Malli Pelli OTT: ಮತ್ತೆ ನೋಟಿಸ್ ನೀಡಿ ನರೇಶ್- ಪವಿತ್ರಾ ಲೋಕೇಶ್ಗೆ ಶಾಕ್ ಕೊಟ್ಟ ರಮ್ಯಾ ರಘುಪತಿ
ಲಿವ್ಇನ್ ರಿಲೇಷನ್ಶಿಪ್ನಲ್ಲಿರುವ ತೆಲುಗು ನಟ ನರೇಶ್ ಹಾಗೂ ಕನ್ನಡ ನಟಿ ಪವಿತ್ರಾ ಲೋಕೇಶ್ ತಮ್ಮದೇ ಲವ್ ಸ್ಟೋರಿಯನ್ನು ಸಿನಿಮಾ ಮಾಡಿದ್ದಾರೆ. ಬೋಲ್ಡ್ ಲವ್ ಸ್ಟೋರಿ ಅಂತ 'ಮಳ್ಳಿ ಪೆಳ್ಳಿ' ಸಿನಿಮಾ ಥಿಯೇಟರ್ಗಳಲ್ಲಿ ಅಷ್ಟಾಗಿ ಸದ್ದು ಮಾಡಲಿಲ್ಲ. ಒಂದು ವಾರ ಕೂಡ ಸರಿಯಾಗಿ ಪ್ರದರ್ಶನ ಕಾಣಲಿಲ್ಲ. ಇನ್ನು ಇದೀಗ ಓಟಿಟಿ ಫ್ಲಾಟ್ಪಾರ್ಮ್ಗೆ ಸಿನಿಮಾ ಬಂದಿದೆ.
ಎಂ. ಎಸ್ ರಾಜು ನಿರ್ದೇಶನದ ಈ ರೊಮ್ಯಾಂಟಿಕ್ ಚಿತ್ರವನ್ನು ಸ್ವತಃ ನರೇಶ್ ನಿರ್ಮಾಣ ಮಾಡಿದ್ದಾರೆ. ಅಂದಾಜು 15 ಕೋಟಿ ರೂ. ಬಜೆಟ್ನಲ್ಲಿ ಸಿನಿಮಾ ಮಾಡಿರುವುದಾಗಿ ಹೇಳಿಕೊಂಡಿದ್ದರು. ಆದರೆ ಸಿನಿಮಾ 30 ಲಕ್ಷ ಕೂಡ ಸರಿಯಾಗಿ ಕಲೆಕ್ಷನ್ ಮಾಡಲಿಲ್ಲ. ತೆಲುಗಿನಲ್ಲಿ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದ್ದ ಚಿತ್ರ ಇತ್ತೀಚೆಗೆ ಕನ್ನಡದಲ್ಲೂ ರಿಲೀಸ್ ಆಗಿತ್ತು. ಕನ್ನಡಕ್ಕೆ ಡಬ್ ಮಾಡಿ ಭಾರೀ ಪ್ರಮೋಷನ್ ಮಾಡಿ ಸಿನಿಮಾ ತೆರೆಗೆ ತಂದರೂ ಪ್ರಯೋಜನವಾಗಲಿಲ್ಲ. ತಮ್ಮದೇ ವಿವಾದಾತ್ಮಕ ಕತೆಯನ್ನು ಸಿನಿಮಾ ಮಾಡಿ ಎನ್'ಕ್ಯಾಶ್' ಮಾಡಿಕೊಳ್ಳುವ ನರೇಶ್ ಐಡಿಯಾ ಫ್ಲಾಪ್ ಆಗಿದೆ.

