ನಾನ್ ಬರ್ತಿದ್ದೀನಿ ಚಿನ್ನ ; ಅಬ್ಬಾ, 6 ತಿಂಗಳ ನಂತರ ಒಮ್ಮೆಲೆ ಟಿವಿ ಮತ್ತು ಓಟಿಟಿಗೆ ಬಂದ 'ಡೆವಿಲ್';ಅಭಿಮಾನಿಗಳಿಗೆ ದರ್ಶನ ಭಾಗ್ಯ
ಚಾಲೆಂಜಿಂಗ್ ಸ್ಟಾರ್ ದರ್ಶನ್ ನೇರಾ ನೇರ ನಡವಳಿಕೆಗೆ ಹೆಸರಾದವರು. ನೇರವಂತಿಕೆಯ ಜೊತೆಗೆ ಹೃದಯವಂತಿಕೆ ಕೂಡಾ ಅವರ ವ್ಯಕ್ತಿತ್ವದ ಟ್ರೇಡ್ಮಾರ್ಕ್. ತಾನು ಬೆಳೆಯುತ್ತಲೇ ಇತರರನ್ನೂ ಬೆಳೆಸಬೇಕೆಂಬ ಇರಾದೆ ಅವರದ್ದು. ಇಂಥಾ ದರ್ಶನ್ ಅವರನ್ನು ಇವರ ಅಭಿಮಾನಿಗಳು ಬಾಕ್ಸಾಫೀಸ್ ಸುಲ್ತಾನ್ ಎಂದೇ ಕರೆಯುತ್ತಾರೆ.
ಹಾಗೇ ನೋಡಿದರೆ ಕೆಲ ವರ್ಷಗಳ ಹಿಂದಿನವರೆಗೆ ಈ ಮಾತು ನಿಜವೂ ಆಗಿತ್ತು. ದರ್ಶನ್ ಚಿತ್ರ ಬಂದರೆ ಸಾಕು ಚಿತ್ರಮಂದಿರದ ಎದುರು ಹಬ್ಬದ ವಾತಾವರಣ ಕಾಣಿಸುತ್ತಿತ್ತು. ಅಭಿಮಾನದ ಜಾತ್ರೆ ಅದ್ಧೂರಿಯಾಗಿ ನಡೆಯುತ್ತಿತ್ತು.

ಇನ್ನು ದರ್ಶನ್ ಸಿನಿಮಾ ಅಂದರೆ ಬಿಡುಗಡೆಯಾಗುವ ಮೊದಲೇ ವ್ಯಾಪಾರ-ವ್ಯವಹಾರ ನಡೆದು ಹೋಗುತ್ತಿತ್ತು. ಆ ಹಕ್ಕು.. ಈ ಹಕ್ಕು ಎಂದು ಎಲ್ಲವೂ ಬಿಕರಿಯಾಗುತ್ತಿತ್ತು. ಚಿತ್ರ ಬಿಡುಗಡೆಯಾದ ಒಂದು-ಒಂದೂವರೆ ತಿಂಗಳಿಗೆ ಓಟಿಟಿಯಲ್ಲಿ ಚಿತ್ರ ಪ್ರಸಾರವಾಗುತ್ತಿತ್ತು.
ಇದಕ್ಕೆ ಕೈಗನ್ನಡಿ ಎಂಬಂತೆ ದರ್ಶನ್ ವೃತ್ತಿ ಬದುಕಿನ ಬಹುದೊಡ್ಡ ಬ್ಲಾಕ್ ಬಸ್ಟರ್ ಚಿತ್ರಗಳಲ್ಲಿ ಒಂದಾದ ''ಕಾಟೇರ'' ಬಿಡುಗಡೆಯಾದ 42 ದಿನಕ್ಕೆ ಓಟಿಟಿಗೆ ಬಂದಿತ್ತು. ಕೇವಲ 28 ದಿನಕ್ಕೆ ಮನೆಯಲ್ಲಿಯೇ ಕುಳಿತು
''ಕ್ರಾಂತಿ'' ಚಿತ್ರವನ್ನು ಕಣ್ತುಂಬಿಕೊಳ್ಳುವ ಸೌಭಾಗ್ಯ ಅಭಿಮಾನಿಗಳಿಗೆ ಸಿಕ್ಕಿತ್ತು.
ಆದರೆ. '' ದಿ ಡೆವಿಲ್'' ಚಿತ್ರದ ವಿಚಾರದಲ್ಲಿ ಇದಕ್ಕೆ ತದ್ವಿರುದ್ದವಾದ ವಾತಾವರಣ ಕಂಡು ಬಂದಿತ್ತು. ಒಂದೆರಡಲ್ಲ ಬಿಡುಗಡೆಯಾಗಿ ಆರು ತಿಂಗಳಾದರು ''ಡೆವಿಲ್'' ಓಟಿಟಿಯ ವೇದಿಕೆಯತ್ತ ಸುಳಿದಿರಲಿಲ್ಲ. ಕಿರುತೆರೆಯ ಅಂಗಳದಲ್ಲಿ ಕೂಡ ''ಡೆವಿಲ್'' ಸುಳಿವು ಇರಲಿಲ್ಲ. ದರ್ಶನ್ ಅಭಿಮಾನಿಗಳಿಗೆ ಅಂಗೈನಲ್ಲೇ ''ಡೆವಿಲ್'' ಮೂಲಕ ದರ್ಶನ ಭಾಗ್ಯ ಸಿಕ್ಕಿರಲಿಲ್ಲ.
ಹೀಗಾಗಿ ''ದಿ ಡೆವಿಲ್'' ಚಿತ್ರದ ಓಟಿಟಿ ಮತ್ತು ಸ್ಯಾಟ್ಲೈಟ್ ಹಕ್ಕುಗಳ ಕುರಿತು ಚರ್ಚೆ ನಡೆಯುತ್ತಿತ್ತು. ದರ್ಶನ್ ಜೈಲು ಪಾಲಾದ ಮಾತ್ರಕ್ಕೆ ಅವರ ಮಾರ್ಕೆಟ್ ವ್ಯಾಲ್ಯೂ ಕುಸಿಯಿತಾ ಎನ್ನುವ ಪ್ರಶ್ನೆ ಹಲವರಲ್ಲಿತ್ತು. ದರ್ಶನ್ ಅವರ ವಿವಾದ ಮತ್ತು ಜೈಲು ವಾಸದ ಹಿನ್ನೆಲೆ ಹಲವರು ಖರೀದಿ ಮಾಡಲು ಹಿಂದೇಟು ಹಾಕುತ್ತಿದ್ದಾರೆ ಎನ್ನುವ ಮಾತು ಕೂಡ ಕೇಳಿ ಬಂದಿತ್ತು.

