ಮತ್ತೆ ಬಂದ ಬನಾರಸ್ ಹುಡುಗ ಝೈದ್ ಖಾನ್ ; ಜಮೀರ್ ಪುತ್ರನ ಹೊಸ ಚಿತ್ರಕ್ಕೆ ಇವರೇ ಸಾರಥಿ..!
ತಂದೆ ಜಮೀರ್ ಅಹ್ಮದ್ ಪ್ರಭಾವಳಿಯನ್ನು ಬಳಸಿಕೊಳ್ಳದೆ, ಚಿತ್ರರಂಗದಲ್ಲಿ ದಾರಿಯನ್ನು ಹುಡುಕಿಕೊಂಡು ಹೊರಟವರು ಝೈದ್ ಖಾನ್. ಬನಾರಸ್ ಚಿತ್ರದ ಮೂಲಕ ಭರವಸೆಯ ಬೆಳಕಿನಂತೆ ಕಂಡ ಝೈದ್ ಖಾನ್ ಅವರ ಮುಂದಿನ ಹೆಜ್ಜೆ ಮೇಲೆ ಎಲ್ಲರ ಕಣ್ಣಿತ್ತು. ಈ ಬಾರಿ ಯಾವ ಕಥೆಯನ್ನ ಆಯ್ಕೆ ಮಾಡಿಕೊಳ್ತಾರೆ ಎಂಬ ಕುತೂಹಲ ಇತ್ತು. ಅದಕ್ಕೀಗ ಮೊದಲ ಹಂತದ ಉತ್ತರ ಸಿಕ್ಕಿದೆ. ಝೈದ್ ಖಾನ್ ಅವರ ಹೊಸ ಸಿನಿಮಾ ಘೋಷಣೆಯಾಗಿದೆ. ಅದು ಅನಿಲ್ ಕುಮಾರ್ ಅವರ ಜೊತೆ ಅನ್ನುವುದು ಈ ಕ್ಷಣದ ವಿಶೇಷ.
ಹೌದು, ಈ ಹಿಂದೆ ದಿಲ್ ವಾಲಾ, ಮಾಲಾಶ್ರೀಯವರ ಶಕ್ತಿ, ರ್ಯಾಂಬೋ-02, ಕಾಣೆಯಾದವರ ಬಗ್ಗೆ ಪ್ರಕಟಣೆ, ಶಿವ 143 ಸಿನಿಮಾಗಳನ್ನು ನಿರ್ದೇಶನ ಮಾಡಿದ್ದ, ಅದಕ್ಕೂ ಮುಂಚೆ ಡೈಲಾಗ್ ರೈಟರ್ ಆಗಿ ಅಬ್ಬರಿಸಿದ್ದ ಅನಿಲ್ ಕುಮಾರ್ ಈ ವರ್ಷದ ಮೊದಲ ಬ್ಲಾಕ್ ಬಸ್ಟರ್ ಹಿಟ್ ಚಿತ್ರ "ಉಪಾಧ್ಯಕ್ಷ''ದ ಸಾರಥಿಯೂ ಹೌದು. ''ಉಪಾಧ್ಯಕ್ಷ'' ಚಿತ್ರದ ಮೂಲಕ ಚಿಕ್ಕಣ್ಣ ಅವರಿಗೆ ನಾಯಕ ನಟನನ್ನಾಗಿ ನಿಲ್ಲಿಸಿದ ಅನಿಲ್ ಕುಮಾರ್ ಈಗ ಝೈದ್ ಖಾನ್ ಜೊತೆ ಕೈ ಜೋಡಿಸಿದ್ದಾರೆ.