ಇನ್ನು 'ಮಳ್ಳಿ ಪೆಳ್ಳಿ' ಸಿನಿಮಾ ಪ್ರಮೋಷನ್ ವೇಳೆ ನರೇಶ್ ಹಾಗೂ ಪವಿತ್ರಾ ಲೋಕೇಶ್ ತಮ್ಮಿಬ್ಬರ ಲವ್ಸ್ಟೋರಿ ರಿವೀಲ್ ಮಾಡಿದ್ದರು. ಸದ್ಯ ಲಿವ್ಇನ್ ರಿಲೇಷನ್ಶಿಪ್ನಲ್ಲಿ ಇರುವುದಾಗಿ ಒಪ್ಪಿಕೊಂಡಿದ್ದರು. ಶೀಘ್ರದಲ್ಲೇ ಮದುವೆ ಆಗುವುದಾಗಿ ಹೇಳಿಕೊಂಡಿದ್ದರು. ಆದರೆ ನರೇಶ್ಗೆ 3ನೇ ಪತ್ನಿ ರಮ್ಯಾ ರಘುಪತಿಯಿಂದ ಡಿವೋರ್ಸ್ ಸಿಕ್ಕಿಲ್ಲ. ಅದೇ ಕಾರಣಕ್ಕೆ ಪವಿತ್ರಾ ಜೊತೆ ಮದುವೆ ಆಗ್ತಿಲ್ಲ ಎನ್ನಲಾಗ್ತಿದೆ.
ನೋಟಿಸ್ ನೀಡಿದ ರಮ್ಯಾ ರಘುಪತಿ
'ಮಳ್ಳಿ ಪೆಳ್ಳಿ' ಚಿತ್ರದಲ್ಲಿ ತಮ್ಮಿಬ್ಬರ ಲವ್ ಸ್ಟೋರಿ ಜೊತೆಗೆ ರಮ್ಯಾ ರಘುಪತಿ ಅವರನ್ನು ವಿಲನ್ ರೀತಿ ಬಿಂಬಿಸಲಾಗಿದೆ. ಆಕೆಯನ್ನು ಟಾರ್ಗೆಟ್ ಮಾಡಿ ಸಿನಿಮಾ ಮಾಡಿರುವುದು ಗೊತ್ತಾಗುತ್ತಿದೆ. ಆ ಪಾತ್ರವನ್ನು ವನಿತಾ ವಿಜಯ್ ಕುಮಾರ್ ನಿಭಾಯಿಸಿದ್ದಾರೆ. ಥಿಯೇಟರ್ಗಳಲ್ಲಿ ಸದ್ದು ಮಾಡದ 'ಮಳ್ಳಿ ಪೆಳ್ಳಿ' ಸಿನಿಮಾ ಅಹಾ ಓಟಿಟಿ ಫ್ಲಾಟ್ಪಾರ್ಮ್ಗೆ ಬಂದಿದೆ. ಶೀಘ್ರದಲ್ಲೇ ಪ್ರೈಂ ವಿಡಿಯೋ ಬರಲಿದೆ. ಆದರೆ ಕೂಡಲೇ ಸಿನಿಮಾ ಸ್ಟ್ರೀಮಿಂಗ್ ನಿಲ್ಲಿಸಬೇಕು ಎಂದು ರಮ್ಯಾ ರಘುಪತಿ ಅಹಾ ಮತ್ತು ಪ್ರೈಂ ವಿಡಿಯೋ ಸಂಸ್ಥೆಗೆ ನೋಟಿಸ್ ನೀಡಿದ್ದಾರೆ.
ರಮ್ಯಾ ಆರೋಪ ಏನು?
"ಚಿತ್ರದಲ್ಲಿ ವಾಸ್ತವವನ್ನು ತೋರಿಸಿಲ್ಲ. ನನ್ನ ಪಾತ್ರವನ್ನು ಕೆಟ್ಟದಾಗಿ ತೋರಿಸಿದ್ದಾರೆ. ನನ್ನ ಗೌರವಕ್ಕೆ ಧಕ್ಕೆ ತರಲು ಸಿನಿಮಾ ಕ್ರಿಯೇಟಿವಿಟಿ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ರಮ್ಯಾ ರಘುಪತಿ ನೋಟಿಸ್ನಲ್ಲಿ ಉಲ್ಲೇಖಿಸಿದ್ದಾರೆ. ನನ್ನ ಆತ್ಮಸ್ಥೈರ್ಯ ಕುಗ್ಗಿಸುವಂತೆ ಅವರಿಗೆ ಬೇಕಾಗಿರುವಂತೆ 'ಮಳ್ಳಿ ಪೆಳ್ಳಿ' ಚಿತ್ರದಲ್ಲಿ ವೈಯಕ್ತಿಕ ವಿವಾದವನ್ನು ಬಳಸಿಕೊಂಡಿದ್ದಾರೆ" ಎಂದು ರಮ್ಯಾ ರಘುಪತಿ ಆರೋಪಿಸಿದ್ದಾರೆ.

