'ಬಾಹುಬಲಿ: ಕ್ರೌನ್ ಆಫ್ ಬ್ಲಡ್' ಟ್ರೈಲರ್ ನೋಡಿದ್ರಾ? ಕಟ್ಟಪ್ಪನೇ ವಿಲನ್!
ರಾಜಮೌಳಿ ನಿರ್ದೇಶನದ 'ಬಾಹುಬಲಿ' ಸರಣಿ ಸಿನಿಮಾಗಳು ಬಾಕ್ಸಾಫೀಸ್ ಶೇಕ್ ಮಾಡಿದ್ದು ಗೊತ್ತೇಯಿದೆ. ಈ ಆಕ್ಷನ್ ಅಡ್ವೆಂಚರ್ಸ್ ಕಾಸ್ಟ್ಯೂಮ್ ಡ್ರಾಮಾ ತೆರೆಮೇಲೆ ಮಾಡಿದ ಮ್ಯಾಜಿಕ್ ಅಷ್ಟಿಷ್ಟಲ್ಲ. 'ಬಾಹುಬಲಿ'ಯಾಗಿ ದ್ವಿಪಾತ್ರದಲ್ಲಿ ಪ್ರಭಾಸ್ ಅಬ್ಬರಿಸಿದ್ದರು. ಚಿತ್ರದ ಪ್ರತಿಪಾತ್ರವೂ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿದುಬಿಟ್ಟಿದೆ.
2 ಭಾಗಗಳಾಗಿ 'ಬಾಹುಬಲಿ' ಸಿನಿಮಾ ಬಂದು ಹೋಗಿತ್ತು. ಇದೀಗ ಅದೇ ಕಥೆಯನ್ನು ಆನಿಮೇಟೆಡ್ ಸೀರಿಸ್ ರೂಪದಲ್ಲಿ ಪ್ರೇಕ್ಷಕರ ಮುಂದೆ ತರಲಾಗುತ್ತಿದೆ. ಆ ಸರಣಿಯ ಮೊದಲ ಸಿನಿಮಾ ಟ್ರೈಲರ್ ಇದೀಗ ರಿಲೀಸ್ ಆಗಿದೆ. 'ಬಾಹುಬಲಿ ಕ್ರೌನ್ ಆಫ್ ಬ್ಲಡ್' ಹೆಸರಿನಲ್ಲಿ ಆನಿಮೇಟೆಡ್ ಸರಣಿ ಬರ್ತಿದೆ. ಮೇ 17ರಂದು ಡಿಸ್ನಿ ಹಾಟ್ಸ್ಟರ್ನಲ್ಲಿ ಇದು ಸ್ಟ್ರೀಮಿಂಗ್ ಆಗಲಿದೆ.

'ಬಾಹುಬಲಿ' ಚಿತ್ರದ ಪಾತ್ರಗಳನ್ನೇ ಬಳಸಿ ಹೊಸ ಹೊಸ ಕಥೆ ಹೇಳಲಾಗುತ್ತಿದೆ. ಸದ್ಯ ಟ್ರೈಲರ್ನಲ್ಲಿ 'ಬಾಹುಬಲಿ' ಸಿನಿಮಾ ಕಥೆಗೂ ಮುನ್ನ ಏನೆಲ್ಲಾ ನಡೀತು ಎನ್ನುವ ಕಥೆಯನ್ನು ಹೇಳಲಾಗಿದೆ. ಚಿತ್ರದಲ್ಲಿ ಕಟ್ಟಪ್ಪ ಮಾಹಿಷ್ಮತಿಯ ಸೈನ್ಯದ ಮುಖ್ಯಸ್ಥನಾಗಿದ್ದ. ಆದರೆ ಈ ಸೀರಿಸ್ನಲ್ಲಿ ಕಟ್ಟಪ್ಪನನ್ನು ಮಾಹಿಷ್ಮತಿಯ ಶತ್ರು ಸಾಮ್ರಾಜ್ಯದ ಸೈನ್ಯದ ಮುಖ್ಯಸ್ಥನಾಗಿ ತೋರಿಸಲಾಗಿದೆ. ಅಂದರೆ ಆನಿಮೇಟೆಡ್ ಸರಣಿಯಲ್ಲಿ ಕಟ್ಟಪ್ಪನೇ ವಿಲನ್ ಎನ್ನುವಂತೆ ಟ್ರೈಲರ್ನಲ್ಲಿ ಗೊತ್ತಾಗುತ್ತಿದೆ.
ಮಾಹಿಷ್ಮತಿ ಸಾಮ್ರಾಜ್ಯದ ಮೇಲೆ ಮೊದಲು ಒಬ್ಬ ಶತ್ರು ಆಕ್ರಮಣಕ್ಕೆ ಮುಂದಾಗುತ್ತಾನೆ. ಆತನೇ ರಕ್ತದೇವ. ಆತನ ಸೈನ್ಯದ ಮುಖ್ಯಸ್ಥ ಕಟ್ಟಪ್ಪ. ತಮಗೇ ತರಬೇತಿ ನೀಡಿದ ಕಟ್ಟಪ್ಪನ ವಿರುದ್ಧ ತಮ್ಮ ಸೈನ್ಯ ಹೇಗೆ ಗೆಲ್ಲುತ್ತದೆ? ಎಂದು ಬಾಹುಬಲಿ ಮತ್ತು ಭಲ್ಲಾಳದೇವ ಅಖಾಡಕ್ಕೆ ಇಳಿಯುತ್ತಾರೆ. ಮಾಹಿಷ್ಮತಿ ಸಾಮ್ರಾಜ್ಯದ ಮೇಲೆ ದಂಡೆತ್ತಿ ಬಂದ ಕಟ್ಟಪ್ಪ ಅದೇ ಸಾಮ್ರಾಜ್ಯದ ಸೇನೆ ಮುಖ್ಯಸ್ಥನಾಗಿದ್ದು ಹೇಗೆ? ಎನ್ನುವ ಕಥೆ ಕುತೂಹಲ ಮೂಡಿಸುತ್ತದೆ.
ಸದ್ಯ ಟ್ರೈಲರ್ ನೋಡಿ ಅಭಿಮಾನಿಗಳು ಆನಿಮೇಟೆಡ್ ಸರಣಿ ನೋಡಲು ಕಾತುರರಾಗಿದ್ದಾರೆ. ಇತ್ತೀಚೆಗೆ 'ಬಾಹುಬಲಿ-2' ಸಿನಿಮಾ 7 ವರ್ಷ ಪೂರೈಸಿತ್ತು. ಅದರ ಬೆನ್ನಲ್ಲೇ ಅದೇ ಕಥೆ ಬೇರೆ ಬೇರೆ ಕವಲುಗಳಾಗಿ ಆನಿಮೇಟೆಡ್ ಸಿನಿಮಾ ರೂಪದಲ್ಲಿ ಪ್ರೇಕ್ಷಕರ ಮುಂದೆ ಬರುತ್ತಿರುವುದು ವಿಶೇಷ. ಬಹಳ ಹಿಂದೆಯೇ ಈ ಬಗ್ಗೆ ರಾಜಮೌಳಿ ಮಾತನಾಡಿದ್ದರು.

