Chandramukhi-2 OTT: ಬಾಕ್ಸಾಫೀಸ್ನಲ್ಲಿ ಸೋಲುಂಡ 'ಚಂದ್ರಮುಖಿ-2' ಓಟಿಟಿ ರಿಲೀಸ್ ಡೇಟ್ ಫಿಕ್ಸ್
ಭಾರೀ ನಿರೀಕ್ಷೆ ಹುಟ್ಟಾಕ್ಕಿದ್ದ 'ಚಂದ್ರಮುಖಿ'-2 ಸಿನಿಮಾ ಬಾಕ್ಸಾಫೀಸ್ನಲ್ಲಿ ಮುಗ್ಗರಿಸಿತ್ತು. ಲೈಕಾ ಸಂಸ್ಥೆ ಬಹುಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣ ಮಾಡಿತ್ತು. ಪಿ. ವಾಸು ನಿರ್ದೇಶನದಲ್ಲಿ ಕಂಗನಾ ರಾಣಾವತ್ ಹಾಗೂ ರಾಘವ ಲಾರೆನ್ಸ್ ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸಿದ್ದರು.
ಸೆಪ್ಟೆಂಬರ್ 28ಕ್ಕೆ ರಿಲೀಸ್ ಆಗಿದ್ದ ಈ ಕಾಮಿಡಿ ಹಾರರ್ ಸಿನಿಮಾ ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಸೆಳೆಯುವಲ್ಲಿ ವಿಫಲವಾಗಿತ್ತು. ಸೂಪರ್ ಹಿಟ್ 'ಚಂದ್ರಮುಖಿ' ಹಿನ್ನೆಲೆಯಲ್ಲೇ ಬಂದಿದ್ದ ಸಿನಿಮಾ ಯಾಕೋ ಮೋಡಿ ಮಾಡಲಿಲ್ಲ. 'ತಲೈವಿ' ನಂತರ ಮತ್ತೊಮ್ಮೆ ದಕ್ಷಿಣ ಭಾರತದಲ್ಲಿ ಕಂಗನಾ ಪ್ರಯತ್ನಕ್ಕೆ ಗೆಲುವು ಸಿಗಲಿಲ್ಲ. ಲಕ್ಷ್ಮಿ ಮೆನನ್, ವಡಿವೇಲು, ರಾಧಿಕಾ ಶರತ್ ಕುಮಾರ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿತ್ತು.

ಸದ್ಯ ಚಿತ್ರಮಂದಿರಗಳಲ್ಲಿ 'ಚಂದ್ರಮುಖಿ-2' ಪ್ರದರ್ಶನ ಮುಕ್ತಾಯವಾಗಿದ್ದು ಸಿನಿಮಾ ನಷ್ಟದ ಬಗ್ಗೆ ಭಾರೀ ಚರ್ಚೆ ನಡೀತಿದೆ. 45 ಕೋಟಿ ರೂ.ಗೆ ಥಿಯೇಟ್ರಿಕಲ್ ರೈಟ್ಸ್ ಮಾರಾಟವಾಗಿತ್ತು. 51. 39 ಕೋಟಿ ಗ್ರಾಸ್ ಕಲೆಕ್ಷನ್ ಆಗಿದ್ದು 25 ಕೋಟಿ ರೂ. ಮಾತ್ರ ಶೇರ್ ಬಂದಿದೆ. ಈ ಮೂಲಕ ಚಿತ್ರ 20 ಕೋಟಿ ರೂ. ನಷ್ಟ ಅನುಭವಿಸಿದೆ ಎಂದು ಅಂದಾಜಿಸಲಾಗುತ್ತಿದೆ. ಸಿನಿಮಾ ಬಹಳ ದೊಡ್ಡ ಡಿಸಾಸ್ಟರ್ ಎನಿಸಿಕೊಂಡಿದೆ.
