ರೀಲ್ಸ್ಗೆ ಮೈಕ್ರೋ ಸೀರಿಸ್ ಸೆಡ್ಡು; ಅದ್ಭುತ ರೆಸ್ಪಾನ್ಸ್ ಸಿಕ್ತಿದೆ ಎಂದ ಆರೂರು ಜಗದೀಶ್
ಧಾರಾವಾಹಿ, ಸಿನಿಮಾ, ವೆಬ್ ಸೀರಿಸ್ ರೀತಿ ಈಗ ವರ್ಟಿಕಲ್ ಮೈಕ್ರೋ-ಫಿಕ್ಷನ್ ಸೀರಿಸ್ ಟ್ರೆಂಡ್ ಶುರುವಾಗುತ್ತಿದೆ. ಸೋಶಿಯಲ್ ಮೀಡಿಯಾ ರೀಲ್ಸ್ ರೀತಿ ಸಣ್ಣ ಡ್ರಾಮಾ ಸೀರಿಸ್ ಪ್ರಸಾರ ಆರಂಭವಾಗಿದೆ. ಅದಕ್ಕಾಗಿ ಹೊಸ ಹೊಸ ಆಪ್ಗಳು ಲಾಂಚ್ ಆಗುತ್ತಿದೆ. ಜೀ ಸಂಸ್ಥೆ ಇದೀಗ ಬುಲೆಟ್ ಎಂಬ ಆಪ್ ಆರಂಭಿಸಿ ಮೈಕ್ರೋ ವೆಬ್ ಸೀರಿಸ್ ಸ್ಟ್ರೀಮಿಂಗ್ ಶುರು ಮಾಡಿದೆ.
ಈಗಾಗಲೇ ಸ್ಯಾಂಪಲ್ ಎನ್ನುವಂತೆ ಒಂದೆರಡು ಸಣ್ಣ ಸೀರಿಸ್ ಝಲಕ್ ರಿಲೀಸ್ ಆಗಿದೆ. ಅದಕ್ಕೆ ಸಿಗುತ್ತಿರುವ ರೆಸ್ಪಾನ್ಸ್ ಅದ್ಭುತವಾಗಿದ್ದು ಮುಂದೆ ಇದು ಮನರಂಜನಾ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಸೃಷ್ಟಿಸುವ ಲೆಕ್ಕಾಚಾರ ಶುರುವಾಗಿದೆ. ವೆಬ್ ಸೀರಿಸ್ಗಳ ಮುಂದಿನ ಹಂತ ಎನ್ನುವಂತೆ ಈ ಮೈಕ್ರೋ ಡ್ರಾಮಾ ಸೀರಿಸ್ ಸದ್ದು ಮಾಡ್ತಿದೆ. ಒಂದೊಂದು ನಿಮಿಷದ ಈ ವೆಬ್ ಸೀರಿಸ್ನಲ್ಲಿ ಸಣ್ಣ ಸಣ್ಣ ಕಥೆಗಳನ್ನು ಹೇಳುವ ಪ್ರಯತ್ನ ನಡೀತಿದೆ.

ಕೊರಿಯಾ ಮನರಂಜನೆ ಕ್ಷೇತ್ರದಲ್ಲಿ ಈ ಮೈಕ್ರೋ ಸೀರಿಸ್ ದೊಡ್ಡ ಮಾರುಕಟ್ಟೆಯಾಗಿ ಬದಲಾಗಿದೆ. ಸಾವಿರಾರು ಕೋಟಿಯ ವ್ಯವಹಾರ ಎನಿಸಿಕೊಂಡಿದೆ. ಹಾಗಾಗಿ ಇದನ್ನು ಭಾರತದಲ್ಲಿ ಪರಿಚಯಿಸುವ ಪ್ರಯತ್ನ ನಡೀತಿದೆ. ಕನ್ನಡದಲ್ಲಿ ಕೂಡ ಈ ಪ್ರಯತ್ನ ಶುರುವಾಗಿದೆ. ಕನ್ನಡದಲ್ಲಿ ನಟ, ನಿರ್ದೇಶಕ ದಿಲೀಪ್ ರಾಜ್ ಸಾರಥ್ಯದಲ್ಲಿ 'ಅದೇ ಕಣ್ಣು' ಹಾಗೂ ಆರೂರು ಜಗದೀಶ್ ನಿರ್ದೇಶನದಲ್ಲಿ 'ಮಿಂಚು' ಎಂಬ ಮಿನಿ ವೆಬ್ ಸೀರಿಸ್ ಬುಲೆಟ್ ಆಪ್ನಲ್ಲಿ ಪ್ರಚಾರ ಆರಂಭಿಸಿದೆ. ಮುಂದೆ ಮತ್ತಷ್ಟು ಇಂತಹ ಮತ್ತಷ್ಟು ಶಾರ್ಟ್ ಸೀರಿಸ್ ಬಿಡುಗಡೆ ಆಗಲಿದೆ. ಈಗಾಗಲೇ ಇಂತಹ ಮತ್ತಷ್ಟು ಕಂಟೆಂಟ್ ತಯಾರಿಸುವ ಕೆಲಸ ನಡೀತಿದೆ.
