30 ದಿನಕ್ಕೆ ಸಿನಿಮಾ ಓಟಿಟಿಗೆ ಬರೋದು ಒಳ್ಳೆ ಬೆಳವಣಿಗೆ ಅಲ್ಲ; ನಿರ್ದೇಶಕ ಶಶಾಂಕ್ ಕಳವಳ
ದೊಡ್ಡ ದೊಡ್ಡ ಸಿನಿಮಾಗಳೇ ತೆರೆಕಂಡ ತಿಂಗಳಿಗೆ ಓಟಿಟಿಗೆ ಬರ್ತಿವೆ. ಒಂದು ಸಿನಿಮಾ ಬಿಡುಗಡೆಯಾಗಿ ಒಳ್ಳೆ ಅಭಿಪ್ರಾಯ ಬಂದು ಜನ ಚಿತ್ರಮಂದಿರಕ್ಕೆ ಹೋಗಲು ನಿರ್ಧರಿಸಲು ಸಮಯ ಬೇಕು. ಆದರೆ ಇದು ವೇಗದ ಜಮಾನ. ಎಲ್ಲವೂ ಬೇಗ ಎನ್ನುವಂತಾಗಿದೆ. ಜನ ಥಿಯೇಟರ್ಗೆ ಹೋಗೋಣ ಎಂದು ಮನಸ್ಸು ಮಾಡುವ ವೇಳೆಗೆ ಸಿನಿಮಾ ಸ್ಮಾಲ್ಸ್ಕ್ರೀನ್ಗೆ ಬಂದ್ರೆ ಏನು ಪ್ರಯೋಜನ. ಇದು ಜನ ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡುವ ಸಂಸ್ಕೃತಿಯಲ್ಲೇ ಅಲುಗಾಡಿಸುತ್ತಿದೆ.
ರಜನಿಕಾಂತ್ ನಟನೆಯ 'ಕೂಲಿ', ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿದ 'ಕಾಂತಾರ-1' ಸಿನಿಮಾ 28 ದಿನಕ್ಕೆ ಓಟಿಟಿಗೆ ಬಂದಿದ್ದು ಗೊತ್ತೇಯಿದೆ. ಸಧಬಿರುಚಿ ಚಿತ್ರಗಳ ನಿರ್ದೇಶಕ ಶಶಾಂಕ್ ಹೊಸ ಸಿನಿಮಾ 'ಬ್ರ್ಯಾಟ್' ಕೂಡ 28 ದಿನಕ್ಕೆ ಓಟಿಟಿಗೆ ಬಂದು ಅಚ್ಚರಿ ಮೂಡಿಸಿತ್ತು. ಇಷ್ಟು ಬೇಗ ಯಾಕೆ ಓಟಿಟಿಯಲ್ಲಿ ಸಿನಿಮಾ ರಿಲೀಸ್ ಮಾಡಿದ್ರಿ ಎಂದು ಕೆಲವರು ಕೇಳ್ತಿದ್ದಾರೆ, ನಿಜಕ್ಕೂ ಇದು ಒಳ್ಳೆ ಬೆಳವಣಿಗೆ ಅಲ್ಲ ಎಂದು ಸ್ವತಃ ನಿರ್ದೇಶಕ ಶಶಾಂಕ್ ಹೇಳಿದ್ದಾರೆ. ಫಿಲ್ಮಿಬೀಟ್ ಕನ್ನಡ ಜೊತೆ ಈ ಬಗ್ಗೆ ವಿವರವಾಗಿ ಮಾತನಾಡಿದ್ದಾರೆ.

