ಬಹಳ ದಿನಗಳಿಂದ ಕಾಯುತ್ತಿದ್ದ ಕನ್ನಡದ ಆ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಓಟಿಟಿಗೆ ಬಂದಿದೆ; ಈಗ್ಲೇ ನೋಡಿ
ಓಟಿಟಿಯಲ್ಲಿ ವಾರಕ್ಕೊಂದು ಒಳ್ಳೆ ಕನ್ನಡ ಸಿನಿಮಾ ಬರ್ತಿದೆ. 'ಯುವ', 'ಒಂದು ಸರಳ ಪ್ರೇಮಕಥೆ', 'ಬ್ಲಿಂಕ್', 'ಅವತಾರ ಪುರುಷ-2', 'ಶಾಖಾಹಾರಿ', 'O2' ಹೀಗೆ ಒಂದಕ್ಕಿಂತ ಒಂದು ಸಿನಿರಸಿಕರನ್ನು ರಂಜಿಸಿವೆ. ಇದರಲ್ಲಿ ಬಹುತೇಕ ಸಿನಿಮಾಗಳಿಗೆ ದೊಡ್ಡಪರದೆಗಿಂತ ಓಟಿಟಿಯಲ್ಲಿ ಉತ್ತಮ ರೆಸ್ಪಾನ್ಸ್ ಸಿಕ್ಕಿತ್ತು. ಇದೇ ಸಾಲಿಗೆ ಮತ್ತೊಂದು ಸಿನಿಮಾ ಸೇರಿಕೊಳ್ತಿದೆ.
ಹೊಸ ವರ್ಷದ 5 ತಿಂಗಳಲ್ಲಿ ಯಾವುದೇ ದೊಡ್ಡ ಕನ್ನಡ ಸಿನಿಮಾ ತೆರೆಗೆ ಬರಲಿಲ್ಲ. ಹೊಸಬರ ಒಂದಷ್ಟು ಒಳ್ಳೆ ಸಿನಿಮಾಗಳು ಬಂದರೂ ಸದ್ದು ಮಾಡಲಿಲ್ಲ. ಐಪಿಎಲ್, ಲೋಕಸಭೆ ಚುನಾವಣೆ ಭರಾಟೆ ನಡುವೆ ನಿರ್ಮಾಪಕರು ಸಿನಿಮಾ ಬಿಡುಗಡೆಗೆ ಹಿಂದೇಟು ಹಾಕುವಂತಾಯಿತು. ಇನ್ನು ಚಿತ್ರಮಂದಿರಗಳಲ್ಲಿ ಗೆಲ್ಲದ ಸಿನಿಮಾಗಳು ಓಟಿಟಿಗೆ ಬಂದು ಗಮನ ಸೆಳೆದಿವೆ. ಬಹುತೇಕ ಸಿನಿಮಾಗಳು ಪ್ರೈಂ ವಿಡಿಯೋಗೆ ಬಂದಿವೆ.

ಇದೀಗ 'ಧರಣಿ ಮಂಡಲ ಮಧ್ಯದೊಳಗೆ' ಸಿನಿಮಾ ಸದ್ದಿಲ್ಲದೇ ಪ್ರೈಂ ವೀಡಿಯೋದಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಯಾವುದೇ ಮಾಹಿತಿ ಇಲ್ಲದೇ ಚಿತ್ರವನ್ನು ರಿಲೀಸ್ ಮಾಡಲಾಗಿದೆ. ಕೆಲವರು ಬಹಳ ದಿನಗಳಿಂದ ಸಿನಿಮಾ ಓಟಿಟಿ ಸ್ಟ್ರೀಮಿಂಗ್ಗಾಗಿ ಕಾಯುತ್ತಿದ್ದರು. 2022ರ ನವೆಂಬರ್ 2ರಂದು ಈ ಸಿನಿಮಾ ತೆರೆಗೆ ಬಂದಿತ್ತು. ಬಳಿಕ ಡಿಜಿಟಲ್ ಸ್ಟ್ರೀಮಿಂಗ್ ಯಾವಾಗ ಎಂದು ಕಾದು ಕಾದು ಕೆಲವರು ಸುಮ್ಮನಾಗಿದ್ದರು. ಒಂದೂವರೆ ವರ್ಷದ ಬಳಿಕ ಸಿನಿಮಾ ಬಂದಿದೆ.
ಶ್ರೀಧರ್ ಷಣ್ಮುಖ ಈ ಕ್ರೈಂ ಥ್ರಿಲ್ಲರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ನವೀಶ್ ಶಂಕರ್, ಐಶಾನಿ ಶೆಟ್ಟಿ, ಪ್ರಕಾಶ್ ತುಮ್ಮಿನಾಡು ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಒಂದ್ಕಡೆ ದೊಡ್ಡ ಬಾಕ್ಸರ್ ಆಗಬೇಕೆಂದುಕೊಂಡ ಯುವಕ, ಮತ್ತವನ ಡ್ರಗ್ಸ್ ವ್ಯಸನಿ ಸ್ನೇಹಿತೆ. ಮತ್ತೊಂದು ಕಡೆ ಪೋಷಕರಿಂದ ದೂರಾದ ಮಗ, ಅವನನ್ನು ನೋಡಲು ಹಾತೊರೆಯುವ ವೃದ್ಧ ದಂಪತಿ. ಮಗದೊಂದು ಕಡೆ ಭಗ್ನ ಪ್ರೇಮಿ, ಆಕೆಯ ಸ್ನೇಹಿತ. ಇವರೆಲ್ಲರ ನಡುವೆ ಒಂದು ಪಾತಕ ಗ್ಯಾಂಗ್. ಇವರೆಲ್ಲರೂ ಒಂದು ಬಿಂದುವಿಗೆ ಬಂದು ಸೇರುವ ಕಥೆಯಿದು.

