Don't Miss!
- Lifestyle ಯಾವ ದಿಕ್ಕಿಗೆ ತಲೆ ಇಟ್ಟು ಮಲಗಬಾರದು..? ಹಿರಿಯರು ಈ ರೀತಿ ಹೇಳೋದೇಕೆ.?
- Sports RCB vs KKR: ಗೇಮ್ ಚೇಂಜರ್ ಆಗಬಹುದು ಈ ಪ್ಲೇಯರ್ಸ್; ಈ ಆಟಗಾರರ ಮೇಲೆ ಕಣ್ಣು
- News Acid Attack: ಆಸ್ತಿ ವಿವಾದ: ಮಗನ ಮೇಲೆ 'ಆಸಿಡ್' ಎರಚಿದ ತಂದೆ
- Automobiles ಜೀವದ ಗೆಳೆಯನಿಗೆ ಸರ್ಪ್ರೈಸ್ ಆಗಿ 'ಬೈಕ್' ಉಡುಗೊರೆ ನೀಡಿದ ವಧು.. ಆತನ ಸಂತೋಷಕ್ಕೆ ಪಾರವೇ ಇರಲಿಲ್ಲ!
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Technology ಬಜೆಟ್ ದರದಲ್ಲಿ ಬೆಸ್ಟ್ 5G ಫೋನ್ ಬೇಕಿದ್ರೆ, ಈ ಲಿಸ್ಟ್ ಒಮ್ಮೆ ಗಮನಿಸಿ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಿಗ್ಬಾಸ್ ಒಟಿಟಿ ಮನೆಗೆ ಸೇರಿದ 16 ಮಂದಿ ಇವರೇ: ಭಿನ್ನ-ಭಿನ್ನ ವ್ಯಕ್ತಿತ್ವಗಳು ಒಂದೆಡೆ!
ಬಿಗ್ಬಾಸ್ ಒಟಿಟಿ ಕನ್ನಡ ಪ್ರಾರಂಭವಾಗಿದೆ. ಸುಮಾರು ನಾಲ್ಕು ಗಂಟೆಗೂ ಹೆಚ್ಚು ಕಾಲ ನಡೆದ ಸುದೀರ್ಘ ಕಾರ್ಯಕ್ರಮದಲ್ಲಿ ಬಿಗ್ಬಾಸ್ನ ಹದಿನಾರು ಸ್ಪರ್ಧಿಗಳನ್ನು ಸುದೀಪ್ ಪರಿಚಯಿಸಿದ್ದು ಎಲ್ಲರನ್ನೂ ಮನೆಯ ಒಳಗೆ ಸೇರಿಸಿದ್ದಾರೆ.
ಈ ಬಾರಿಯೂ ಭಿನ್ನ-ಭಿನ್ನ ವ್ಯಕ್ತಿತ್ವದ, ಭಿನ್ನ ಹಿನ್ನೆಲೆಯ, ಭಿನ್ನ ವಯೋಮಾದ, ಭಿನ್ನ ಸಾಮಾಜಿಕ ಸ್ಥರದ ವ್ಯಕ್ತಿಗಳನ್ನು ಒಂದೆಡೆ ಸೇರಿಸಿದೆ ಬಿಗ್ಬಾಸ್. ಈ ಬಾರಿ ತುಸು ಹೆಚ್ಚೇ ಭಿನ್ನತೆಯನ್ನು ತರಲು ಯತ್ನಿಸಿದ್ದಾರೆ ಎನಿಸುತ್ತದೆ ಬಿಗ್ಬಾಸ್ ಆಯೋಜಕರು.