ನಿರ್ದೇಶಕ ಶಶಾಂಕ್ ಮಾತನಾಡಿ "ಈಗ ಯಾವುದು ನಮ್ಮ ಹಿಡಿತದಲ್ಲಿ ಇಲ್ಲ. ನಿಜ ಹೇಳಬೇಕು ಅಂದ್ರೆ ಇದು ರಾಂಗ್ ಟ್ರೆಂಡ್. ಮೊದಲಿಗೆ 'ಕಾಂತಾರ-1' ಸಿನಿಮಾ ಹೀಗೆ 30 ದಿನಕ್ಕೆ ಓಟಿಟಿಗೆ ಬಂತು. ಹಾಗಾಗಿ ಎಲ್ಲರಿಗೂ ಅನಿವಾರ್ಯ ಎನ್ನುವಂತಾಯಿತು. ನಮಗೂ ಬೇರೆ ದಾರಿ ಇರಲಿಲ್ಲ. ಸಿನಿಮಾ ಥ್ರಿಯೇಟ್ರಿಕಲ್ ಬಿಸಿನೆಸ್ ಎರಡ್ಮೂರು ವಾರಕ್ಕೆ ಬಹುತೇಕ ಮುಗಿದು ಹೋಗುತ್ತೆ. ಬ್ಯುಸಿನೆಸ್ ಲೆಕ್ಕದಲ್ಲಿ ನೋಡಿದ್ರೆ, ಸಿನಿಮಾ ಗೆದ್ದು 4 ವಾರಕ್ಕೆ ಓಟಿಟಿಯಲ್ಲಿ ಬಿಡುಗಡೆ ಆಯಿತು. ಇದು ಒಂದು ಆಂಗಲ್. ಮೇಕರ್ಸ್ ಆಗಿ ನಾವು ಆರ್ಥಿಕವಾಗಿ ಯಾವುದು ಸರಿ ಎಂದು ತೆಗೆದುಕೊಂಡ ನಿರ್ಧಾರ ಇದು. ಆದರೆ ದೀರ್ಘಾವಧಿಯಲ್ಲಿ ನೋಡಿದರೆ ಇದು ಮುಂದೆ ಥಿಯೇಟ್ರಿಕಲ್ ಬ್ಯುಸಿನೆಸ್ಗೆ ಪೆಟ್ಟು ಕೊಡುತ್ತದೆ ಎನ್ನುವ ನನ್ನ ಅಭಿಪ್ರಾಯ ಎಂದು ತಿಳಿಸಿದ್ದಾರೆ.
ಹೀಗೆ 30 ದಿನಕ್ಕೆ ಸಿನಿಮಾಗಳು ಓಟಿಟಿಗೆ ಬಂದುಬಿಟ್ಟರೆ ಜನ ಚಿತ್ರಮಂದಿರಕ್ಕೆ ಹೋಗಲು ಹಿಂದೇಟು ಹಾಕುತ್ತಾರೆ. ಓಟಿಟಿಗೆ ಬರುತ್ತಲ್ಲ, ನೋಡಿದ್ರೆ ಆಯ್ತು ಬಿಡು ಎನ್ನುವ ಮನಸ್ಥಿತಿ ಬಂದುಬಿಡುತ್ತದೆ ಎಂದು ಶಶಾಂಕ್ ವಿಶ್ಲೇಷಿಸಿದ್ದಾರೆ. "ಸೋತ ಸಿನಿಮಾಗಳ ಬಗ್ಗೆ ಯಾರು ತಲೆಕೆಡಿಸಿಕೊಳ್ಳಲ್ಲ. ಆದರೆ ಇದೇ ರೀತಿ ಹಿಟ್ ಆಗುವ ಸಿನಿಮಾಗಳು ಬೇಗ ಓಟಿಟಿಗೆ ಬಂದ್ರೆ ಸೈಕಲಾಜಿಕಲಿ ಜನ ಚಿತ್ರಮಂದಿರಗಳಿಗೆ ಬರಲು ಹಿಂದೇಟು ಹಾಕುತ್ತಾರೆ. 'ಕಾಂತಾರ', 'ಕೆಜಿಎಫ್', 'ಡೆವಿಲ್', 'ಮಾರ್ಕ್' ರೀತಿಯ ದೊಡ್ಡ ಸಿನಿಮಾಗಳನ್ನು ತೆರೆಮೇಲೆ ನೋಡಲು ಜನ ಬಯಸುತ್ತಾರೆ. ಹಾಗಾಗಿ ಚಿತ್ರಮಂದಿರಗಳಿಗೆ ಬರ್ತಾರೆ. ಮೀಡಿಯಂ ಬಜೆಟ್ ಸಿನಿಮಾಗಳು, ಹೊಸಬರ ಸಿನಿಮಾಗಳಿಗೆ ಇದು ಸಮಸ್ಯೆ ಆಗುತ್ತೆ. 4 ವಾರಕ್ಕೆ ಓಟಿಟಿಗೆ ಬಂದಾಗ ನೋಡೋಣ ಬಿಡು ಎಂದು ಭಾವಿಸಲು ಆರಂಭಿಸಿದರೆ ಜನ ಚಿತ್ರಮಂದಿರಕ್ಕೆ ಬರುವ ಸಂಸ್ಕೃತಿ ಕಮ್ಮಿ ಆಗುತ್ತದೆ" ಎಂದು ವಿವರಿಸಿದ್ದಾರೆ.

