Krishnam Pranaya Sakhi OTT: ಈ ವರ್ಷ ಪ್ರಣಯ ಸಖಿ ಜೊತೆ ಓಟಿಟಿಗೆ ಬರಲ್ವಾ ಕೃಷ್ಣ?
ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ 'ಕೃಷ್ಣಂಪ್ರಣಯ ಸಖಿ' ಸಿನಿಮಾ ಚಿತ್ರಮಂದಿರಗಳಲ್ಲಿ ಪ್ರದರ್ಶನ ಮುಗಿಸಿದೆ. ಆಗಸ್ಟ್ 15ಕ್ಕೆ ಸ್ವಾತಂತ್ರ್ಯೋತ್ಸವ ಸಂಭ್ರಮದಲ್ಲಿ ಸಿನಿಮಾ ತೆರೆಗೆ ಬಂದಿತ್ತು. ಶ್ರೀನಿವಾಸ್ ರಾಜು ನಿರ್ದೇಶನದ ಸಿನಿಮಾ ಪ್ರೇಕ್ಷಕರ ಮನಗೆದ್ದಿದೆ. ಮೊದಲ ವಾರವೇ ಭರ್ಜರಿ ಕಲೆಕ್ಷನ್ ಮಾಡಿತ್ತು.
ನಿಧಾನವಾಗಿ ರೊಮ್ಯಾಂಟಿಕ್ ಕಾಮಿಡಿ ಎಂಟರ್ಟೈನರ್ ಸಿನಿಮಾ ನೋಡೋಕೆ ಫ್ಯಾಮಿಲಿ ಆಡಿಯನ್ಸ್ ಚಿತ್ರಮಂದಿರಕ್ಕೆ ಬಂದಿದ್ದರು. ನೋಡ ನೋಡುತ್ತಲೇ 'ಕೃಷ್ಣಂಪ್ರಣಯ ಸಖಿ' ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿತ್ತು. ಬರೋಬ್ಬರಿ 92 ದಿನಗಳ ಕಾಲ ಯಶಸ್ವಿಯಾಗಿ ಪ್ರದರ್ಶನ ಕಂಡಿದೆ. ಇತ್ತೀಚಿನ ವರ್ಷಗಳಲ್ಲಿ 50 ದಿನ ಕಷ್ಟ ಎನ್ನುವಂತಾಗಿದೆ. ಅಂಥಾದ್ದರಲ್ಲಿ ಗಣಿ ಸಿನಿಮಾ 90 ದಿನ ಪೂರೈಸಿದೆ.

'ಕೃಷ್ಣಂಪ್ರಣಯ ಸಖಿ' ಚಿತ್ರ ಯಾವಾಗ ಓಟಿಟಿಗೆ ಬರುತ್ತದೆ ಎಂದು ಸಾಕಷ್ಟು ಜನ ಕಾಯುತ್ತಿದ್ದಾರೆ. ಸಾಮಾನ್ಯವಾಗಿ ದೊಡ್ಡ ಸಿನಿಮಾಗಳೇ 30 ದಿನಕ್ಕೆಲ್ಲಾ ಡಿಜಿಟಲ್ ಸ್ಟ್ರೀಮಿಂಗ್ ಆರಂಭಿಸುತ್ತಿದೆ. ಆದರೆ 'ಕೃಷ್ಣಂಪ್ರಣಯ ಸಖಿ' ಚಿತ್ರಕ್ಕಾಗಿ ಜನ ಕಾದು ಕಾದು ಸುಸ್ತಾಗಿದ್ದಾರೆ. ಸಾಕಷ್ಟು ಜನ ಓಟಿಟಿಯಲ್ಲಿ ಸಿನಿಮಾ ವೀಕ್ಷಿಸಲು ಕಾಯುತ್ತಿದ್ದಾರೆ.
ತ್ರಿಶೂಲ್ ಎಂಟರ್ಟೈನ್ಮೆಂಟ್ಸ್ ಬ್ಯಾನರ್ ಅಡಿಯಲ್ಲಿ ಪ್ರಶಾಂತ್ ಜಿ. ರುದ್ರಪ್ಪ 'ಕೃಷ್ಣಂಪ್ರಣಯ ಸಖಿ' ಚಿತ್ರ ನಿರ್ಮಾಣ ಮಾಡಿದ್ದಾರೆ. ಗಣೇಶ್ ಜೊತೆ ಮಾಳವಿಕಾ ನಾಯರ್ ಹಾಗೂ ಶರಣ್ಯ ಶೆಟ್ಟಿ ನಾಯಕಿಯರಾಗಿ ಮಿಂಚಿದ್ದಾರೆ. ಅರ್ಜುನ್ ಜನ್ಯಾ ಸಂಗೀತ ಚಿತ್ರದ ಮತ್ತೊಂದು ಹೈಲೆಟ್. 'ದ್ವಾಪರ' ಸಾಂಗ್ ಒಂದೇ ಅರ್ಧ ಸಿನಿಮಾ ಗೆಲ್ಲಿಸಿಬಿಟ್ಟಿತ್ತು.
ರಂಗಾಯಣ ರಘು, ಸಾಧುಕೋಕಿಲ ಕಾಮಿಡಿ ಕಿಕ್ ಕೂಡ ಚಿತ್ರದಲ್ಲಿದೆ. ಇನ್ನುಳಿದಂತೆ ಅವಿನಾಶ್, ಶಶಿಕುಮಾರ್, ರಾಮಕೃಷ್ಣ, ಶ್ರುತಿ, ಅಶೋಕ್ ಸೇರಿ ದೊಡ್ಡ ತಾರಾಗಣವೇ 'ಕೃಷ್ಣಂಪ್ರಣಯ ಸಖಿ' ಚಿತ್ರದಲ್ಲಿದೆ. ಸಿಂಪಲ್ ಕಥೆಯನ್ನು ಸೊಗಸಾಗಿ ತೆರೆಗೆ ತಂದು ಚಿತ್ರತಂಡ ಗೆದ್ದಿತ್ತು. ಬಹಳ ದಿನಗಳ ಬಳಿಕ ಗಣಿಗೆ ಒಂದೊಳ್ಳೆ ಬ್ರೇಕ್ ಸಿಕ್ಕಿದೆ. ಸಿನಿಮಾ ಅಂದಾಜು 25 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದೆ.