ನವ ಜೋಡಿ ಇದ್ದಾರೆ, ವಿಚ್ಛೇಧಿತರಿದ್ದಾರೆ, ಭವಿಷ್ಯ ಹೇಳುವ ಜ್ಯೋತಿಷಿ ಇದ್ದಾರೆ ಅವರ ಜೊತೆಗೆ ವರ್ತಮಾನ ವರದಿಗಾರರಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ಕ್ಷಿಪ್ರವಾಗಿ ಸೆಲೆಬ್ರಿಟಿ ಆದವರಿದ್ದಾರೆ. ಬಹಳ ವರ್ಷಗಳಿಂದಲೂ ಸಿನಿಮಾ ರಂಗದಲ್ಲಿ ಸ್ಟ್ರಗಲ್ ಮಾಡುತ್ತಲೇ ಇರುವವರಿದ್ದಾರೆ. ವಿಚ್ಚೇಧಿತ ತಂದೆ-ತಾಯಿಯನ್ನು ಹೊಂದಿರುವವರಿದ್ದಾರೆ, ಮಕ್ಕಳನ್ನು ನೆನಪು ಮಾಡಿಕೊಂಡು ಕೊರಗುತ್ತಿರುವವರಿದ್ದಾರೆ ಒಟ್ಟಾರೆ ಭಿನ್ನ ಭಿನ್ನ ವ್ಯಕ್ತಿತ್ವದ, ಮನಸ್ತತ್ವದ ಮಂದಿ ಬಿಗ್ಬಾಸ್ ಮನೆಯಲ್ಲಿ ಒಂದೆಡೆ ಇದ್ದಾರೆ. ಬಿಗ್ಬಾಸ್ ಒಟಿಟಿ ಕನ್ನಡ ಸೀಸನ್ 1 ರ ಎಲ್ಲ ಹದಿನಾರು ಮಂದಿ ಸ್ಪರ್ಧಿಗಳ ಪಟ್ಟಿ ಇಲ್ಲಿದೆ ನೋಡಿ.
ಸಂಖ್ಯಾಶಾಸ್ತ್ರಜ್ಞ ಆರ್ಯವರ್ಧನ್
ಜ್ಯೋತಿಷಿ, ಸಂಖ್ಯಾಶಾಸ್ತ್ರಜ್ಞನಾಗಿ ಜನಪ್ರಿಯತೆ ಪಡೆದಿರುವ ಆರ್ಯವರ್ಧನ್ ಬಿಗ್ಬಾಸ್ ಒಟಿಟಿ ಕನ್ನಡ ಸೀಸನ್ 1ರ ಮೊದಲ ಸ್ಪರ್ಧಿಯಾಗಿ ಬಿಗ್ಬಾಸ್ ಮನೆಗೆ ಹೋಗಿದ್ದಾರೆ. ಚಾನೆಲ್ ಒಂದರಲ್ಲಿ ಕ್ರಿಕೆಟ್ ಪಂದ್ಯಗಳ ಕುರಿತು ಆರ್ಯವರ್ಧನ್ ಭವಿಷ್ಯ ಹೇಳುತ್ತಿದ್ದರು. ಅವರು ಮಾತನಾಡುವ ರೀತಿ, ಬೈಯ್ಯುವ ರೀತಿಯಿಂದ ಅವರು ಬಹಳ ಜನಪ್ರಿಯರಾಗಿದ್ದರು. ಅವರು ನೈವೇದ್ಯಕ್ಕೆ ಪನ್ನೀರು ಕೇಳಿದ್ದು ಬಹಳ ಟ್ರೋಲ್ ಆಗಿತ್ತು. ಇದೀಗ ಆರ್ಯವರ್ಧನ್ ಬಿಗ್ಬಾಸ್ ಮನೆಯಲ್ಲಿದ್ದಾರೆ.
