ಭರ್ಜರಿ ಬೆಲೆಗೆ ದರ್ಶನ್ 'ಕಾಟೇರ' ಡಿಜಿಟಲ್ ಹಾಗೂ ಸ್ಯಾಟಲೈಟ್ ರೈಟ್ಸ್ ಮಾರಾಟ
ಕಳೆದೆರಡು ದಿನಗಳಿಂದ 'ಕಾಟೇರ' ಸಿನಿಮಾ ಭಾರೀ ಸುದ್ದಿಯಲ್ಲಿದೆ. ರಿಲೀಸ್ ಡೇಟ್ ಬಗ್ಗೆ ಪರ ವಿರೋಧ ಚರ್ಚೆ ನಡೀತಿದೆ. ಡಿಸೆಂಬರ್ 28ಕ್ಕೆ ಸಿನಿಮಾ ರಿಲೀಸ್ ಬಗ್ಗೆ ಕೆಲವರು ಬೇಸರ ವ್ಯಕ್ತಪಡಿಸುತ್ತಿದ್ದರೆ ಮತ್ತೆ ಕೆಲವರು ಒಂದು ಕೈ ನೋಡೇಬಿಡೋಣ ಎನ್ನುತ್ತಿದ್ದಾರೆ. ಚಿತ್ರತಂಡಕ್ಕೆ ಮಾತ್ರ ತಮ್ಮ ಸಿನಿಮಾ ಬಗ್ಗೆ ಬಹಳ ಭರವಸೆ ಇದೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಆಕ್ಷನ್ ಎಂಟರ್ಟೈನರ್ ಚಿತ್ರಕ್ಕೆ ತರುಣ್ ಸುಧೀರ್ ಆಕ್ಷನ್ ಕಟ್ ಹೇಳಿದ್ದಾರೆ. ರಾಕ್ಲೈನ್ ಪ್ರೊಡಕ್ಷನ್ಸ್ ಬ್ಯಾನರ್ನಲ್ಲಿ ಸಿನಿಮಾ ನಿರ್ಮಾಣವಾಗಿದೆ. ಹಳ್ಳಿ ಸೊಗಡಿನ ಕತೆಯನ್ನು ಚಿತ್ರದಲ್ಲಿ ಹೇಳಲಾಗ್ತಿದೆ. ಅದಕ್ಕಾಗಿ 70ರ ದಶಕದ ಕಾಲಘಟ್ಟವನ್ನು ಚಿತ್ರದಲ್ಲಿ ಕಟ್ಟಿಕೊಡಲಾಗಿದೆ. ದರ್ಶನ್ ಜೋಡಿಯಾಗಿ ಆರಾಧನಾ ನಟಿಸಿದ್ದಾರೆ.

ಜಗಪತಿ ಬಾಬು, ಶ್ರೀನಿವಾಸ್ ಮೂರ್ತಿ, ಬಿರಾದಾರ್, ಶ್ರುತಿ, ಕುಮಾರ್ ಗೋವಿಂದ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಸಣ್ಣ ಝಲಕ್ನಿಂದಲೇ ಸಿನಿಮಾ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಸದ್ಯ ಟೀಸರ್ ಯೂಟ್ಯೂಬ್ ಟ್ರೆಂಡಿಂಗ್ನ ನಂಬರ್ ವನ್ ಸ್ಥಾನದಲ್ಲಿದೆ. ದರ್ಶನ್ ಬಿಡಿ ಹಚ್ಚುವ ಸ್ಟೈಲ್ ಅಭಿಮಾನಿಗಳ ಮನಗೆದ್ದಿದೆ. ಅಭಿಮಾನಿಗಳು ಅದೇ ರೀತಿ ಬೀಡಿ ಸೇದುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಕಳೆದ ವರ್ಷ ವರಲಕ್ಷ್ಮಿ ಹಬ್ಬದ ಸಂಭ್ರಮದಲ್ಲಿ 'ಕಾಟೇರ' ಸಿನಿಮಾ ಸೆಟ್ಟೇರಿತ್ತು. ಆದರೆ ಆಗ ಟೈಟಲ್ ಫಿಕ್ಸ್ ಆಗಿರಲಿಲ್ಲ. ಈ ವರ್ಷ ದರ್ಶನ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಟೈಟಲ್ ಸಮೇತ ಮೋಷನ್ ಪೋಸ್ಟರ್ ರಿಲೀಸ್ ಆಗಿತ್ತು. ಖಡಕ್ ಟೈಟಲ್ನಿಂದಲೇ ಸಿನಿಮಾ ಸದ್ದು ಮಾಡ್ತಿದೆ. 'ಉಳುವವವನೆ ಭೂಮಿಯ ಒಡೆಯ' ಕಾಯ್ದೆಯ ಸುತ್ತಾ 'ಕಾಟೇರ' ಸಿನಿಮಾ ಕತೆ ಸುತ್ತಲಿದೆ. ವಿ. ಹರಿಕೃಷ್ಣ ಸಂಗೀತ, ಸುಧಾಕರ್ ರಾಜ್ ಛಾಯಾಗ್ರಹಣ, ಮಾಸ್ತಿ ಸಂಭಾಷಣೆ ಚಿತ್ರಕ್ಕಿದೆ.