ಸೇಮ್ ವೆಬ್ ಸೀರಿಸ್ ರೀತಿಯಲ್ಲೇ ಪ್ರಸಾರ ಆಗುವ ಸಣ್ಣ ಸಣ್ಣ ಕಥೆಗಳ ಗುಚ್ಛ ಇದು. ಅಂದಹಾಗೆ ಇದರಲ್ಲಿ ಒಂದು ಎಪಿಸೋಡ್ ಒಂದು ನಿಮಿಷ ಮಾತ್ರ ಇರುತ್ತದೆ. ಒಂದೊಂದು ಸೀರಿಸ್ 50-60 ಎಪಿಸೋಡ್ಗಳಾಗಿ ವೀಕ್ಷಣೆಗೆ ಸಿಗುತ್ತದೆ. ಅದರ ಅರ್ಥ ಒಂದು ಗಂಟೆಯಲ್ಲಿ ಸೀರಿಸ್ ಕಂಪ್ಲೀಟ್ ಆಗುತ್ತದೆ. ಆದರೆ ಇದನ್ನು ಸಿನಿಮಾ, ವೆಬ್ ಸೀರಿಸ್ ಅಥವಾ ಯೂಟ್ಯೂಬ್ ವೀಡಿಯೋ ರೀತಿ ಲ್ಯಾಂಡ್ಸ್ಕೇಪ್ನಲ್ಲಿ ನೋಡಲು ಸಾಧ್ಯವಿಲ್ಲ. ಇನ್ಸ್ಟಾಗ್ರಾಮ್ ರೀಲ್ಸ್ ರೀತಿ ವರ್ಟಿಕಲ್ ಆಗಿ ನೋಡಬೇಕು.
ಈಗಾಗಲೇ ವೀಕ್ಷಕರಿಗೆ ಮಿನಿ ಸೀರಿಸ್ ರುಚಿ ಹತ್ತಿಸಲು ಒಂದಷ್ಟು ಎಪಿಸೋಡ್ಗಳನ್ನು ಬುಲೆಟ್ ಆಪ್ನಲ್ಲಿ ಸ್ಟ್ರೀಮಿಂಗ್ ಮಾಡಲಾಗಿದೆ. ಅದಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ ಎಂದು ನಿರ್ದೇಶಕ ಆರೂರು ಜಗದೀಶ್ ಹೇಳಿದ್ದಾರೆ. ಈ ಬಗ್ಗೆ ಫಿಲ್ಮಿಬೀಟ್ ಕನ್ನಡಕ್ಕೆ ಅವರು ಮಾಹಿತಿ ನೀಡಿದ್ದಾರೆ. ಸಿಹಿಕಹಿ ಚಂದ್ರು ಸೇರಿ ಕಿರುತೆರೆ ಹಲವರು ಈಗ ಇಂತಹ ಮೈಕ್ರೋ ಸೀರಿಸ್ ನಿರ್ಮಾಣಕ್ಕೆ ಕೈ ಹಾಕಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಒಟ್ಟಿಗೆ 50 ಎಪಿಸೋಡ್ಗಳನ್ನು ಆಪ್ನಲ್ಲಿ ಅಪ್ಲೋಡ್ ಮಾಡುತ್ತಾರೆ. ಆದರೆ ಎಲ್ಲವನ್ನು ಒಟ್ಟಿಗೆ ನೋಡಲು ಸಾಧ್ಯವಿಲ್ಲ. ಕೆಲ ಎಪಿಸೋಡ್ ನೋಡಿದ ಮೇಲೆ ಉಳಿದಿರುವುದನ್ನು ನೋಡಲು ಹಣ ಪಾವತಿಸಬೇಕಾಗುತ್ತದೆ. ಆರಂಭದಲ್ಲಿ ರುಚಿ ಹತ್ತಿಸಿ ಬಳಿಕ ಜಾಹೀರಾತು ಪ್ರಸಾರ ಮಾಡಲಾಗುತ್ತದೆ. ಜೊತೆಗೆ ಇನ್ನುಳಿದ ಎಪಿಸೋಡ್ ನೋಡಲು ಹಣ ಪಾವತಿಸುವಂತೆ ಕೇಳುತ್ತದೆ. ಅದಾಗಲೇ ಕುತೂಹಲ ಮೂಡಿಸಿರುವ ಕಥೆ ಹಣ ಕೊಟ್ಟಾದರೂ ಇನ್ನುಳಿದ ಎಪಿಸೋಡ್ ನೋಡಬೇಕು ಎನ್ನುವಂತೆ ಮಾಡಿಬಿಡುತ್ತದೆ.
ದಿಲೀಪ್ ರಾಜ್ ನಿರ್ದೇಶನದ 'ಅದೇ ಕಣ್ಣು' ಮೈಕ್ರೋ ಸೀರಿಸ್ನಲ್ಲಿ ಬಿಗ್ಬಾಸ್ ಖ್ಯಾತಿಯ ವಿನಯ್ ಗೌಡ ಹಾಗೂ ಮೋಕ್ಷಿತಾ ಪೈ ಇಬ್ಬರೂ ಗಂಡ-ಹೆಂಡತಿಯಾಗಿ ನಟಿಸಿದ್ದಾರೆ. ಅವರ ಸುತ್ತಾ ಕಥೆ ಹಲವು ಎಪಿಸೋಡ್ಗಳಾಗಿ ಸಾಗುತ್ತದೆ. ಇಲ್ಲಿ ಧಾರಾವಾಹಿ ಅಥವಾ ಸಿನಿಮಾದಲ್ಲಿ ನಟಿಸುವಂತೆ ಕಲಾವಿದರು ನಿಧಾನವಾಗಿ ನಟಿಸೋಕೆ ಸಾಧ್ಯವಿಲ್ಲ. ಎಲ್ಲವೂ ಚಕಾಚಕ್ ಎಂದು ಮುಗಿದುಬಿಡುತ್ತದೆ. ಸಣ್ಣ ಅವಧಿಯಲ್ಲಿ ಭಾವನೆಗಳನ್ನು ವ್ಯಕ್ತಪಡಿಸುವುದು, ಡೈಲಾಗ್ ಹೇಳುವುದು ಸವಾಲಿನ ಕೆಲಸ ಎನಿಸಿಕೊಂಡಿದೆ. ಈಗಾಗಲೇ ಇಂತಹ ಇಂತಹ ಮೈಕ್ರೋ ಡ್ರಾಮಾದಲ್ಲಿ ನಟಿಸಿರುವವರು ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.
ಯಾವುದೋ ಧಾರಾವಾಹಿಯ ಪ್ರೋಮೋ ಅಥವಾ ಸಣ್ಣ ಸೀನ್ ನೋಡಿ ಇಡೀ ಧಾರಾವಾಹಿ ನೋಡಬೇಕು ಎಂದು ವೀಕ್ಷಕರು ಕಾಯುವಂತೆ ಈ ಮೈಕ್ರೋ ಸೀರಿಸ್ ನೋಡಲು ಬಯಸುವಂತಿರುತ್ತದೆ. ಅಧಿಕೃತವಾಗಿ ಇನ್ನು ಬುಲೆಟ್ ಆಪ್ ಲಾಂಚ್ ಆಗಿಲ್ಲ. ಆದರೆ ಸ್ಯಾಂಪಲ್ ಎನ್ನುವಂತೆ ಕೆಲ ಮೈಕ್ರೋ ಸೀರಿಸ್ ಕನ್ನಡ ಸೇರಿ ವಿವಿಧ ಭಾಷೆಗಳಲ್ಲಿ ಪ್ರಸಾರವಾಗುತ್ತಿದೆ. 'ಲಕ್ಕಿ ಲಕ್ಷ್ಮಿ' ಎಂಬ ಮೈಕ್ರೋ ಸೀರಿಸ್ ಕೂಡ ಸ್ಟ್ರೀಮಿಂಗ್ ಆಗುತ್ತಿದೆ.

