ಬೆನ್ನು ನೋವಿನಿಂದ ಬಳಲುತ್ತಿದ್ದರೂ ದರ್ಶನ್ ಸರ್ಜರಿ ಬೇಡ ಎನ್ನುತ್ತಿರುವುದು ಯಾಕೆ ?
ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಮತ್ತೆ ಜೈಲು ಸೇರುವಂತಾಗಿದೆ. ಬೆನ್ನು ನೋವಿನ ಸಮಸ್ಯೆಗೆ ಸರ್ಜರಿ ನೆಪವೊಡ್ಡಿ ಕಳೆದ ವರ್ಷ ದರ್ಶನ್ ಮಧ್ಯಂತರ ಜಾಮೀನು ಪಡೆದಿದ್ದರು. ಬಳಿಕ ಪ್ರಕರಣದ ಎಲ್ಲಾ ಆರೋಪಿಗಳಿಗೆ ರೆಗ್ಯುಲರ್ ಜಾಮೀನು ಸಿಕ್ಕಿತ್ತು. ಆದರೆ ಜೈಲಿನಿಂದ ಹೊರಬಂದ ಬಳಿಕ ದರ್ಶನ್ ಸರ್ಜರಿ ಮಾಡಿಸಿಕೊಳ್ಳಲಿಲ್ಲ.
ಕಳೆದ ವರ್ಷ ಅಕ್ಟೋಬರ್ 30ರಂದು ಜೈಲಿನಿಂದ ಬಿಡುಗಡೆಯಾಗಿದ್ದ ದರ್ಶನ್ ಕೆಲ ದಿನ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಕೊಂಚ ಕಾಲ ವಿಶ್ರಾಂತಿ ಪಡೆದರು. ಬಳಿಕ 'ಡೆವಿಲ್' ಸಿನಿಮಾ ಚಿತ್ರೀಕರಣದಲ್ಲಿ ಭಾಗಿ ಆಗಿದ್ದರು. ಸಹಜ ಜೀವನಕ್ಕೆ ಮರಳಿದ್ದರು. ಬೆನ್ನು ನೋವಿನಿಂದ ಓಡಾಡಲು ಕೆಲವೊಮ್ಮೆ ಕಷ್ಟಪಟ್ಟಿದ್ದು ಇದೆ. ಮೈಸೂರಿನ ಆಸ್ಪತ್ರೆಯಲ್ಲಿ ಬೆನ್ನು ನೋವಿನ ಸಮಸ್ಯೆ ಚಿಕಿತ್ಸೆ ಪಡೆದಿದ್ದು ಇದೆ. ಆದರೆ ಸರ್ಜರಿಗೆ ಮಾತ್ರ ಒಪ್ಪಲಿಲ್ಲ.

ಅಷ್ಟು ಬೆನ್ನು ನೀವು ಇದ್ದರೂ ದರ್ಶನ್ ಯಾಕೆ ಸರ್ಜರಿಗೆ ಒಪ್ಪುತ್ತಿಲ್ಲ ಎಂದು ಆಪ್ತ ಝೈದ್ ಖಾನ್ ಹೇಳಿದ್ದಾರೆ. ದರ್ಶನ್ ಅವರಿಗಿದ್ದ ಬೆನ್ನು ನೋವಿನ ಸಮಸ್ಯೆ ನನಗೆ ಗೊತ್ತು. 'ಕಾಟೇರ' ಸಿನಿಮಾ ಚಿತ್ರೀಕರಣದ ಸಮಯದಲ್ಲಿ ವೈದ್ಯರು ಬೆನ್ನಿಗೆ ಸರ್ಜರಿ ಮಾಡಿಸಿಕೊಳ್ಳುವಂತೆ ಹೇಳಿದ್ದರು. ಆದರೆ ದರ್ಶನ್ ಸರ್ ಒಪ್ಪಲಿಲ್ಲ. ಸರ್ಜರಿ ಮಾಡಿಸಿಕೊಂಡರೆ ಒಂದು ವರ್ಷ ವಿಶ್ರಾಂತಿ ಪಡೆಯಬೇಕು. ಸಿನಿಮಾ ಮಾಡದೇ ಅಭಿಮಾನಿಗಳನ್ನು ರಂಜಿಸದೇ ಒಂದು ವರ್ಷ ಕಾಲ ವ್ಯರ್ಥ ಮಾಡಲು ನನಗೆ ಇಷ್ಟವಿಲ್ಲ. ಅದಕ್ಕೆ ಸರ್ಜರಿ ಬೇಡ ಎಂದು ತಮ್ಮ ಬಳಿ ಹೇಳಿದ್ದಾಗಿ ಝೈದ್ ಖಾನ್ ನೆನಪಿಸಿಕೊಂಡಿದ್ದಾರೆ.