ಚಿತ್ರತಂಡ ಮೊದಲೇ ಹೇಳಿದಂತೆ ಇದು ಹೈಪರ್ ಲಿಂಕ್ ಸಿನಿಮಾ. ಬಹಳ ರೋಚಕವಾಗಿ ಸಾಗುವ ಕಥೆ 'ಧರಣಿ ಮಂಡಲ ಮಧ್ಯದೊಳಗೆ' ಚಿತ್ರದಲ್ಲಿದೆ. ಸಿನಿಮಾ ಬಿಡುಗಡೆ ಆದಾಗಲೇ ಮೆಚ್ಚುಗೆಯ ಮಾತುಗಳು ಕೇಳಿಬಂದಿದ್ದವು. ಆದರೆ ಜನ ಸಿನಿಮಾ ನೋಡಲು ಅಷ್ಟಾಗಿ ಆಸಕ್ತಿ ತೋರಿಸಿರಲಿಲ್ಲ. ಸಿನಿಮಾ ನೋಡಿದವರ ಮಾತುಗಳನ್ನು ಕೇಳಿದ ಕೆಲವರು ಓಟಿಟಿಗೆ ಸ್ಟ್ರೀಮಿಂಗ್ಗಾಗಿ ಕಾಯುತ್ತಿದ್ದರು.
ಖಡಕ್ ಪಾತ್ರದಲ್ಲಿ ನವೀನ್ ಶಂಕರ್ ನಟಿಸಿದ್ದಾರೆ. ಅದ್ಯಾಕೋ ನವೀನ್ ಶಂಕರ್ಗೆ ಬ್ರೇಕ್ ಮಾತ್ರ ಸಿಗುತ್ತಿಲ್ಲ. ಅವರ 'ಕ್ಷೇತ್ರಪತಿ' ಚಿತ್ರದ ಬಗ್ಗೆಯೂ ಮೆಚ್ಚುಗೆಯ ಮಾತುಗಳು ಕೇಳಿಬಂದಿತ್ತು. ಆದರೆ ಉತ್ತಮ ಪ್ರದರ್ಶನ ಕಾಣಲಿಲ್ಲ. ಓಟಿಟಿಗೆ ಬರಲೇಯಿಲ್ಲ. ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಗಳನ್ನು ಇಷ್ಟಪಡುವವರಿಗೆ 'ಧರಣಿ ಮಂಡಲ ಮಧ್ಯದೊಳಗೆ' ಖಂಡಿತ ಇಷ್ಟವಾಗುತ್ತದೆ.
ಮಾದಕ ವ್ಯಸನಿ ಪಾತ್ರದಲ್ಲಿ ಐಶಾನಿ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಇನ್ನುಳಿದಂತೆ ರೌಡಿ ಆಂಟನಿ ಆಗಿ ಬಾಲ ರಾಜ್ವಾಡಿ, ಪ್ಯಾರಚ್ಯೂಟ್ ಆಗಿ ಸಿದ್ದು ಮೂಲಿಮನೆ ನಟಿಸಿದ್ದಾರೆ. ಸಸ್ಪೆನ್ಸ್ ಥ್ರಿಲ್ಲರ್ ಜೊತೆಗೆ ಎಮೋಷನ್, ಕಾಮಿಡಿ, ಲವ್ ಅಂಶಗಳು 'ಧರಣಿ ಮಂಡಲ ಮಧ್ಯದೊಳಗೆ' ಚಿತ್ರದಲ್ಲಿದೆ. ಕೀರ್ತನ್ ಪೂಜಾರಿ ಛಾಯಾಗ್ರಹಣ, ರೋಣಡ ಬಕ್ಕೇಶ್ ಹಾಗೂ ಕಾರ್ತಿಕ್ ಚೆನ್ನೋಜಿ ರಾವ್ ಸಂಗೀತ ಚಿತ್ರಕ್ಕಿದೆ. ನೀವು ಕೂಡ ಪ್ರೈಂ ವಿಡಿಯೋದಲ್ಲಿ ಸಿನಿಮಾ ನೋಡಿ ಎಂಜಾಯ್ ಮಾಡಿ.


Click it and Unblock the Notifications











