ಕನ್ನಡದಲ್ಲಿ ವೆಬ್ ಸೀರಿಸ್ ಗೆಲ್ಲಲು ಬೇಕಿದೆ ತಾರಾಬಲ
ಓಟಿಟಿಯಲ್ಲಿ ಕನ್ನಡ ಕಂಟೆಂಟ್ ಕಮ್ಮಿಯಿದೆ. ಕನ್ನಡದ ಸಿನಿಮಾಗಳನ್ನು ಓಟಿಟಿ ಸಂಸ್ಥೆಗಳು ಕೊಂಡುಕೊಳ್ಳಲು ಮೀನಾಮೇಷ ಎಣಿಸುತ್ತವೆ. ಇನ್ನು ವೆಬ್ ಸೀರಿಸ್ ಅಂತೂ ಕನ್ನಡದಲ್ಲಿ ಬರೋದೆ ಇಲ್ಲ ಎನ್ನುವುದು ಕನ್ನಡಿಗರ ವಾದ. ಆಗೊಂದು ಈಗೊಂದು ವೆಬ್ ಸೀರಿಸ್ ಬಂದರೂ ಅದನ್ನು ಕ್ಯಾರೇ ಅನ್ನುವವರಿಲ್ಲ.
ಇತ್ತೀಚೆಗೆ ಜೀ5ನಲ್ಲಿ 'ಅಯ್ಯನಮನೆ' ವೆಬ್ ಸೀರಿಸ್ ಬಂದು ಸದ್ದು ಮಾಡಿತ್ತು. ಅಂತಹ ಮತ್ತಷ್ಟು ಪ್ರಯತ್ನಗಳು ಬೇಕಿದೆ. ಆದರೆ ಅದಕ್ಕೆ ಓಟಿಟಿ ಸಂಸ್ಥೆಗಳ ಬೆಂಬಲವೂ ಬೇಕಿದೆ. ಕನ್ನಡದ ಸ್ಟಾರ್ ನಟರ ಸಿನಿಮಾಗಳನ್ನೇ ಸ್ಟ್ರೀಮಿಂಗ್ ಮಾಡಲು ಅಮೇಜಾನ್ ಪ್ರೈಂ, ನೆಟ್ಫ್ಲಿಕ್ಸ್ ರೀತಿಯ ದೈತ್ಯ ಓಟಿಟಿ ವೇದಿಕೆಗಳು ಮುಂದೆ ಬರ್ತಿದೆ. ಚೌಕಾಸಿ ಮಾಡಿ ರೈಟ್ಸ್ ಮಾರಬೇಕಾದ ಪರಿಸ್ಥಿತಿಯಿದೆ.

ಕನ್ನಡದ ಕೆಲ ದೊಡ್ಡ ಸಿನಿಮಾಗಳನ್ನು ಕೊಂಡುಕೊಂಡು ಓಟಿಟಿ ಸಂಸ್ಥೆಗಳು ಕೈಸುಟ್ಟುಕೊಂಡಿವೆ. ಅದೇ ಕಾರಣಕ್ಕೆ ಈ ಮಲತಾಯಿ ಧೋರಣೆ ತೋರುತ್ತಿವೆ ಎನ್ನುವ ಅಭಿಪ್ರಾಯವೂ ಇದೆ. ಬೆಂಗಳೂರಿನಲ್ಲಿ ಅತಿಹೆಚ್ಚು ಓಟಿಟಿ ಚಂದಾದಾರರು ಇದ್ದಾರೆ. ಆದರೆ ಕನ್ನಡ ಕಂಟೆಂಟ್ ನೋಡುವವರು, ಅದಕ್ಕಾಗಿ ಸಬ್ಸ್ಕ್ರಿಪ್ಷನ್ ಪಡೆದುಕೊಳ್ಳುವವರು ಕಮ್ಮಿ. ಹೀಗಾಗಿ ಕನ್ನಡ ಕಂಟೆಂಟ್ ಕೊಂಡುಕೊಂಡರೆ ನಮಗೆ ವರ್ಕ್ಔಟ್ ಆಗಲ್ಲ ಎನ್ನುವುದು ಓಟಿಟಿ ಸಂಸ್ಥೆಗಳು ವಾದ.