ಖ್ಯಾತ ಉದ್ಯಮಿ ಕೃಷ್ಣ. ಅನಾಥಶ್ರಮ ನಡೆಸುತ್ತಿರುವ ಪ್ರಣಯ. ಆಕೆಯನ್ನು ನೋಡಿ ಕೃಷ್ಣನಿಗೆ ಲವ್ವಾಗುತ್ತದೆ. ಆದರೆ ತಾನು ಶ್ರೀಮಂತ ಎಂದು ಗೊತ್ತಾದರೆ ಅವಳು ಒಪ್ಪುತ್ತಾಳೋ ಇಲ್ಲವೋ ಎಂದು ಕಾರ್ ಡ್ರೈವರ್ ರೀತಿ ನಾಟಕ ಮಾಡುತ್ತಾನೆ. ಮುಂದೆ ಏನೆಲ್ಲಾ ಆಗುತ್ತದೆ ಎನ್ನುವುದು 'ಕೃಷ್ಣಂಪ್ರಣಯ ಸಖಿ' ಚಿತ್ರದ ಒನ್ಲೈನ್ ಸ್ಟೋರಿ.
ಅಮೇಜಾನ್ ಪ್ರೈಂಗೆ ಚಿತ್ರದ ಡಿಜಿಟಲ್ ರೈಟ್ಸ್ ಮಾರಾಟವಾಗಿದೆ ಎನ್ನುವ ಗುಸುಗುಸು ಕೇಳಿಬಂದಿತ್ತು. ಆದರೆ ಉದಯ ಟಿವಿ ಚಿತ್ರದ ಒಟಿಟಿ ಹಾಗೂ ಡಿಜಿಟಲ್ ರೈಟ್ಸ್ ಕೊಂಡುಕೊಂಡಿದೆ. ಇದೇ ಕಾರಣಕ್ಕೆ ಸಿನಿಮಾ ಓಟಿಟಿಗೆ ಬರುವುದು ತಡವಾಗುತ್ತಿದೆ ಎನ್ನುವ ಮಾತುಗಳು ಕೇಳಿ ಬರ್ತಿದೆ. ಈ ವರ್ಷ 'ಕೃಷ್ಣಂಪ್ರಣಯ ಸಖಿ' ಸಿನಿಮಾ ಓಟಿಟಿಯಲ್ಲಿ ಸಿಗುವುದು ಅನುಮಾನ ಎನ್ನುವಂತಾಗಿದೆ.
ಉದಯ ಟಿವಿಗೆ ರೈಟ್ಸ್ ಮಾರಾಟವಾಗಿರುವುದು ಖಚಿತವಾಗಿದೆ. ಸಾಮಾನ್ಯವಾಗಿ ಉದಯ ಟಿವಿಯಲ್ಲಿ ಸಿನಿಮಾ ಪ್ರೀಮಿಯರ್ ಬಳಿಕ ಸನ್ನೆಕ್ಸ್ಟ್ ಓಟಿಟಿ ಪ್ಲಾಟ್ಫಾರ್ಮ್ಗೆ ಬರುತ್ತದೆ. ದೊಡ್ಡ ಸಿನಿಮಾಗಳನ್ನು ಉದಯ ಟಿವಿ ಹಬ್ಬದ ಸಂಭ್ರಮದಲ್ಲಿ ಬಿಡುಗಡೆ ಮಾಡುತ್ತದೆ. ಹಾಗಾಗಿ ಕ್ರಿಸ್ಮಸ್, ಹೊಸ ವರ್ಷ ಅಥವಾ ಸಂಕ್ರಾಂತಿ ಸಂಭ್ರಮದಲ್ಲಿ 'ಕೃಷ್ಣಂಪ್ರಣಯ ಸಖಿ' ಸಿನಿಮಾ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ. ಬಳಿಕ ಸನ್ನೆಕ್ಸ್ಟ್ಗೆ ಎಂಟ್ರಿ ಕೊಡಲಿದೆ.
ಸುಗ್ಗಿ ಸಂಭ್ರಮದ ವೇಳೆಗೆ ಓಟಿಟಿ ಚಂದಾದಾರರು ಸಿನಿಮಾವನ್ನು ವೀಕ್ಷಿಸಬಹುದು. 'ಕಾಂತಾರ' ಬಳಿಕ ಕನ್ನಡದ ಹಿಟ್ ಸಿನಿಮಾವೊಂದು ಇಷ್ಟು ತಡವಾಗಿ ಓಟಿಟಿಗೆ ಬರುತ್ತಿರುವುದು ಇದೇ ಮೊದಲು ಅನ್ನಿಸುತ್ತಿದೆ. ಇದೇ ಕಾರಣಕ್ಕೆ ಕೆಲವರು ಬೇಸರಗೊಂಡಿದ್ದಾರೆ.


Click it and Unblock the Notifications