ನೆಟ್ಫ್ಲಿಕ್ಸ್ ಸಂಸ್ಥೆ 'ಚಂದ್ರಮುಖಿ-2' ಡಿಜಿಟಲ್ ರೈಟ್ಸ್ ಖರೀದಿಸಿದ್ದು ಅಕ್ಟೋಬರ್ 27ಕ್ಕೆ ಸಿನಿಮಾ ಸ್ಟ್ರೀಮಿಂಗ್ ಆಗುವ ಸಾಧ್ಯತೆಯಿದೆ. ತಿಂಗಳಿಗೂ ಮೊದಲೇ ಈ ಹಾರರ್ ಕಾಮಿಡಿ ಸಿನಿಮಾ ಓಟಿಟಿಗೆ ಬಂದಂತಾಗುತ್ತಿದೆ. 30 ವರ್ಷಗಳ ಹಿಂದೆ ಮಲಯಾಳಂನಲ್ಲಿ 'ಮಣಿಚಿತ್ರತ್ತಾಳ್' ಸಿನಿಮಾ ಬಂದಿತ್ತು. ಅದೇ ಸಿನಿಮಾ ಕನ್ನಡದಲ್ಲಿ 'ಆಪ್ತಮಿತ್ರ' ಆಗಿ ರೀಮೆಕ್ ಆಗಿತ್ತು. ಬಳಿಕ 'ಚಂದ್ರಮುಖಿ'ಯಾಗಿ ತಮಿಳಿನಲ್ಲಿ ಬಂದು ಗೆದ್ದಿತ್ತು. ರಜನಿಕಾಂತ್ ಹೀರೊ ಆಗಿ ನಟಿಸಿದ್ದರು.
'ಆಪ್ತಮಿತ್ರ' ಬಳಿಕ ಅದೇ ಕತೆಯನ್ನು ಮುಂದುವರೆಸಿ 'ಆಪ್ತರಕ್ಷಕ' ಸಿನಿಮಾ ಮಾಡಲಾಗಿತ್ತು. ಸಾಹಸಸಿಂಹ ವಿಷ್ಣುವರ್ಧನ್ ಈ ಚಿತ್ರದಲ್ಲೂ ನಟಿಸಿದ್ದರು. ಇದೇ ಚಿತ್ರ 'ನಾಗವಲ್ಲಿ' ಆಗಿ ತೆಲುಗಿಗೆ ರೀಮೆಕ್ ಆಗಿತ್ತು. ಆದರೆ 'ಚಂದ್ರಮುಖಿ-2' ಯಾವುದೇ ಚಿತ್ರದ ರೀಮೆಕ್ ಅಲ್ಲ. ಬದಲಿಗೆ 'ಚಂದ್ರಮುಖಿ' ಗುಂಗಿನಲ್ಲೇ ಹೊಸ ಕತೆಯಾಗಿ ಬಂದಿದ್ದ ಸಿನಿಮಾ.
'ಚಂದ್ರಮುಖಿ-2' ಕತೆ ಏನು ಅಂದ್ರೆ, ರಂಗನಾಯಕಿ (ರಾಧಿಕಾ ಶರತ್ ಕುಮಾರ್) ಕುಟುಂಬ ದೊಡ್ಡದು. ಆಕೆಯ ಕುಟುಂಬಕ್ಕೆ ಸಮಸ್ಯೆಗಳು ಎದುರಾಗುತ್ತದೆ. ಇಡೀ ಕುಟುಂಬದವರು ತಮ್ಮ ಕುಲದೇವತೆಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರೆ ಸಮಸ್ಯೆಗಳು ದೂರವಾಗುತ್ತವೆ ಸ್ವಾಮೀಜಿ (ರಾವ್ ರಮೇಶ್)ಹೇಳುತ್ತಾರೆ. ಇದಕ್ಕಾಗಿ ಅನ್ಯ ಧರ್ಮದವರನ್ನು ಪ್ರೀತಿಸಿದ ಮಗಳ ಮಕ್ಕಳನ್ನು ಕರೆತರುವಂತಾಗುತ್ತದೆ. ಅವರೊಂದಿಗೆ ಪಾಂಡಿಯನ್ (ರಾಘವ ಲಾರೆನ್ಸ್) ಕೂಡ ಬರುತ್ತಾನೆ. ಅವರ ಕುಲದೈವದ ದೇವಸ್ಥಾನದ ಸಮೀಪವೇ ಚಂದ್ರಮುಖಿ ಅರಮನೆ (ರಜನಿಕಾಂತ್ ಚಂದ್ರಮುಖಿ ಚಿತ್ರದ ಕಥೆ ನಡೆದ ಮನೆ). ಆ ಘಟನೆಯ ನಂತರ ಕೈಲಾಶ್, ಕುಟುಂಬ ಅಲ್ಲಿಂದ ಹೊರಟು ಹೋಗಿರುತ್ತದೆ. ಬಸವಯ್ಯ (ವಡಿವೇಲು)ನ ಒಡೆತನದಲ್ಲಿ ಮನೆ ಇರುತ್ತದೆ.
