ವನ್ನಿಯರ್ ಸಮುದಾಯದ ಆಕ್ಷೇಪ: ಕ್ಷಮೆ ಕೇಳಿದ 'ಜೈ ಭೀಮ್' ನಿರ್ದೇಶಕ
ಕೆಲವು ದಿನಗಳ ಹಿಂದೆ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಿ ಬಹು ಮೆಚ್ಚುಗೆಗೆ ಕಾರಣವಾಗಿರುವ ತಮಿಳಿನ 'ಜೈ ಭೀಮ್' ಸಿನಿಮಾ ಗಂಭೀರ ವಿವಾದವೊಂದರ ಮಧ್ಯೆ ಸಿಲುಕಿಕೊಂಡಿದೆ.
ಜಾತಿ ವ್ಯವಸ್ಥೆಯ ಬಗ್ಗೆ ಮಾತನಾಡುವ 'ಜೈ ಭೀಮ್' ಸಿನಿಮಾದಲ್ಲಿ ವನ್ನಿಯರ್ ಸಮುದಾಯವನ್ನು ಉದ್ದೇಶಪೂರ್ವಕವಾಗಿ ಕೆಟ್ಟದಾಗಿ ಬಿಂಬಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಜೊತೆಗೆ ನಿಜ ಘಟನೆ ಆಧರಿಸಿ ಮಾಡಲಾಗಿರುವ ಈ ಸಿನಿಮಾದಲ್ಲಿ ಸತ್ಯವನ್ನು ತಿರುಚಲಾಗಿದೆ ಎಂಬ ಆರೋಪವೂ ಕೇಳಿ ಬಂದಿದೆ.
ಈಗಾಗಲೇ ಸಿನಿಮಾದ ಮೇಲೆ ವನ್ನಿಯರ್ ಸಮುದಾಯವು ದೂರು ದಾಖಲಿಸಿದೆ. ಕ್ಷಮಾಪಣೆ ಜೊತೆಗೆ ಐದು ಕೋಟಿ ಪರಿಹಾರಕ್ಕೆ ಬೇಡಿಕೆ ಇಟ್ಟಿದೆ. ಒಬ್ಬ ಮುಖಂಡರಂತೂ 'ಜೈ ಭೀಮ್' ಸಿನಿಮಾದ ನಿರ್ಮಾಪಕ, ನಟ ಸೂರ್ಯಗೆ ಒಬ್ಬವರಿಗೆ ಒಂದು ಲಕ್ಷ ಕೊಡುವುದಾಗಿ ಘೋಷಣೆಯೂ ಮಾಡಿದ್ದರು. ವಿವಾದ ಹೆಚ್ಚಾಗುತ್ತಲೇ ಸಾಗಿದ್ದರಿಂದ ಇದೀಗ 'ಜೈ ಭೀಮ್' ಸಿನಿಮಾದ ನಿರ್ದೇಶಕ ವನ್ನಿಯರ್ ಸಮುದಾಯದ ಕ್ಷಮೆ ಕೇಳಿದ್ದಾರೆ.
'ಜೈ ಭೀಮ್' ಸಿನಿಮಾದ ನಿರ್ದೇಶಕ ಟಿಜೆ ಜ್ಞಾನವೇಲು ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿದ್ದು, ''ಯಾವುದೇ ಸಮುದಾಯಗಳಿಗೆ ಮುಖಭಂಗ ಮಾಡುವ ಉದ್ದೇಶ ನಮಗೆ ಇರಲಿಲ್ಲ. ಹಾಗಿದ್ದೂ, ನಮ್ಮ ಸಿನಿಮಾದಿಂದ ಯಾರಿಗಾದರೂ ಬೇಸರವಾಗಿದ್ದರೆ ಕ್ಷಮೆ ಇರಲಿ'' ಎಂದಿದ್ದಾರೆ.

