Landlord OTT: 'ಲ್ಯಾಂಡ್ಲಾರ್ಡ್' ಓಟಿಟಿ ಸ್ಟ್ರೀಮಿಂಗ್; ನಿರ್ದೇಶಕ ಜಡೇಶ್ ಹಂಪಿ ಪ್ರತಿಕ್ರಿಯೆ
ದುನಿಯಾ ವಿಜಯ್ ನಟನೆಯ 'ಲ್ಯಾಂಡ್ಲಾರ್ಡ್' ಸಿನಿಮಾ ತೆರೆಕಂಡು ಪ್ರೇಕ್ಷಕರಿಂದ ಒಳ್ಳೆ ರೆಸ್ಪಾನ್ಸ್ ಪಡೆದುಕೊಂಡಿತ್ತು. ಆದರೆ ದೊಡ್ಡದಾಗಿ ಸಿನಿಮಾ ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಸೆಳೆಯಲಿದೆ. ಇದೀಗ ಸಿನಿಮಾ ಓಟಿಟಿಗೆ ಸ್ಟ್ರೀಮಿಂಗ್ ಬಗ್ಗೆ ಚರ್ಚೆ ಶುರುವಾಗಿದೆ. ಈ ಬಗ್ಗೆ ಚಿತ್ರದ ನಿರ್ದೇಶಕ ಜಡೇಶ್ ಹಂಪಿ ಫಿಲ್ಮಿಬೀಟ್ ಕನ್ನಡಕ್ಕೆ ಪ್ರತಿಕ್ರಿಯಿಸಿದ್ದಾರೆ.
ಜನವರಿ 23ರಂದು ಆಕ್ಷನ್ ಥ್ರಿಲ್ಲರ್ 'ಲ್ಯಾಂಡ್ಲಾರ್ಡ್' ಸಿನಿಮಾ ತೆರೆಗೆ ಬಂದಿತ್ತು. ವಿಜಯ್ ಜೊತೆಗೆ ರಚಿತಾ ರಾಮ್ ನಾಯಕಿಯಾಗಿ ನಟಿಸಿದ್ದರು. ರಾಜ್. ಬಿ ಶೆಟ್ಟಿ ವಿಲನ್ ಆಗಿ ಅಬ್ಬರಿಸಿದ್ದರು. ಇನ್ನು ವಿಜಯ್ ಪುತ್ರಿ ರಿತನ್ಯಾ ಸಿನಿಮಾದಲ್ಲೂ ಮಗಳ ಪಾತ್ರದಲ್ಲೇ ಕಾಣಿಸಿಕೊಂಡಿದ್ದರು. ಉಮಾಶ್ರೀ ನಟನೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಸೂರಜ್ ಗೌಡ ಹಾಗೂ ಸತ್ಯ ಪ್ರಕಾಶ್ ಚಿತ್ರವನ್ನು ನಿರ್ಮಿಸಿದ್ದರು.

ಬಹಳ ಅದ್ಧೂರಿಯಾಗಿ ಚಿತ್ರವನ್ನು ಕಟ್ಟಿಕೊಟ್ಟಿದ್ದರು. ವಿಜಯ್, ರಚಿತಾ ರಾಮ್, ಉಮಾಶ್ರೀ, ರಾಜ್ ಬಿ ಶೆಟ್ಟಿ ಎಲ್ಲರೂ ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದರು. ಅದ್ಭುತವಾಗಿ ನಟಿಸಿ ಪ್ರೇಕ್ಷಕರ ಮನ ಗೆದ್ದಿದ್ದರು. ಎಲ್ಲಾ ವಿಭಾಗದಲ್ಲಿ ಒಳ್ಳೆ ಕೆಲಸ ತೆಗೆಸಿ ಜಡೇಶ್ ಗಮನ ಸೆಳೆದಿದ್ದರು. ದೊಡ್ಡಮಟ್ಟದಲ್ಲಿ ಹಿಟ್ ಆಗಬೇಕಿದ್ದ ಸಿನಿಮಾ ಯಾಕೋ ಗುರಿ ತಲುಪಲಿಲ್ಲ.
ರಾಜಕೀಯ ಮುಖಂಡರು, ಸಿನಿಮಾ ತಾರೆಯರು ಸೇರಿದಂತೆ ಹಲವು 'ಲ್ಯಾಂಡ್ಲಾರ್ಡ್' ಚಿತ್ರಕ್ಕೆ ಬಹುಪರಾಕ್ ಎಂದಿದ್ದರು. ಸರ್ಕಾರದಿಂದ ಚಿತ್ರಕ್ಕೆ ತೆರಿಗೆ ವಿನಾಯಿತಿ ಸಿಕ್ಕಿತ್ತು. ಊಳಿಗಮಾನ್ಯ ಪದ್ಧತಿ, ಕೆಳವರ್ಗದ ಮೇಲೆ ಮೇಲ್ವರ್ಗದವರ ದಬ್ಬಾಳಿಕೆ ರೀತಿಯ ವಿಚಾರಗಳನ್ನು ಚಿತ್ರದಲ್ಲಿ ಚರ್ಚಿಸಲಾಗಿತ್ತು. ಜೀ ಸಂಸ್ಥೆಗೆ ಚಿತ್ರದ ಓಟಿಟಿ ಹಾಗೂ ಸ್ಯಾಟಲೈಟ್ ರೈಟ್ಸ್ ಮಾರಾಟವಾಗಿದೆ. ಯುಗಾದಿ ಹಬ್ಬದ ಸಂಭ್ರಮದಲ್ಲಿ ಸಿನಿಮಾ ಜೀ-5ನಲ್ಲಿ ಸ್ಟ್ರೀಮಿಂಗ್ ಆಗಬಹುದು ಎಂದು ಜಡೇಶ್ ಹೇಳಿದ್ದಾರೆ.