ರಂಗನಾಯಕಿಯವರ ಕುಟುಂಬದವರು ಯಾರು ಕೂಡ ಮನೆಯ ದಕ್ಷಿಣ ಭಾಗಕ್ಕೆ ಹೋಗದಂತೆ ಬಸವಯ್ಯ ಎಚ್ಚರಿಸುತ್ತಾನೆ. ಆದರೆ ಕೆಲವರು ಕೇಳದೆ ಹೋಗುತ್ತಾರೆ. ಅದರಿಂದ ಏನೆಲ್ಲಾ ಸಮಸ್ಯೆಗಳು ಎದುರಾಗುತ್ತದೆ? ಈ ಕಥೆಯಲ್ಲಿ ವೇಟಯಾನ್/ಸೆಂಗೋಟಯನ್ ( ರಾಘವ ಲಾರೆನ್ಸ್ ದ್ವಿಪಾತ್ರ) ಪಾತ್ರ ಏನು ಅನ್ನೋದು ಗೊತ್ತಾಗಬೇಕು ಅಂದರೆ ಸಿನಿಮಾ ನೋಡಲೇಬೇಕು.
ಇತ್ತೀಚೆಗೆ 'ಚಂದ್ರಮುಖಿ-2' ಸೋಲಿನ ಬಗ್ಗೆ ರಾಘವ ಲಾರೆನ್ಸ್ಗೆ ಪ್ರಶ್ನೆ ಎದುರಾಗಿತ್ತು. "ಚಂದ್ರಮುಖಿ- 2ಕ್ಕೆ ನನ್ನ ಸಂಭಾವನೆ ನನಗೆ ಸಿಕ್ಕಿದೆ. ನಾವೇ ಪ್ರತಿ ಬಾರಿಯೂ ಗೆಲ್ಲಲು ಸಾಧ್ಯವಿಲ್ಲ. ಗ್ರೂಪ್ ಡ್ಯಾನ್ಸರ್ನಿಂದ ಡ್ಯಾನ್ಸ್ ಮಾಸ್ಟರ್ ಆದರೆ ಸಾಕು ಎಂದು ಒಮ್ಮೆ ಅಂದುಕೊಂಡಿದ್ದೆ. ನಾನೂ ಸಹ ನಿರ್ದೇಶಕನಾದೆ, ಹೀರೊ ಆದೆ. ನನ್ನ ಗ್ಲಾಮರ್ಗೆ ನಾಯಕನ ಅವಕಾಶಗಳು ಸಿಕ್ಕಿರುವುದೇ ಅದೃಷ್ಟ. ಇದರಲ್ಲಿ ಸೋಲು ಗೆಲುವಿನ ಪ್ರಸ್ತಾಪ ಅನಗತ್ಯ. ನಾನು ಹೀರೊ ಆಗಿರುವುದು ದೇವರ ವರ" ಎಂದಿದ್ದರು.


Click it and Unblock the Notifications











