ಬಾಕ್ಸಾಫೀಸ್ನಲ್ಲಿ ಅಟ್ಟರ್ ಫ್ಲಾಪ್ ಆದ ಚಿತ್ರಕ್ಕೆ ಓಟಿಟಿಯಲ್ಲಿ ಬಿಡುಗಡೆ ಭಾಗ್ಯ, ಇಲ್ಲಾದರೂ ಜನ ನೋಡ್ತಾರಾ ?
ಈ ಅದೃಷ್ಟ ಅನ್ನೋದು ಎಂಥವರ ಬದುಕನ್ನೂ ಬದಲಾಯಿಸಿಬಿಡುತ್ತೆ. ಅದೇ ಕೈ ಕೊಟ್ಟಾಗ ಚಿನ್ನದಂತಿದ್ದ ಬದುಕು ಚಿತ್ರಾನ್ನವಾಗುತ್ತೆ. ಇದಕ್ಕೆ ಬಾಲಿವುಡ್ನ ನಾಯಕಿ, ನಿರ್ದೇಶಕಿ ಕಂಗನಾ ರಣಾವತ್ ಸದ್ಯದ ಉದಾಹರಣೆ.
ಹೌದು, ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಕಂಗನಾ ಹೆಸರಿಗೆ ಚಿತ್ರರಂಗದಲ್ಲಿ ಚಿನ್ನದಂತಹ ಬೆಲೆ ಇತ್ತು. ಬಾಲಿವುಡ್ ಇವರನ್ನು 'ಕ್ವೀನ್' ಎಂದು ಕರೆಯುತ್ತಿತ್ತು. ಆದರೆ ಈಗ ಈ ಕ್ವೀನ್ನ ಕ್ಯಾರೇ ಎನ್ನುವವರು ಕೂಡ ಯಾರು ಇಲ್ಲ. ಇದಕ್ಕೆ ಪುರಾವೆ ಎಂಬಂತೆ ಕಂಗನಾ ತುಂಬಾ ಕನಸುಗಳನ್ನು ಕಂಡು ಮಾಡಿದ್ದ ಚಿತ್ರ ಎಮರ್ಜೆನ್ಸಿ ಚಿತ್ರ ಬಾಕ್ಸಾಫೀಸ್ನಲ್ಲಿ ಸೋತು ಹೋಗಿದೆ. 60 ಕೋಟಿ ಬಜೆಟ್ನಲ್ಲಿ ನಿರ್ಮಾಣವಾದ ಚಿತ್ರ 20 ಕೋಟಿಯನ್ನು ಕೂಡ ಗಳಿಸುವಲ್ಲಿ ವಿಫಲವಾಗಿದೆ. ಈ ಮೂಲಕ ಅಟ್ಟರ್ ಫ್ಲಾಪ್ ಚಿತ್ರಗಳ ಸಾಲಿಗೆ ಕೂಡ ಎಮರ್ಜೆನ್ಸಿ ಸೇರಿಕೊಂಡಿದೆ.

ಇನ್ನು ಕಂಗನಾ ಪಾಲಿಗೆ ಎಮರ್ಜೆನ್ಸಿ ಗೆಲ್ಲಲೇಬೇಕಿದ್ದ ಚಿತ್ರವಾಗಿತ್ತು. ಸತತ ಸೋಲುಗಳು ಕಂಗನಾ ಅವರನ್ನು ಹೈರಾಣಾಗಿಸಿದ್ದವು. ಹೀಗಾಗಿ ಕಂಗನಾ ತಾವೇ ನಿರ್ದೇಶನಕ್ಕೆ ಇಳಿದಿದ್ದರು. ಗೆಲುವಿನ ಲಯಕ್ಕೆ ಬರುವ ಪ್ರಯತ್ನ ಮಾಡಿದ್ದರು. ಆದರೆ ದುರಾದೃಷ್ಟವಶಾತ್ ಅದು ಸಾಧ್ಯವಾಗಲಿಲ್ಲ. ಇನ್ನು ಕಂಗನಾ ಎಮರ್ಜೆನ್ಸಿ ಚಿತ್ರದ ನಿರ್ದೇಶಕಿ ಮಾತ್ರ ಆಗಿರಲಿಲ್ಲ. ನಿರ್ಮಾಪಕರಲ್ಲಿ ಒಬ್ಬರಾಗಿದ್ದರು ಕಂಗನಾ. ಎಲ್ಲಕ್ಕಿಂತ ಹೆಚ್ಚಾಗಿ ಎಮರ್ಜೆನ್ಸಿ ಚಿತ್ರ ವಿವಾದದಿಂದ ಸದ್ದು ಮಾಡಿತ್ತು. ಮೂರು ಮೂರು ಬಾರಿ ಚಿತ್ರದ ಬಿಡುಗಡೆಯನ್ನು ಮುಂದೂಡಲಾಗಿತ್ತು. ಹೀಗಾಗಿ ಚಿತ್ರದಲ್ಲಿ ಅಂಥದ್ದೇನು ಇದೆ ಎಂದು ನೋಡಲಾದರೂ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುತ್ತಾರೆ ಎಂದು ಅನೇಕರು ಅಂದುಕೊಂಡಿದ್ದರು. ಆದರೆ ಅದು ಕೂಡ ಆಗಲಿಲ್ಲ.