ಮೂರು ವರ್ಷಗಳ ಹಿಂದೆ ನಟ ಶಿವರಾಜ್ಕುಮಾರ್ ಪುತ್ರಿ ನಿವೇದಿತಾ 'ಹನಿಮೂನ್' ಎಂಬ ವೆಬ್ ಸೀರಿಸ್ ನಿರ್ಮಿಸಿದ್ದರು. ನಾಗಭೂಷಣ್, ಸಂಜನಾ ಆನಂದ್, ವಾಸುಕಿ ವೈಭವ್, ಲೂಸಿಯಾ ಪವನ್ ಕುಮಾರ್ ತಾರಾಗಣದಲ್ಲಿದ್ದರು. ನಟ ಶಿವರಾಜ್ಕುಮಾರ್ ಕೂಡ ಮುಂದೆ ಬಂದು ಪ್ರಚಾರ ಮಾಡಿದ್ದರು. ವೂಟ್ನಲ್ಲಿ 6 ಎಪಿಸೋಡ್ಗಳಾಗಿ ಒಂದು ಸೀಸನ್ ರಿಲೀಸ್ ಆಗಿತ್ತು. ಆದರೂ ದೊಡ್ಡಮಟ್ಟದ ರೆಸ್ಪಾನ್ಸ್ ಸಿಕ್ಕಿರಲಿಲ್ಲ. ಇವತ್ತಿಗೂ ಕನ್ನಡದಲ್ಲಿ ಸ್ಟಾರ್ ನಟರ ಸಿನಿಮಾಗಳೇ ಹೆಚ್ಚು ಸದ್ದು ಮಾಡುತ್ತವೆ. ಕಂಟೆಂಟ್ ಓರಿಯಂಟೆಡ್ ಸಿನಿಮಾಗಳಿಗೆ ಅಷ್ಟಾಗಿ ಸಕ್ಸಸ್ ಸಿಗುತ್ತಿಲ್ಲ. ಹಾಗಾಗಿ ವೆಬ್ ಸೀರಿಸ್ಗಳಿಗೆ ಕೂಡ ಸ್ಟಾರ್ ವ್ಯಾಲೂ ಬೇಕಿದೆ.
ಸ್ಟಾರ್ ನಟರು ನಟಿಸಿದರೆ ಕನ್ನಡ ವೆಬ್ ಸೀರಿಸ್ಗಳಿಗೆ ಒಳ್ಳೆ ರೆಸ್ಪಾನ್ಸ್ ಸಿಗಬಹುದು. ಆದರೆ ಕನ್ನಡ ನಟರು ವರ್ಷಕ್ಕೆ ಒಂದು ಸಿನಿಮಾ ಮಾಡೋದಕ್ಕೆ ಹಿಂದು ಮುಂದು ನೋಡ್ತಿದ್ದಾರೆ. ಬರೀ ಪ್ಯಾನ್ ಇಂಡಿಯಾ ಎಂದು ಕೂತಿದ್ದಾರೆ. ಇನ್ನು ವೆಬ್ ಸೀರಿಸ್ ನಟಿಸೋದಕ್ಕೆ ಒಪ್ಪುವುದು ಕಷ್ಟ ಕಷ್ಟ. ಬಾಲಿವುಡ್ನಲ್ಲಿ ಅಜಯ್ ದೇವಗನ್, ಸೈಫ್ ಅಲಿಖಾನ್ ರೀತಿಯ ಸ್ಟಾರ್ ನಟರು ವೆಬ್ ಸೀರಿಸ್ಗಳಲ್ಲಿ ನಟಿಸುತ್ತಾರೆ. 'ರಾಣಾ ನಾಯ್ಡು' ವೆಬ್ ಸೀರಿಸ್ನಲ್ಲಿ ವಿಕ್ಟರಿ ವೆಂಕಟೇಶ್ ಹಾಗೂ ರಾಣಾ ದಗ್ಗುಬಾಟಿ ನಟಿಸಿದ್ದರು. 'ಫ್ಯಾಮಿಲಿಮ್ಯಾನ್'-2ನಲ್ಲಿ ಸಮಂತಾ ಬಣ್ಣ ಹಚ್ಚಿದ್ದರು.

ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ನಟ ಚಿರಂಜೀವಿ ಕೂಡ ವೆಬ್ ಸೀರಿಸ್ನಲ್ಲಿ ನಟಿಸೋಕೆ ಸಿದ್ಧ ಎಂದಿದ್ದರು. ಆದರೆ ನಟ ಸುದೀಪ್ ಮಾತ್ರ ಇದಕ್ಕೆ ಒಲ್ಲೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ನಾನು ಕಾಲೇಜು ದಿನಗಳಿಂದ ಕೂಡ ಬೆಳ್ಳಿ ಪರದೆಯಲ್ಲಿ ಹೀರೊ ಆಗಿ ಇರೋಕೆ ಬಯಸಿದೆ. ಅಲ್ಲೇ ಇರಲು ಇಷ್ಟಪಡ್ತೀನಿ ಎಂದಿದ್ದಾರೆ. ರಕ್ಷಿತ್ ಶೆಟ್ಟಿ, ಧನಂಜಯ್, ಗಣೇಶ್, ಶ್ರೀಮುರಳಿ ರೀತಿಯ ಸ್ಟಾರ್ ನಟರು ವೆಬ್ ಸೀರಿಸ್ ಕಡೆ ಮುಖ ಮಾಡಬೇಕಿದೆ. ಕನ್ನಡದ ಕೆಲ ನಿರ್ದೇಶಕರು ಈ ಬಗ್ಗೆ ಗಮನ ಹರಿಸಬೇಕಿದೆ. ಹೆಚ್ಚು ಹೆಚ್ಚು ಕೆಲಸ ಮಾಡಿ ನೋಡುಗರನ್ನು ರಂಜಿಸಬೇಕಿದೆ.
ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾಗಳು ಮಾತ್ರವಲ್ಲ, ವೆಬ್ ಸೀರಿಸ್ಗಳು ಕೂಡ ಡಬ್ ಆಗಿ ಬರ್ತಿವೆ. ಕನ್ನಡದಲ್ಲಿ ಒಳ್ಳೆ ಸೀರಿಸ್ಗಳು ತಯಾರಾದರೆ ಬೇರೆ ಭಾಷೆಗೂ ಡಬ್ ಮಾಡಿ ವೀಕ್ಷಕರ ವರ್ಗವನ್ನು ಸೃಷ್ಟಿಸಿಕೊಳ್ಳಬಹುದು. ಬರ್ತಾ ಬರ್ತಾ ಸಿನಿಮಾ ನೋಡುವ ವಿಧಾನವೇ ಬದಲಾಗುತ್ತಿದೆ. ಮೊಬೈಲ್ನಲ್ಲಿ ಸಿನಿಮಾಗಳನ್ನು ನೀಡುತ್ತಿದ್ದಾರೆ. ದೊಡ್ಡ ಸಿನಿಮಾಗಳೇ 30 ದಿನಕ್ಕೆ ಓಟಿಟಿಗೆ ಬರ್ತಿವೆ. ಹಾಗಾಗಿ ಕನ್ನಡ ಫಿಲ್ಮ್ ಮೇಕರ್ಸ್ ಓಟಿಟಿಯನ್ನು ಮುಂದಿನ ದಿನಗಳಲ್ಲಿ ಪರಿಗಣಿಸಬೇಕಿದೆ. ಅದಕ್ಕೆ ಈಗಿನಿಂದಲೇ ಪ್ರಯತ್ನ ನಡೀಬೇಕಿದೆ.
