರೀದೇವಿ ಸಹ ಪ್ರತಿಕ್ರಿಯಿಸಿದ್ದಾರೆ. ಸದ್ಯ ಉನ್ನತ ವ್ಯಾಸಂಗಕ್ಕಾಗಿ ಶ್ರೀದೇವಿ ಅಮೆರಿಕಾಗೆ ತೆರಳಿದ್ದಾರೆ. ಇಂತಹ ಸಮಯದಲ್ಲೇ ಡಿವೋರ್ಸ್ ವಿಚಾರ ಶುರುವಾಗಿದೆ. ಇನ್ನು ಈ ವಿಚಾರದ ಬಗ್ಗೆ ಶ್ರೀದೇವಿ ತಂದೆ ಭೈರಪ್ಪ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. ಅಳಿಯ ಯುವ ಹಾಗೂ ಆತನ ಪೋಷಕರಾದ ರಾಘವೇಂದ್ರ ರಾಜ್ಕುಮಾರ್ ಹಾಗೂ ಮಂಗಳಾ ವಿರುದ್ಧ ಆರೋಪ ಮಾಡಿದ್ದಾರೆ.

ಯುವ-ಶ್ರೀದೇವಿ ದಾಂಪತ್ಯ ಕಲಹ ವಿಚಾರದಲ್ಲಿ ಅಳಿಯನದ್ದು ಯಾವುದೇ ತಪ್ಪಿಲ್ಲ. ಎಲ್ಲಾ ಆತನ ಪೋಷಕರದ್ದೇ ತಪ್ಪು ಎಂದು ಬೈರಪ್ಪ ಹೇಳಿದ್ದಾರೆ. ಪಬ್ಲಿಕ್ ಟಿವಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ವಿವರವಾಗಿ ಮಾತನಾಡಿದ್ದಾರೆ. "ಎಲ್ಲವೂ ಚೆನ್ನಾಗಿಯೇ ಇತ್ತು. ನಮ್ಮ ಮನೆಗೆ ಪೋಷಕರು ಸಮೇತ ಆಗಾಗ್ಗೆ ಬರುತ್ತಿದ್ದರು. ಈ ರೀತಿ ಮನೆಯಲ್ಲಿನ ಕಲಹದ ಬಗ್ಗೆ ನನ್ನ ಮಗಳು ಯಾವತ್ತು ಹೇಳಿಲ್ಲ" ಎಂದಿದ್ದಾರೆ.
"ಮದುವೆಯಾಗಿ 5 ವರ್ಷ ಆಯಿತು. ಇಬ್ಬರ ನಡುವೆ ಹೊಂದಾಣಿಕೆ ಇತ್ತು. ಆದರೆ ಮನೆಯವರಿಂದ ಇದ್ದ ಕಿರುಕುಳದ ಬಗ್ಗೆ ಯಾವತ್ತೂ ಮಗಳು ಹೇಳಿರಲಿಲ್ಲ. ನನ್ನ ಮಗಳು ಯೂಸ್ನಲ್ಲಿ ಇದ್ದಾಳೆ. ಅಲ್ಲಿಗೆ ಹೋಗಿ ಒಂದು ವರ್ಷ ಆಯಿತು. ವಿದ್ಯಾಭ್ಯಾಸ ಮುಗಿಯುತ್ತಾ ಬಂತು. ಇನ್ನೇನು ಬರಬಹುದು. ನವೆಂಬರ್ನಲ್ಲಿ ಮಗಳು ಬಂದಿದ್ದಳು. ಆಗ ಅವರ ಮನೆಯಲ್ಲಿ ಗಲಾಟೆ ನಡೆದಿತ್ತು. ಬಳಿಕ ಅಳಿ ಬಂದ, ಏನು ಮಾತನಾಡಲಿಲ್ಲ"
"ನನ್ನ ಮಗಳಿಗೆ ಬಹಳ ಕಿರುಕುಳ ಕೊಟ್ಟಿದ್ದಾರೆ. ಅವಳ ಬಗ್ಗೆ ಸಿಲ್ಲಿ ಸಿಲ್ಲಿಯಾಗಿ ಮಾತನಾಡುವುದು. ಬೇಡದ ಮಾತುಗಳನ್ನಾಡುವುದು ಮಾಡುತ್ತಿದ್ದರು. ಇತ್ತೀಚೆಗೆ ನನ್ನ ಮಗಳು ಅಳುತ್ತಾ ಫೋನ್ ಮಾಡಿದ್ದ ವೇಳೆ ಹೇಳಿದ್ದಳು. ಗಂಡ, ಅತ್ತೆ, ಮಾವ ಎಲ್ಲರಿಂದಲೂ ಸಮಸ್ಯೆ ಇತ್ತು. ರಾಘವೇಂದ್ರ ರಾಜ್ಕುಮಾರ್, ಯುವ ಬಲವಂತ ಮಾಡಿ ಓದಲು ಮಗಳನ್ನು ವಿದೇಶಕ್ಕೆ ಕಳುಹಿಸಿದರು. ಬಳಿಕ ಈ ವಿಚ್ಛೇದನ ವಿಚಾರ ಶುರುವಾಗಿದೆ" ಎಂದಿದ್ದಾರೆ.

