ಪ್ರೇಕ್ಷಕರು, ವಿಮರ್ಶಕರ ಮನಗೆದ್ದ ಹೊಸ ಕನ್ನಡ ರೊಮ್ಯಾಂಟಿಕ್ ಸಿನಿಮಾ ಓಟಿಟಿಗೆ ಬಂತು
ಇತ್ತೀಚೆಗೆ ಒಂದರ ಹಿಂದೆ ಒಂದು ಕನ್ನಡ ಸಿನಿಮಾ ಓಟಿಟಿಗೆ ಬರ್ತಿದೆ. ಕಳೆದ ವಾರ 3 ಸಿನಿಮಾಗಳು ಸಿನಿರಸಿಕರನ್ನು ಮನೆಯಲ್ಲೇ ರಂಜಿಸಿದ್ದವು. ಈ ವಾರ ಮತ್ತೆ 3 ಸಿನಿಮಾಗಳು ಆ ಲಿಸ್ಟ್ ಸೇರಿಕೊಳ್ಳುತ್ತಿದೆ. ವೀಕೆಂಡ್ನಲ್ಲಿ ಮನೆಯಲ್ಲೇ ಸಿನಿಮಾ ನೋಡಿ ಎಂಜಾಯ್ ಮಾಡಬಹುದಾಗಿದೆ.
ಈ ವಾರ ಚಿತ್ರಮಂದಿರಕ್ಕೆ 3 ವಿಭಿನ್ನ ಕನ್ನಡ ಸಿನಿಮಾಗಳು ಬಂದಿವೆ. ಧನ್ವೀರ್ ಗೌಡ ನಟನೆಯ 'ವಾಮನ' ಸಿನಿಮಾ ಗುರುವಾರವೇ ತೆರೆಗಪ್ಪಳಿಸಿದೆ. ಡಾಲಿ ಧನಂಜಯ್ ನಿರ್ಮಾಣದ 'ವಿದ್ಯಾಪತಿ' ಚಿತ್ರಕ್ಕೂ ಬಿಡುಗಡೆ ಭಾಗ್ಯ ಸಿಕ್ಕಿದೆ. ಶುಕ್ರವಾರ(ಏಪ್ರಿಲ್ 11) ರಂಗಾಯಣ ರಘು ನಟನೆಯ 'ಅಜ್ಞಾತವಾಸಿ' ಸಿನಿಮಾ ರಿಲೀಸ್ ಆಗ್ತಿದೆ.

ಅತ್ತ ಚಿತ್ರಮಂದಿರಗಳಲ್ಲಿ ಇತ್ತ ಓಟಿಟಿಯಲ್ಲಿ ಕನ್ನಡ ಸಿನಿಮಾಗಳು ಸಿನಿರಸಿಕರನ್ನು ರಂಜಿಸಲಿವೆ. ಪ್ರಜ್ವಲ್ ದೇವರಾಜ್ ನಟನೆಯ ಹಾರರ್ ಸಿನಿಮಾ 'ರಾಕ್ಷಸ' ಸನ್ ನೆಕ್ಸ್ಟ್ನಲ್ಲಿ ಬಿಡುಗಡೆ ಆಗಲಿದೆ. ವಾರದ ಹಿಂದೆಯೇ ಈ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿತ್ತು. ಆದರೆ ಯಾವುದೇ ಸುಳಿವು ಇಲ್ಲದೇ ದಿಢೀರನೆ ಹೊಚ್ಚ ಹೊಸ ಕನ್ನಡ ರೊಮ್ಯಾಂಟಿಕ್ ಸಿನಿಮಾ ಕೂಡ ಡಿಜಿಟಲ್ ಪ್ಲಾಟ್ಫಾರ್ಮ್ಗೆ ಬಂದಿದೆ.
ಶ್ರೇಯಸ್ ಮಂಜು ಹಾಗೂ ಪ್ರಿಯಾ ಪ್ರಕಾಶ್ ವಾರಿಯರ್ ನಟನೆಯ 'ವಿಷ್ಣುಪ್ರಿಯ' ಸಿನಿಮಾ ಇದೀಗ ಓಟಿಟಿಯಲ್ಲಿ ಲಭ್ಯವಿದೆ. ಫೆಬ್ರವರಿ 21ಕ್ಕೆ ಸಿನಿಮಾ ತೆರೆಗಪ್ಪಳಿಸಿತ್ತು. ಪ್ರೇಕ್ಷಕರು, ವಿಮರ್ಶಕರಿಂದ ಒಂದೊಳ್ಳೆ ಸಿನಿಮಾ ಎಂದು ಮೆಚ್ಚುಗೆ ಪಡೆದಿತ್ತು. ಆದರೆ ದೊಡ್ಡಮಟ್ಟದಲ್ಲಿ ಪ್ರೇಕ್ಷಕರನ್ನು ಸೆಳೆಯುವಲ್ಲಿ ಸಿನಿಮಾ ವಿಫಲವಾಗಿತ್ತು. ಇದೀಗ 'ವಿಷ್ಣುಪ್ರಿಯ' ಸಿನಿಮಾ ಅಮೇಜಾನ್ ಪ್ರೈಂ ವೀಡಿಯೋದಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.

