ವರ್ಷಾರಂಭದಲ್ಲಿ ಓಟಿಟಿಗೆ ಬಂತು ಧನುಷ್-ಕೃತಿಯ ತೇರೆ ಇಷ್ಕ್ ಮೇ ;ಎಲ್ಲಿ?ಯಾವಾಗ?ಇಲ್ಲಿದೆ ಮಾಹಿತಿ
ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಚಿತ್ರಮಂದಿರ ಮತ್ತು ಓಟಿಟಿಯ ನಡುವೆ ಚಿತ್ರರಂಗ ಸಿಲುಕಿಕೊಂಡಿದೆ. ಚಿತ್ರಮಂದಿರಕ್ಕೆ ಓಟಿಟಿ ತೀವೃವಾದ ಸ್ಪರ್ಧೆಯನ್ನೊಡ್ಡುತ್ತಿದೆ. ಚಿತ್ರಮಂದಿರದಲ್ಲಿ ಕುಳಿತು ಚಿತ್ರ ನೋಡುವ ಮಜಾ ಬೇರೆಯದ್ದೇ ಆದರೂ ಕೂಡ ಮನೆಯಲ್ಲಿಯೇ ಕುಳಿತು ತಮಗೆ ಬೇಕಾದ ಸಮಯದಲ್ಲಿ ತಮ್ಮ ಇಷ್ಟದ ಚಿತ್ರವನ್ನು ನೋಡುವ ಪ್ರೇಕ್ಷಕರ ವರ್ಗ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.
ಮಲ್ಟಿಪ್ಲೆಕ್ಸ್ಗೆ ತೆರಳಿ ಜೇಬಿಗೆ ಕತ್ತರಿ ಹಾಕಿಸಿಕೊಳ್ಳುವ ಬದಲು ಕೆಲ ವಾರಗಳ ನಂತರ ಮೊಬೈಲ್ ಅಥವಾ ಟಿವಿಯಲ್ಲಿ ಚಿತ್ರವನ್ನು ನೋಡುವುದೇ ಹಲವರ ಪಾಲಿಗೆ ಈಗ ನೆಚ್ಚಿನ ಹವ್ಯಾಸವಾಗಿದೆ. ಪ್ರೇಕ್ಷಕ ಮಹಾಪ್ರಭುವಿನ ಈ ''ವೇಯ್ಟಿಂಗ್ ಪಾಲಿಸಿ''ಯಿಂದಾಗಿ ಹಲವು ಚಿಕ್ಕ-ಪುಟ್ಟ ಚಿತ್ರಗಳು ಬಾಕ್ಸಾಫೀಸ್ನಲ್ಲಿ ನೆಲಕಚ್ಚುತ್ತಿವೆ. ಕೇವಲ ಹೊಸಬರ ಚಿತ್ರಗಳು ಮಾತ್ರವಲ್ಲ ಸೂಪರ್ ಸ್ಟಾರ್ಗಳ ಚಿತ್ರಗಳ ಮೇಲೆ ಕೂಡ ಪ್ರೇಕ್ಷಕರ ಈ ಧೋರಣೆ ಪ್ರಭಾವ ಬೀರುತ್ತಿದೆ.