ವೆಬ್ ಸೀರಿಸ್ಗಳಲ್ಲಿ ಕಥೆ ಹೇಳಲು ಅಷ್ಟೇನು ನಿರ್ಬಂಧಗಳಿಲ್ಲ. ಸಿನಿಮಾಗೆ ಬೇಕಾದ ಕಮರ್ಷಿಯಲ್ ಅಂಶಗಳು ಬೇಕು, 2 ಗಂಟೆಯಲ್ಲೇ ಕಥೆ ಹೇಳಿ ಮುಗಿಸಬೇಕು ಎನ್ನುವ ನಿಯಮ ಇಲ್ಲ. ಹಾಗಾಗಿ ನಿರ್ದೇಶಕರು ತಮ್ಮ ಕಥೆಗಳನ್ನು ಬಹಳ ಸುಲಭವಾಗಿ ಹೇಳುವ ಅವಕಾಶ ಇದೆ. ಆದರೆ ಕನ್ನಡದಲ್ಲಿ ವೆಬ್ ಸೀರಿಸ್ಗಳನ್ನು ಸೇಲ್ ಮಾಡುವುದೇ ಕಷ್ಟ ಎನ್ನುವುದು ಕೆಲವರ ಆರೋಪ. ಅದೇ ಕಾರಣಕ್ಕೆ ಸ್ಟಾರ್ ನಟರು ಕೂಡ ಅತ್ತ ಮುಖ ಮಾಡುತ್ತಿಲ್ಲ.
ಕನ್ನಡಕ್ಕೆ ಸ್ವಂತ ಓಟಿಟಿ ಪ್ಲಾಟ್ಫಾರ್ಮ್ ಬೇಕಿದೆ. ವೇದಿಕೆ ಇದ್ದರೆ ಮಾತ್ರ ಸಾಲದು ಅದರಲ್ಲಿ ಒಳ್ಳೆ ಕನ್ನಡದ ಕಂಟೆಂಟ್ ಸ್ಟ್ರೀಮಿಂಗ್ ಆಗಿ ಚಂದಾದಾರರ ಸಂಖ್ಯೆ ಹೇರಿಕೆ ಆಗಬೇಕು. ಆಗ ಮಾತ್ರ ಕನ್ನಡ ಸಿನಿಮಾ ಹಾಗೂ ವೆಬ್ ಸೀರಿಸ್ಗಳು ಓಟಿಟಿಯಲ್ಲಿ ಸದ್ದು ಮಾಡುವುದಕ್ಕೆ ಸಾಧ್ಯ.
ಕೋವಿಡ್ ಸಂಕಷ್ಟದ ಬಳಿಕ ಏಕಾಏಕಿ ಓಟಿಟಿ ಕ್ರೇಜ್ ಹೆಚ್ಚಾಗಿತ್ತು. ಸಿನಿಮಾ ಹಾಗೂ ವೆಬ್ ಸೀರಿಸ್ಗಳು ಹೆಚ್ಚು ಹೆಚ್ಚು ಸ್ಟ್ರೀಮಿಂಗ್ ಆಗಲು ಪ್ರಾರಂಭವಾಗಿತ್ತು. ಆ ಒಳ್ಳೆ ಅವಕಾಶವನ್ನು ಕನ್ನಡ ಫಿಲ್ಮ್ ಮೇಕರ್ಸ್ ಮಿಸ್ ಮಾಡಿಕೊಂಡಿದ್ದರು. ಆ ಸಮಯದಲ್ಲಿ ಒಂದಷ್ಟು ಒಳ್ಳೆ ಕನ್ನಡ ಸಿನಿಮಾ ಹಾಗೂ ವೆಬ್ ಸೀರಿಸ್ ಓಟಿಟಿಗೆ ಬಂದಿದ್ದರೆ ಪರಿಸ್ಥಿತಿ ಕೊಂಚ ಸುಧಾರಿಸುತ್ತಿತ್ತು ಎನ್ನುವ ಅಭಿಪ್ರಾಯವನ್ನು ಚಿತ್ರರಂಗದಲ್ಲಿ ಕೆಲವರು ವ್ಯಕ್ತಪಡಿಸುತ್ತಾರೆ.
