ಝೈದ್ ಖಾನ್ ವಿರುದ್ಧ ಡ್ರೋನ್ ಟೆಕ್ನೀಶಿಯನ್ ನೀಡಿದ್ದ ದೂರು ಏನಾಯ್ತು..?
ತಂದೆ ಜಮೀರ್ ಅಹ್ಮದ್ ಪ್ರಭಾವಳಿಯನ್ನು ಬಳಸಿಕೊಳ್ಳದೆ, ಚಿತ್ರರಂಗದಲ್ಲಿ ದಾರಿಯನ್ನು ಹುಡುಕಿಕೊಂಡು ಹೊರಟವರು ಝೈದ್ ಖಾನ್. ಬನಾರಸ್ ಚಿತ್ರದ ಮೂಲಕ ಭರವಸೆಯ ಬೆಳಕಿನಂತೆ ಕಂಡ ಝೈದ್ ಖಾನ್ ಅವರ ಮುಂದಿನ ಹೆಜ್ಜೆ ಮೇಲೆ ಎಲ್ಲರ ಕಣ್ಣಿತ್ತು. ಈ ಬಾರಿ ಯಾವ ಕಥೆಯನ್ನ ಆಯ್ಕೆ ಮಾಡಿಕೊಳ್ತಾರೆ ಎಂಬ ಕುತೂಹಲ ಇತ್ತು. ಅದಕ್ಕೆ ಉತ್ತರ ಕೂಡ ಸಿಕ್ಕಿತ್ತು. ದಿಲ್ವಾಲಾ, ಶಕ್ತಿ, ರ್ಯಾಂಬೋ 2, ಕಾಣೆಯಾದವರ ಬಗ್ಗೆ ಪ್ರಕಟಣೆ, ಉಪಾಧ್ಯಕ್ಷ ಚಿತ್ರದ ನಿರ್ದೇಶಕ ಅನಿಲ್ ಕುಮಾರ್ ಜೊತೆ ಚಿತ್ರ ಕೂಡ ಶುರುವಾಗಿತ್ತು. ಆ ಚಿತ್ರದ ಹೆಸರು ''ಕಲ್ಟ್'' ಎಂದು ಕೂಡ ಜಗಜ್ಜಾಹೀರಾಗಿತ್ತು
ಆದರೆ ಆ ನಂತರ ಝೈದ್ ಖಾನ್ ಅವರ ಇದೇ ಚಿತ್ರ ವಿವಾದಕ್ಕೀಡಾಗಿತ್ತು. ನಿರ್ದೇಶಕ ಅನಿಲ್ ಕುಮಾರ್ ಮತ್ತು ಝೈದ್ ಖಾನ್ ವಿರುದ್ಧ ಡ್ರೋನ್ ಆಪರೇಟರ್ ಸಂತೋಷ್ ಆರೋಪ ಮಾಡಿದ್ದರು. ನಷ್ಟ ಪರಿಹಾರ ಮಾಡದೆ ಒಂದೂವರೆ ಲಕ್ಷ ರೂಪಾಯಿ ಬೆಲೆಯ ಮೆಮೊರಿ ಕಾರ್ಡ್ ಕಿತ್ತುಕೊಂಡಿರುವ ಆರೋಪವನ್ನು ಸಂತೋಷ್ ಮಾಡಿದ್ದರು. ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಪ್ರಯತ್ನವನ್ನು ಮಾಡಿದ್ದರು. ಮಾಗಡಿ ರೋಡ್ ಠಾಣೆಗೆ ಸಂತೋಷ್ ಸಹೋದರಿ ದೂರು ಕೂಡ ನೀಡಿದ್ದರು..ಆಸ್ಪತ್ರೆಯಲ್ಲಿ ಡ್ರೋನ್ ಆಪರೇಟರ್ ಸಂತೋಷ್ ಚಿಕಿತ್ಸೆಯನ್ನು ಪಡೆಯುತ್ತಿದ್ದರು. ಈ ಕಾರಣಕ್ಕೆ ಝೈದ್ ಖಾನ್ಗೆ ಬಂಧನದ ಭೀತಿ ಕಾಡುತ್ತಿತ್ತು.