ಇದಕ್ಕೆ ಕೈಗನ್ನಡಿ ಎಂಬಂತೆ ಚಿತ್ರಮಂದಿರದತ್ತ ಪ್ರೇಕ್ಷಕರನ್ನು ಸೆಳೆಯುವಲ್ಲಿ ಒಂದು ಹಂತಕ್ಕೆ ವಿಫಲವಾದ ಮತ್ತು ''ಧುರಂಧರ್'' ಅಲೆಯಿಂದ ತತ್ತರಿಸಿದ ''ತೇರೆ ಇಷ್ಕ್ ಮೇ'' ಓಟಿಟಿಗೆ ಈಗ ಬರುತ್ತಿದೆ. ಹೌದು, ''ತೇರೆ ಇಷ್ಕ್ ಮೇ''.. ಧನುಷ್ ಮತ್ತು ಕೃತಿ ಸನೋನ್ ಅಭಿನಯದ ಚಿತ್ರ. ಧನುಷ್ ವೃತ್ತಿ ಬದುಕಿನ ವಿಶೇಷ ಮತ್ತು ವಿಶಿಷ್ಟ ಚಿತ್ರಗಳಲ್ಲಿ ಒಂದಾದ ''ರಾಂಜಾನ'' ಚಿತ್ರದ ನಿರ್ದೇಶಕ ಆನಂದ್ ಎಲ್ ರಾಯ್ ನಿರ್ದೇಶನದ ಚಿತ್ರ ಇದು. ಈ ಹಿನ್ನೆಲೆ ಚಿತ್ರದ ಮೇಲೆ ಅಪಾರವಾದ ನಿರೀಕ್ಷೆಗಳಿದ್ದವು.
ಆದರೆ.. ನಿರೀಕ್ಷೆಯ ಈ ಪರೀಕ್ಷೆಯಲ್ಲಿ ಫಸ್ಟ್ ರ್ಯಾಂಕ್ ಪಡೆಯಬೇಕಿದ್ದ ಆನಂದ್ ಎಲ್ ರಾಯ್ ಮತ್ತು ಧನುಷ್ ಎಡವಿದರು. ಕೇವಲ ಡಿಸ್ಟಿಂಕ್ಷನ್ನಲ್ಲಿ ಪಾಸಾದರು. ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯ್ತು. ಎಲ್ಲಕ್ಕಿಂತ ಹೆಚ್ಚಾಗಿ ''ತೇರೆ ಇಷ್ಕ್ ಮೇ'' ಬಿಡುಗಡೆಯಾದ ಒಂದೇ ವಾರಕ್ಕೆ ''ಧುರಂಧರ್'' ಎಂಬ ಜ್ವಾಲಾಮುಖಿ ಬಾಕ್ಸಾಫೀಸ್ಗೆ ಬಂದು ಅಪ್ಪಳಿಸಿತು. ''ಧುರಂಧರ್'' ಅಬ್ಬರದಿಂದ ''ತೇರೆ ಇಷ್ಕ್ ಮೇ'' ಬಾಕ್ಸಾಫೀಸ್ನಲ್ಲಿ ಸೊರಗಿ ಹೋಯ್ತು.
ಆದರೂ ಕೂಡ ಬಾಕ್ಸಾಫೀಸ್ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ಪ್ರಕಾರ ಈ ಚಿತ್ರ ಕೇವಲ ಭಾರತದಲ್ಲಿ ₹ 116.71 ಕೋಟಿಯನ್ನು ಗಳಿಸಿತು. ಇನ್ನು ನಿರ್ದೇಶಕ ಆನಂದ್ ಎಲ್ ರಾಯ್ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡ ಲೆಕ್ಕದ ಪ್ರಕಾರ ವಿಶ್ವದೆಲ್ಲೆಡೆ ಗಳಿಕೆಯನ್ನು ಕೂಡಿಸಿದರೆ ಈ ಚಿತ್ರ ಗಳಿಸಿದ್ದು ₹161.3 ಕೋಟಿ.
ಕಥಾಹಂದರವೇನು ?