'ಬಾಹುಬಲಿ'-2 ಬಳಿಕ ಕಥೆ ಮುಂದುವರೆಯುತ್ತಾ? ಸರಣಿಯನ್ನು ಮುಂದುವರೆಸುತ್ತೀರಾ? ಎನ್ನುವ ಪ್ರಶ್ನೆಗೆ ಇಲ್ಲ. ಸಿನಿಮಾ ಆಗಿ ಈ ಕಥೆ ಮುಂದುವರೆಯುವುದಿಲ್ಲ. ಆದರೆ ಆನಿಮೇಟೆಡ್ ಸೀರಿಸ್ ಆಗಿ ಕಥೆಯನ್ನು ಹೇಳುವ ಪ್ರಯತ್ನ ನಡೀತಿದೆ ಎಂದಿದ್ದರು. ಅದರಂತೆ ಈಗ 'ಬಾಹುಬಲಿ ಕ್ರೌನ್ ಆಫ್ ಬ್ಲಡ್' ಸ್ಟ್ರೀಮಿಂಗ್ಗೆ ಸಜ್ಜಾಗಿದೆ.
'ಬಾಹುಬಲಿ' ಸರಣಿಯಲ್ಲಿ ಪ್ರಭಾಸ್ ಜೊತೆಗೆ ರಾಣಾ ದಗ್ಗುಬಾಟಿ, ಅನುಷ್ಕಾ ಶೆಟ್ಟಿ, ರಮ್ಯಾಕೃಷ್ಣ, ಸತ್ಯರಾಜ್ ಹೀಗೆ ಘಟಾನುಘಟಿ ಕಲಾವಿದರು ನಟಿಸಿದ್ದರು. ಗ್ರಾಫಿಕ್ಸ್ ಬಳಸಿ ತೆರೆಮೇಲೆ ಹೊಸ ಪ್ರಪಂಚವನ್ನೇ ಮೌಳಿ ಕಟ್ಟಿಕೊಟ್ಟಿದ್ದಾರೆ. ಮೊದಲ ಬಾರಿ 250 ಕೋಟಿ ರೂ. ಕಲೆಕ್ಷನ್ ಮಾಡಿದರೆ 2ನೇ ಭಾಗ 1000 ಕೋಟಿ ರೂ.ಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿ ಎಲ್ಲರ ಹುಬ್ಬೇರಿಸಿತ್ತು.
ಭಾರತೀಯ ಚಿತ್ರರಂಗದಲ್ಲಿ ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ಶುರುವಾಗಿದ್ದೇ 'ಬಾಹುಬಲಿ'ಯಿಂದ ಅಷ್ಟೇ ಅಲ್ಲ. ಕಥೆಯನ್ನು ಎರಡ್ಮೂರು ಭಾಗಳಾಗಿ ಹೇಳುವ ಟ್ರೆಂಡ್ ಹುಟ್ಟುಹಾಕಿದ್ದು ಇದೇ ಸಿನಿಮಾ. ಪ್ಯಾನ್ ಇಂಡಿಯಾ ಹಾಗೂ ಸೀರಿಸ್ ಕಾನ್ಸೆಪ್ಟ್ ಹೊಸದೇನು ಅಲ್ಲ. ಈ ಹಿಂದೆ ಕೂಡ ಇತ್ತು. ಆದರೆ ಬಹಳ ವರ್ಷಗಳ ಬಳಿಕ ಅದನ್ನು ದೊಡ್ಡಮಟ್ಟದಲ್ಲಿ ಮತ್ತೆ ಚಾಲ್ತಿಗೆ ತಂದಿದ್ದು ರಾಜಮೌಳಿ ಅಂದ್ರೆ ತಪ್ಪಾಗಲ್ಲ.


Click it and Unblock the Notifications











