ಓಟಿಟಿಗೆ ಬಂದ ಅಕ್ಷಯ್ಕುಮಾರ್ 'ರಾಮ್ಸೇತು': ಸದ್ಯಕ್ಕೆ ಎಲ್ಲರೂ ನೋಡಲು ಅವಕಾಶ ಇಲ್ಲ!
ದೀಪಾವಳಿ ಸಂಭ್ರಮದಲ್ಲಿ ತೆರೆಕಂಡಿದ್ದ 'ರಾಮ್ಸೇತು' ಸಿನಿಮಾ ಓಟಿಟಿಗೆ ಬಂದಿದೆ. ಅಮೇಜಾನ್ ಪ್ರೈಮ್ನಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗ್ತಿದೆ. ಆದರೆ ಎಲ್ಲಾ ಚಂದಾದಾರರು ಸದ್ಯಕ್ಕೆ ಸಿನಿಮಾ ನೋಡಲು ಸಾಧ್ಯವಾಗುತ್ತಿಲ್ಲ. ಅಕ್ಷಯ್ ಕುಮಾರ್ ನಟನೆಯ 'ರಾಮ್ಸೇತು' ಸಿನಿಮಾ ಬಾಕ್ಸಾಫೀಸ್ನಲ್ಲಿ ಮುಗ್ಗರಿಸಿತ್ತು.
ರಾಮ್ಸೇತು ವಿಶೇಷತೆ ಹಾಗೂ ಅದನ್ನು ರಕ್ಷಿಸಲು ಆರ್ಕಿಯಾಲಜಿಸ್ಟ್ ಮಾಡುವ ಸಾಹಸದ ಕಥೆಯನ್ನು ಈ ಚಿತ್ರದಲ್ಲಿ ಹೇಳಲಾಗಿದೆ. ಅಭಿಷೇಕ್ ಶರ್ಮಾ ನಿರ್ದೇಶನದ ಈ ಆಕ್ಷನ್ ಅಡ್ವೆಂಚರಸ್ ಚಿತ್ರದಲ್ಲಿ ಜಾಕ್ವೆಲಿನ್ ಫರ್ನಾಂಡಿಸ್ ಹಾಗೂ ಸತ್ಯದೇವ್ ಕೂಡ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಆರ್ಕಿಯಾಲಜಿಸ್ಟ್ ಡಾ. ಆರ್ಯನ್ ಕುಲಶ್ರೇಷ್ಠ ಪಾತ್ರದಲ್ಲಿ ಬಾಲಿವುಡ್ ಖಿಲಾಡಿ ಅಕ್ಷಯ್ ಕುಮಾರ್ ನಟಿಸಿದ್ದಾರೆ. ಭಾರೀ ನಿರೀಕ್ಷೆ ಹುಟ್ಟಾಕ್ಕಿದ್ದ ಸಿನಿಮಾ ಪ್ರೇಕ್ಷಕರನ್ನು ರಂಜಿಸುವಲ್ಲಿ ವಿಫಲವಾಗಿತ್ತು.

ರಾಮಾಯಣ ಕಾವ್ಯದಲ್ಲಿ ಉಲ್ಲೇಖಿಸಿರುವ ರಾಮ್ಸೇತು ನಿಜವಾಗಿಯೂ ಶ್ರೀರಾಮ ಹಾಗೂ ವಾನರ ಸೇನೆ ಸೇರಿ ಕಟ್ಟಿರುವ ಸೇತುವೆ. ಇದಕ್ಕೆ ಸಾಕ್ಷಿ ಕೂಡ ಇದೆ. ಆದರೆ ಇದೆಲ್ಲಾ ಸುಳ್ಳು ಎನ್ನುವವರು ಇದ್ದಾರೆ. ಇದೇ ವಿಚಾರವನ್ನು 'ರಾಮ್ಸೇತು' ಚರ್ಚಿಸಲಾಗಿದೆ. ಅದೇ ಕಾರಣಕ್ಕೆ ಪ್ರೇಕ್ಷಕರು ಥಿಯೇಟರ್ನಲ್ಲಿ ನೋಡದೇ ಇದ್ದರೂ ಓಟಿಟಿಯಲ್ಲಿ ನೋಡಲು ಕಾತರರಾಗಿದ್ದಾರೆ. ಆದರೆ ಸದ್ಯಕ್ಕೆ 199 ರೂ. ಬಾಡಿಗೆ ತೆತ್ತು ಅಮೇಜಾನ್ ಪ್ರೈಮ್ನಲ್ಲಿ ಸಿನಿಮಾ ವೀಕ್ಷಿಸಬಹುದು. ಯಾವುದೇ ಹಣ ಪಾವತಿಸದೇ ಸಿನಿಮಾ ನೋಡಲು ಯಾವಾಗ ಸಿಗುತ್ತೆ ಎನ್ನುವ ಬಗ್ಗೆ ಇನ್ನು ಮಾಹಿತಿ ಇಲ್ಲ.