ನನ್ನ ವಿರುದ್ಧ ಸಂಚು ನಡೀತಿದೆ
"ಸಿನಿಮಾ ನೆಪದಲ್ಲಿ ನನ್ನನ್ನು ಮತ್ತಷ್ಟು ನೋಯಿಸುವ ವೈಯಕ್ತಿಕ ವಿವಾದಗಳಲ್ಲಿ ತನ್ನನ್ನು ದೋಷಿಯಾಗಿ ನಿಲ್ಲಿಸುವ ಸಂಚು ನಡೆಯುತ್ತಿದೆ. ಪ್ರಸ್ತುತ ಜನರ ಮೇಲೆ ಓಟಿಟಿ ಪ್ರಭಾವ ಹೆಚ್ಚಾಗಿ ಇದೆ. ಇಂತಹ ಸಮಯದಲ್ಲಿ 'ಮಳ್ಳಿ ಪೆಳ್ಳಿ' ಚಿತ್ರ ಓಟಿಟಿಯಲ್ಲಿ ರಿಲೀಸ್ ಆದರೆ ತನ್ನ ಗೌರವಕ್ಕೆ ಧಕ್ಕೆ ಆಗುತ್ತದೆ" ಎಂದಿದ್ದಾರೆ. ಸಿನಿಮಾ ಓಟಿಟಿ ಪ್ರಸಾರ ನಿಲ್ಲಿಸುವಂತೆ ತಮ್ಮ ವಕೀಲರ ಮೂಲಕ ರಮ್ಯಾ ರಘುಪತಿ ನೋಟಿಸ್ ನೀಡಿರುವುದಾಗಿ ಹೇಳಲಾಗುತ್ತಿದೆ. ಈ ಹಿಂದೆ ಸಿನಿಮಾ ಥಿಯೇಟರ್ನಲ್ಲಿ ರಿಲೀಸ್ ಆದಾಗ ಕೂಡ ಇದೇ ರೀತಿ ರಮ್ಯಾ ರಘುಪತಿ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಪ್ರಯೋಜನವಾಗಿರಲಿಲ್ಲ.
ರಮ್ಯಾ ರಘುಪತಿ ಆರೋಪ
ಕಳೆದ ವರ್ಷ ನರೇಶ್- ರಮ್ಯಾ ರಘುಪತಿ ಹಾಗೂ ಪವಿತ್ರಾ ಲೋಕೇಶ್ ವೈಯಕ್ತಿಕ ವಿಚಾರ ಬೀದಿರಂಪ ಆಗಿತ್ತು. ಪವಿತ್ರಾ ಲೋಕೇಶ್ ತಮ್ಮ ದಾಂಪತ್ಯದಲ್ಲಿ ಹುಳಿ ಹಿಂಡಿದ್ದಾಳೆ ಎಂದು ನರೇಶ್ 3ನೇ ಪತ್ನಿ ರಮ್ಯಾ ರಘಪತಿ ಆರೋಪಿಸಿದ್ದರು. ಮೊದಲಿಗೆ ನಾವಿಬ್ಬರು ಸ್ನೇಹಿತರು ಅಷ್ಟೇ ಎಂದು ಇಬ್ಬರು ಹೇಳುತ್ತಿದ್ದರು. ಆದರೆ ಮೈಸೂರಿನ ಹೋಟೆಲ್ ಕೋಣೆಯಲ್ಲಿ ನರೇಶ್- ಪವಿತ್ರಾ ಒಟ್ಟಿಗೆ ಕಂಡ ಮೇಲೆ ಈ ವಿವಾದ ಮತ್ತಷ್ಟು ತಾರಕ್ಕೇರಿತ್ತು. ಆರೋಪ ಪ್ರತ್ಯಾರೋಪಗಳ ಸುರಿಮಳೆ ಆಗಿತ್ತು.


Click it and Unblock the Notifications