ಬಿಗ್ಬಾಸ್ ಎರಡನೇ ಸ್ಪರ್ಧಿ ಸೋನು ಶ್ರೀನಿವಾಸ್ ಗೌಡ
ಟಿಕ್ಟಾಕ್ ಮೂಲಕ ಫೇಮಸ್ ಆಗಿದ್ದ ಆ ಬಳಿಕ ಇನ್ಸ್ಟಾಗ್ರಾಂ ರೀಲ್ಸ್ ಮೂಲಕ ಜನಪ್ರಿಯವಾಗಿರುವ ಸೋನು ಶ್ರೀನಿವಾಸ್ ಗೌಡ ಬಿಗ್ಬಾಸ್ ಮನೆ ಸೇರಿದ್ದಾರೆ. ಇನ್ಸ್ಟಾಗ್ರಾಂ ರೀಲ್ಸ್ಗಳಿಂದಾಗಿ ಸೋನು ಶ್ರೀನಿವಾಸ್ ಗೌಡ ಬಹಳ ಜನಪ್ರಿಯ. ಅವರ ಬೆತ್ತಲೆ ವಿಡಿಯೋ ಸಹ ಒಂದು ಬಿಡುಗಡೆ ಆಗಿ ಸಖತ್ ವೈರಲ್ ಆಗಿತ್ತು. ಸಿನಿಮಾ ನಟಿಯಾಗಬೇಕು ಎಂಬ ಆಸೆಯುಳ್ಳ ಸೋನು ಗೌಡ ಈಗ ಬಿಗ್ಬಾಸ್ನಲ್ಲಿದ್ದಾರೆ.
ಮೂರನೇ ಸ್ಪರ್ಧಿ ರೂಪೇಶ್ ಶೆಟ್ಟಿ
'ಗಿರ್ಗಿಟ್' ಸಿನಿಮಾದಲ್ಲಿ ನಟಿಸಿ, ನಿರ್ದೇಶನ ಮಾಡಿರುವ ರೂಪೇಶ್ ಶೆಟ್ಟಿ ಬಿಗ್ಬಾಸ್ ಒಟಿಟಿಯ ಮೂರನೇ ಸ್ಪರ್ಧಿ. ಮಂಗಳೂರಿನ ರೂಪೇಶ್ ನಟ, ನಿರ್ದೇಶಕ ಮಾತ್ರವಲ್ಲ ಆರ್ಜೆ ಆಗಿ ಸಹ ಜನಪ್ರಿಯರು. ಮನೊರಂಜನಾ ಕ್ಷೇತ್ರದಲ್ಲಿ ಮಹತ್ತರವಾದುದನ್ನು ಸಾಧಿಸಬೇಕೆಂಬ ಕನಸು ಹೊಂದಿರುವ ರೂಪೇಶ್ ಇದೀಗ ಬಿಗ್ಬಾಸ್ ಮನೆಯಲ್ಲಿದ್ದಾರೆ. 32 ವರ್ಷದ ರೂಪೇಶ್ಗೆ ಇನ್ನೂ ವಿವಾಹವಾಗಿಲ್ಲ.
ತೀರ್ಥಳ್ಳಿ ಹುಡುಗಿ ಸ್ಪೂರ್ತಿ ಗೌಡ
ನಾಲ್ಕನೇ ಸ್ಪರ್ಧಿಯಾಗಿ ತೀರ್ಥಳ್ಳಿಯ ಹುಡುಗಿ ಸ್ಪೂರ್ತಿ ಗೌಡ ಬಿಗ್ಬಾಸ್ ಮನೆ ಸೇರಿದ್ದಾರೆ.. ಕೆಲವು ಧಾರಾವಾಹಿಗಳು ಹಾಗೂ ಪ್ಯಾಟೆ ಹುಡ್ಗಿ ಹಳ್ಳಿಗೆ ಬಂದ್ರು ಶೋ ಸೇರಿದಂತೆ ಇನ್ನೂ ಕೆಲವು ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಅವರ ಕೆಟ್ಟ ಅಭ್ಯಾಸ ಎಂದರೆ ಎಲ್ಲದನ್ನೂ ಅರ್ಧಕ್ಕೆ ಬಿಟ್ಟು ಬರುತ್ತಾರಂತೆ. ಬಿಗ್ಬಾಸ್ ಶೋ ಸಹ ಅರ್ಧಕ್ಕೆ ಬಿಟ್ಟು ಹೋಗುತ್ತಾರೊ ಕಾದು ನೋಡಬೇಕು.
