ದರ್ಶನ್ ನೋಡಿ ಮೆಚ್ಚಿದ್ದ ಕನ್ನಡ ಸಿನಿಮಾ 40 ದಿನಕ್ಕೆ ಓಟಿಟಿಗೆ ಬಂತು; ಈಗಲಾದರೂ ಗೆಲ್ಲುತ್ತಾ?
ಕನ್ನಡ ಸಿನಿಮಾಗಳು ಓಟಿಟಿಗೆ ಬರೋದೇ ಅಪರೂಪ ಎನ್ನುವಂತಾಗಿದೆ. ದೊಡ್ಡ ಸಿನಿಮಾಗಳನ್ನು ಬಿಟ್ಟರೆ ಸಣ್ಣ ಸಿನಿಮಾಗಳನ್ನು ಕೊಳ್ಳುವವರೇ ಇಲ್ಲ ಎನ್ನುವಂತಾಗಿದೆ. ಕೆಲವರು ಮಾತ್ರ ಏನೇನೋ ಮಾಡಿ ಸಿನಿಮಾ ಓಟಿಟಿಗೆ ಬರುವಂತೆ ನೋಡಿಕೊಳ್ಳುತ್ತಾರೆ.
ಕಡಿಮೆ ಮೊತ್ತಕ್ಕೆ ಅಥವಾ ಪೇ ಫಾರ್ ವೀವ್ಸ್ ಕಾನ್ಸೆಪ್ಟ್ನಲ್ಲಿ ಮೀಡಿಯಂ ಬಜೆಟ್ ಸಿನಿಮಾಗಳನ್ನು ಓಟಿಟಿ ಸಂಸ್ಥೆಗಳು ಕೊಂಡುಕೊಳ್ಳುತ್ತಿವೆ. ಸುದೀಪ್ ನಟನೆಯ 'ಮ್ಯಾಕ್ಸ್' ಬಳಿಕ ಒಂದೆರಡು ಸಣ್ಣ ಪುಟ್ಟ ಸಿನಿಮಾಗಳು ಓಟಿಟಿಗೆ ಬಂದಿದ್ದವು. ಇದೀಗ ದಿಢೀರನೆ ಮತ್ತೊಂದು ಕನ್ನಡ ಸಿನಿಮಾ ಸ್ಟ್ರೀಮಿಂಗ್ ಆರಂಭಿಸಿದೆ. ತೆರೆಗೆ ಬಂದು 40 ದಿನಕ್ಕೆಲ್ಲಾ ಸಿನಿಮಾ ಓಟಿಟಿಯಲ್ಲಿ ಲಭ್ಯವಿದೆ.

ವಿರಾಟ್ ಹಾಗೂ ಸಂಜನಾ ಆನಂದ್ ನಟನೆ 'ರಾಯಲ್' ಸಿನಿಮಾ ನಿರೀಕ್ಷೆ ಮೂಡಿಸಿದ್ದು ಸುಳ್ಳಲ್ಲ. ಆದರೆ ತೆರೆಕಂಡ ಬಳಿಕ ಸಿನಿಮಾ ಪ್ರೇಕ್ಷಕರನ್ನು ಸೆಳೆಯುವಲ್ಲಿ ವಿಫಲವಾಗಿತ್ತು. ನೋಡಿದವರು ಚೆನ್ನಾಗಿದೆ ಎಂದು ಹೇಳಿದರೂ ಕೂಡ ಮೊದಲ ದಿನದಿಂದಲೇ ಸಿನಿಮಾ ಪ್ರೇಕ್ಷಕರ ಬರ ಎದುರಿಸಿತ್ತು. ಕೆಲವರು ಚಿತ್ರದ ಬಗ್ಗೆ ನೆಗೆಟಿವ್ ಟಾಕ್ ಹುಟ್ಟುಹಾಕಿ ಸೋಲಿಸಿದರು ಎನ್ನುವ ಆರೋಪ ಕೂಡ ಕೇಳಿಬಂದಿತ್ತು.
ದರ್ಶನ್ ಸಹೋದರ ದಿನಕರ್ ತೂಗುದೀಪ್ 'ರಾಯಲ್' ಚಿತ್ರ ಕಟ್ಟಿಕೊಟ್ಟಿದ್ದರು. ಜಯಣ್ಣ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿದ್ದ ಚಿತ್ರವನ್ನು ಕೆಆರ್ಜಿ ಸ್ಟುಡಿಯೋಸ್ ಸಂಸ್ಥೆ ವಿತರಣೆ ಮಾಡಿತ್ತು. ಚರಣ್ ರಾಜ್ ಸಂಗೀತ ಚಿತ್ರಕ್ಕಿತ್ತು. ರಘು ಮುಖರ್ಜಿ, ಛಾಯಾ ಸಿಂಗ್, ರಂಗಾಯಣ ರಘು ಸೇರಿ ಘಟಾನುಘಟಿ ಕಲಾವಿದರು ಚಿತ್ರದಲ್ಲಿ ನಟಿಸಿದ್ದರು.