'ರಾಬರ್ಟ್' ಸಿನಿಮಾ ಮಾಡಿ ದರ್ಶನ್- ತರುಣ್ ಜೋಡಿ ಗೆದ್ದಿತ್ತು. ಹೆಚ್ಚು ಕಮ್ಮಿ ಅದೇ ತಂಡ 'ಕಾಟೇರ' ಚಿತ್ರಕ್ಕೂ ಕೆಲಸ ಮಾಡಿದೆ. ಸದ್ಯ ಚಿತ್ರತಂಡ ಹೈದರಾಬಾದ್ನಲ್ಲಿ ಬೀಡು ಬಿಟ್ಟಿದ್ದು ಚಿತ್ರಕ್ಕೆ ಫೈನಲ್ ಟಚ್ ಸಿಗುತ್ತಿದೆ. ಇನ್ನೊಂದು ವಾರದಲ್ಲಿ ಫಸ್ಟ್ ಕಾಪಿ ಸಿದ್ಧಪಡಿಸಿಕೊಂಡು ಸೆನ್ಸಾರ್ ಮಂಡಳಿ ಕದ ತಟ್ಟುವ ಲೆಕ್ಕಾಚಾರದಲ್ಲಿದೆ ಚಿತ್ರತಂಡ.
ಇದೆಲ್ಲದರ ನಡುವೆ ಜೀ ಸಂಸ್ಥೆ 'ಕಾಟೇರ' ಚಿತ್ರದ ಡಿಜಿಟಲ್, ಸ್ಯಾಟಲೈಟ್ ರೈಟ್ಸ್ ಕೊಂಡುಕೊಂಡಿದೆ ಎನ್ನಲಾಗ್ತಿದೆ. ದರ್ಶನ್ ಸಿನಿಮಾಗಳಿಗಿರುವ ಕ್ರೇಜ್ಗೆ ತಕ್ಕಂತೆ ಡೀಲ್ ನಡೆದಿದೆ ಎನ್ನುವ ಮಾತುಗಳು ಕೇಳಿಬರ್ತಿದೆ. ಡಿಸೆಂಬರ್ 28ಕ್ಕೆ ಸಿನಿಮಾ ರಿಲೀಸ್ ಆಗಲಿದೆ. 48 ದಿನಗಳ ಬಳಿಕ ಜೀ5ನಲ್ಲಿ ಸ್ಟ್ರೀಮಿಂಗ್ ಆಗುವ ಸಾಧ್ಯತೆಯಿದೆ. ಫೆಬ್ರವರಿ 16ಕ್ಕೆ ದರ್ಶನ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಸಿನಿಮಾ ಓಟಿಟಿಗೆ ಬರಬಹುದು. ಅದಕ್ಕಿಂತ ಮುಂಚೆ ಬಂದರೂ ಅಚ್ಚರಿ ಪಡುವಂತಿಲ್ಲ. ಯುಗಾದಿ ಹಬ್ಬಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಸಿನಿಮಾ ಪ್ರೀಮಿಯರ್ ಆಗುವ ಸಾಧ್ಯತೆಯಿದೆ.
ಇನ್ನೊಂದು ತಿಂಗಳಲ್ಲಿ 'ಕಾಟೇರ' ಪ್ರಚಾರ ಸಾಧ್ಯನಾ? ಎಂದು ಕೆಲವರು ಕೇಳುತ್ತಿದ್ದಾರೆ. ಯಾಕೆ ಸಾಧ್ಯವಿಲ್ಲ ಎಂದು ನಿರ್ದೇಶಕರು ಹೇಳಿದ್ದಾರೆ. ರೈತರ ಕುರಿತಾದ ಸಿನಿಮಾ ಆಗಿರುವುದರಿಂದ ಡಿಸೆಂಬರ್ 23ರಂದು ರೈತರ ದಿನದ ಸಂಭ್ರದದಲ್ಲಿ 'ಕಾಟೇರ' ರಿಲೀಸ್ ಆಗುವ ಸಾಧ್ಯತೆಯಿದೆ. ಅದಕ್ಕೂ ಮುನ್ನ ಒಂದೊಂದಾಗಿ ಸಾಂಗ್ಸ್ ರಿವೀಲ್ ಆಗಲಿದೆ.
ದರ್ಶನ್ ಈಗಾಗಲೇ 'ಡೆವಿಲ್' ಸಿನಿಮಾ ಮುಹೂರ್ತ ನೆರವೇರಿಸಿದ್ದಾರೆ. 'ಕಾಟೇರ' ಸಿನಿಮಾ ಆದಷ್ಟು ಬೇಗ ಮುಗಿಸಿ ಮುಂದಿನ ಸಿನಿಮಾ ಚಿತ್ರೀಕರಣದಲ್ಲಿ ಭಾಗಿ ಆಗಲಿದ್ದಾರೆ. ಅಂದಹಾಗೆ ಮಿಲನಾ ಪ್ರಕಾಶ್ ಆ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ. ಅದು ಪಕ್ಕಾ ಆಕ್ಷನ್ ಎಂಟರ್ಟೈನರ್ ಸಿನಿಮಾ ಆಗಿರಲಿದೆ.


Click it and Unblock the Notifications