ನಿರ್ದೇಶಕ ಆರೂರು ಜಗದೀಶ್ ಮಾತನಾಡಿ "ಸದ್ಯ ರೀಲ್ಸ್ ನೋಡುತ್ತಿರುವವರನ್ನು ಮೈಕ್ರೋ ಸೀರಿಸ್ ಕಡೆ ಸೆಳೆಯುವ ತಂತ್ರ ಮಾಡಲಾಗುತ್ತಿದೆ. ಜನ ಪ್ರೋಮೊ ನೋಡಿ ಧಾರಾವಾಹಿ ಕಥೆ ಏನು ಎಂದು ಜಡ್ಜ್ ಮಾಡುತ್ತಿದ್ದರು. ಅದೇ ರೀತಿ ಇಲ್ಲಿ ಒಂದು ಎಪಿಸೋಡ್ ನೋಡಿ ಮತ್ತೊಂದು ಎಪಿಸೋಡ್ ನೋಡಬೇಕು ಎಂದು ಬಯಸುವಂತಾಗುತ್ತದೆ. ಅಷ್ಟರಮಟ್ಟಿಗೆ ಕುತೂಹಲ ಇರುತ್ತದೆ. ಜನರಿಗೆ ಈಗ ಗಂಟೆಗಟ್ಟಲೆ ಕಥೆ ನೋಡುವ ತಾಳ್ಮೆ ಇಲ್ಲ. ಎಲ್ಲಾ ಬೇಗ ಬೇಗ ಮುಗಿಯಬೇಕು. ಒಂದು ಗಂಟೆ ಅವಧಿಯಲ್ಲಿ ಇಡೀ ಕಥೆ ನೋಡುವಂತಾಗಬೇಕು. ಆ ಕಾನ್ಸೆಪ್ಟ್ನಲ್ಲಿ ಈ ಮೈಕ್ರೋ ಸೀರಿಸ್ ಮಾಡಲಾಗ್ತಿದೆ" ಎಂದಿದ್ದಾರೆ.
ಸದ್ಯ ಬಿಡುಗಡೆ ಆಗಿರುವ ಮೈಕ್ರೋ ಸೀರಿಸ್ಗೆ ಒಳ್ಳೆ ರೆಸ್ಪಾನ್ಸ್ ಸಿಗುತ್ತಿದೆ. ಹಾಗಾಗಿ ಇಂತಹ ಮತ್ತಷ್ಟು ಕಥೆಗಳನ್ನು ಸಿದ್ಧಪಡಿಸಿ ಕೊಡುವಂತೆ ಜೀ ಸಂಸ್ಥೆ ಕೇಳಿದೆ ಎಂದು ಆರೂರು ಜಗದೀಶ್ ಹೇಳಿದ್ದಾರೆ. "ನಮಗೂ ಮತ್ತೊಂದು ಮೈಕ್ರೋ ಸೀರಿಸ್ ಮಾಡುವುದಕ್ಕೆ ಕೇಳಿದ್ದಾರೆ. ನನಗೂ ಮೊದಲು ಮಾಡುವಾಗ ಏನಿದು ಎನ್ನುವ ಅನುಮಾನ ಇತ್ತು, ಹೇಗೆ ಬರುತ್ತೋ ಎನ್ನುವ ಗೊಂದಲ ಇತ್ತು. ಆದ್ರೆ ಈಗ ನನಗೂ ಜಡ್ಜ್ಮೆಂಟ್ ಸಿಕ್ಕಿದೆ. ಇನ್ನು ಮುಂದೆ ಸುಲಭವಾಗಿ ಮಾಡಬಹುದು ಎನಿಸುತ್ತಿದೆ. ನಮ್ಮ ಪತ್ನಿ ಕೂಡ ಒಂದಷ್ಟು ಎಪಿಸೋಡ್ ನೋಡಿದ ಮೇಲೆ ಕಂಪ್ಲೀಟ್ ಸೀರಿಸ್ ನೋಡಬೇಕು ಎಂದು ಹಣ ಪಾವತಿಸಿ ನೋಡಿದ್ರು. ಅಂದ್ರೆ ಜನರಿಗೂ ಇದೇ ರೀತಿ ಅನಿಸುತ್ತದೆ. ಇದು ನೋಡುಗರಿಗೆ ಹೊಸ ತರಹದ ಕಿಕ್ ಕೊಡುತ್ತದೆ" ಎಂದು ಜಗದೀಶ್ ವಿವರಿಸಿದ್ದಾರೆ.