"ಜೀ ಸಂಸ್ಥೆಗೆ ಓಟಿಟಿ ರೈಟ್ಸ್ ಸೇಲ್ ಆಗಿದೆ. ಯಾವಾಗ ಸಿನಿಮಾ ಸ್ಟ್ರೀಮಿಂಗ್ ಎನ್ನುವ ಬಗ್ಗೆ ಖಚಿತ ಮಾಹಿತಿ ಇಲ್ಲ. ಯುಗಾದಿ ಹಬ್ಬಕ್ಕೆ ಸಿನಿಮಾ ಓಟಿಟಿಗೆ ಬರಬಹುದು" ಎಂದು ಜಡೇಶ್ ತಿಳಿಸಿದ್ದಾರೆ. ಮಾರ್ಚ್ 19ರಂದು ಈ ಬಾರಿ ಯುಗಾದಿ ಹಬ್ಬ ಆಚರಿಸಲಾಗ್ತಿದೆ. ಅಂದೇ 'ಲ್ಯಾಂಡ್ಲಾರ್ಡ್' ಸಿನಿಮಾ ಓಟಿಟಿಗೆ ಬರುವ ನಿರೀಕ್ಷೆಯಿದೆ.
'ಲ್ಯಾಂಡ್ಲಾರ್ಡ್' ಚಿತ್ರದ ಬಾಕ್ಸಾಫೀಸ್ ಲೆಕ್ಕಾಚಾರ ಏನೇ ಇದ್ದರೂ ಒಂದೊಳ್ಳೆ ಸಿನಿಮಾ ಮಾಡಿ ಚಿತ್ರತಂಡ ಗೆದ್ದಿತ್ತು. ಬಹಳ ಗಂಭೀರ ವಿಚಾರಗಳನ್ನು ತಮ್ಮ ಸಿನಿಮಾಗಳಲ್ಲಿ ಹೇಳಿ ಜಡೇಶ್ ಮೆಚ್ಚುಗೆ ಗಳಿಸಿದ್ದರು. "ಮುಂದಿನ ಸಿನಿಮಾ ಯಾವಾಗ ಎನ್ನುವ ಪ್ರಶ್ನೆಗೆ ಮಾತುಕತೆ ನಡೀತಿದೆ. ಎಲ್ಲಾ ಕನ್ಫರ್ಮ್ ಆದ ಬಳಿಕ ಮಾಹಿತಿ ಕೊಡುತ್ತೇನೆ" ಎಂದಿದ್ದಾರೆ.
'ಜಂಟಲ್ಮನ್' ರೀತಿಯ ವಿಭಿನ್ನ ಸಿನಿಮಾ ಕಟ್ಟಿಕೊಟ್ಟು ಗೆದ್ದಿದ್ದ ಜಡೇಶ್ ಬಳಿಕ 'ಗುರು-ಶಿಷ್ಯರು' ರೀತಿಯ ಪ್ರಯೋಗ ಮಾಡಿ ಮೆಚ್ಚುಗೆ ಗಳಿಸಿದ್ದರು. ಆ ನಂತರ 'ಕಾಟೇರ' ಚಿತ್ರಕ್ಕೆ ಕಥೆ ಒದಗಿಸಿದ್ದರು. ಇದೀಗ 'ಲ್ಯಾಂಡ್ಲಾರ್ಡ್' ಸಿನಿಮಾ ಮಾಡಿ ತಮ್ಮ ಪ್ರತಿಭೆ ಸಾಬೀತುಪಡಿಸಿದ್ದಾರೆ. ಈ ಮೂರು ಸಿನಿಮಾಗಳಲ್ಲಿ ಹಳ್ಳಿ ಹಿನ್ನೆಲೆ ಕಥೆ ಇತ್ತು. "ಮುಂದಿನ ಸಿನಿಮಾದಲ್ಲಿ ಕೊಂಚ ಬೇರೆಯದ್ದೇ ಕಥೆ ಇರಲಿದೆ" ಎಂದು ಸುಳಿವು ಕೊಟ್ಟಿದ್ದಾರೆ.
ಅತ್ತ ದುನಿಯಾ ವಿಜಯ್ 'ಸಿಟಿ ಲೈಟ್ಸ್' ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಶೀಘ್ರದಲ್ಲೇ ಚಿತ್ರ ತೆರೆಗೆ ತರುವ ಪ್ರಯತ್ನದಲ್ಲಿದ್ದಾರೆ. ವಿನಯ್ ರಾಜ್ಕುಮಾರ್ ಹಾಗೂ ರಿತನ್ಯಾ ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಬಣ್ಣ ಹಚ್ಚಿದ್ದಾರೆ. ತಮಿಳಿನ 'ಮೂಕುಟ್ಟಿ ಅಮ್ಮನ್' ಎಂಬ ಚಿತ್ರದಲ್ಲಿ ಕೂಡ ವಿಜಯ್ ಬಣ್ಣ ಹಚ್ಚಿದ್ದಾರೆ. 'ಭೀಮ' ಬಳಿಕ ಮತ್ತೆ ಸಿನಿಮಾ ನಿರ್ದೇಶಿಸಿ ನಟಿಸುವ ಲೆಕ್ಕಾಚಾರದಲ್ಲಿದ್ದಾರೆ.


Click it and Unblock the Notifications