ಚಿತ್ರರಂಗದ ಎಲ್ಲರೂ ಒಗ್ಗಟ್ಟಾಗಿ ನಿಂತು ಪ್ರಯತ್ನಿಸಿದರೆ ಏನಾದರೂ ಬದಲಾವಣೆ ಸಾಧ್ಯ. ನಮ್ಮ ಸಿನಿಮಾ ಕೂಡ 30 ದಿನಕ್ಕೆ ಓಟಿಟಿಗೆ ಬಂದಿದೆ. ನಾವು ಕೂಡ ಏನು ಮಾಡೋಕೆ ಸಾಧ್ಯವಾಗ್ಲಿಲ್ಲ ಎಂದು ಶಶಾಂಕ್ ಹೇಳಿದ್ದಾರೆ. "ಒಬ್ಬ ನಿರ್ಮಾಪಕರಿಗೆ ತಮ್ಮ ಸಿನಿಮಾ ಆದಾಯವೇ ಮುಖ್ಯವಾಗುತ್ತದೆ. ಓಟಿಟಿಯವರು ಹೇಳಿದಂತೆ ಕೇಳಬೇಕು, 28 ದಿನಕ್ಕೆ ರಿಲೀಸ್ ಮಾಡಿದ್ರೆ ಮಾತ್ರ ಇಷ್ಟು ಹಣ ಕೊಡ್ತೀನಿ ಎನ್ನುತ್ತಾರೆ. ಅದನ್ನು ನಿರ್ಮಾಪಕರು ಒಪ್ಪಲೇಬೇಕಾಗುತ್ತದೆ. ಬಾಲಿವುಡ್ನಲ್ಲಿ ಕೊಂಚಮಟ್ಟಿಗೆ ಇದನ್ನು ತಡೆದಿದ್ದಾರೆ. ನಿರ್ಮಾಪಕರ ಸಂಘದಿಂದ ಈ ಬಗ್ಗೆ ಕ್ರಮ ಕೈಗೊಂಡು ಓಟಿಟಿ ಸಂಸ್ಥೆಗಳನ್ನು ಒಪ್ಪಿಸಿದ್ದಾರೆ. 8 ವಾರದ ಬಳಿಕ ಹಿಂದಿ ಸಿನಿಮಾ ಓಟಿಟಿಗೆ ಬರುತ್ತದೆ. ಇದು ನಮ್ಮ ಚಿತ್ರರಂಗದಲ್ಲಿ ಕೂಡ ಆಗಬೇಕು" ಎಂದು ಶಶಾಂಕ್ ಆಗ್ರಹಿಸಿದ್ದಾರೆ.