ಸದ್ಯದ ಸಮಾಚಾರ ಏನೆಂದರೆ ದೂರು ಸಲ್ಲಿಸಿದ್ದ ಸಂತೋಷ್ ದೂರನ್ನು ವಾಪಸ್ಸು ಪಡೆದಿದ್ದಾರೆ. ಜವಾಬ್ಧಾರಿಯನ್ನೊತ್ತು ಡ್ರೋನ್ ಹಾಳು ಮಾಡಿದ್ದಕ್ಕೆ 25 ಲಕ್ಷ ರೂಪಾಯಿಯನ್ನು ಝೈದ್ ಖಾನ್ ದೂರುದಾರ ಸಂತೋಷ್ ಅವರಿಗೆ ನೀಡಿದ್ದಾರೆ. ಈ ಮೂಲಕ ಪ್ರಕರಣವನ್ನು ಮಾತುಕತೆ ಮತ್ತು ಸಂಧಾನದ ಮೂಲಕ ಝೈದ್ ಖಾನ್ ಬಗೆಹರಿಸಿದ್ದಾರೆ. ದಾಖಲಿಸಿದ್ದ ದೂರನ್ನು ಕೂಡ ಸಂತೋಷ್ ಹಿಂಪಡೆದಿದ್ದಾರೆ. ಪರಿಹಾರದ ಮೊತ್ತವಾಗಿ ಹಣ ಸಿಕ್ಕ ಖುಷಿಯಲ್ಲಿ ವಿಡಿಯೋ ಮೂಲಕ ತಮ್ಮ ಮನದ ಮಾತುಗಳನ್ನು ಹಂಚಿಕೊಂಡಿದ್ದಾರೆ.
ಈ ಕುರಿತು ಪ್ರತಿಕ್ರಿಯೆಯನ್ನು ನೀಡಿರುವ ಚಿತ್ರತಂಡ ಕೆಲ ಸಮಸ್ಯೆಗಳ ಕಾರಣದಿಂದಾಗಿ ಪರಿಹಾರ ಬಿಡುಗಡೆ ವಿಳಂಬವಾಗಿದೆ. ಝೈದ್ ಖಾನ್ ಹಾಗೂ ಜಮೀರ್ ಅಹಮ್ಮದ್ ಖಾನ್ ನೆರವಿನಿಂದ ಪರಿಹಾರ ನೀಡಲಾಗಿದೆ. ಇದೀಗ ಎಲ್ಲ ವಾದ ವಿವಾದವನ್ನು ಮರೆತು ಚಿತ್ರತಂಡ ಶೂಟಿಂಗ್ನಲ್ಲಿ ಬ್ಯುಸಿಯಾಗಿದೆ. ಶೀಘ್ರದಲ್ಲೇ ಚಿತ್ರದ ಶೂಟಿಂಗ್ ಪೂರ್ಣಗೊಳ್ಳಲಿದೆ. ಬಳಿಕ ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳು ನಡೆಯಲಿದೆ ಎಂದು ಹೇಳಿದೆ.

ಅಂದ್ಹಾಗೇ ಝೈದ್ ಖಾನ್ ಅಭಿನಯದ ಎರಡನೇ ಚಿತ್ರ 'ಕಲ್ಟ್'ಗೆ ಸಂತೋಷ್ ಎಂಬುವವರು ಡ್ರೋನ್ ಉಸ್ತುವಾರಿ ವಹಿಸಿಕೊಂಡಿದ್ದರು. ನ.25ರಂದು ಚಿತ್ರದುರ್ಗದಲ್ಲಿ ಶೂಟಿಂಗ್ ನಡೆಯುತ್ತಿತ್ತು. ಒಂದು ದಿನಕ್ಕೆ 25 ಸಾವಿರ ರೂಪಾಯಿ ನಿಗದಿ ಮಾಡಿ ಅವರು ಶೂಟ್ ಮಾಡುತ್ತಿದ್ದರು. ತಮ್ಮ 25 ಲಕ್ಷ ರೂಪಾಯಿ ಮೌಲ್ಯದ ಡ್ರೋನ್ ನ ಹಾರಿಸುತ್ತಿದ್ದರು. ಆದರೆ ಶೂಟಿಂಗ್ ವೇಳೆ ವಿಂಡ್ ಫ್ಯಾನ್ಗೆ ಟಚ್ ಆಗಿ ಡ್ರೋನ್ ತುಂಡಾಗಿತ್ತು. ಇದರಿಂದ 25 ಲಕ್ಷ ನಷ್ಟ ಉಂಟಾಗಿತ್ತು.
ಆದರೆ ಸಂತೋಷ್ಗೆ ಚಿತ್ರತಂಡ ಕೊಂಚವೂ ನಷ್ಟ ತುಂಬಿ ಕೊಟ್ಟಿರಲಿಲ್ಲ.ಈ ಬಗ್ಗೆ ಅವರು ಚಿತ್ರ ತಂಡದ ಬಳಿ ಕೇಳಿಕೊಂಡಿದ್ದರು. ಈ ವೇಳೆ ಆದ ನಷ್ಟಕ್ಕೆ ಪರಿಹಾರವನ್ನೂ ಕೊಡದೆ ಒಂದೂವರೆ ಲಕ್ಷ ರೂಪಾಯಿ ಬೆಲೆಯ ಮೆಮೊರಿ ಕಾರ್ಡ್ಕಿತ್ತುಕೊಂಡಿರುವ ಆರೋಪವನ್ನು ಸಂತೋಷ್ ಮಾಡಿದ್ದರು. ಆತ್ಮಹತ್ಯೆಗೆ ಪ್ರಯತ್ನವನ್ನು ಮಾಡಿದ್ದರು. ಇದಾದ ನಂತರ ಈ ಘಟನೆ ಹೊರಬರುತ್ತಿದ್ದಂತೆ ಸಚಿವ ಜಮೀರ್ ಅಹಮ್ಮದ್ ಮಾಧ್ಯಮಗಳಲ್ಲಿ ಸ್ಪಷ್ಟನೆ ನೀಡಿದ್ದರು. ತಾನು ಹಾಗೂ ಪುತ್ರ ಝೈದ್ ಖಾನ್ ಸಂತೋಷ್ಗೆ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದರು. ಅದರಂತೆ ಈಗ ಪರಿಹಾರದ ಚೆಕ್ನ್ನು ಸಂತೋಷ್ಗೆ ಚಿತ್ರತಂಡ ಹಸ್ತಾಂತರಿಸಿದೆ. ಈ ಮೂಲಕ ವಿವಾದಕ್ಕೆ ಪೂರ್ಣ ವಿರಾಮ ಹಾಕಿದೆ.


Click it and Unblock the Notifications