ನನಗೂ ಬೆನ್ನು ನೋವಿನ ಸಮಸ್ಯೆ ಎದುರಾಗಿತ್ತು. ಆ ನೋವು ಏನು ಏನು ಎನ್ನುವುದು ನನಗೆ ಗೊತ್ತು. ಒಂದು ವರ್ಷ ನಾನು ಮಂಚದ ಮೇಲೆ ಮಲಗಲು ಸಾಧ್ಯವಾಗದೇ ಚಾಪೆ ಹಾಸಿ ಕೆಳಗೆ ಮಲಗುತ್ತಿದ್ದೆ. ಅಷ್ಟು ನೋವಿತ್ತು. ದರ್ಶನ್ ಸರ್ಗೆ ಎಷ್ಟು ನೋವು ಇರಬಹುದು ಎನ್ನುವುದು ನನಗೆ ಗೊತ್ತಾಗುತ್ತದೆ ಎಂದು ನ್ಯೂಸ್ ಫಸ್ಟ್ ಸುದ್ದಿ ವಾಹಿನಿ ಸಂದರ್ಶನದಲ್ಲಿ ಝೈದ್ ಖಾನ್ ತಿಳಿಸಿದ್ದಾರೆ. ನಾನು ಒಬ್ಬ ಡಾಕ್ಟರ್ ಬಳಿ ತೋರಿಸ್ಕೊಂಡೆ, ನೋವು ಕಮ್ಮಿ ಆಯ್ತು. ನೀವು ತೋರಿಸಿಕೊಳ್ಳಿ ಎಂದು ದರ್ಶನ್ ಅಣ್ಣನಿಗೆ ಹೇಳಿದ್ದೆ. ಬಳಿಕ ನನ್ನ ಬಲವಂತಕ್ಕೆ ಬಂದು ವೈದ್ಯರ ಬಳಿ ಪರೀಕ್ಷಿಸಿಕೊಂಡಿದ್ದರು ಎಂದು ಝೈದ್ ಖಾನ್ ಹೇಳಿದ್ದಾರೆ.

"ಪರೀಕ್ಷೆ ವೇಳೆ ಬೆನ್ನಿನ ಮೂಳೆಯಲ್ಲಿ ಸಣ್ಣ ಸ್ಕ್ರಾಚ್ ಆಗಿ ಎಕ್ಸ್ಟ್ರಾ ಫ್ಯಾಟ್ ಒತ್ತಿ ಒತ್ತಿ ರಕ್ತ ಪರಿಚಲನೆ ಸರಿಯಾಗಿ ಆಗದೇ ಇಷ್ಟು ನೋವಾಗುತ್ತದೆ. ಜೀವ ಹೋಗುವಂತಾಗುತ್ತದೆ. ನನಗೆ ಅದೇ ಆಗಿತ್ತು. ಆ ನೋವು ಗೊತ್ತು. ಸರ್ಜರಿ ಮಾಡಿಸಿಕೊಳ್ಳಬೇಕು ಎಂದು ವೈದ್ಯರು ಹೇಳಿದ್ರು. ಇದೆಲ್ಲಾ ನಡೆದಿದ್ದು 'ಕಾಟೇರ' ಚಿತ್ರದ ಚಿತ್ರೀಕರಣದ ವೇಳೆ. ಸರಿ ಎಂದವರು ಬಳಿಕ ಸರ್ಜರಿಗೆ ಒಪ್ಪುತ್ತಲೇ ಇರಲಿಲ್ಲ. ಕೊನೆಗೊಮ್ಮೆ ನಾನೇ ಈ ಬಗ್ಗೆ ಕೇಳಿಬಿಟ್ಟೆ. ಅಣ್ಣ ನೋವಿದ್ದರೂ ಸರ್ಜರಿ ಬೇಡ ಎನ್ನುತ್ತಿದ್ದೀರಾ? ಎಂದಾಗ ಅವ್ರು ಒಂದು ಮಾತು ಹೇಳಿದ್ರು ಎಂದು ಝೈದ್ ಖಾನ್ ಮೆಲುಕು ಹಾಕಿದ್ದಾರೆ.