"ವಿಚ್ಛೇದನ ಅರ್ಜಿ ಬಗ್ಗೆ ನನ್ನ ಮಗಳು ಪ್ರತಿಕ್ರಿಯಿಸಿ ಅರ್ಜಿ ಹಾಕಲಿ, ನಾವು ಕಾನೂನಾತ್ಮಕವಾಗಿ ಹೋರಾಡೋಣ ಎಂದರು. ನನ್ನ ಮಗಳು ಈಗ ಕೂಡ ಒಟ್ಟಿಗೆ ಬದುಕಲು ಮನಸ್ಸು ಮಾಡಿದ್ದಾರೆ. ನಮಗೂ ಆಸೆಯಿದೆ. ಆದರೆ ಮಗಳಿಗೆ ಕಿರುಕುಳ ಕೊಡುವುದು ಸರಿಯಲ್ಲ. ಮದುವೆಯಾದ ಮರುದಿನದಿಂದಲೇ ಕಿರಿಕುಳ ಆರಂಭವಾಯಿತು ಎಂದು ಹೇಳಿದ್ದಳು. ಇಬ್ಬರೂ ಪ್ರೀತಿಸಿ ಮದುವೆ ಆಗಿದ್ದರು"
"ರಾಘಣ್ಣ ಕುಟುಂಬದವರೇ ಬಂದು ಬಲವಂತ ಮಾಡಿ ಮದುವೆ ಮಾಡಿಸಿದರು. ನಿಶ್ಚಿತಾರ್ಥದ ಬಳಿಕವೂ ನಾನು ಒಂದು ವರ್ಷ ಮದುವೆ ಮುಂದೂಡಿದೆ. ನನಗೆ ಇಷ್ಟ ಇಲ್ಲ ನೋಡು ಎಂದಿದ್ದೆ. ಅವರು ಯಾವ ದೊಡ್ಡ ಮನೆ. ಅವರು ಲೆಕ್ಕಕ್ಕಿಲ್ಲದವರು. ನವೆಂಬರ್ನಲ್ಲಿ ಮಗಳ ಬಂದಾಗ ಒಂದು ತಿಂಗಳು ಅವರ ಮನೆಯಲ್ಲೇ ಇದ್ದಳು. ಮಧ್ಯದಲ್ಲಿ ಅತ್ತೆ, ಮಾವನ ಕಿತಾಪತಿ. ಶ್ರೀಮಂತಿಕೆ ವಿಚಾರದಲ್ಲಿ ನಾವು ಅವರಿಗಿಂತ ಚೆನ್ನಾಗಿದ್ದೀವಿ. ಅವರತ್ರ ಏನಿದೆ? ಈ ಮಾತನ್ನು ಅವರಿಗೂ ಹೇಳಿದ್ದೇನೆ" ಎಂದು ಬೈರಪ್ಪ ಹೇಳಿದ್ದಾರೆ.