ಪುಟ್ಟ ಪುಟ್ಟಗೌರಿ ಸಾನ್ಯಾ ಐಯ್ಯರ್
ಐದನೇ ಸ್ಪರ್ಧಿಯಾಗಿ ನಟಿ, ನೃತ್ಯಗಾರ್ತಿ ಸಾನ್ಯಾ ಐಯ್ಯರ್ ಬಿಗ್ಬಾಸ್ ಮನೆಗೆ ಪ್ರವೇಶಿಸಿದ್ದಾರೆ. ಕವಯಿತ್ರಿ ಆಗಿರುವ ಸಾನ್ಯಾ ಐಯ್ಯರ್ ಒಳ್ಳೆಯ ಡ್ಯಾನ್ಸರ್ ಸಹ ಹೌದು. ಸಣ್ಣ ವಯಸ್ಸಿನಲ್ಲೇ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಪುಟ್ಟಗೌರಿ ಮದುವೆ ಧಾರಾವಾಹಿಯಲ್ಲಿ ಸಣ್ಣ ವಯಸ್ಸಿನ ಪುಟ್ಟಗೌರಿಯಾಗಿ ನಟಿಸಿದ್ದಾರೆ ಸಾನ್ಯಾ. ಇವರ ತಾಯಿ ಸಿಂಗಲ್ ಮದರ್ ಆಗಿದ್ದಾರೆ. ತಂದೆ ಎಲ್ಲಿ, ತಂದೆ ಯಾರು ಎಂಬ ಬಗ್ಗೆ ಅವರು ಎದುರಿಸಿರುವ ಪ್ರಶ್ನೆಗಳು ಅವರಿಗೆ ಬಹಳ ಬೇಸರ ತರಿಸಿವೆಯಂತೆ. ಸಣ್ಣ ವಯಸ್ಸಿನಲ್ಲಿಯೇ ಚಿಕ್ಕಪ್ಪನಿಂದ, ಮಲತಂದೆಯಿಂದ ಸಾಕಷ್ಟು ನೋವನ್ನು ಅನುಭವಿಸಿರುವುದಾಗಿ ಸಾನ್ಯಾ ಹೇಳಿಕೊಂಡಿದ್ದಾರೆ.
ಕರುಣಾಜನಕ ಹಿನ್ನೆಲೆಯುಳ್ಳ ಲೋಕೇಶ್
ಆರನೇ ಸ್ಪರ್ಧಿಯಾಗಿ ಹಾಸ್ಯ ಕಲಾವಿದ ಲೋಕೇಶ್ ಬಿಗ್ಬಾಸ್ ಮನೆ ಒಳಗೆ ಪ್ರವೇಶಿಸಿದ್ದಾರೆ. ಬಹಳ ಕರುಣಾಜನಕ ಹಿನ್ನೆಲೆ ಲೋಕೇಶ್ ಅವರದ್ದು. ಭಿಕ್ಷೆ ಬೇಡಿಕೊಂಡು ಜೀವನ ಮಾಡಿದ ಲೋಕೇಶ್. ಕಬ್ಬನ್ ಪಾರ್ಕ್ನಲ್ಲಿ ಜಂಟಿಯಾಗಿ ಬಂದ ಜೋಡಿಗಳನ್ನು ಸುಲಿಗೆ ಮಾಡಿ ಹಣ ವಸೂಲಿ ಮಾಡುತ್ತಿದ್ದರಂತೆ. ಕೊನೆಗೆ ಡಾನ್ ಬಾಸ್ಕೊ ತಂಡ ಲೋಕೇಶ್ ಅವರನ್ನು ಕರೆದುಕೊಂಡು ಅವರಿಗೆ ಹೊಸ ಜೀವನ ನೀಡಿತು. ನಟನೆ, ಚಿತ್ರಕಲೆ ಎಲ್ಲವನ್ನೂ ಮಾಡಿದ್ದಾರೆ. ಬಹಳ ಸಕ್ರಿಯ ವ್ಯಕ್ತಿಯಾಗಿ ಈಗ ಬಾಳ್ವೆ ನಡೆಸುತ್ತಿದ್ದಾರೆ.
