ನಾನು ಮಾತಾಡಿದರೆ ಮರ್ಯಾದೆ ಮೂರು ಕಾಸಿಗೆ ಹರಾಜಾಗುತ್ತೆ, ಚಹಾಲ್ಗೆ ಮಾಜಿ ಪತ್ನಿ ಧನಶ್ರೀ ಡಿಚ್ಚಿ
ಪ್ರೀತಿ ಅಂದರೆ ಹಾಗೇ ಜೀವನವನ್ನೇ ಬದಲಾಯಿಸುವ ಶಕ್ತಿ ಹೊಂದಿರುವ ಮಾಯಾಜಾಲ. ಮಧುರ ಪ್ರೀತಿಗೆ ತಂದೆ ತಾಯಿಯೂ ಬೇಡ, ಹಣ ಒಡವೆ ಕೂಡ ಬೇಡ. ಸಂಗಾತಿಯ ಮಾತಿನ ಕಚಗುಳಿಯ ನಡುವೆ ಸ್ಪರ್ಶದ ಸಿಂಚನ ಸಾಕು ಅನ್ಸುತ್ತೆ. ಬಿಟ್ಟಿರಲಾರದ ತವಕ, ಏನೂ ಬೇಡವೆನ್ನುವ ಭಾವ, ಹಸಿವು ಇಲ್ಲದ ಅದೆಷ್ಟೋ ಗಂಟೆಗಳು ಅವಳ ನೆನಪಲ್ಲೇ ಕಳೆದು ಹೋಗುತ್ತೆ.
ಆದರೆ ಈಗೀಗ ಪ್ರೀತಿಯ ಅರ್ಥ ಬದಲಾಗಿದೆ. ಅರ್ಥೈಸಿಕೊಳ್ಳುವ ರೀತಿ ಕೂಡ ಬದಲಾಗಿದೆ. ಎಂಥದ್ದೋ ತಿರುವುಗಳಲ್ಲಿ ಪ್ರೀತಿ ಅಂತ್ಯವಾದ ನಂತರ ಇಂಥದ್ದೊಂದು ಸಂಬಂಧವಿತ್ತು ಎನ್ನುವ ನೆನಪನ್ನು ಕೂಡ ಉಳಿಸದೆ ಹೋಗುವಷ್ಟು ಸಂಬಂಧಗಳು ವ್ಯವಹಾರಿಕವಾಗಿವೆ. ಇಷ್ಟೇ ಅಲ್ಲ ದಾಂಪತ್ಯ ಮುರಿದು ಬಿದ್ದ ನಂತರ ಕೆಸರೆರಚಾಟಕ್ಕಿಳಿಯುವವರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಇದಕ್ಕೆ ಮತ್ತೊಂದು ಉದಾಹರಣೆ ಯಜುವೇಂದ್ರ ಚಹಾಲ್ ಮತ್ತು ಧನಶ್ರೀ ವರ್ಮಾ.

ಹೌದು, ಎಲ್ಲರಿಗೆ ಗೊತ್ತಿರುವಂತೆ ಭಾರತ ತಂಡದ ಕ್ರಿಕೆಟರ್ ಯಜುವೇಂದ್ರ ಚಹಾಲ್ ಮತ್ತು ಧನಶ್ರೀ ವರ್ಮಾ ಅವರ ದಾಂಪತ್ಯ ಮುರಿದು ಬಿದ್ದಿದೆ. ನಾನೊಂದು ತೀರ.. ನೀನೊಂದು ತೀರ.. ಎನ್ನುವಂತೆ ಇಬ್ಬರು ದೂರವಾಗಿದ್ದಾರೆ.
ಆದರೆ.. ಹಾದಿ ಬೀದಿಯಲ್ಲಿ ಇಬ್ಬರು ರಂಪ ರಾಮಾಯಣ ಮಾಡುತ್ತಿದ್ದಾರೆ. ಸಂದರ್ಶನ ಕೊಡುವ ನೆಪದಲ್ಲಿ ಪರಸ್ಪರ ಕೆಸರು ಎರಚುತ್ತಿದ್ದಾರೆ. ಹೀಗಿರುವಾಗ ಇದೀಗ ಧನಶ್ರೀ ವರ್ಮಾ ಮತ್ತೊಮ್ಮೆ ಯಜುವೇಂದ್ರ ಚಹಾಲ್ ಕುರಿತು ಮಾತನಾಡಿದ್ಧಾರೆ.
ಹೌದು, ಅಸಲಿಗೆ ''ಅಮೆಜಾನ್''ನಲ್ಲಿ ''ಬಿಗ್ ಬಾಸ್'' ಕಾರ್ಯಕ್ರಮವನ್ನೇ ಹೋಲುವ ಒಂದು ಕಾರ್ಯಕ್ರಮ ಶುರುವಾಗಿದೆ. ''ರೈಸ್ ಅಂಡ್ ಫಾಲ್'' ಎನ್ನುವುದು ಈ ಕಾರ್ಯಕ್ರಮದ ಹೆಸರು. ಸದ್ಯ ಈ ಮನೆಗೆ ಧನಶ್ರೀ ವರ್ಮಾ ಬಂದಿದ್ದು ಚಹಾಲ್ ಹೆಸರೇಳದೇ ಧನಶ್ರೀ ವಾಗ್ದಾಳಿ ನಡೆಸಿದ್ದಾರೆ. ನಾನು ಮಾತನಾಡಿದರೆ ಮರ್ಯಾದೆ ಮೂರು ಕಾಸಿಗೆ ಹರಾಜಾಗುತ್ತೆ ಎಂದು ಕಿಡಿ ಕಾರಿದ್ದಾರೆ. ಚಹಾಲ್ ಅವರ ಯಾವ ವಿಷಯಗಳು ಅವರಿಗೆ ಇಷ್ಟವಾಗಲಿಲ್ಲ ಎಂದು ಚರ್ಚೆ ಮಾಡಿದ್ದಾರೆ.