ಹೀಗೆ ಎಮರ್ಜೆನ್ಸಿ ಚಿತ್ರ ನೆಲಕಚ್ಚಿದ್ದರಿಂದ ಸಹಜವಾಗಿ ಕಂಗನಾಗೆ ಮುಖಭಂಗವಾಗಿದೆ.ಇಂದಿರಾ ಕಥೆಯನ್ನು ಇಂಡಿಯಾ ಚಿತ್ರಮಂದಿರದಲ್ಲಿ ನೋಡಲಿಲ್ಲವಲ್ಲಾ ಎನ್ನುವ ನೋವು ಕಂಗನಾಗೆ ಕಾಡುತ್ತಿದೆ. ಹೀಗಾಗಿಯೇ ಒಲ್ಲದ ಮನಸಿಂದ ತಮ್ಮ ಎಮರ್ಜೆನ್ಸಿ ಚಿತ್ರ ನೆಟ್ಫ್ಲಿಕ್ಸ್ನಲ್ಲಿ ಪ್ರಸಾರವಾಗುತ್ತಿರುವ ಸುದ್ದಿಯನ್ನು ಕಂಗನಾ ಹಂಚಿಕೊಂಡಿದ್ದಾರೆ. ಟೈಮ್ಲೈನ್ನಲ್ಲಿ ಫೋಸ್ಟ್ ಹಂಚಿಕೊಳ್ಳದೇ ಸ್ಟೋರಿಯಲ್ಲಿ ಎಮರ್ಜೆನ್ಸಿ ಚಿತ್ರದ ಓಟಿಟಿ ಬಿಡುಗಡೆಯ ಮಾಹಿತಿಯನ್ನು ನೀಡಿ ಕೈತೊಳೆದುಕೊಂಡಿದ್ದಾರೆ.
ಚಿತ್ರಮಂದಿರದಲ್ಲಿ ಸೋತ ಎಮರ್ಜೆನ್ಸಿ ಚಿತ್ರದ ಓಟಿಟಿ ಹಕ್ಕುಗಳನ್ನು ನೆಟ್ಫ್ಲಿಕ್ಸ್ ತನ್ನದಾಗಿಸಿಕೊಂಡಿದೆ. ಚಿತ್ರವನ್ನು ಈ ಮಾರ್ಚ್ 17ರಿಂದ ಪ್ರಸಾರ ಮಾಡಲಿದೆ. ಈ ಮೂಲಕ ಮನೆಯಲ್ಲಿಯೇ ಆ ಕಾಲದಲ್ಲಿ ಇಂದಿರಾ ಗಾಂಧಿ ಹೇರಿದ್ದ ಎಮರ್ಜೆನ್ಸಿಯ ಚಿತ್ರಣವನ್ನು ಕಣ್ತುಂಬಿಕೊಳ್ಳುವ ಅವಕಾಶ ಪ್ರೇಕ್ಷಕರಿಗೆ ನೀಡಿದೆ.
ಅಂದ್ಹಾಗೇ ಎಮರ್ಜೆನ್ಸಿಯಲ್ಲಿ ಅನುಪಮ್ ಖೇರ್, ಮಹಿಮಾ ಚೌಧರಿ, ಮಿಲಿಂದ್ ಸೋಮನ್, ವಿಶಾಕ್ ನಾಯರ್ ಮತ್ತು ದಿವಂಗತ ನಟ ಸತೀಶ್ ಕೌಶಿಕ್ ಕೂಡ ಕಾಣಿಸಿಕೊಂಡಿದ್ದಾರೆ. ಅಟಲ್ ಬಿಹಾರಿ ವಾಜಪೇಯಿ ಪಾತ್ರವನ್ನು ಶ್ರೇಯಸ್ ತಲ್ಪಡೆ ನಿರ್ವಹಿಸಿದ್ದಾರೆ. ರಿಂಕು ಪಿಟ್ಟಿ ನಿರ್ಮಾಣದಲ್ಲಿ ಕಂಗನಾ ಜೊತೆ ಕೈ ಜೋಡಿಸಿದ್ಧಾರೆ. ಉಮೇಶ್ ಬನ್ಸಲ್ ಚಿತ್ರದ ಮತ್ತೊಬ್ಬ ನಿರ್ಮಾಪಕರು.
ಒಟ್ನಲ್ಲಿ ಸಾರ್ವತ್ರಿಕ ವಲಯದಲ್ಲಿ ಕಂಗನಾ ಕುರಿತು ಅಭಿಪ್ರಾಯಗಳು ಏನೇ ಇರಲಿ, ಆದರೆ ಕಂಗನಾ ಅತ್ಯುತ್ತಮ ಅಭಿನೇತ್ರಿ ಅನ್ನುವುದರಲ್ಲಿ ದೂಸ್ರಾ ಮಾತು ಇಲ್ಲ. ಆದರೆ ಕಂಗನಾಗೆ ಸಿಗಬೇಕಿದ್ದ ಗೆಲುವು ಮಾತ್ರ ಸಿಕ್ತಿಲ್ಲ. ಚಿತ್ರಮಂದಿರದಲ್ಲಿ ಫ್ಲಾಪ್ ಆದ ಎಮೆರ್ಜನ್ಸಿ ಚಿತ್ರವನ್ನು ಪ್ರೇಕ್ಷಕರು ಓಟಿಟಿಯಲ್ಲಿ ನೋಡುತ್ತಾರಾ ಕಂಗನಾ ಮಾಡಿದ ಪ್ರಯತ್ನ ಮೆಚ್ಚಿಕೊಳ್ಳುತ್ತಾರಾ ಎನ್ನುವುದನ್ನು ಈಗ ಕಾದು ನೋಡಬೇಕಿದೆ. ಓಟಿಟಿಯಲ್ಲಿ ಬಿಡುಗಡೆಯಾದ ನಂತರ ಎಮರ್ಜೆನ್ಸಿ ಟ್ರೋಲಿಗರಿಗೆ ಆಹಾರವಾಗುವ ಸಾಧ್ಯತೆ ಕೂಡ ಇದೆ.


Click it and Unblock the Notifications










