ಅಧಿಕಾರದ ದಾಹ..ಹಣದ ಮೋಹ..ಹೆಣ್ಣಿನ ವ್ಯಾಮೋಹ..ಈ ದಿನದಿಂದ ಓಟಿಟಿಯಲ್ಲಿ ಪ್ರಸಾರವಾಗಲಿದೆ ಮಿರ್ಜಾಪುರ್ -03...!
ಅಧಿಕಾರದ ದಾಹ .. ಹಣದ ಮೋಹ .. ಹೆಣ್ಣಿನ ಮೇಲಿನ ವ್ಯಾಮೋಹದ ಕಥೆಯನ್ನೊತ್ತ ವೆಬ್ ಸರಣಿ ಮಿರ್ಜಾಪುರ್. ಅಮೆಜಾನ್ ಫ್ರೈಮ್ನಲ್ಲಿ ಈ ಚಿತ್ರದ ಮೊದಲ ಸರಣಿ ಪ್ರಸಾರವಾದಾಗ OTTಯಲ್ಲಿ ಹೊಸ ಅಲೆ ಎದ್ದಿತ್ತು. ಅದಕ್ಕೆ ಹೆಣೆಯಲಾದ ಕಥೆ ಪ್ರಮುಖ ಕಾರಣವಾದರೆ, ತಾರಾಗಣ ಮತ್ತೊಂದು ಕಾರಣವಾಗಿತ್ತು.
ಪಂಕಜ್ ತ್ರಿಪಾಠಿ .. ರಸಿಕಾ ದುಗಲ್ .. ಅಲಿಫಜಲ್.. ದಿವೈಂದು.. ವಿಕ್ರಾಂತ್ ಮೆಸ್ಸಿ.. ಶ್ವೇತಾ ತ್ರಿಪಾಠಿ.. ಶ್ರೀಯಾ ಪಿಲ್ಗಾಂವ್ಕರ್.. ಕುಲಭೂಷಣ್ ಕರಬಂಧ.. ಹೀಗೆ ಕಲಾದೇವಿಯ ಆಶೀರ್ವಾದಕ್ಕೆ ಪಾತ್ರವಾಗಿರುವ ಕಲಾವಿದರ ದೊಡ್ಡ ದಂಡೇ ಇಲ್ಲಿ ಇತ್ತು. ಇವರೆಲ್ಲ ತಮ್ಮ ತಮ್ಮ ಪಾತ್ರಗಳನ್ನ ಆವಾಹನೆ ಮಾಡಿಕೊಂಡು ಅಭಿನಯಿಸಿದ್ದರು ಕೂಡ.

ಜಿದ್ದಿಗೆ ಬಿದ್ದು ನಟಿಸಿದ್ದ ಇವರನ್ನೆಲ್ಲ ಕಂಡು ಪುಳಕಿತಗೊಂಡ ಪ್ರೇಕ್ಷಕ, ಎರಡನೇ ಸರಣಿಗೆ ಜಾತಕ ಪಕ್ಷಿಯಂತೆ ಕಾದು ಕುದ್ದಿದ್ದ. ಈ ಕಾಯುವಿಕೆ ವ್ಯರ್ಥವಾಗಲಿಲ್ಲ. ಎರಡನೇ ಸರಣಿಯನ್ನ ಸೇರಿಕೊಂಡ ಇಶಾ ತಲ್ವಾರ್.. ವಿಜಯ್ ವರ್ಮಾ.. ಲಿಲ್ಲಿ ಪುಟ್.. ನಿರಾಸೆಯನ್ನೂ ಮಾಡಲಿಲ್ಲ. ಬದಲಿಗೆ ಈ ಕದನವನ್ನ ಇನ್ನಷ್ಟೂ ರೋಚಕ ಘಟ್ಟಕ್ಕೆ ಕರೆದೊಯ್ದರು.
