Case of Kondana: ಓಟಿಟಿಗೆ ಬಂತು ವಿಜಯ್ ರಾಘವೇಂದ್ರ, ಭಾವನಾ ಕ್ರೈಂ ಥ್ರಿಲ್ಲರ್': ಕುಳಿತಲ್ಲೇ ಸಿನಿಮಾ ನೋಡಿ
ವಿಜಯ ರಾಘವೇಂದ್ರ ಹಾಗೂ ಭಾವನಾ ಮೆನನ್ ನಟನೆಯ 'ಕೇಸ್ ಆಫ್ ಕೊಂಡಾಣ' ಸಿನಿಮಾ ಇತ್ತೀಚೆಗೆ ತೆರೆಕಂಡಿತ್ತು. ಈ ಕ್ರೈಂ ಥ್ರಿಲ್ಲರ್ ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. ಆದರೆ ಬಾಕ್ಸಾಫೀಸ್ನಲ್ಲಿ ದೊಡ್ಡಮಟ್ಟದಲ್ಲಿ ಸದ್ದು ಮಾಡಲಿಲ್ಲ. ಇದೀಗ ದಿಢೀರನೆ ಸಿನಿಮಾ ಓಟಿಟಿಗೆ ಬಂದಿದೆ.
ದೇವಿ ಪ್ರಸಾದ್ ಶೆಟ್ಟಿ 'ಕೇಸ್ ಆಫ್ ಕೊಂಡಾಣ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ವಿಜಯ್ ರಾಘವೇಂದ್ರ ಹಾಗೂ ದೇವಿ ಪ್ರಸಾದ್ ಶೆಟ್ಟಿ ಇದಕ್ಕೂ ಮುನ್ನ 'ಸೀತಾರಾಮ್ ಬಿನೋಯ್' ಸಿನಿಮಾ ಮಾಡಿ ಗೆದ್ದಿದ್ದರು. ಆ ಚಿತ್ರ ಕೂಡ ಥಿಯೇಟರ್ಗಳಲ್ಲಿ ದೊಡ್ಡದಾಗಿ ಗೆಲ್ಲದಿದ್ದರೂ ಓಟಿಟಿ ಹಾಗೂ ಟಿವಿಯಲ್ಲಿ ಪ್ರಸಾರವಾಗಿ ವೀಕ್ಷಕರ ಮನಗೆದ್ದಿತ್ತು.

ಕನ್ನಡದಲ್ಲಿ ಕ್ರೈಂ ಥ್ರಿಲ್ಲರ್ ಸಿನಿಮಾಗಳ ಸಂಖ್ಯೆ ಕಮ್ಮಿ. ಆಗೊಮ್ಮೆ ಈಗೊಮ್ಮೆ ಇಂತಹ ಪ್ರಯತ್ನ ನಡೆಯುತ್ತದೆ. ಇತ್ತೀಚೆಗೆ ವಿಜಯ್ ರಾಘವೇಂದ್ರ ಇಂತಹ ಕಥೆಗಳತ್ತ ಮುಖ ಮಾಡಿದ್ದಾರೆ. ಗಂಭೀರ ಪಾತ್ರಗಳಲ್ಲಿ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಇನ್ನು ಜಾಕಿ ಭಾವನಾ ಕೂಡ 'ಕೇಸ್ ಆಫ್ ಕೊಂಡಾಣ' ಚಿತ್ರದಲ್ಲಿ ನಟಿಸಿದ್ದು ಕುತೂಹಲ ಮೂಡಿಸಿತ್ತು. ಖುಷಿ, ರಂಗಾಯಣ ರಘು, ಬಾಲ ರಾಜ್ವಾಡಿ, ಸಂದರ್ ರಾಜ್ ಕೂಡ ತಾರಾಗಣದಲ್ಲಿದ್ದಾರೆ.
'ಕೇಸ್ ಆಫ್ ಕೊಂಡಾಣ' ಚಿತ್ರದಲ್ಲಿ ಮೂರು ಬೇರೆ ಬೇರೆ ಕಥೆಗಳು ಕೊನೆಗೆ ಒಂದು ಕಡೆ ಸೇರಿ ಪ್ರೇಕ್ಷಕರಿಗೆ ಥ್ರಿಲ್ ಕೊಡುತ್ತದೆ. ಆ ಮೂರು ಕಥೆಗಳಿಗೆ ಕೇಂದ್ರ ಬಿಂದು ಆಗುವುದು ಎಎಸ್ಐ ವಿಲ್ಸನ್. ದೇವಿ ಪ್ರಸಾದ್ ಶೆಟ್ಟಿ ನಿರೂಪಣೆ ಇಷ್ಟವಾಗುತ್ತದೆ. ಇನ್ನುಳಿದಂತೆ ಗಗನ್ ಬರೇರಿಯಾ ಹಿನ್ನೆಲೆ ಸಂಗೀತ ಹಾಗೂ ವಿಶ್ವಜಿತ್ ರಾವ್ ಛಾಯಾಗ್ರಹಣ ಹೈಲೆಟ್ ಎನಿಸಿಕೊಂಡಿದೆ. ಇನ್ನು ಎಸಿಪಿ ಲಕ್ಷ್ಮಿ ಪಾತ್ರದಲ್ಲಿ ಭಾವನಾ ಮಿಂಚಿದ್ದಾರೆ.
ಪೊಲೀಸ್ ಕ್ರೈಂ ಥ್ರಿಲ್ಲರ್ ಅಂದಮೇಲೆ ಕಳ್ಳ-ಪೊಲೀಸ್ ಆಟ ಈ ಚಿತ್ರದಲ್ಲೂ ಇದೆ. ಕೊಂಡಾಣ ಎನ್ನುವ ಕಾಲ್ಪನಿಕ ಸ್ಥಳ. ಆಗಸ್ಟೇ ಕೆಲಸಕ್ಕೆ ಸೇರಿದ ಎಎಸ್ಐ ವಿಲ್ಸನ್, ಒಂದು ಸಮಸ್ಯೆಯಲ್ಲಿ ಸಿಲುಕಿಕೊಳ್ಳುತ್ತಾನೆ. ಅದರಿಂದ ಹೊರಬರಲಿ ಆತನ ನಡೆಸುವ ಹೋರಾಟ, ಈ ಹಾದಿಯಲ್ಲಿ ಏನೆಲ್ಲಾ ನಡೆಯುತ್ತದೆ ಎನ್ನುವುದು 'ಕೇಸ್ ಆಫ್ ಕೊಂಡಾಣ' ಒನ್ಲೈನ್ ಸ್ಟೋರಿ.

