ದಿಢೀರ್ ಓಟಿಟಿಗೆ ಬಂದು ಬಿಡ್ತು ಗೋಲ್ಡನ್ ಸ್ಟಾರ್ ಗಣೇಶ್ ಸಿನಿಮಾ
ಓಟಿಟಿಗೆ ಕನ್ನಡ ಕಂಟೆಂಟ್ ಕಮ್ಮಿ ಕಮ್ಮಿ ಎನ್ನುವ ವಾದ ಇದೆ. ಸಣ್ಣ ಸಿನಿಮಾಗಳನ್ನು ಓಟಿಟಿ ಸಂಸ್ಥೆಗಳು ಕೇಳಲ್ಲ. ವರ್ಷಕ್ಕೆ ಐದರಿಂದ ಹತ್ತು ಸಿನಿಮಾಗಳಿಂದ ಕನ್ನಡದಲ್ಲಿ ರಿಲೀಸ್ ಆಗುತ್ತಿವೆ. ಆ ಸಿನಿಮಾಗಳನ್ನು ಮಾತ್ರ ಅಮೇಜಾನ್ ಪ್ರೈಂ ಖರೀದಿಸುತ್ತದೆ. ನೆಟ್ಫ್ಲಿಕ್ಸ್ ಕನ್ನಡ ಕಂಟೆಂಟ್ ತಗೊಳ್ಳೋದೆ ಇಲ್ಲ. ಬೇರೆ ಪ್ಲಾಟ್ಫಾರ್ಮ್ಗಳನ್ನು ಇಲ್ಲಿ ಕೇಳೋರಿಲ್ಲ.
ಕನ್ನಡದಲ್ಲಿ ವೆಬ್ ಸೀರಿಸ್ಗಳ ನಿರ್ಮಾಣ ನಡೆಯುತ್ತಿಲ್ಲ. ಆಗೊಂದು ಈಗೊಂದು ಬಂದರೂ ಹೆಚ್ಚು ಸದ್ದು ಮಾಡ್ತಿಲ್ಲ. ಇನ್ನು ಕೆಲ ಸಿನಿಮಾಗಳು ದಿಢೀರನೇ ಓಟಿಟಿಗೆ ಎಂಟ್ರಿ ಕೊಟ್ಟುಬಿಡುತ್ತದೆ. ಅದರ ಬಗ್ಗೆ ಮಾಹಿತಿನೇ ಇರುವುದಿಲ್ಲ. ಈ ಹಿಂದೆ 'ತತ್ಸಮ ತದ್ಭವ' ಸಿನಿಮಾ ಇದೇ ರೀತಿ ಬಂದಿತ್ತು. ಇದೀಗ ಗಣೇಶ್ ನಟನೆಯ 'ಬಾನದಾರಿಯಲಿ' ಸಿನಿಮಾ ಪ್ರೈಂ ವಿಡಿಯೋದಲ್ಲಿ ಸ್ಟ್ರೀಮಿಂಗ್ ಆಗ್ತಿದೆ.