"ಯುವ ರಾಜ್ಕುಮಾರ್ಗೆ ಸಿನಿಮಾ ಅವಕಾಶಗಳು ಸಿಗಲು ನನ್ನ ಮಗಳೇ ಕಾರಣ. ಆತನನ್ನು ಬಾಂಬೆಯಲ್ಲಿ ಇರಿಸಿಕೊಂಡು ಟ್ರೈನಿಂಗ್ ಕೊಡಿಸಿ ಎಲ್ಲಾ ಮಾಡಿದ್ದು ನನ್ನ ಮಗಳು. ನನ್ನ ಬಳಿ ಅವನು ಬಿಇ ಓದಿರುವುದಾಗಿ ಹೇಳಿಕೊಂಡಿದ್ದ. ಅವನು ಓದಿರೋದು ಎಸ್ಎಸ್ಎಲ್ಸಿ. ಆದರೂ ನಾವು ಮದುವೆ ಮಾಡಿಸಿದೆವು. ಯುವ ನನ್ನೊಟ್ಟಿಗೆ ಚೆನ್ನಾಗಿದ್ದರು. ಗೌರವ ಕೊಡುತ್ತಿದ್ದರು. ಅವರ ಪೋಷಕರದ್ದು ಎಲ್ಲವೂ ನಾಟಕ. ನಮ್ಮ ಮನೆಗೂ ಬಂದು ಹೋಗುತ್ತಿದ್ದರು. ಸಂಬಂಧದ ವಿಚಾರದಲ್ಲಿ ಎಲ್ಲಾ ನಾಟಕ" ಎಂದಿದ್ದಾರೆ.
"ಶಿವಣ್ಣ ಅವರಿಗೂ ಇತ್ತೀಚೆಗೆ ಗೊತ್ತಾಗಿದೆ. ನಾನು ಅವರೊಟ್ಟಿಗೆ ಮಾತನಾಡಲು ಯತ್ನಿಸಿದೆ. ಪುನೀತ್ ಅವ್ರು ಇದ್ದಿದ್ದರೆ ಹೀಗೆಲ್ಲಾ ಆಗುತ್ತಿರಲಿಲ್ಲ. ಬಹಳ ಹಿಂದೆಯೇ ಸಮಸ್ಯೆ ಎದುರಾಗಿತ್ತು. ಪುನೀತ್ ಅವ್ರು ಎಲ್ಲಾ ಸರಿ ಮಾಡಿದ್ದರು. ಅಶ್ವಿನಿ ಕೂಡ ನಮಗೂ ಹೆಣ್ಣು ಮಕ್ಕಳು ಇದ್ದಾರೆ. ಹೀಗೆಲ್ಲಾ ಮಾಡಬೇಡಿ ಎಂದು ಹೇಳಿದ್ದರು. ಅಕಾಡೆಮಿ ಮಾಡಿ ಅವರ ಮನೆಯ ಖರ್ಚು ವೆಚ್ಚ ಎಲ್ಲಾ ನನ್ನ ಮಗಳೇ ನೋಡುತ್ತಿದ್ದಳು." ಎಂದು ವಿವರಿಸಿದ್ದಾರೆ.
"ನಮ್ಮ ಮಗಳ ಮೇಲೆ ಯುವ ಮಾಡಿರುವ ಆರೋಪಗಳು ಸುಳ್ಳು. ನಮ್ಮ ಮಕ್ಕಳನ್ನು ಆ ರೀತಿ ನಾವು ಬೆಳೆಸಿಲ್ಲ. ಎಲ್ಲರಿಗೂ ನಮ್ಮ ಮಕ್ಕಳು ಗೌರವ ಕೊಡುತ್ತಾರೆ. ನನ್ನ ಮಕ್ಕಳಿಗೆ ಬಡ ಕುಟುಂಬದಲ್ಲೇ ಸಂಬಂಧ ಹುಡುಕುತ್ತಿದ್ದೆವು. ನಮ್ಮ ಮಗಳು ಸ್ವಂತವಾಗಿ ದುಡಿದು ಬದುಕುತ್ತಾಳೆ. ಸಮಸ್ಯೆ ಬಗೆಹರಿದರೆ ನಮಗೂ ಸಂತೋಷ" ಎಂದಿದ್ದಾರೆ.


Click it and Unblock the Notifications











