Bigg Boss Kannada OTT: ಸ್ಪರ್ಧಿಗಳ ಆಯ್ಕೆ ಲುಂಗಿಗೆ ಓತಿಕೇತ ಬಿಟ್ಟುಕೊಂಡಂಗೆ
ಕನ್ನಡ ಬಿಗ್ಬಾಸ್ ಒಟಿಟಿ ಮೊದಲ ಸೀಸನ್ಗೆ ದಿನಗಣನೆ ಶುರುವಾಗಿದ್ದು, ಸುದ್ದಿಗೋಷ್ಠಿ ನಡೆಸಿ ಶೋ ನಟ, ನಿರೂಪಕ ಸುದೀಪ್ ಮಾಹಿತಿ ನೀಡಿದ್ದಾರೆ. ಶೋಗೆ ಸ್ಪರ್ಧಿಗಳ ಆಯ್ಕೆ ಬಹಳ ಕಷ್ಟದ ಕೆಲಸ ಅಂತ ಸುದೀಪ್ ಹೇಳಿದ್ದಾರೆ.
ಇದೇ ಶನಿವಾರ ಕನ್ನಡ ಬಿಗ್ಬಾಸ್ ಒಟಿಟಿ ಮೊದಲ ಸೀಸನ್ಗೆ ಗ್ರ್ಯಾಂಡ್ ಓಪನಿಂಗ್ ಸಿಗಲಿದೆ. ಈಗಾಗಲೇ ಕಾರ್ಯಕ್ರಮದ ಮೊದಲ ಪ್ರೋಮೊ ರಿಲೀಸ್ ಆಗಿ ಸೂಪರ್ ಹಿಟ್ ಆಗಿದೆ. ಶೋಗೆ ಸಂಬಂಧಿಸಿದಂತೆ ಆಯೋಜಕರು ಸುದ್ದಿಗೋಷ್ಠಿ ನಡೆಸಿದ್ದು, ಕಿಚ್ಚ ಸುದೀಪ್ ಹಾಗೂ ಕಲರ್ಸ್ ಕನ್ನಡ ಪ್ರೋಗ್ರಾಮಿಂಗ್ ಹೆಡ್ ಪರಮೇಶ್ವರ್ ಗುಂಡ್ಕಲ್ ಭಾಗವಹಿಸಿ ಮಾಹಿತಿ ಹಂಚಿಕೊಂಡಿದ್ದಾರೆ. ಜೊತೆಗೆ ಮಾಧ್ಯಮದವರ ಪ್ರಶ್ನೆಗಳಿಗೂ ಉತ್ತರ ನೀಡಿದ್ದಾರೆ.
ಒಟಿಟಿ ಬಿಗ್ಬಾಸ್ ಶೋಗೂ 16 ಜನ ಸ್ಪರ್ಧಿಗಳು ದೊಡ್ಮನೆಯ ಒಳಗೆ ಹೋಗಲಿದ್ದಾರೆ. ಸ್ಪರ್ಧಿಗಳ ಆಯ್ಕೆ ಯಾವ ರೀತಿ ನಡೆಯುತ್ತದೆ ಅನ್ನುವ ಕುತೂಹಲ ಸಹಜವಾಗಿಯೇ ಎಲ್ಲರಿಗೂ ಇರುತ್ತದೆ. ಮತ್ತೆ ಕೆಲವರು ಶೋನಲ್ಲಿ ಭಾಗವಾಹಿಸಲು ನಾನಾ ಕಸರತ್ತು ಮಾಡುತ್ತಿರುತ್ತಾರೆ. ಕೆಲವರು ಈ ಹಾದಿಯಲ್ಲಿ ಮೋಸ ಹೋಗಿರುವ ಉದಾಹರಣೆಯೂ ಇದೆ. ಸ್ಪರ್ಧಿಗಳ ಆಯ್ಕೆ ವಿಚಾರವಾಗಿ ಸುದೀಪ್ ಹಾಗೂ ಪರಮೇಶ್ವರ್ ಗುಂಡ್ಕಲ್ ಇಬ್ಬರಿಗೂ ಪ್ರಶ್ನೆಗಳು ಎದುರಾಯಿತು.