ಹುಬ್ಬಳ್ಳಿ ಹುಡುಗಿ ಅಕ್ಷತಾ
ಏಳನೇ ಸ್ಪರ್ಧಿಯಾಗಿ ಹುಬ್ಬಳ್ಳಿ ಹುಡುಗಿ ಅಕ್ಷತಾ ಬಿಗ್ಬಾಸ್ ಮನೆ ಪ್ರವೇಶ ಮಾಡಿದ್ದಾರೆ. ಪಟ-ಪಟನೇ ಮಾತನಾಡುವ ಅಕ್ಷತಾ ಮೂಲತಃ ದಾಂಡೇಲಿಯವರು. ಚೆನ್ನಾಗಿ ಕಲಿಯುತ್ತಿದ್ದ ಅಕ್ಷತಾ, ಫ್ಯಾಷನ್ ಶೋ ಒಂದರ ಸ್ಟೇಜ್ ಹತ್ತಿದ ಮೂಲಕ ಬಣ್ಣದ ಲೋಕದ ಸೆಳೆತಕ್ಕೆ ಒಳಪಟ್ಟರು. ಕೆಲವು ಸಿನಿಮಾಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸಿದ್ದಾರೆ. ಬಿಗ್ಬಾಸ್ ನಲ್ಲಿ ಭಾಗವಹಿಸುವ ಆಸಕ್ತಿ ಮೊದಲಿನಿಂದಲೂ ಅಕ್ಷತಾ ಇತ್ತಂತೆ.
ನಟ, ರ್ಯಾಪರ್ ರಾಕೇಶ್ ಅಡಿಗ
ಎಂಟನೇ ಸ್ಪರ್ಧಿಯಾಗಿ ನಟ, ರ್ಯಾಪರ್ ಆಗಿರುವ ರಾಕೇಶ್ ಅಡಿಗ ಬಿಗ್ಬಾಸ್ ಮನೆ ಪ್ರವೇಶ ಮಾಡಿದ್ದಾರೆ. ಹಲವು ವರ್ಷಗಳಿಂದಲೂ ಚಿತ್ರರಂಗದಲ್ಲಿ ಇರುವ ರಾಕೇಶ್ ಈವರೆಗೆ 13 ಸಿನಿಮಾಗಳಲ್ಲಿ ರಾಕೇಶ್ ಅಡಿಗ ನಟಿಸಿದ್ದಾರೆ. ಚಿತ್ರರಂಗದಲ್ಲಿ ಸಾಕಷ್ಟು ಏರಿಳಿತಗಳನ್ನು ರಾಕೇಶ್ ಅಡಿಗ ಕಂಡಿದ್ದಾರೆ. ಸಿನಿಮಾ ನಿರ್ದೇಶನವನ್ನೂ ಮಾಡಿರುವ ರಾಕೇಶ್ ಅಡಿಗ ಮುಂದೆ ಇನ್ನೊಂದು ಸಿನಿಮಾ ನಿರ್ದೇಶನಕ್ಕೆ ರೆಡಿಯಾಗಿದ್ದಾರೆ.