ಸಿನಿಮಾ ಕಥೆ ಏನು ಎನ್ನುವುದನ್ನು ನೋಡುವುದಾದರೆ ಖ್ಯಾತ ಉದ್ಯಮಿ ಇಂದ್ರಕಾಂತ್(ನಾಜರ್)ರಾಮ್ಸೇತು ನಾಶ ಮಾಡಿ, ಅಲ್ಲಿ ಸೇತುಸಮುದ್ರಂ ಹೆಸರಿನಲ್ಲಿ ಒಂದು ಪ್ರಾಜೆಕ್ಟ್ಗೆ ಕೈ ಹಾಕುತ್ತಾನೆ. ಇದು ನಡೆಯಬೇಕು ಎಂದು ಭಾರತೀಯರು ನಂಬಿರುವಂತೆ ರಾಮ್ಸೇತುವನ್ನು ಶ್ರೀರಾಮ ನಿರ್ಮಿಸಲಿಲ್ಲ. ಅದು ಪ್ರಾಕೃತಿಕವಾಗಿ ನಿರ್ಮಾಣವಾಗಿದ್ದು ಎಂದು ನಿರೂಪಿಸಬೇಕು. ಇದಕ್ಕಾಗಿ ಖ್ಯಾತ ಆರ್ಕಿಯಾಲಜಿಸ್ಟ್, ಖ್ಯಾತ ಪುರಾತತ್ವ ಇಲಾಖೆ ಜಾಯಿಂಟ್ ಡೈರೆಕ್ಟರ್ ಆರ್ಯನ್(ಅಕ್ಷಯ್ಕುಮಾರ್)ನಿಂದ ಒಂದು ರಿಪೋರ್ಟ್ ಕೊಡಿಸ್ತಾನೆ. ಇದರಿಂದ ಆರ್ಯನ್ ಸಮಸ್ಯೆಗೆ ಸಿಲುಕುತ್ತಾನೆ. ತಪ್ಪು ವರದಿ ಹಿನ್ನೆಲೆಯಲ್ಲಿ ಆತ ಕೆಲಸ ಕಳೆದುಕೊಳ್ಳಬೇಕಾಗುತ್ತದೆ.

ರಾಮ್ಸೇತು ಕುರಿತು ಮತ್ತಷ್ಟು ಸಂಶೋಧನೆ ನಡೆಸುವಂತೆ ಇಂದ್ರಕಾಂತ್ ಭರವಸೆ ನೀಡುವುದರಿಂದ ಆರ್ಯನ್ ಅವರ ತಂಡ ಸೇರುತ್ತಾನೆ. ರಾಮ್ಸೇತು ಬಗ್ಗೆ ಸಂಶೋಧನೆಗೆ ಮುಂದಾದ ಆರ್ಯನ್ಗೆ ಎದುರಾದ ಸಮಸ್ಯೆಗಳೇನು? ಆರ್ಯನ್ ಟೀಂ ಶ್ರೀಲಂಕಾವರೆಗೆ ಪ್ರಯಾಣ ಬೆಳೆಸುವುದು ಯಾಕೆ? ಇಂದ್ರಕಾಂತ್ ಪ್ಲ್ಯಾನ್ ಏನಾಗಿತ್ತು? ಕೊನೆಗೆ ಆರ್ಯನ್ ಸರ್ಕಾರಕ್ಕೆ ನೀಡಿದ ವರದಿ ಏನು? ಎನ್ನುವುದೇ ಸಿನಿಮಾ ಕಥೆ.


Click it and Unblock the Notifications