ಇನ್ನೂ ಬನಾರಸ್ ಸಿನಿಮಾವನ್ನ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮಾಡಿದ್ದವರು ಝೈದ್ ಖಾನ್. ಈ ಕಾರಣಕ್ಕೆ ಬೇರೆ ಬೇರೆ ಭಾಷೆಯಲ್ಲಿ, ಭಾರತದೆಲ್ಲೆಡೆ ಈ ಸಿನಿಮಾವನ್ನೂ ಬಿಡುಗಡೆ ಮಾಡುವ ಸಾಹಸಕ್ಕೆ ಮುಂದಾಗ್ತಾರಾ ಎಂಬ ಪ್ರಶ್ನೆ ಮೂಡುವುದು ಸಹಜ. ಆದರೆ ಇದಕ್ಕೆ ಸದ್ಯಕ್ಕೆ ಇನ್ನೂ ಉತ್ತರ ಇಲ್ಲ. ಹೆಸರಾಂತ ನಿರ್ಮಾಣ ಸಂಸ್ಥೆಯೊಂದು ಈ ಚಿತ್ರವನ್ನ ನಿರ್ಮಾಣ ಮಾಡಲಿದೆ ಎಂಬ ಗುಟ್ಟನ್ನಷ್ಟೇ ಅನಿಲ್ ಕುಮಾರ್ ಹಾಗೂ ಝೈದ್ ಜೋಡಿ ಬಿಟ್ಟು ಕೊಟ್ಟಿದೆ.
ಉಳಿದಂತೆ ಚಿತ್ರದ ತಂತ್ರಜ್ಞರು ಯಾರು, ಯಾರೆಲ್ಲ ಕಲಾವಿದರು ಚಿತ್ರದಲ್ಲಿ ಇರಲಿದ್ದಾರೆ ಎಂಬ ಹತ್ತು ಹಲವು ಪ್ರಶ್ನೆಗಳಿಗೆ ಅನಿಲ್ ಕುಮಾರ್ ಸದ್ಯದಲ್ಲಿ ಉತ್ತರ ಕೊಡುವ ನಿರೀಕ್ಷೆ ಇದೆ. ಚಿತ್ರದ ಮುಹೂರ್ತ ಕೂಡ ಸದ್ಯದಲ್ಲಿಯೇ ನೆರವೇರುವ ಸಾಧ್ಯತೆ ಇದೆ.

ಪುನೀತ್ ರುದ್ರನಾಗ್ ಜೊತೆ ಮತ್ತೊಂದು ಸಿನಿಮಾ
ಅನಿಲ್ ಕುಮಾರ್ ಅವರ ಜೊತೆ ಸಿನಿಮಾ ಮಾಡಲು ಮುಂದಾಗಿರುವ ಝೈದ್ ಖಾನ್, ವರ್ಷದ ಹಿಂದೆ ಪುನೀತ್ ರುದ್ರನಾಗ್ ಅವರ ಜೊತೆ ಸಿನಿಮಾವನ್ನ ಅನೌನ್ಸ್ ಮಾಡಿದ್ದರು. ಈ ಪುನೀತ್ ರುದ್ರನಾಗ್ ಬೇರೆ ಯಾರು ಅಲ್ಲ ಬದಲಿಗೆ ಯುವರಾಜ್ ಕುಮಾರ್ ಅವರ 'ಯುವ ರಣಧೀರ ಕಂಠೀರವ' ಚಿತ್ರವನ್ನ ನಿರ್ದೇಶಿಸಬೇಕಿದ್ದ ನಿರ್ದೇಶಕರು ಇವರು. ಆದರೆ ಕಾರಣಾಂತರಗಳಿಂದ ಆ ಪ್ರಾಜೆಕ್ಟ್ ಟೇಕ್ಆಫ್ ಆಗಲಿಲ್ಲ. ಇನ್ನೂ ಝೈದ್ ಖಾನ್ ಅವರ ಜೊತೆಗಿನ ಸಿನಿಮಾ ಎಲ್ಲಿಗೆ ಬಂದಿದೆ ಅನ್ನುವುದಕ್ಕೂ ಸದ್ಯಕ್ಕೆ ಉತ್ತರ ಇಲ್ಲ
ಒಟ್ಟಿನಲ್ಲಿ ''ಬನಾರಸ್" ಚಿತ್ರದ ನಂತರ ಸಾಕಷ್ಟು ಕಥೆ ಕೇಳಿರುವ ಝೈದ್ ಖಾನ್ ಅಳೆದು ತೂಗಿ ಅನಿಲ್ ಕುಮಾರ್ ಹೆಣೆದ ಕಥೆಯನ್ನು ಮೆಚ್ಚಿಕೊಂಡಿದ್ದಾರೆ. ಒಪ್ಪಿಕೊಂಡಿದ್ದಾರೆ.


Click it and Unblock the Notifications