ಮಾಡೆಲ್ ಕಿರಣ್ ಯೋಗೇಶ್ವರಿ
ಒಂಬತ್ತನೇ ಸ್ಪರ್ಧಿಯಾಗಿ ಮಾಡೆಲ್ ಕಿರಣ್ ಯೋಗೇಶ್ವರಿ ಬಿಗ್ಬಾಸ್ ಮನೆಗೆ ಬಂದಿದ್ದಾರೆ. ಬಾಲ್ಯ ವಿವಾಹದಿಂದ ತಪ್ಪಿಸಿಕೊಳ್ಳಲು ಮನೆ ಬಿಟ್ಟು ಓಡಿ ಬಂದು ಬೆಂಗಳೂರಿನಲ್ಲಿ ಬದುಕು ಕಟ್ಟುಕೊಂಡಿದ್ದಾರೆ ಈ ಚೆಲುವೆ. ಕಿರಣ್ ಮನೆಯವರು, ಏಳನೇ ವಯಸ್ಸಿನಲ್ಲೇ ಮದುವೆ ಮಾಡಲು ನೋಡಿದ್ದರು, ಆಗ ಮನೆ ಬಿಟ್ಟು ಹೋಟೆಲ್ನಲ್ಲಿ ಕೆಲಸ ಮಾಡಿದರು. 25ನೇ ವರ್ಷದಲ್ಲಿ ರಲ್ಲಿ ಒಂಟಿಯಾಗಿ ಪ್ರವಾಸ ಮಾಡಿದರು. ಬೆಲ್ಲಿ ಡ್ಯಾನ್ಸ್ ಕ್ಲಾಸ್ ಸೇರಿಕೊಂಡರು. ಯಾವುದೋ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಅದನ್ನು ಯಾರೋ ನೋಡಿದ ಕಾರಣ ಅವರಿಗೆ ಮಾಡೆಲ್ ಆಗಿ ಅವಕಾಶ ದೊರಕಿತು. ಡ್ಯಾನ್ಸರ್ ಆಗಿಯೂ ಜನ ಇವರನ್ನು ಗುರಿತಿಸುತ್ತಾರೆ. ನನ್ನ ನಗು ಮುಖದ ಸಾಕಷ್ಟು ಗಟ್ಟಿ ವ್ಯಕ್ತಿತ್ವ ಇದೆ ಎಂದಿದ್ದಾರೆ ಕಿರಣ್.
ನಟಿ ಚೈತ್ರಾ ಹಳ್ಳಿಕೆರೆ
ಹತ್ತನೇ ಸ್ಪರ್ಧಿಯಾಗಿ ನಟಿ ಚೈತ್ರಾ ಹಳ್ಳಿಕೆರೆ ಮನೆ ಪ್ರವೇಶಿಸಿದ್ದಾರೆ. ರಂಗಭೂಮಿ ಕಲಾವಿದೆ ಆಗಿದ್ದ ಚೈತ್ರಾ. ಮಾಡೆಲಿಂಗ್ ಮಾಡಿದ್ದಾರೆ ನಂತರ ಸಿನಿಮಾಗಳಲ್ಲಿಯೂ ನಟಿಸಿದರು. ಒಳ್ಳೆ-ಒಳ್ಳೆ ಸಿನಿಮಾಗಳ ಅವಕಾಶ ಬಂದಿತ್ತು. ಆದರೆ ಅದೇ ಸಮಯದಲ್ಲಿ ಮದುವೆಯಾಗಿ ಸಿನಿಮಾದಿಂದ ದೂರವಾದರು. ಆದರೆ ಮದುವೆಯಲ್ಲಿ ಸಮಸ್ಯೆಗಳು ಕಾಣಿಸಿಕೊಂಡ ಕಾರಣ ಪತಿಯಿಂದ ದೂರಾಗಿದ್ದಾರೆ. ಇಬ್ಬರು ಮಕ್ಕಳಿರುವ ಚೈತ್ರಾ ಈಗ ಮತ್ತೊಮ್ಮೆ ಜೀವನ ಶುರು ಮಾಡುತ್ತಿದ್ದಾರೆ. ಅದೇ ಕಾರಣಕ್ಕೆ ಬಿಗ್ಬಾಸ್ಗೆ ಬಂದಿದ್ದಾರೆ.