ಕ್ರಿಕೆಟ್ನಲ್ಲಿ ಮೊದಲಿಗೆ ಟೆಸ್ಟ್ ಮ್ಯಾಚ್, ಬಳಿಕ ಏಕದಿನ ಪಂದ್ಯಗಳು ಬಂತು. ಈಗ ಟಿ-20 ಟ್ರೆಂಡ್ ನಡೀತಿದೆ. ಜನ ಮುಗಿಬಿದ್ದು ಮ್ಯಾಚ್ ನೋಡುತ್ತಾರೆ. ಇದು ಕೂಡ ಅದೇ ರೀತಿ ಜನರಿಗೆ ಬಹಳ ಬೇಗ ಮನರಂಜನೆ ಕೊಡುವಂಥದ್ದು. ಹಾಗಾಗಿ ನೋಡುಗರಿಗೆ ಮನರಂಜನೆಯ ಹೊಸ ಪ್ರಪಂಚವೇ ತೆರೆದುಕೊಳ್ಳಲಿದೆ. ಕನ್ನಡದಲ್ಲೂ ಇದು ಯಶಸ್ಸು ಗಳಿಸುತ್ತದೆ ಎನ್ನುವ ಆಶಾಭಾವನೆಯನ್ನು ಆರೂರು ಜಗದೀಶ್ ವ್ಯಕ್ತಪಡಿಸಿದ್ದಾರೆ.
ಅಂದಹಾಗೆ ಆರೂರು ಜಗದೀಶ್ ನಿರ್ದೇಶನದ 'ಮಿಂಚು' ಮೈಕ್ರೋ ಸೀರಿಸ್ನಲ್ಲಿ ಕಿರುತೆರೆ ನಟ ಸ್ಕಂದ ಹಾಗೂ ತನ್ವಿರಾವ್ ನಟಿಸಿದ್ದಾರೆ. 'ಸೀತಾರಾಮ' ಧಾರಾವಾಹಿಯಲ್ಲಿ ನಟಿಸಿದ್ದ ಬಾಲನಟಿ ರಿತು ಕೂಡ ಮುಖ್ಯವಾದ ಪಾತ್ರದಲ್ಲಿ ಮಿಂಚಿದ್ದಾರೆ. ಸುಮ್ಮನೆ ಅರ್ಥ ಇಲ್ಲದ ರೀಲ್ಸ್ ನೋಡುವುದಕ್ಕಿಂತ ಕಥೆ ಇರುವಂತಹ ಸಂದೇಶ ಹೊತ್ತುಬರುವ ಇಂತಹ ಮೈಕ್ರೋ ಸೀರಿಸ್ ನೋಡುವುದು ಉತ್ತಮ ಎನ್ನುವ ಮಾತುಗಳು ಕೇಳಿಬರ್ತಿದೆ. ಮುಂದಿನ ದಿನಗಳಲ್ಲಿ ಈ ಮೈಕ್ರೋ ಡ್ರಾಮಾ ಹೇಗೆ ಸದ್ದು ಮಾಡುತ್ತದೆ ಎಂದು ಕಾದು ನೋಡಬೇಕಿದೆ.


Click it and Unblock the Notifications