ಶಿವಣ್ಣ, ಸುದೀಪ್, ಯಶ್, ರಿಷಬ್ ಶೆಟ್ಟಿ ಬಿಟ್ಟರೆ ಕನ್ನಡದ ಕಲಾವಿದರು ಪರಭಾಷಾ ಸಿನಿರಸಿಕರಿಗೆ ಹೆಚ್ಚು ಪರಿಚಿತರಾಗಿಲ್ಲ. ಅದೇ ಕಾರಣಕ್ಕೆ ಸಣ್ಣಪುಟ್ಟ ವೆಬ್ ಸೀರಿಸ್ಗಳು ಬಂದಾಗ ಪರಭಾಷೆಯಲ್ಲಿ ಡಬ್ ಮಾಡಿ ರಿಲೀಸ್ ಮಾಡಲು ಬೇಡಿಕೆ ಇಲ್ಲದಂತಾಗಿದೆ. ಜೀ5 ಇದೀಗ ಒಂದಷ್ಟು ವೆಬ್ ಸೀರಿಸ್ಗಳನ್ನು ಸ್ಟ್ರೀಮಿಂಗ್ ಮಾಡಲು ಮುಂದಾಗಿದೆ. ಮುಂದಿನ ದಿನಗಳಲ್ಲಿ ಇದಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ಕರೆ ಸ್ಟಾರ್ ನಟರು ವೆಬ್ ಸೀರಿಸ್ಗಳಲ್ಲಿ ನಟಿಸೋಕೆ ಮನಸ್ಸು ಮಾಡಿದರೆ ಬದಲಾವಣೆ ನಿರೀಕ್ಷಿಸಬಹುದು.
ಹಿಂದಿಯಲ್ಲಿ 'ಲೈಲಾ' ಹಾಗೂ ತೆಲುಗಿನಲ್ಲಿ 'ಕುಡಿ ಎಡಮೈತೆ' ಎಂಬ ಎರಡು ವೆಬ್ ಸೀರಿಸ್ಗಳನ್ನು ಲೂಸಿಯಾ ಪವನ್ ಕುಮಾರ್ ನಿರ್ದೇಶಿಸಿದ್ದರು. ಮತ್ತೊಂದು ಪ್ರಾಜೆಕ್ಟ್ ಆರಂಭಿಸಿದ್ದಾರೆ. ಕನ್ನಡದಲ್ಲಿ ವೆಬ್ ಸೀರಿಸ್ ನಿರ್ಮಾಣಕ್ಕೆ ಸಮಸ್ಯೆ ಏನು ಎನ್ನುವುದನ್ನು ಪವನ್ ಫಿಲ್ಮಿಬೀಟ್ ಕನ್ನಡ ಜೊತೆ ಹಂಚಿಕೊಂಡಿದ್ದಾರೆ. "ಓಟಿಟಿ ಸಂಸ್ಥೆಗಳಿಗೆ ಕನ್ನಡದ ವೆಬ್ ಸೀರಿಸ್ ಬಗ್ಗೆ ಇನ್ನು ನಂಬಿಕೆ ಬಂದಿಲ್ಲ. ಜೀ ಸಂಸ್ಥೆ ಪ್ರಯತ್ನಿಸುತ್ತಿದೆ. ಅದು ಸಕ್ಸಸ್ ಸಿಕ್ಕರೆ ಮುಂದೆ ಅಂತಹ ಪ್ರಯತ್ನಗಳನ್ನು ನಿರೀಕ್ಷಿಸಬಹುದು. ಓಟಿಟಿ ಸಂಸ್ಥೆಗಳು ಧೈರ್ಯ ಮಾಡಿ ಮುಂದೆ ಬಂದರೆ ಸ್ಟಾರ್ ನಟರು ನಟಿಸೋಕೆ ಮನಸ್ಸು ಮಾಡುತ್ತಾರೆ" ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
"ಓಟಿಟಿ ಸಂಸ್ಥೆಗಳಿಗೆ ಕನ್ನಡದಲ್ಲಿ ವೆಬ್ ಸೀರಿಸ್ ವರ್ಕ್ ಆಗುತ್ತದೆ ಎನಿಸಬೇಕು. 'ಹನಿಮೂನ್' ಸೀರಿಸ್ನಲ್ಲಿ ನಾನು ನಟಿಸಿದ್ದೆ. ಆದರೆ ಅದು ಮೊದಲು ತೆಲುಗಿನಲ್ಲಿ ರಿಲೀಸ್ ಆಗಿತ್ತು. ಆ ಬಳಿಕ ವೂಟ್ನವರು ಕನ್ನಡದಲ್ಲಿ ಕೊಂಡುಕೊಂಡಿದ್ದರು. ಸ್ಟಾರ್ ನಟಿಸಿದರೆ ಕೊಂಚ ಬೂಸ್ಟ್ ಸಿಗಬಹುದು, ಮುಂದೆ ನೋಡೋನ" ಎಂದು ಪವನ್ ಕುಮಾರ್ ಹೇಳಿದ್ದಾರೆ.