ಮಲಯಾಳಂ ನಿರ್ದೇಶಕ ವಿ. ಕೆ ಪ್ರಕಾಶ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ಕಣ್ಸನ್ನೆ ಹುಡುಗಿ ಪ್ರಿಯಾ ವಾರಿಯರ್ ನಟನೆಯ ಸ್ಟ್ರೈಟ್ ಕನ್ನಡ ಸಿನಿಮಾ ಇದಾಗಿತ್ತು. ಬಹಳ ಹಿಂದೆ ಸೆಟ್ಟೇರಿದ್ದ 'ವಿಷ್ಣುಪ್ರಿಯ' ಸಿನಿಮಾ ಕೊಂಚ ತಡವಾಗಿ ಬಿಡುಗಡೆ ಆಗುವಂತಾಗಿತ್ತು. ವಿಷ್ಣು ಹಾಗೂ ಪ್ರಿಯಾ ಆಗಿ ಟೈಟಲ್ ರೋಲ್ಗಳಲ್ಲಿ ಶ್ರೇಯಸ್ ಹಾಗೂ ಪ್ರಿಯಾ ನಟಿಸಿದ್ದಾರೆ.
ಸುಚೇಂದ್ರ ಪ್ರಸಾದ್, ಅಚ್ಯುತ್ ಕುಮಾರ್, ನಿಹಾಲ್ ರಾಜ್ ಕೂಡ 'ವಿಷ್ಣುಪ್ರಿಯ' ಚಿತ್ರದಲ್ಲಿ ನಟಿಸಿದ್ದಾರೆ. 90ರ ದಶಕದ ಲವ್ ಸ್ಟೋರಿಯನ್ನು ಸಿನಿಮಾದಲ್ಲಿ ನೋಡಬಹುದು. 90ರ ದಶಕದ ಕಥೆ ಆಗಿರುವುದರಿಂದ ಸಿನಿಮಾ ಹೊಸ ಅನುಭವ ನೀಡುತ್ತದೆ. ಅಂದಿನ ವಾತಾರವರಣ, ಜನರ ಮನಸ್ಥಿತಿ, ಪೋಷಕರ ಆಲೋಚನೆ, ಮಕ್ಕಳ ಆಸೆ ಆಕಾಂಕ್ಷೆಗಳು, ತಳಮಳ ಹೀಗೆ ಹೊಸ ಪ್ರಪಂಚವನ್ನೇ ಸಿನಿಮಾ ಕಟ್ಟಿಕೊಡುತ್ತದೆ. ಚಿಕ್ಕಮಗಳೂರಿನಲ್ಲಿ ನಡೆಯುವ ಕಥೆ ಆಗಿರುವುದರಿಂದ ಪ್ರಕೃತಿ ಸೌಂದರ್ಯವೂ ಕಣ್ಮನ ಸೆಳೆಯುತ್ತದೆ.
ಮಧ್ಯಮ ವರ್ಗದ ಕಾಲೇಜ್ ವಿದ್ಯಾರ್ಥಿ ವಿಷ್ಣು (ಶ್ರೇಯಸ್) ತನ್ನ ಜೀವನದ ಕಹಿ ಘಟನೆ ಮರೆತು ಸ್ನೇಹಿತರ ಜೊತೆ ಖುಷಿಯಾಗಿ ಇರುತ್ತಾನೆ. ಸ್ನೇಹಿತ ಪ್ರಿಯಾ (ಪ್ರಿಯ ವಾರಿಯರ್) ಪ್ರೀತಿಸುತ್ತಿರುತ್ತಾನೆ. ಆತನಿಗೆ ವಿಷ್ಣು ಸಹಾಯ ಮಾಡುತ್ತಾನೆ. ಆದರೆ ಪ್ರಿಯಾಳ ಮನಸ್ಸು ವಿಷ್ಣು ಕಡೆ ವಾಲುತ್ತದೆ. ಅಲ್ಲಿಂದ ಇಬ್ಬರ ಪ್ರೇಮ್ ಕಹಾನಿ ಶುರುವಾಗುತ್ತದೆ.
ಸಣ್ಣ ಎಡವಟ್ಟಿನಿಂದ ವಿಷ್ಣುಪ್ರಿಯ ಪ್ರೀತಿಯಲ್ಲಿ ಗೊಂದಲ ಮೂಡುತ್ತದೆ. ಪ್ರೇಮಿಗಳನ್ನು ದೂರ ಮಾಡಲು ಪ್ರಿಯಳ ತಂದೆ ಮುಂದಾಗುತ್ತಾನೆ. ಭಗ್ನಪ್ರೇಮಿ ಸ್ನೇಹಿತ ಕೂಡ ಇದಕ್ಕೆ ತುಪ್ಪ ಸುರಿಯುತ್ತಾನೆ. ಮುಂದೆ ಕಥೆ ಯಾವ ತಿರುವು ಪಡೆಯುತ್ತದೆ? ಹಾಗಿದ್ದರೆ 'ವಿಷ್ಣುಪ್ರಿಯ' ಪ್ರೀತಿ ಗೆಲ್ಲುತ್ತಾ? ಎನ್ನುವುದು ಇನ್ನುಳಿದ ಸಿನಿಮಾ ಕಥೆ. ವಿನೋದ್ ಭಾರತಿ ಛಾಯಾಗ್ರಹಣ ಹಾಗೂ ಗೋಪಿ ಸುಂದರ್ ಸಂಗೀತ ಚಿತ್ರದ ಹೈಲೆಟ್. ಮಗನನ್ನು ಹೀರೊ ಮಾಡಿ ಚಿತ್ರಕ್ಕೆ ಕೆ. ಮಂಜು ಹಣ ಹೂಡಿದ್ದರು. ಕೆಆರ್ಜಿ ಸ್ಟುಡಿಯೋಸ್ ಸಂಸ್ಥೆ ಚಿತ್ರವನ್ನು ವಿತರಣೆ ಮಾಡಿತ್ತು.


Click it and Unblock the Notifications











