'ಲಾಲ್ ಸಲಾಂ' ಫಸ್ಟ್ ವೀಕೆಂಡ್ ಗಳಿಕೆ ಎಷ್ಟು? ಓಟಿಟಿ ಸ್ಟ್ರೀಮಿಂಗ್ ಎಲ್ಲಿ? ಯಾವಾಗ?
ಸೂಪರ್ ಸ್ಟಾರ್ ರಜನಿಕಾಂತ್ ಪ್ರಮುಖ ಪಾತ್ರದಲ್ಲಿ ನಟಿಸಿರುವ 'ಲಾಲ್ ಸಲಾಂ' ಸಿನಿಮಾ ಫಸ್ಟ್ ವೀಕೆಂಡ್ ಮುಗಿದೆ. ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದ್ದು ಆಂಧ್ರ, ತೆಲಂಗಾಣದಲ್ಲಿ ಹೀನಾಯವಾಗಿ ಸೋಲುಂಡಿದೆ. ತಮಿಳುನಾಡಿನಲ್ಲಿ ಕೂಡ ಚಿತ್ರಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದೇ ಕಾರಣಕ್ಕೆ ಸಿನಿಮಾ ಪ್ರೇಕ್ಷಕರ ಬರ ಎದುರಿಸುವಂತಾಗಿದೆ.
ಧಾರ್ಮಿಕ ಸಾಮರಸ್ಯ ಬಗ್ಗೆ ಚಿತ್ರದಲ್ಲಿ ಚರ್ಚಿಸಲಾಗಿದೆ. ಬಹಳ ದಿನಗಳ ಬಳಿಕ ಐಶ್ವರ್ಯ ರಜನಿಕಾಂತ್ 'ಲಾಲ್ ಸಲಾಂ' ಸಿನಿಮಾ ಕಟ್ಟಿಕೊಟ್ಟಿದ್ದರು. ಕ್ರಿಕೆಟ್ ಜೊತೆ ಜೊತೆಗೆ ಹಿಂದೂ- ಮುಸ್ಲಿಂ ಸೌಹಾರ್ದತೆ ಮತ್ತು ಭಾವೈಕ್ಯತೆಯ ಸಂಕೇತವಾಗಿ ಚಿತ್ರವನ್ನು ತೆರೆಗೆ ತರಲಾಗಿದೆ. ಮುಸ್ಲಿಂ ಸಮುದಾಯದ ನಾಯಕನಾಗಿ ರಜನಿಕಾಂತ್ ಬಣ್ಣ ಹಚ್ಚಿದ್ದಾರೆ.

'ಲಾಲ್ ಸಲಾಂ' ಚಿತ್ರದಲ್ಲಿ ವಿಷ್ಣು ವಿಶಾಲ್ ಹಾಗೂ ವಿಕ್ರಾಂತ್ ಲೀಡ್ ರೋಲ್ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಕೀ ರೋಲ್ ಪ್ಲೇ ಮಾಡಿರುವ ತಲೈವಾ ಇಡೀ ಚಿತ್ರವನ್ನು ತಮ್ಮ ಹೆಗಲ ಮೇಲೆ ಹೊತ್ತು ಸಾಗುವ ಪ್ರಯತ್ನ ಮಾಡಿದ್ದಾರೆ. ಒಂದೊಳ್ಳೆ ಸಂದೇಶ ಸಾರುವ ಸಿನಿಮಾ ಸಂಪೂರ್ಣವಾಗಿ ಪ್ರೇಕ್ಷಕರನ್ನು ರಂಜಿಸುವಲ್ಲಿ ವಿಫಲವಾಗಿದೆ. ನಿಧಾನಗತಿಯ ಚಿತ್ರಕಥೆ ಹಿನ್ನೆಡೆಗೆ ಕಾರಣವಾಗಿದೆ.