ಕೆಟ್ಟದಾಗಿ ಬಿಂಬಿಸುವ ಉದ್ದೇಶ ನಮಗಿರಲಿಲ್ಲ: ಜ್ಞಾನವೇಲು
''ಬುಡಕಟ್ಟು ಜನರಿಗೆ ಆಗುತ್ತಿರುವ ಅನ್ಯಾಯ, ಸುಳ್ಳು ಪ್ರಕರಣಗಳಿಂದಾಗಿ ಅವರು ಅನುಭವಿಸುತ್ತಿರುವ ನೋವಿನ ಬಗ್ಗೆ ಗಮನ ಸೆಳೆವ ಉದ್ದೇಶದಿಂದ ನಾವು 'ಜೈ ಭೀಮ್' ಸಿನಿಮಾ ಮಾಡಿದ್ದೇವೆ. ಯಾವುದೇ ಸಮಯದಾಯನ್ನು ಕೆಟ್ಟದಾಗಿ ಬಿಂಬಿಸುವ ಉದ್ದೇಶ ನಮಗೆ ಇಲ್ಲ'' ಎಂದಿದ್ದಾರೆ. ಈಗ ವಿವಾದಕ್ಕೆ ಕಾರಣವಾಗಿರುವ ಆ ಕ್ಯಾಲೆಂಡರ್ನ ದೃಶ್ಯ ಸಿನಿಮಾದಲ್ಲಿ ಕೇವಲ ಒಂದೆರಡು ಸೆಕೆಂಡ್ಗಳಷ್ಟೆ ಬರುತ್ತದೆ. ಸಿನಿಮಾ ಬಿಡುಗಡೆಗೆ ಮುನ್ನ ನಮಗೆ ವಿಷಯ ಗೊತ್ತಿದ್ದಿದ್ದರೆ ಆ ದೃಶ್ಯವನ್ನು ತೆಗೆದುಹಾಕುತ್ತಿದ್ದೆವು'' ಎಂದಿದ್ದಾರೆ ಜ್ಞಾನವೇಲು.

ಸೂರ್ಯಗೂ ಕ್ಷಮೆ ಕೇಳಿದ ನಿರ್ದೇಶಕ
''ಸಿನಿಮಾದ ನಿರ್ದೇಶಕನಾಗಿ ಸಿನಿಮಾದ ಜವಾಬ್ದಾರಿ, ಹೊಣೆ ನನ್ನದು. ನಟ ಹಾಗೂ ನಿರ್ಮಾಪಕನಾಗಿ ಸೂರ್ಯ ಬುಡಕಟ್ಟು ಜನಾಂಗದ ಮೇಲಾಗಿತ್ತಿರುವ ದೌರ್ಜನ್ಯದ ಮೇಲೆ ಬೆಳಕು ಚೆಲ್ಲುವ ಯತ್ನವನ್ನಷ್ಟೆ ಮಾಡಿದ್ದಾರೆ. ಈ ವಿವಾದದಲ್ಲಿ ಅವರನ್ನು ದೂಷಿಸುವುದು ಸರಿಯಲ್ಲ. ನಾನು ಸೂರ್ಯ ಅವರಲ್ಲೂ ಕ್ಷಮೆ ಕೋರುತ್ತೇನೆ. ನಾನು ಮಾಡಿದ ತಪ್ಪಿನಿಂದ ಅವರು ಇಂದು ಟೀಕೆಗೆ ಗುರಿಯಾಗಬೇಕಾಗಿದೆ'' ಎಂದಿದ್ದಾರೆ ಜ್ಞಾನವೇಲು.

ಏನಿದು ವಿವಾದ?
ಸಿನಿಮಾದಲ್ಲಿ ಪೊಲೀಸ್ ಪಾತ್ರವೊಂದು ಇದ್ದು ಆತನಿಂದಾಗಿ ಬುಡಕಟ್ಟು ಜನಾಂಗದ ವ್ಯಕ್ತಿಯೊಬ್ಬ ಲಾಕಪ್ ನಲ್ಲಿ ಸಾವಿಗೆ ಈಡಾಗುತ್ತಾನೆ. ಬುಡಕಟ್ಟು ಜನಾಂಗದವರನ್ನು ತೀವ್ರವಾಗಿ ಹಿಂಸಿಸುವ ಕೆಟ್ಟ ಪಾತ್ರ ಆ ಪೊಲೀಸ್ ಅಧಿಕಾರಿಯದ್ದು. ಸಿನಿಮಾದ ಒಂದು ದೃಶ್ಯದಲ್ಲಿ ಪೊಲೀಸ್ ಅಧಿಕಾರಿಯ ಹಿಂದೆ ವನ್ನಿಯರ್ ಸಮುದಾಯದ ಗುರುತಾದ ಕತ್ತಿಯುಳ್ಳ ಅಗ್ನಿಕುಂಡದ ಚಿತ್ರವಿರುವ ಕ್ಯಾಲೆಂಡರ್ ನೇತು ಹಾಕಿರುವುದು ಕಾಣುತ್ತದೆ. ಪೊಲೀಸ್ ಅಧಿಕಾರಿಯ ಹೆಸರೂ ಸಹ ವನ್ನಿಯರ್ ಸಮುದಾಯದ ಹೆಸರಿನಂತೆಯೇ ಇದೆ. ಹಾಗಾಗಿ ವನ್ನಿಯರ್ ಸಮುದಾಯದವರು ಆಕ್ಷೇಪ ವ್ಯಕ್ತಪಡಿಸಿದ್ದು, ವನ್ನಿಯರ್ ಸಮುದಾಯಕ್ಕೆ ಅಪಮಾನ ಮಾಡಲೆಂದೇ ಪೊಲೀಸ್ ಅಧಿಕಾರಿಯನ್ನು ವನ್ನಿಯರ್ ಸಮುದಾಯದ ವ್ಯಕ್ತಿಯಂತೆ ಬಿಂಬಿಸಲಾಗಿದೆ ಎಂದಿದ್ದಾರೆ. ದೂರು ಸಹ ನೀಡಿದ್ದಾರೆ.