ಇದೇ ವಿಚಾರದ ಬಗ್ಗೆ ಮತ್ತೊಬ್ಬ ನಿರ್ದೇಶಕ ಸಿಂಪಲ್ ಸುನಿ ಫಿಲ್ಮಿಬೀಟ್ ಕನ್ನಡ ಜೊತೆ ಪ್ರತಿಕ್ರಿಯಿಸಿ ನಾವು ಒಳ್ಳೆ ಅವಕಾಶಗಳನ್ನು ಕಳೆದುಕೊಂಡಿದ್ದೇವೆ. ಮುಂದಿನ ದಿನಗಳಲ್ಲಿ ಏನಾದರೂ ಮ್ಯಾಜಿಕ್ ಆಗುತ್ತಾ ನೋಡೋಣ ಎಂದಿದ್ದಾರೆ. "ಫಿಲ್ಮ್ ಮೇಕರ್ಸ್ ಒಳ್ಳೆ ಸಿನಿಮಾ, ವೆಬ್ ಸೀರಿಸ್ ಮಾಡಿ ಓಟಿಟಿಯಲ್ಲಿ ವೀಕ್ಷಕ ವರ್ಗವನ್ನು ಸೃಷ್ಟಿಸಿಕೊಳ್ಳಬೇಕಿತ್ತು. ನಮ್ಮಲ್ಲಿ ಅಂತಹ ಪ್ರಯತ್ನ ಆಗಲೇ ಇಲ್ಲ. ಸಿನಿಮಾ ರೀತಿ ಮೊದಲು ವೆಬ್ ಸೀರಿಸ್ ಮಾಡಿ ಓಟಿಟಿ ವೇದಿಕೆ ಹುಡುಕುವುದಕ್ಕೆ ಆಗುವುದಿಲ್ಲ. ಮೊದ್ಲೆ ಓಟಿಟಿ ಸಂಸ್ಥೆ ಜೊತೆ ಒಪ್ಪಂದ ಮಾಡಿಕೊಳ್ಳಬೇಕು. ಅದಕ್ಕೆ ಯಾರು ಮುಂದೆ ಬರ್ತಿಲ್ಲ" ಎನ್ನುತ್ತಾರೆ.
ಮಾತು ಮುಂದುವರೆಸಿದ ಸುನಿ "ಈ ವರ್ಷ 6 ತಿಂಗಳು ಯಾವುದೇ ದೊಡ್ಡ ಸಿನಿಮಾ ತೆರೆಗೆ ಬಂದು ಗೆದ್ದಿಲ್ಲ. ಮುಂದೆ ಒಂದಷ್ಟು ಸಿನಿಮಾಗಳು ಗೆಲ್ಲುವ ಭರವಸೆ ಮೂಡಿಸಿವೆ. ಆ ಬಳಿಕ ಓಟಿಟಿಯಲ್ಲಿ ಕೂಡ ಕನ್ನಡ ಕಂಟೆಂಟ್ ಸದ್ದು ಮಾಡಬಹುದು. ಸ್ಟಾರ್ ನಟರು ಕೂಡ ವೆಬ್ ಸೀರಿಸ್ ಮಾಡಲು ಮುಂದೆ ಬಂದರೆ ಏನಾದರೂ ಸುಧಾರಣೆ ಆಗಬಹುದು" ಎಂದು ತಮ್ಮ ಅನಿಸಿಕೆ ತಿಳಿಸಿದ್ದಾರೆ.


Click it and Unblock the Notifications