ಫಸ್ಟ್ ವೀಕೆಂಡ್ನಲ್ಲಿ 'ಲಾಲ್ ಸಲಾಂ' ಸಿನಿಮಾ ವರ್ಲ್ಡ್ವೈಡ್ 22 ಕೋಟಿ ರೂ. ಗ್ರಾಸ್ ಕಲೆಕ್ಷನ್ ಅಷ್ಟೇ ಮಾಡಿದೆ ಎಂದು ಬಾಕ್ಸಾಫೀಸ್ ಪಂಡಿತರು ಅಂದಾಜಿಸುತ್ತಿದ್ದಾರೆ. ಅಷ್ಟೇನು ನಿರೀಕ್ಷೆ ಮೂಡಿಸದ ಚಿತ್ರಕ್ಕೆ ಮೊದಲ ದಿನದಿಂದಲೂ ಒಳ್ಳೆ ರೆಸ್ಪಾನ್ಸ್ ಸಿಕ್ಕಿರಲಿಲ್ಲ. ಭಾನುವಾರ ಕೂಡ ಪ್ರೇಕ್ಷಕರು ಸಿನಿಮಾ ನೋಡಲು ಹಿಂದೇಟು ಹಾಕಿದ್ದರು. 'ಜೈಲರ್' ಬ್ಲಾಕ್ಬಸ್ಟರ್ ಬಳಿಕ ಬಂದ ಈ ಚಿತ್ರಕ್ಕೆ ಇಂತಹ ಪ್ರತಿಕ್ರಿಯೆ ಯಾರೂ ಊಹಿಸಿರಲಿಲ್ಲ.
'ಲಾಲ್ ಸಲಾಂ' ಚಿತ್ರದಲ್ಲಿ ರಜನಿಕಾಂತ್ ಪಾತ್ರಕ್ಕೆ ಭಾರೀ ಪ್ರಾಮುಖ್ಯತೆ ಇದೆ. ಇನ್ನು ತಲೈವಾ ತಮ್ಮ ಪರ್ಫಾರ್ಮನ್ಸ್ ಮೂಲಕ ವಿಕ್ರಾಂತ್, ವಿಶಾಲ್ ಇಬ್ಬರನ್ನು ಮರೆಸಿಬಿಟ್ಟಿದ್ದಾರೆ. ಆದರೂ ಮೊದಲಿನಿಂದ ತಲೈವಾದು ಅತಿಥಿ ಪಾತ್ರ ಎಂದು ಬಿಂಬಿಸಿದ್ದೇ ಚಿತ್ರದ ಹಿನ್ನೆಡೆಗೆ ಕಾರಣ ಎನ್ನುವವರು ಇದ್ದಾರೆ. ಮೊಯ್ದೀನ್ ಭಾಯ್ ಆಗಿ ರಜನಿಕಾಂತ್ ತೆರೆಮೇಲೆ ಇದ್ದಷ್ಟು ಹೊತ್ತು ಮೋಡಿ ಮಾಡುತ್ತಾರೆ.

ಇನ್ನು 'ಲಾಲ್ ಸಲಾಂ' ಓಟಿಟಿ ಸ್ಟ್ರೀಮಿಂಗ್ ಯಾವಾಗ ಎನ್ನುವ ಚರ್ಚೆ ಶುರುವಾಗಿದೆ. ನೆಟ್ಫ್ಲಿಕ್ಸ್ ಸಂಸ್ಥೆ ಚಿತ್ರದ ಡಿಜಿಟಲ್ ರೈಟ್ಸ್ ಕೊಂಡುಕೊಂಡಿದೆ ಎನ್ನಲಾಗ್ತಿದೆ. 45 ದಿನಗಳ ಬಳಿಕ ಓಟಿಟಿ ಸ್ಟ್ರೀಮಿಂಗ್ಗೆ ಒಪ್ಪಂದವಾಗಿದೆ. ಆದರೆ ಚಿತ್ರಕ್ಕೆ ನೀರಸ ಪ್ರತಿಕ್ರಿಯೆ ಸಿಗುತ್ತಿರುವುದರಿಂದ ತಿಂಗಳಿಗೂ ಮೊದ್ಲೆ ನೆಟ್ಫ್ಲಿಕ್ಸ್ಗೆ ಎಂಟ್ರಿ ಕೊಡುವ ಸಾಧ್ಯತೆಯಿದೆ. ಆ ಲೆಕ್ಕದಲ್ಲಿ ಮಾರ್ಚ್ ಮೊದಲ ವಾರವೇ ಸ್ಮಾಲ್ ಸ್ಕ್ರೀನ್ಗಳಲ್ಲಿ ಮೊಯ್ದೀನ್ ಭಾಯ್ ಆರ್ಭಟ ಶುರುವಾಗುವ ನಿರೀಕ್ಷೆಯಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗ್ತಿದೆ.