ನೆಗೆಟಿವ್ ಆಗಿ ಜನಪ್ರಿಯರಾದವರು ಮಾತ್ರವಲ್ಲ
ಸ್ಪರ್ಧಿಗಳ ಆಯ್ಕೆ ಯಾವ ರೀತಿ ಇರುತ್ತದೆ. ನೆಗೆಟಿವ್ ಹಿನ್ನೆಲೆ ಇರುವವರನ್ನು ಮಾತ್ರ ಆಯ್ಕೆ ಮಾಡುತ್ತೀರಾ ಅನ್ನುವ ಪ್ರಶ್ನೆಗೆ ಪರಮೇಶ್ವರ್ ಗುಂಡ್ಕಲ್ ಉತ್ತರಿಸಿದರು. "ಟಿವಿ, ರಿಯಾಲಿಟಿ, ರೇಡಿಯೋ, ಸಿನಿಮಾ ಎಲ್ಲಾ ಕ್ಷೇತ್ರಗಳ ಸ್ಪರ್ಧಿಗಳು ಇರ್ತಾರೆ. ಬರೀ ನೆಗೆಟಿವ್ ಹಿನ್ನೆಲೆ ಇರುವವರನ್ನು ನಾವು ಆಯ್ಕೆ ಮಾಡುತ್ತೀವಿ ಅನ್ನುವುದನ್ನು ನಾನು ಒಪ್ಪುವುದಿಲ್ಲ. ಈ ಬಗ್ಗೆ ಚರ್ಚೆಗೆ ನಾನು ಸಿದ್ಧ. 16 ಜನ ಇದ್ದಾಗ ಒಬ್ಬೊಬ್ಬರ ದೃಷ್ಟಿಕೋನ ಒಂದೊಂದು ತರ ಇರುತ್ತದೆ. ಆದರೆ ಸ್ಪರ್ಧಿಗಳ ಆಯ್ಕೆಯಲ್ಲಿ ಪ್ರಾಮಾಣಿಕತೆ ಇದೆ" ಎಂದರು.

'ಬೀಪ್ ಭಾಷೆ ಬರುತ್ತೆ'- ಸುದೀಪ್
ಬಿಗ್ಬಾಸ್ ಮನೆಗೆ ಹೋಗಬೇಕು ಅನ್ನುವುದು ಸಾಕಷ್ಟು ಜನರ ಕನಸು. ಅದೇ ಕಾರಣಕ್ಕೆ ನಾನಾ ಪ್ರಯತ್ನ ಮಾಡುತ್ತಿರುತ್ತಾರೆ. ಈ ಬಗ್ಗೆ ನಿಮ್ಮನ್ನು ಯಾರದರೂ ಕೇಳ್ತಾರಾ ಅನ್ನುವ ಪ್ರಶ್ನೆಗೆ ಉತ್ತರಿಸಿದ ಸುದೀಪ್ "ಖಂಡಿತ ನನ್ನನ್ನು ತುಂಬಾ ಜನ ಕೇಳ್ತಿರ್ತಾರೆ. ನಾನು ಬಹಳ ಪ್ರಾಮಾಣಿಕ. ಇರೋದನ್ನು ಇರೋ ತರ ಹೇಳ್ತೀನಿ. ಇದೊಂದು ವಿಚಾರಕ್ಕೆ ಫೋನ್ ಮಾಡಬೇಡಿ ಅಂತೀನಿ. ಯಾಕಂದ್ರೆ ನಾನು ಆ ವಿಚಾರದಲ್ಲಿ ತಲೆ ಹಾಕುವುದಿಲ್ಲ ಅಂತೀನಿ. ಯಾಕಂದ್ರೆ ನಾನು ಸ್ಪರ್ಧಿಗಳಿಗೆ ಕೊಡುವ ಗೌರವ ಅದು. ಯಾಕಂದ್ರೆ ಅಲ್ಲಿ ಬರುವ 16 ಜನ ಅರ್ಹರಾಗಿರಬೇಕು. ಪರಮ್ ಫೇವರಿಟ್, ನನ್ನ ಫೇವರಿಟ್ ಅಲ್ಲ, ಅಥವಾ ಬೇರೆ ಯಾರೋ ಹೇಳಿದ್ರು ಅಂತ ಮಾಡಿದ್ರೆ, ಶೋಗೆ ಬೆಲೆ ಕೊಟ್ಟಂತೆ ಆಗುವುದಿಲ್ಲ. ಹಂಗೂ ಯಾರಾದರೂ ಕೇಳಿದ್ರೆ, ನಗುತ್ತಾ ನಾನಲ್ಲ ಸರ್ ಪರಮ್, ಅವರಿಗೂ ಫೋನ್ ಮಾಡಬೇಡಿ, ಕೊನೆ ಪಕ್ಷ ನಾನಾದರೂ ಕರೆಗೆ ಸಿಕ್ಕಿದ್ದೀನಿ. ಅವರು ಸಿಗಲ್ಲ ಅಂತೀನಿ. ಫೋನ್ ಮಾಡಿ ಪ್ರಯತ್ನಿಸೋದು ತಪ್ಪಲ್ಲ. ಆದರೆ ಭರವಸೆ ಕೊಡಲ್ಲ. ತುಂಬಾ ಬಲವಂತ ಮಾಡಿದರೆ ಬೀಪ್ ಲಾಂಗ್ವೇಜ್ ಅಲ್ಲಿ ಮಾತನಾಡಬೇಕಾಗುತ್ತದೆ" ಎಂದು ತಮಾಷೆ ಮಾಡಿದರು.