ನಾನು ಅಷ್ಟು ಬಲವಂತ ಮಾಡಿ ಕೇಳಿದಾಗ ಹೇಳಿದ್ರು "ಸರ್ಜರಿ ಸರಿ. ಆದರೆ ಒಂದು ವರ್ಷ ವಿಶ್ರಾಂತಿ ಪಡೆಯಬೇಕು ಎಂದು ವೈದ್ಯರು ಹೇಳಿದ್ದಾರೆ. ನಾನು ಒಂದು ವರ್ಷ ಸಿನಿಮಾ ಮಾಡದೇ ವಿಶ್ರಾಂತಿ ಪಡೆದರೆ ಅಭಿಮಾನಿಗಳು, ಇಂಡಸ್ಟ್ರಿ ಕಥೆ ಏನಾಗಬೇಕು. ನನಗೆ ಸರ್ಜರಿ ಬೇಡ, ಸ್ಟೆರಾಯ್ಡ್, ಸಿರಿಂಜ್ ತಗೊಂಡು ಹೇಗೋ ಸಹಿಸಿಕೊಳ್ಳುತ್ತೇನೆ. ಇದರಿಂದ ಚಿತ್ರರಂಗಕ್ಕೆ ನಷ್ಟವಾಗುವುದು ಬೇಡ ಎಂದಿದ್ರು" ಅಂತ ಝೈದ್ ಖಾನ್ ವಿವರಿಸಿದ್ದಾರೆ.
ರೇಣುಕಾಸ್ವಾಮಿ ಪ್ರಕರಣದಲ್ಲಿ ಆರೋಪಿಗಳಿಗೆ ಹೈಕೋರ್ಟ್ ಜಾಮೀನು ನೀಡಿದ್ದನ್ನು ಪ್ರಶ್ನಿಸಿ ಸರ್ಕಾರ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಆಗ ಸರ್ಕಾರಿ ವಕೀಲರು ದರ್ಶನ್ ಬೆನ್ನು ನೋವಿನ ವಿಚಾರದ ಬಗ್ಗೆ ವಾದ ಮಾಡಿದ್ದರು. ಸರ್ಜರಿ ಮಾಡಿಸಿಕೊಳ್ಳುವುದಾಗಿ ಹೇಳಿ ದರ್ಶನ್ ಜಾಮೀನು ಪಡೆದರು. ಆದರೆ ಈವರೆಗೆ ಸರ್ಜರಿ ಮಾಡಿಸಕೊಳ್ಳಲಿಲ್ಲ, ಬದಲಿಗೆ ಸಿನಿಮಾ ಚಿತ್ರೀಕರಣ ಮಾಡುತ್ತಾ ಇದ್ದಾರೆ ಎಂದು ವಾದಿಸಿದ್ದರು. ಜಾಮೀನು ರದ್ದುಗೊಳಿಸುವ ವೇಳೆ ಇದ್ದರೂ ಸುಪ್ರೀಂ ಪರಿಗಣಿಸಿದ್ದಾಗಿ ವರದಿಯಾಗಿತ್ತು.
ದರ್ಶನ್ ಬೆನ್ನು ನೋವಿನ ಬಗ್ಗೆ ಕೆಲವರು ಅನುಮಾನ ವ್ಯಕ್ತಪಡಿಸಿ ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡಿದ್ದರು. 'ಡೆವಿಲ್' ಚಿತ್ರದ ಚಿತ್ರೀಕರಣದ ವೇಳೆ ದರ್ಶನ್ ಬೆನ್ನು ನೋವಿನಿಂದ ಬಳಲಿದ್ದರು. ಚಿತ್ರೀಕರಣದ ವೇಳೆ ನೋವು ತಾಳಲಾರದೇ ಸೆಟ್ನಲ್ಲೇ ಕುಸಿದು ಮಲಗಿಬಿಟ್ಟಿದ್ದರು. ಅದಕ್ಕೆ ಸಂಬಂಧಿಸಿದ ವೀಡಿಯೋವನ್ನು ಇತ್ತೀಚೆಗೆ ಅಭಿಮಾನಿಗಳು ವೈರಲ್ ಮಾಡಿದ್ದರು.


Click it and Unblock the Notifications