ಶಂಕರ್ ಗುರುಕ್ಕಲ್ (ಧನುಷ್) ಕಾಲೇಜಿನಲ್ಲಿರೋ ಅತ್ಯಂತ ಕೋಪಿಷ್ಠ ವಿದ್ಯಾರ್ಥಿ. ಇವನ ತಂದೆ ಪ್ರಕಾಶ್ ರಾಜ್. ಮಗನನನ್ನು ಅತಿಯಾಗಿ ಪ್ರೀತಿಸುತ್ತಾರೆ. ಆದರೆ, ತಂದೆ ಹಾಗೂ ಮಗನ ನಡುವಿನ ವರ್ತನೆಯಲ್ಲಿ ಬಹಳಷ್ಟು ಭಿನ್ನಾಭಿಪ್ರಾಯಗಳಿವೆ. ಈ ಕಾಲೇಜಿಗೆ ಪಿಎಚ್ಡಿ ಪ್ರಬಂಧ ಸಲ್ಲಿಸಲು ಬರುವ ಮುಕ್ತಿ ಬೆಹ್ನಿವಾಲ್ಗೆ (ಕೃತಿ ಸನೋನ್) ಶಂಕರ್ ಕೇಸ್ ಸ್ಟಡಿಯಾಗಿ ಕಾಣಿಸುತ್ತಾನೆ. "ಮನುಷ್ಯನ ಹಿಂಸಾತ್ಮಕ ಪ್ರವೃತ್ತಿಯನ್ನು ನಿಯಂತ್ರಿಸಬಹುದು" ಎಂಬುವುದೇ ಮುಕ್ತಿಯ ಪ್ರಬಂಧ ವಿಷಯವಾಗಿರುತ್ತೆ. ಹೀಗಾಗಿ ಶಂಕರ್ನನ್ನು ಕೇಸ್ ಸ್ಟಡಿ ಆಗಿ ಆರಿಸಿಕೊಳ್ಳುತ್ತಾಳೆ. ಇತ್ತ ಮುಕ್ತಿಯನ್ನು ನೋಡಿದ ಮೊದಲ ನೋಟದಲ್ಲೇ ಶಂಕರ್ಗೆ ಪ್ರೀತಿ ಹುಟ್ಟುತ್ತೆ. ಮುಂದೇನಾಗುತ್ತೆ ಅನ್ನೋದೇ ಸಿನಿಮಾದ ತಿರುಳು.

ಎಲ್ಲಿ ಮತ್ತು ಯಾವಾಗ ನೋಡಬಹುದು ?
ಹೀಗೆ ಭಾವನಾತ್ಮಕವಾದ ಕಥಾಹಂದರವನ್ನು ಹೊಂದಿರುವ ''ತೇರೆ ಇಷ್ಕ್ ಮೇ'' ಇದೇ ಜನವರಿ 23ರಿಂದ ನೆಟ್ಪ್ಲಿಕ್ಸ್ನಲ್ಲಿ ಪ್ರಸಾರವಾಗಲಿದೆ. ಇನ್ನು ತೇರೆ ಇಷ್ಕ್ ಮೇ ಕೇವಲ ಹಿಂದಿಯಲ್ಲಿ ಮಾತ್ರವಲ್ಲ ತಮಿಳಿನಲ್ಲಿ ಕೂಡ ಬಿಡುಗಡೆಯಾಗಿತ್ತು.
ಈ ಹಿನ್ನೆಲೆ ಎರಡು ಭಾಷೆಯಲ್ಲಿ ಕೂಡ ಚಿತ್ರ ಓಟಿಟಿಯಲ್ಲಿ ಪ್ರಸಾರವಾಗಲಿದ್ದು ತೆಲುಗಿಗೆ ಡಬ್ ಮಾಡಲಾಗಿದೆ. ಕನ್ನಡ ಮತ್ತು ಬೇರೆ ಭಾಷೆಯ ಪ್ರೇಕ್ಷಕರಿಗಾಗಿ ಸಬ್ ಟೈಟಲ್ ಸೌಲಭ್ಯಗಳಿರುತ್ತವೆ ಎಂದು ಹೇಳಲಾಗುತ್ತಿದೆ. ಒಟ್ನಲ್ಲಿ ಶಂಕರ್ ಮತ್ತು ಮುಕ್ತಿಯ ಪ್ರೇಮಕಥೆಯನ್ನು ಈ ಜನವರಿ 23ರಿಂದ ನೆಟ್ಪ್ಲಿಕ್ಸ್ನಲ್ಲಿ ಪ್ರಸಾರವಾಗಲಿದೆ. ಆಸಕ್ತರು ಮನೆಯಲ್ಲಿಯೇ ನೋಡಬಹುದು.


Click it and Unblock the Notifications