ನಟ ಉದಯ್ ಸೂರ್ಯ
ಹನ್ನೊಂದನೇ ಸ್ಪರ್ಧಿಯಾಗಿ ನಟ ಉದಯ್ ಸೂರ್ಯ ಬಿಗ್ಬಾಸ್ ಮನೆಗೆ ಕಾಲಿಟ್ಟಿದ್ದಾರೆ. ಮೂಲ ಕನ್ನಡಿಗರಲ್ಲದೇ ಇದ್ದರು ಕನ್ನಡವನ್ನು ಚೆನ್ನಾಗಿ ಮಾತನಾಡುವ ಉದಯ್, ನಟನೆ ಮಾಡುತ್ತಾರೆ. ಪುಟ್ಟಗೌರಿ ಮದುವೆ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ವಿಲನ್ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಹಿಂದೆ ಬಿಗ್ಬಾಸ್ ಆಡಿಷನ್ನಲ್ಲಿ ಪಾಲ್ಗೊಂಡಿದ್ದ ಉದಯ್ ಅಲ್ಲಿಂದ ವಾಪಸ್ ಬಂದಿದ್ದರು. ಈಗ ಬಿಗ್ಬಾಸ್ ನವರೇ ಉದಯ್ ಅನ್ನು ಕರೆದಿದ್ದಾರೆ. ಗೆದ್ದೇ ಹೊರಗೆ ಬರುತ್ತೀನಿ ಎಂಬ ನಂಬಿಕೆಯಲ್ಲಿದ್ದಾರೆ ಉದಯ್.
ಮಾರಿಮುತ್ತು ಮೊಮ್ಮಗಳು ಬಿಗ್ಬಾಸ್ನಲ್ಲಿ
ಹನ್ನೆರಡನೇ ಸ್ಪರ್ಧಿಯಾಗಿ ನಟಿ, ಮಾಜಿ ಡಾನ್ ಮಾರಿಮುತ್ತು ಮೊಮ್ಮಗಳು ಜಯಶ್ರೀ ಆಗಮಿಸಿದ್ದಾರೆ. ಮಾರಿಮುತ್ತು ಮೊಮ್ಮಗಳಾಗಿದ್ದರೂ ಅಜ್ಜಿಗೂ ಮೊಮ್ಮಗಳಿಗೂ ಅಜಗಜಾಂತರ ವ್ಯತ್ಯಾಸ. ಎಂಜಿನಿಯರ್ ಆಗಬೇಕು ಎಂದುಕೊಂಡಿದ್ದ ಜಯಶ್ರೀ ಮಾರಿಮುತ್ತು, ಅಜ್ಜಿಯನ್ನು ಆದರ್ಶವಾಗಿಟ್ಟುಕೊಂಡು ನಟನೆ ಪ್ರಯತ್ನಿಸಿದರು. ಅದಕ್ಕಾಗಿ ಮನೆ ಬಿಟ್ಟು ಸಹ ಬಂದಿದ್ದರು. ನಂತರ ಕಾಸ್ಮೆಟಿಕ್ ಉದ್ಯಮಕ್ಕೆ ಸಹ ಕಾಲಿಟ್ಟರು. ಈಗ ಚೆನ್ನಾಗಿ ಉದ್ಯಮ ನಡೆಸುತ್ತಿದ್ದಾರೆ. ಮೂರು ಬ್ರ್ಯಾಂಚ್ ಮಾಡಿದ್ದಾರೆ.
ರಾಜಕಾರಣಿ, ನಟ ಅರ್ಜುನ್ ರಮೇಶ್
ಹದಿಮೂರನೇ ಕಂಟೆಸ್ಟ್ ಆಗಿ ಬಿಗ್ಬಾಸ್ ಮೇಲೆ ವೇದಿಕೆ ಮೇಲೆ ಬಂದವರು ಅರ್ಜುನ್ ರಮೇಶ್. ನಟ, ರಾಜಕಾರಣಿ ಎರಡೂ ಆಗಿರುವ ಅರ್ಜುನ್ ರಮೇಶ್ ಪುರಸಭಾ ಸದಸ್ಯರಾಗಿದ್ದಾರೆ. ಇವರ ತಂದೆ ವಿಧಾನ ಪರಿಷತ್ ಸದಸ್ಯರಾಗಿದ್ದರು. ಅದೇ ಆದರ್ಶದಲ್ಲಿ ಇವರೂ ಸಹ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಇವರು ಮಾಡಿರುವ ಶಿವನ ಪಾತ್ರ ಅವರನ್ನು ಬದಲಾಯಿಸಿತಂತೆ. ರಾಜಕೀಯ ಹಾಗೂ ನಟನಾ ವೃತ್ತಿ ಎರಡರಲ್ಲೂ ಎತ್ತರವಾದ ಕನಸುಗಳನ್ನು ಇಟ್ಟುಕೊಂಡಿದ್ದಾರೆ.