ನಮ್ಮ 'ಬ್ರ್ಯಾಟ್' ಸಿನಿಮಾ ಚಿತ್ರಮಂದಿರಗಳಲ್ಲಿ ಗೆಲ್ತು, ಓಟಿಟಿಯಲ್ಲಿ ಕೂಡ ಒಳ್ಳೆ ರೆಸ್ಪಾನ್ಸ್ ಪಡೆದುಕೊಳ್ತು ಅದಕ್ಕೆ ವೈಯಕ್ತಿಕವಾಗಿ ನನಗೆ ಖುಷಿಯಿದೆ. ಆದರೆ ಚಿತ್ರರಂಗದ ದೃಷ್ಟಿಯಲ್ಲಿ ಬಬ್ಬ ಫಿಲ್ಮ್ ಮೇಕರ್ ಆಗಿ ನೋಡಿದಾಗ ಭವಿಷ್ಯ ನೆನಪಿಸಿಕೊಂಡರೆ ನನಗೆ ಭಯವಾಗುತ್ತದೆ ಎಂದು ಶಶಾಂಕ್ ಕಳವಳ ವ್ಯಕ್ತಪಡಿಸಿದ್ದಾರೆ. "ಪ್ರೇಕ್ಷಕರದ್ದು ಯಾವುದೇ ತಪ್ಪಿಲ್ಲ. ಅವರು ಆ ರೀತಿ ತೀರ್ಮಾನಕ್ಕೆ ಬರಲು ನಾವೇ ಕಾರಣ. 4 ವಾರಕ್ಕೆ ಸಿನಿಮಾ ಓಟಿಟಿಗೆ ಬರುತ್ತದೆ ಎನ್ನುವಂತಿದ್ದರೆ ಯಾಕೆ ಚಿತ್ರಮಂದಿರಕ್ಕೆ ಬರ್ತಾರೆ. ಸಿನಿಮಾಗಳು ಪ್ರೇಕ್ಷಕರ ಬರ ಎದುರಿಸಲು ಇದು ಕೂಡ ಒಂದು ಕಾರಣ" ಎಂದು ಶಶಾಂಕ್ ಸ್ಪಷ್ಟಪಡಿಸಿದ್ದಾರೆ.
ಇದು ಒಬ್ಬರಿಂದ ಬದಲಾವಣೆ ತರಲು ಸಾಧ್ಯವಿಲ್ಲ. ಚಿತ್ರರಂಗದಲ್ಲಿ ಎಲ್ಲರೂ ಒಗ್ಗಟ್ಟಾಗಬೇಕು ಎಂದು ಶಶಾಂಕ್ ಸಲಹೆ ನೀಡಿದ್ದಾರೆ. "ಇದು ಇಂಡಸ್ಟ್ರಿ ಸಮಸ್ಯೆ. ಥ್ರಿಯೇಟ್ರಿಕಲ್ ಕಲ್ಚರ್ ಉಳಿಬೇಕು, ಜನ ಚಿತ್ರಮಂದಿರಕ್ಕೆ ಬರಬೇಕು ಅಂದ್ರೆ ಎಲ್ಲರೂ ಒಟ್ಟಾಗಿ ನಿರ್ಧಾರ ತೆಗೆದುಕೊಳ್ಳಬೇಕು. ನಮ್ಮ ನಿರ್ಮಾಪಕರ ಸಂಘ, ವಾಣಿಜ್ಯ ಮಂಡಳಿ ಚರ್ಚಿಸಿ ಓಟಿಟಿಗಳ ಮೇಲೆ ಒತ್ತಡ ತರಬೇಕು. ಎಲ್ಲರೂ ಒಗ್ಗಟ್ಟಾಗಿ ನಿಂತರೆ ಓಟಿಟಿ ಸಂಸ್ಥೆಗಳನ್ನು ಬಾಗಿಸಬಹುದು, ಒಪ್ಪಿಸಬಹುದು. ಎಲ್ಲರೂ ಸಿನಿಮಾ ಕೊಡಲ್ಲ ಎಂದು ನಿಂತರೆ ಅವ್ರು ಒಪ್ಪಲೇಬೇಕಾಗುತ್ತದೆ. ಮನಸ್ಸಿದ್ದರೆ ಮಾರ್ಗ. ನಮ್ಮ ಸಿನಿಮಾದಿಂದ ಲಾಭ ಆಗಿದೆ. ಆದರೆ ಸಿನಿಮಾ ದೃಷ್ಟಿಯಿಂದ ಇದು ಸರಿಯಲ್ಲ. ಇದು ಹೀಗೆ ಮುಂದುವರೆದರೆ ಸಿನಿಮಾ ಸಾಯುತ್ತದೆ" ಎಂದು ನಿರ್ದೇಶಕ ಶಶಾಂಕ್ ಪುನರುಚ್ಚರಿಸಿದ್ದಾರೆ.


Click it and Unblock the Notifications