ಈ ಕುರಿತು ಕಾರ್ಯಕ್ರಮದ ಮತ್ತೊಬ್ಬ ಸ್ಫರ್ಧಿ ನಯನ್ದೀಪ್ ರಕ್ಷಿತ್ "ನೀವು ನೀಡಿದ ಸಂದರ್ಶನ ನಿಮಗೆ ಖುಷಿ ನೀಡಿದೆಯಾ'' ಎಂದು ಕೇಳಿದಾಗ ಮಾತನಾಡಿರುವ ಧನಶ್ರೀ, "ಇಲ್ಲ! ನಾನು ಕೆಲವು ವಿಷಯಗಳ ಬಗ್ಗೆ ಮಾತನಾಡಲು ಬಯಸಲಿಲ್ಲ. ನೋಡಿ, ಇಬ್ಬರ ನಡುವೆ ಯಾವುದೇ ರೀತಿಯ ಜಗಳವಾದಾಗ ಮತ್ತು ಅವರು ಅದನ್ನು ಮುಗಿಸಲು ನಿರ್ಧರಿಸಿದಾಗ, ಅವರು ತಮ್ಮ ಎಲ್ಲಾ ಮಾತುಗಳಿಗೆ ಬದ್ಧರಾಗಿರಬೇಕು. ಪ್ರತಿಯೊಬ್ಬ ವ್ಯಕ್ತಿಯ ಕೈಯಲ್ಲಿ ಸ್ವಂತ ಗೌರವ ಇರುತ್ತದೆ ಮತ್ತು ವಿವಾಹದ ನಂತರ ನಿಮ್ಮ ಸಂಗಾತಿಯ ಗೌರವವೂ ನಿಮ್ಮ ಕೈಯಲ್ಲೇ ಇರುತ್ತದೆ. ನಾನು ಬಯಸಿದ್ದರೆ, ಅವನ (ಚಹಾಲ್) ಬಗ್ಗೆ ಬಹಳಷ್ಟು ಹೇಳಬಹುದಿತ್ತು. ನನ್ನಲ್ಲಿ ಹೇಳಲು ಏನೂ ಇರಲಿಲ್ಲವೆಂದು ನಿಮಗೆ ಅನಿಸುತ್ತಾ ? ಖಂಡಿತವಾಗಿಯೂ ಇಲ್ಲ, ಯಾಕೆಂದರೆ ನಾನು ಅವರ ಪತ್ನಿಯಾಗಿದ್ದೇ ಮಹಿಳೆಯಾಗಿ ನಾನು ಹೇಳಬಹುದಾದ ಹಲವಾರು ವಿಚಾರಗಳಿವೆ ಎಂದು ಹೇಳಿದ್ಧಾರೆ.

ಮದುವೆಯ ಬಂಧನಕ್ಕೊಳಗಾದಾಗಲೂ ನಾನು ಅವರನ್ನು ಗೌರವಿಸುತ್ತಿದ್ದೆ, ಅದಕ್ಕೂ ಮೊದಲು ಕೂಡ ಗೌರವಿಸಿದ್ದೆ. ಇಂದಿಗೂ ಅವರನ್ನು ಗೌರವಿಸುತ್ತೇನೆ ಎಂದಿರುವ ಧನಶ್ರೀ ನೀವು ನಿಮ್ಮನ್ನು ಉತ್ತಮವಾಗಿ ತೋರಿಸಿಕೊಳ್ಳಬೇಕಾದರೆ, ನಿಮ್ಮ ಕೆಲಸದಿಂದ ತೋರಿಸಿಕೊಳ್ಳಿ. ಅದನ್ನು ಮಾಡದೇ ಬೇರೆಯವರನ್ನು ಕೀಳಾಗಿ ಬಿಂಬಿಸಿ ನಿಮ್ಮ ಸ್ವಂತ ಇಮೇಜ್ನ ಸುಧಾರಿಸುವುದು ಅರ್ಥಹೀನ ಎಂದು ಹೇಳಿದ್ದಾರೆ. ಮರ್ಯಾದೆ ನನಗೆ ತುಂಬಾ ಮುಖ್ಯ ಎಂದು ಕೂಡ ಧನಶ್ರೀ ಹೇಳಿದ್ದಾರೆ.
ಸದ್ಯ ಧನಶ್ರೀ ಅವರ ಈ ಮಾತುಗಳ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ. ಮಾಜಿ ಪತ್ನಿಯ ಈ ಮಾತುಗಳಿಗೆ ಚಹಾಲ್ ಹೇಗೆ ಪ್ರತಿಕ್ರಿಯಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