ಯುವ ಪ್ರೇಮಿಗಳು ಬಿಗ್ಬಾಸ್ ಮನೆಯಲ್ಲಿ
ಹದಿನಾಲ್ಕು ಹಾಗೂ ಹದಿನೈದನೇ ಕಂಟೆಸ್ಟ್ ಆಗಿ ಫುಟ್ಬಾಲ್ ಆಟಗಾರ್ತಿ ನಂದಿನಿ ಅಲಿಯಾಸ್ ನಂದು ಹಾಗೂ ಮಾಡೆಲ್ ಆಗಿರುವ ಜಸ್ವಂತ್ ಜೋಡಿಗಳಿಬ್ಬರು ಒಟ್ಟಿಗೆ ಬಿಗ್ಬಾಸ್ ಮನೆ ಪ್ರವೇಶಿಸಿದರು. ನಂದು ಹಾಗೂ ಜಸ್ವಂತ್ ಇಬ್ಬರು ಅಡ್ವೇಂಚರಿಸ್ಟ್ಗಳಾಗಿದ್ದಾರೆ. ಎಂಟಿವಿ ರೋಡೀಸ್ನಲ್ಲಿ ಇಬ್ಬರು ಭಾಗವಹಿಸಿದ್ದರು. ಅಲ್ಲಿ ನಂದಿಸಿ ಗೆದ್ದರೆ ಜಸ್ವಂತ್ ಸೆಕೆಂಡ್ ರನ್ನರ್ ಅಪ್ ಆಗಿದ್ದರು. ಎಂಟಿವಿ ಮೂಲಕ ಉತ್ತರ ಭಾರತದಲ್ಲಿ ಗೆದ್ದಾಯಿತು ಈಗ ದಕ್ಷಿಣ ಭಾರತದಲ್ಲಿ ಹೆಸರು ಮಾಡಲೆಂದು ಇಲ್ಲಿಗೆ ಬಂದಿದ್ದಾರಂತೆ ಈ ಜೋಡಿ. ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದಾರೆ.
ಪತ್ರಕರ್ತ ಸೋಮಣ್ಣ ಮಾಚಿಮಾಡ
ಪತ್ರಕರ್ತ ಸೋಮಣ್ಣ ಮಾಚಿಮಾಡ ಹದಿನಾರನೇ ಸ್ಪರ್ಧಿಯಾಗಿ ಬಿಗ್ಬಾಸ್ ಮನೆ ಪ್ರವೇಶಿಸಿದ್ದಾರೆ. ಹಲವು ಸಿನಿಮಾ ತಾರೆಯರು, ರಾಜಕೀಯ ರಂಗದ ಧುರಿಣರನ್ನು ಸೋಮಣ್ಣ ಮಾಚಿಮಾಡ ಸಂದರ್ಶನ ಮಾಡಿದ್ದಾರೆ. ಆದರೆ ಈಗ ತಮಗೆ ಭಿನ್ನತೆ ಬೇಕಿದೆ ಎಂಬ ಕಾರಣಕ್ಕೆ ಬಿಗ್ಬಾಸ್ ಮನೆ ಸೇರಿದ್ದಾರೆ. ತಮ್ಮ ಮದುವೆ ಮುರಿದು ಹೋಗಿದ್ದಕ್ಕೆ ಸೋಮಣ್ಣ ಬಹಳ ಬೇಸರವನ್ನು ಶೋ ನಲ್ಲಿ ವ್ಯಕ್ತಪಡಿಸಿದ್ದಾರೆ.