ಆದರೆ ಈಗ ಎಲ್ಲ ಅನುಮಾನಗಳು ದೂರವಾಗಿವೆ. ಅಂತೆ ಕಂತೆಯ ಮಾತುಗಳಿಗೆ ಬ್ರೇಕ್ ಬಿದ್ದಿದೆ. ಸ್ಯಾಟ್ಲೈಟ್ ಮತ್ತು ಓಟಿಟಿಯ ಹಕ್ಕುಗಳನ್ನು ''ಜೀ 5'' ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಈ ಕುರಿತು ಅಧಿಕೃತವಾಗಿ ಘೋಷಣೆಯನ್ನು ಕೂಡ ಮಾಡಿರುವ ''ಜೀ 5'' ಸೂರ್ಯನಿಗೆ ತುಂಬಾ ಹೊತ್ತು ಗ್ರಹಣ ಹಿಡಿಯಲ್ಲ. ನಾನು ಬರ್ತಿದೀನಿ ಚಿನ್ನ ಎಂಬ ಡೈಲಾಗ್ ಜೊತೆ ವಿಡಿಯೋವನ್ನು ಹಂಚಿಕೊಂಡಿದೆ.
ಅಂದ್ಹಾಗೇ ದರ್ಶನ್ ಜೈಲಿನಲ್ಲಿರುವ ಹಿನ್ನೆಲೆ ಈ ಚಿತ್ರವನ್ನು ಈಗಲೇ ಓಟಿಟಿಗೆ ಕೊಡಬೇಡಿ ಎಂಬ ಮನವಿಯನ್ನು ಈ ಹಿಂದೆ ಹಲವರು ಸಾಮಾಜಿಕ ಜಾಲತಾಣದಲ್ಲಿ ಮಾಡಿಕೊಂಡಿದ್ದರು. ದರ್ಶನ್ ಹೊರ ಬಂದ ನಂತರವಷ್ಟೇ ಓಟಿಟಿಯಲ್ಲಿ ''ದಿ ಡೆವಿಲ್'' ಧಗಧಗಿಸುವಂತಾಗಲಿ ಎಂದು ತಮ್ಮ ಆಶಯ ವ್ಯಕ್ತಪಡಿಸಿದ್ದರು. ಆದರೆ ಈಗ ''ದಿ ಡೆವಿಲ್'' ಕೊನೆಗೂ ಓಟಿಟಿ ಮತ್ತು ಕಿರುತೆರೆಗೆ ಒಮ್ಮೆಲೆ ಲಗ್ಗೆ ಇಡುತ್ತಿದೆ.
ಸದ್ಯ ದರ್ಶನ್ ಅಭಿಮಾನಿಗಳು '' ದಿ ಡೆವಿಲ್'' ಚಿತ್ರವನ್ನು ಓಟಿಟಿ ಮತ್ತು ಕಿರುತೆರೆಯಲ್ಲಿ ನೋಡಲು ಕಾತುರದಿಂದ ಕಾಯುತ್ತಿದ್ದಾರೆ. ಪ್ರಸಾರದ ದಿನಾಂಕವನ್ನು ಜೀ 5 ಅಧಿಕೃತವಾಗಿ ಹೇಳಿಲ್ಲವಾದರೂ ಈ ತಿಂಗಳಾಂತ್ಯದಲ್ಲಿ ''ದಿ ಡೆವಿಲ್'' ಓಟಿಟಿಯಲ್ಲಿ ಪ್ರಸಾರವಾಗುವ ಸಾಧ್ಯತೆ ಇದೆ.
ಇನ್ನುಳಿದಂತೆ ಮಿಲನಾ ಖ್ಯಾತಿಯ ಪ್ರಕಾಶ್ ವೀರ್ ನಿರ್ಮಿಸಿ ನಿರ್ದೇಶನ ಮಾಡಿರುವ '' ದಿ ಡೆವಿಲ್'' ಚಿತ್ರದಲ್ಲಿ ದರ್ಶನ್ ದ್ವಿಪಾತ್ರದಲ್ಲಿ ನಟಿಸಿದ್ದಾರೆ. ರಚನಾ ರೈ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಅಚ್ಯುತ್ ಕುಮಾರ್, ಮಹೇಶ್ ಮಂಜ್ರೇಕರ್ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಸುಧಾಕರ್ ರಾಜ್ ಛಾಯಾಗ್ರಹಣ, ಅಜನೀಶ್ ಲೋಕನಾಥ್ ಸಂಗೀತ ಈ ಚಿತ್ರಕ್ಕಿದೆ.


Click it and Unblock the Notifications