ಗೋಲ್ಡನ್ ಸ್ಟಾರ್ ಗಣೇಶ್ ಸಿನಿಮಾಗಳು ತೆರೆಮೇಲೆ ಮೊದಲಿನ ಮ್ಯಾಜಿಕ್ ಕ್ರಿಯೇಟ್ ಮಾಡ್ತಿಲ್ಲ. ಸಿನಿಮಾ ಚೆನ್ನಾಗಿದ್ದರೂ ಯಾಕೋ ಬಾಕ್ಸಾಫೀಸ್ನಲ್ಲಿ ಸದ್ದು ಮಾಡ್ತಿಲ್ಲ. ಪ್ರೀತಂ ಗುಬ್ಬಿ ನಿರ್ದೇಶನದ 'ಬಾನದಾರಿಯಲಿ' ಸಿನಿಮಾ ಸೆಪ್ಟೆಂಬರ್ 28ಕ್ಕೆ ರಿಲೀಸ್ ಆಗಿತ್ತು. ಸಿನಿಮಾ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿಬಂದಿತ್ತು. ಆದರೆ ಬಹಳ ದಿನ ಚಿತ್ರಮಂದಿರಗಳಲ್ಲಿ ಉಳಿಯಲಿಲ್ಲ. ಇದೀಗ ಸಿನಿಮಾ ಓಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.
'ಬಾನದಾರಿಯಲಿ' ಚಿತ್ರದಲ್ಲಿ ಗಣೇಶ್ಗೆ ನಾಯಕಿಯರಾಗಿ ರುಕ್ಮಿಣಿ ವಸಂತ್ ಹಾಗೂ ರೀಷ್ಮಾ ನಾಣಯ್ಯ ನಟಿಸಿದ್ದಾರೆ. ರಂಗಾಯಣ ರಘು ಕೂಡ ಮುಖ್ಯಭೂಮಿಕೆಯಲ್ಲಿದ್ದರು. ಅಭಿಲಾಷ್ ಕಲತಿ ಛಾಯಾಗ್ರಹಣ, ಅರ್ಜುನ್ ಜನ್ಯಾ ಸಂಗೀತದ ಚಿತ್ರವನ್ನು ಶ್ರೀವಾರೆ ಟಾಕೀಸ್ ಸಂಸ್ಥೆ ನಿರ್ಮಾಣ ಮಾಡಿತ್ತು.
ಪುನೀತ್ ರಾಜ್ಕುಮಾರ್ ಬಾಲನಟನಾಗಿ ನಟಿಸಿದ್ದ 'ಭಾಗ್ಯವಂತ' ಚಿತ್ರದ ಸೂಪರ್ ಹಿಟ್ ಹಾಡಿನ ಸಾಲನ್ನೇ ಚಿತ್ರದ ಟೈಟಲ್ ಆಗಿ ಇಟ್ಟು ಪ್ರೀತಂ ಸಿನಿಮಾ ಮಾಡಿದ್ದರು. ಸ್ವತಃ ಪುನೀತ್ 'ಬಾನದಾರಿಯಲಿ ಸೂರ್ಯ ಜಾರಿ ಹೋದ' ಎಂದು ಹಾಡಿದ್ದರು. ಈ ಹಾಡಿಗೂ ಚಿತ್ರದಲ್ಲಿ ಮಹತ್ವ ಇದೆ. ಒಬ್ಬ ತಂದೆ ಹಾಗೂ ಮಗಳು ಒಂದು ಕನಸನ್ನು ಕಾಣುತ್ತಾರೆ. ಅದನ್ನು ಒಬ್ಬ ಹೀರೊ ಬಂದು ಹೇಗೆ ಈಡೇರಿಸುತ್ತಾನೆ ಅನ್ನೋದೇ ಚಿತ್ರದ ಒನ್ ಲೈನ್ ಸ್ಟೋರಿ. ಇಲ್ಲಿ ತಂದೆ ರಂಗಾಯಣ ರಘು. ಮಗಳು ರುಕ್ಷಿಣಿ ವಸಂತ್. ಹೀರೊ ಗೋಲ್ಡನ್ ಸ್ಟಾರ್ ಗಣೇಶ್. ಈ ತಂದೆ ಮಗಳ ಕಥೆಯ ಜೊತೆ ಒಂದು ಲವ್ ಸ್ಟೋರಿ ಕೂಡ ಚಿತ್ರದಲ್ಲಿದೆ.

ಒಂದು ಭಾವನಾತ್ಮಕ ಕತೆಯನ್ನು ಪ್ರೀತಂ ಬಹಳ ಸೊಗಸಾಗಿ ತೆರೆಗೆ ತಂದಿದ್ದರು. ಆಫ್ರಿಕಾದಲ್ಲಿ ಸೆರೆ ಹಿಡಿದಿದ್ದ ದೃಶ್ಯಗಳು ತೆರೆಮೇಲೆ ಅದ್ಭುತ ಅನುಭವ ನೀಡಿತ್ತು. ಕ್ಲೈಮ್ಯಾಕ್ಸ್ ಕೂಡ ಚೆನ್ನಾಗಿತ್ತು. ಆದರೆ ಅಲ್ಲಲ್ಲಿ ಸಿನಿಮಾ ಮಿಸ್ ಹೊಡೆಯುವಂತೆ ಭಾಸವಾಗಿತ್ತು. ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಏನೋ ಸಿಕ್ಕಿತ್ತು. ಆದರೆ ಬಾಕ್ಸಾಫೀಸ್ನಲ್ಲಿ ಜಾದೂ ನಡೆಯಲಿಲ್ಲ. ಸಿನಿಮಾ ರಿಲೀಸ್ ಆಗಿದ್ದ ಮರುದಿನವೇ ಕಾವೇರಿ ಹೋರಾಟಕ್ಕಾಗಿ ಕರ್ನಾಟಕ ಬಂದ್ ಆಚರಿಸಲಾಗಿತ್ತು. ಇದು ಕೂಡ ಸಿನಿಮಾ ಗಳಿಕೆಗೆ ಪೆಟ್ಟು ಕೊಟ್ಟಿತ್ತು.
ಗಣೇಶ್ ನಟಿಸಿದ 'ಗಾಳಿಪಟ'-2 ಸಿನಿಮಾ ಹಿಟ್ ಆಗಿತ್ತು. ಬಳಿಕ ಬಂದ 'ತ್ರಿಬಲ್ ರೈಡಿಂಗ್' ಹಾಗೂ 'ಬಾನದಾರಿಯಲಿ' ಸದ್ದು ಮಾಡಲಿಲ್ಲ. ಗಣಿ ಇದೀಗ 'ಕೃಷ್ಣಂ ಪ್ರಣಯ ಸಖಿ' ಎನ್ನುವ ಚಿತ್ರದಲ್ಲಿ ನಟಿಸುತ್ತಿದ್ದಾರೆ. 'ದಂಡುಪಾಳ್ಯ' ಸಿನಿಮಾ ಖ್ಯಾತಿಯ ಶ್ರೀನಿವಾಸ್ ರಾಜು ಈ ರೊಮ್ಯಾಂಟಿಕ್ ಲವ್ ಸ್ಟೋರಿಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಮಾಳವಿಕಾ ನಾಯರ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.


Click it and Unblock the Notifications