ಕ್ಯಾಚ್ ಹಾಕಿಕೊಳ್ಳೋಕೆ ಫೋನ್ ಮಾಡ್ತಾರೆ-ಕಿಚ್ಚ
"ಕೆಲವರು ನನಗೆ ಟ್ಯಾಲೆಂಟ್ ಇಲ್ವಾ? ನಮಗೆ ಸಾಮರ್ಥ್ಯ ಇಲ್ವಾ ಎಂದು ಕೇಳುತ್ತಾರೆ ಅಂತ ಪರಮೇಶ್ವರ್ ಗುಂಡ್ಕಲ್ ಹೇಳಿದರು. ಇದಕ್ಕೆ ದನಿ ಗೂಡಿಸಿದ ಸುದೀಪ್ "ಕೆಲವರು ಆತ್ಮ ವಿಮರ್ಶೆಗೆ, ತಪ್ಪು ಸರಿ ಮಾಡಿಕೊಳ್ಳಲು ವೇದಿಕೆ ಮಾಡಿ ಕೊಡಿ ಎಂದು ಕೇಳುತ್ತಿರುತ್ತಾರೆ. ಇವರನ್ನು ಕ್ಯಾಚ್ ಹಾಕಿ ಕೊಳ್ಳಲು" ಅಂತ ಪರಮೇಶ್ವರ್ ಗುಂಡ್ಕಲ್ ಕಡೆ ನೋಡಿದರು. ನಂತರ ಮಾತು ಮುಂದುವರೆಸಿದ ಪರಮೇಶ್ವರ್ ಗುಂಡ್ಕಲ್ " ನಿರ್ದೇಶಕರ ದೃಷ್ಟಿಕೋನದಂತೆ ಸಿನಿಮಾ, ಸೀರಿಯಲ್, ರಿಯಾಲಿಟಿ ಶೋ ಕಾಸ್ಟಿಂಗ್ ನಡೆಯುತ್ತದೆ. ನಾನು 8 ಸೀಸನ್ಗಳಲ್ಲಿ ಹಲವು ಸ್ಪರ್ಧಿಗಳನ್ನು ಭೇಟಿಯಾಗಿದ್ದೇನೆ. ತುಂಬಾ ಚೆನ್ನಾಗಿ ಆಡ್ತಾರೆ ಅಂದುಕೊಂಡಿದ್ದರು ನಿರಾಸೆ ಮೂಡಿಸಿದ್ದು ಇದೆ. ಏನೂ ಆಗಲ್ಲ ಅಂದುಕೊಂಡವರು ಫಿನಾಲೆವರೆಗೂ ಬಂದಿದ್ದು ಇದೆ" ಎಂದು ವಿವರಿಸಿದರು.

ಸ್ಪರ್ಧಿಗಳ ಆಯ್ಕೆ ಬಹಳ ಕಷ್ಟ- ಸುದೀಪ್
ಒಂದು ವೇಳೆ ಸ್ಪರ್ಧಿಗಳ ಆಯ್ಕೆ ನಿಮಗೆ ಕೊಟ್ಟರೆ ಯಾವ ಸೆಲೆಬ್ರೆಟಿಯನ್ನು ಆಯ್ಕೆ ಮಾಡುತ್ತೀರಾ ಅನ್ನುವ ಪ್ರಶ್ನೆಗೆ ಸುದೀಪ್ "ನಾನು ಇಷ್ಟು ಹೊತ್ತು ಹೇಳಿದ್ದಂತೆ ಆ ವಿಚಾರಕ್ಕೆ ತಲೆ ಹಾಕುವುದಿಲ್ಲ. ನಾನು ಯಾರೊ ಸೆಲೆಬ್ರೆಟಿಯನ್ನು ಆಯ್ಕೆ ಮಾಡುವುದು, ಅವರು ಒಳಗೆ ಹೋಗಿ ಗೆಲ್ಲದೇ ಇರುವುದು, ಹೊರಗೆ ಬಂದು ನೀನು ಹೇಳಿದ್ದಕ್ಕೆ ಒಳಗೆ ಹೋದೆ ಮರ್ಯಾದೆ ಹೋಯ್ತು ಅನ್ನೋದು, ವರ್ಷವಿಡೀ ಅವರನ್ನು ನಾನು ನೋಡಿಕೊಳ್ಳೋದು ಯಾಕೆ ಬೇಕು. ಸೆಲೆಬ್ರೆಟಿಗಳು ಎಂದ ಮೇಲೆ ಅಲ್ಲೇ ಇದೆ. ಯಾಕೆ ಅವರ ಸಹವಾಸ ನಮಗೆ. ನಾನು ಯಾರನ್ನಾದರೂ ಒಳಗೆ ಕಳುಹಿಸಿದೇ ಅಂದುಕೊಳ್ಳಿ ಶನಿವಾರ ಯಾರಿಗಾದರೂ ನಾನು ಕ್ಲಾಸ್ ತಗೊಂಡರೆ ಅವರು ನಂತರ ನನ್ನ ಹತ್ರ ಬಂದು ನೀನು ಹೇಳಿ ಒಳಗೆ ಹೋದ್ರೆ ನನಗೆ ಹೀಗಂತೀರಾ, ನಿಮ್ಮಿಂದ ಹೋದೆ ಸಾರ್ ನಾನು ಅಂತಾರೆ. ಇದು ಹೇಗೆ ಅಂದರೆ ಬೇಡದ ಓತಿಕೇತವನ್ನು ನಾವೇ ಲುಂಗಿ ಒಳಗೆ ಬಿಟ್ಟುಕೊಂಡಂತೆ" ಎಂದರು.


Click it and Unblock the Notifications