'ಲಾಲ್ ಸಲಾಂ' ಸಿನಿಮಾ ಕಥೆ ಏನು ಎನ್ನುವುದನ್ನು ನೋಡುವುದಾದರೆ " 1993 ರಲ್ಲಿ ಬಾಬರಿ ಮಸೀದಿ ಘಟನೆಯ ನಂತರ ಶುರುವಾಗುತ್ತದೆ. ಹಳ್ಳಿಯೊಂದರಲ್ಲಿ ಹಿಂದೂ-ಮುಸಲ್ಮಾನರು ಬಹಳ ಆತ್ಮೀಯವಾಗಿರುತ್ತಾರೆ. ಮೊಯ್ದೀನ್ ಭಾಯ್ (ರಜನಿಕಾಂತ್) ಅವರಿಗೆ ಎಲ್ಲ ರೀತಿಯಲ್ಲೂ ಬೆಂಬಲ ನೀಡುತ್ತಾನೆ. ಆತನ ಮಗ ಶಂಶುದ್ದೀನ್ (ವಿಕ್ರಾಂತ್) ಒಬ್ಬ ಕ್ರಿಕೆಟಿಗ. ಆತ ಭಾರತ ಕ್ರಿಕೆಟ್ ತಂಡದಲ್ಲಿ ಆಡಬೇಕು ಎನ್ನುವುದು ತಂದೆ ಕನಸು. ಆದರೆ ಅದೊಂದು ಕ್ರಿಕೆಟ್ ಪಂದ್ಯ ಇಡೀ ಕಥೆಗೆ ದೊಡ್ಡ ತಿರುವು ಕೊಟ್ಟುಬಿಡುತ್ತದೆ. ಮುಂದೆ ಅಣ್ಣ-ತಮ್ಮಂದಿರ ರೀತಿ ಇದ್ದ ಹಿಂದೂ - ಮುಸ್ಲಿಂ ನಡುವೆ ಸಂಘರ್ಷ ಏರ್ಪಡುತ್ತದೆ. ಹಾಗಾದರೆ ಆ ಕ್ರಿಕೆಟ್ ಪಂದ್ಯದಲ್ಲಿ ಏನಾಯ್ತು? ಮೊಯ್ದೀನ್ ಭಾಯ್ ಕನಸು ನನಸಾಗುತ್ತಾ? ಮತ್ತೆ ಹಳ್ಳಿಯಲ್ಲಿ ಹಿಂದೂ- ಮುಸ್ಲಿಂ ನಡುವೆ ಶಾಂತಿ ನೆಲೆಸುತ್ತಾ? ಎನ್ನುವ ಪ್ರಶ್ನೆಗಳಿಗೆ ಉತ್ತರ ಬೇಕು ಅಂದ್ರೆ 'ಲಾಲ್ ಸಲಾಂ' ಸಿನಿಮಾ ನೋಡಲೇಬೇಕು.


Click it and Unblock the Notifications