'ಕೊಂಡಾಣ'ದಲ್ಲಿ ನಡೆಯುವ ಪೊಲೀಸರ ಹತ್ಯೆಗೆ ಕಾರಣ ಏನು? ಅಷ್ಟಕ್ಕೂ ಇದರ ಹಿಂದೆ ಯಾರು ಇರುತ್ತಾರೆ? ಕೊನೆಗೆ ಅಪರಾಧಿಗಳಿಗೆ ಶಿಕ್ಷೆ ಆಗುತ್ತಾ? ಎನ್ನುವ ಪ್ರಶ್ನೆಗಳಿಗೆಲ್ಲಾ ಸಿನಿಮಾ ನೋಡಿದರೆ ಉತ್ತರ ಸಿಗುತ್ತದೆ. ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಗಳನ್ನು ಇಷ್ಟಪಡುವವರಿಗೆ 'ಕೇಸ್ ಆಫ್ ಕೊಂಡಾಣ' ಮತ್ತಷ್ಟು ಇಷ್ಟವಾಗುತ್ತದೆ. ಚಿತ್ರದ ಸಂಭಾಷಣೆ ಕೂಡ ಹೈಲೆಟ್ ಆಗಿದೆ.
ಜನವರಿ 26ಕ್ಕೆ 'ಕೇಸ್ ಆಫ್ ಕೊಂಡಾಣ' ತೆರೆಗಪ್ಪಳಿಸಿತ್ತು. ಸದ್ಯ ಅಮೇಜಾನ್ ಪ್ರೈಂ ವಿಡಿಯೋದಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗುತ್ತಿದೆ. ಕನ್ನಡದ ಜೊತೆಗೆ ಮಲಯಾಳಂ ವರ್ಷನ್ಗಳಲ್ಲಿ ಸಿನಿಮಾ ವೀಕ್ಷಣೆಗೆ ಲಭ್ಯವಿದೆ. ಅದ್ಯಾಕೋ ಗೊತ್ತಿಲ್ಲ, ಯಾವುದೇ ಅನೌನ್ಸ್ಮೆಂಟ್ ಇಲ್ಲದೇ ಸಿನಿಮಾವನ್ನು ಓಟಿಟಿಗೆ ತರಲಾಗಿದೆ. ಕನ್ನಡ ಸಿನಿಮಾಗಳ ವಿಚಾರದಲ್ಲಿ ಪದೇ ಪದೇ ಈ ರೀತಿ ನಡೆಯುತ್ತಿದೆ.
ಇತ್ತೀಚೆಗೆ ವಿಜಯ್ ರಾಘವೇಂದ್ರ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಯಾವುದೇ ಅಬ್ಬರ ಆರ್ಭಟ ಇಲ್ಲದೇ ಕಡಿಮೆ ಬಜೆಟ್ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅದರಲ್ಲಿ ಥ್ರಿಲ್ಲರ್ ಸಿನಿಮಾಗಳ ಸಂಖ್ಯೆ ಹೆಚ್ಚುತ್ತಿದೆ. 'ಗ್ರೇ ಗೇಮ್ಸ್' ಎನ್ನುವ ಮತ್ತೊಂದು ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ.


Click it and Unblock the Notifications