ರೇಣುಕಾಸ್ವಾಮಿ ಪ್ರಕರಣದಲ್ಲಿ ಜೈಲಿ ಸೇರಿ ಜಾಮೀನು ಪಡೆದು ಹೊರಬಂದಿದ್ದ ದರ್ಶನ್ ಸಹ 'ರಾಯಲ್' ಸಿನಿಮಾ ನೋಡಿ ಮೆಚ್ಚಿಕೊಂಡಿದ್ದರು. ನಗರದ ಎಸ್ಆರ್ವಿ ಥಿಯೇಟರ್ನಲ್ಲಿ ಸ್ಪೆಷಲ್ ಶೋ ಹಾಕಲಾಗಿತ್ತು. ದರ್ಶನ್ ಹಾಗೂ ಅವರ ತಾಯಿ ಮೀನಾ ತೂಗುದೀಪ, ದರ್ಶನ್ ಪತ್ನಿ ವಿಜಯಲಕ್ಷ್ಮಿ ಎಲ್ಲರೂ ಸಿನಿಮಾ ವೀಕ್ಷಿಸಿದ್ದರು. ಚಿತ್ರತಂಡಕ್ಕೆ ಶುಭ ಹಾರೈಸಿದ್ದರು. ಜನವರಿ 24ರಂದು ಸಿನಿಮಾ ತೆರೆಗೆ ಬಂದಿತ್ತು.
ಟ್ವಿಟ್ಟರ್ ಹಾಗೂ ಬುಕ್ಮೈ ಶೋನಲ್ಲಿ 'ರಾಯಲ್' ಸಿನಿಮಾ ಬಗ್ಗೆ ನೆಗೆಟಿವ್ ಹಬ್ಬಿಸಿದ್ದರು ಎನ್ನುವ ಆರೋಪ ಕೇಳಿಬಂದಿತ್ತು. ಸ್ವತಃ ನಿರ್ದೇಶಕ ದಿನಕರ್ ಮಾತನಾಡಿ "ದರ್ಶನ್ ಮೇಲಿನ ಕೋಪವನ್ನು ನನ್ನ ಮೇಲೆ ತೀರಿಸಿಕೊಳ್ಳುತ್ತಿದ್ದಾರೆ ಎನಿಸುತ್ತದೆ" ಎಂದು ಅಳಲು ತೋಡಿಕೊಂಡಿದ್ದರು. ಅಂತೂ ಇಂತೂ ಸಿನಿಮಾ ಇದೀಗ ಅಮೇಜಾನ್ ಪ್ರೈಂ ವೀಡಿಯೋದಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ. ಓಟಿಟಿಯಲ್ಲಿ ಸಿನಿಮಾ ನೋಡಿ ಗೆಲ್ಲಿಸುತ್ತಾರಾ ಕಾದು ನೋಡಬೇಕಿದೆ.
'ರಾಯಲ್' ಆಗಿ ಬದುಕಬೇಕು ಎಂಬ ಯುವಕ ಕೃಷ್ಣ(ವಿರಾಟ್) ಕಥೆ ಈ ಚಿತ್ರದಲ್ಲಿದೆ. ಮಧ್ಯಮವರ್ಗದವರಿಗೆ ಶ್ರೀಮಂತರಾಗುವ ಕನಸು ಸಹಜ. ಚಿತ್ರದ ನಾಯಕ ಕೃಷ್ಣನದ್ದು ಅದೇ ಹಪಹಪಿ. ಆದರೆ ದಿಢೀರನೆ ಆತನಿಗೆ ಶ್ರೀಮಂತಿಕೆ ಬಂದುಬಿಡುತ್ತದೆ. ಅದು ಹೇಗೆ? ಮುಂದೆ ಏನೆಲ್ಲಾ ಆಗುತ್ತದೆ? ಎನ್ನುವುದು ಚಿತ್ರದ ಇನ್ನುಳಿದ ಕಥೆ. ಲವ್, ಮದರ್ ಸೆಂಟಿಮೆಂಟ್, ಆಕ್ಷನ್ ಎಲ್ಲಾ ಬೆರಸಿ ದಿನಕರ್ 'ರಾಯಲ್' ಚಿತ್ರ ಕಟ್ಟಿಕೊಟ್ಟಿದ್ದಾರೆ.
ನಾಯಕನಾಗಿ ವಿರಾಟ್ ಗಮನ ಸೆಳೆದಿದ್ದಾರೆ. ಕೃಷ್ಣನ ತಾಯಿ ಸೀತಾ ಆಗಿ ಛಾಯಾ ಸಿಂಗ್ ಉತ್ತಮ ಅಭಿನಯ ನೀಡಿದ್ದಾರೆ. ಚರಣ್ ರಾಜ್ ಸಂಗೀತ ಚಿತ್ರಕ್ಕೆ ಪೂರಕವಾಗಿದೆ. ಕೆಲವು ಕಡೆ ಆಕ್ಷನ್ ಸೀಕ್ವೆನ್ಸ್ ಬೇಕಿತ್ತಾ ಎನಿಸಿಬಿಡುತ್ತದೆ. ರಘು ನಿಡುವಳ್ಳಿ 'ರಾಯಲ್' ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದರು. ನಿರ್ದೇಶಕ ದಿನಕರ್ ತೂಗುದೀಪ ಪುತ್ರ ಸೂರ್ಯ ಕೂಡ ಚಿತ್ರದಲ್ಲಿ ನಾಯಕನ ಬಾಲ್ಯದ ದೃಶ್ಯಗಳಲ್ಲಿ ನಟಿಸಿದ್ದಾನೆ. ಈ ಚಿತ್ರದ ಮೂಲಕ ಆತ ಬಾಲನಟನಾಗಿ ಚಂದನವನಕ್ಕೆ ಬಂದಿದ್ದಾನೆ.


Click it and Unblock the Notifications