ಮತ್ತೊಂದು ದೃಶ್ಯದ ಬಗ್ಗೆಯೂ ವಿವಾದ ಎದ್ದಿತ್ತು
ಇದು ಮಾತ್ರವೇ ಅಲ್ಲದೆ ಸಿನಿಮಾದಲ್ಲಿ ಪ್ರಕಾಶ್ ರೈ ನಟಿಸಿರುವ ದೃಶ್ಯವೊಂದರಲ್ಲಿ ಪಾತ್ರವೊಂದು ತನ್ನ ಮುಂದೆ ಹಿಂದಿ ಮಾತನಾಡಿದ್ದಕ್ಕೆ ಪ್ರಕಾಶ್ ರೈ ಆತನ ಕಪಾಳಕ್ಕೆ ಭಾರಿಸಿ, 'ತಮಿಳಿನಲ್ಲಿ ಮಾತನಾಡು' ಎನ್ನುತ್ತಾರೆ. ಈ ದೃಶ್ಯದ ಬಗ್ಗೆಯೂ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ದೃಶ್ಯವು ಪ್ರಕಾಶ್ ರೈ ಅವರ ಹಾಗೂ ಸೂರ್ಯ ಅವರ ಕೇಂದ್ರ ಸರ್ಕಾರ ವಿರೋಧಿ ಧೋರಣೆಯ ಹೇರಿಕೆ ಎಂದಿದ್ದರು. ಭಾಷೆಯ ಕಾರಣಕ್ಕೆ ವ್ಯಕ್ತಿಯ ಕಪಾಳಕ್ಕೆ ಹೊಡೆಯುವುದು ಎಷ್ಟು ಸರಿ ಎಂತಲೂ ಪ್ರಶ್ನೆ ಮಾಡಿದ್ದರು. ವಿವಾದಕ್ಕೆ ಪ್ರತಿಕ್ರಿಯಿಸಿದ್ದ ಪ್ರಕಾಶ್ ರೈ, ''ಸಿನಿಮಾದಲ್ಲಿ ಪೊಲೀಸ್ ಅಧಿಕಾರಿಗೆ ಗೊತ್ತಿದೆ ಆ ವಕ್ತಿ ತಮಿಳು ಮಾತನಾಡಬಲ್ಲ ಎಂಬುದು. ಆದರೆ ಆತ ತನಿಖೆಯ ದಿಕ್ಕು ತಪ್ಪಿಸಲು ಹಿಂದಿ ಭಾಷೆ ಮಾತನಾಡಲು ಯತ್ನಿಸುತ್ತಾನೆ. ಆ ಸಮಯದಲ್ಲಿ ಒಬ್ಬ ಪೊಲೀಸ್ ಅಧಿಕಾರಿ ಹಾಗೆಯೇ ವರ್ತಿಸುತ್ತಾನೆ, ಅದನ್ನು ಸಿನಿಮಾದಲ್ಲಿ ತೋರಿಸಲಾಗಿದೆ'' ಎಂದು ದೃಶ್ಯವನ್ನು ಸಮರ್ಥನೆ ಮಾಡಿಕೊಂಡಿದ್ದರು.


Click it and Unblock the Notifications