ಇದಕ್ಕೆ ಕೈಗನ್ನಡಿ ಎಂಬಂತೆ ಮಿರ್ಜಾಪುರ ವೆಬ್ ಸರಣಿಯ ಮೂರನೇ ಭಾಗಕ್ಕೆ ಬಹುದೊಡ್ಡ ವರ್ಗ, ತುದಿಗಾಲಿನಲ್ಲಿ ಕಾಯುತ್ತಿತ್ತು. ಆದಷ್ಟು ಬೇಗ ಮಿರ್ಜಾಪುರ ಎಂಬ ರಕ್ತ ಸಿಕ್ತ ಲೋಕಕ್ಕೆ ನಮ್ಮನ್ನು ಕರೆದೊಯ್ಯಿರಿ ಎಂಬ ಮನವಿ ಪತ್ರವನ್ನೂ ಕೂಡ ಸಾಮಾಜಿಕ ಜಾಲತಾಣದ ಮೂಲಕ ಚಿತ್ರತಂಡಕ್ಕೆ ಸಲ್ಲಿಸುತ್ತಿತ್ತು. ಆ ಮನವಿಗೆ ಈಗ ಮನ್ನಣೆ ಸಿಕ್ಕಿದೆ. ಮಿರ್ಜಾಪುರ್ ವೆಬ್ ಸರಣಿಯ ಮೂರನೇ ಭಾಗದ ಟೀಸರ್ ಬಿಡುಗಡೆಯಾಗಿದೆ. ಜುಲೈ 05ರಿಂದ ಅಮೆಜಾನ್ ಫ್ರೈಮ್ ನಲ್ಲಿ ಪ್ರಸಾರ ಕಾಣಲಿದೆ.

ಅಂದ್ಹಾಗೇ ಕ್ರೈಮ್ ಥ್ರಿಲ್ಲರ್ ಸರಣಿಯಾಗಿರುವ ಮಿರ್ಜಾಪುರ್ ಮೊದಲ ಭಾಗ 16 ನವೆಂಬರ್ 2018 ರಂದು ಅಮೆಜಾನ್ ನಲ್ಲಿ ಪ್ರಸಾರವಾಗಿತ್ತು. ಇನ್ನೂ ಎರಡನೇ ಸರಣಿ ಅಕ್ಟೋಬರ್ 23 2020ರಲ್ಲಿ ಅಮೆಜಾನ್ ಫ್ರೈಮ್ನಲ್ಲಿಯೇ ಬಿಡುಗಡೆಯಾಗಿತ್ತು. ಈಗ ಮೂರನೇ ಭಾಗದ ಸರದಿ.
ಇನ್ನೂ ಪುನಿತ್ ಕೃಷ್ಣ ಮತ್ತು ವಿನೀತ್ ಕೃಷ್ಣ ಅವರೊಂದಿಗೆ ಕರಣ್ ಅಂಶುಮಾನ್ ಚಿತ್ರಕಥೆಯನ್ನು ಬರೆದಿದ್ದರು. ಮೊದಲ ಸೀಸನ್ ನ ಗುರ್ಮೀತ್ ಸಿಂಗ್ ಮತ್ತು ಮಿಹಿತ್ ದೇಸಾಯಿ ಅವರೊಂದಿಗೆ ಅನ್ಶುಮಾನ್ ನಿರ್ದೇಶಿಸಿದ್ದರು. ಎರಡನೇ ಭಾಗಕ್ಕೂ ಕೂಡ ಇವರೇ ಆಕ್ಷನ್ ಕಟ್ ಹೇಳಿದ್ದರು. ಆದರೆ ಈಗ ಪ್ರಸಾರಕ್ಕೆ ಸಿದ್ಧವಾದ ಮೂರನೇ ಸರಣಿಗೆ ಗುರ್ಮೀತ್ ಸಿಂಗ್ ಜೊತೆ ಮಿಹಿತ್ ದೇಸಾಯಿ ಬದಲು ಆನಂದ್ ಐಯ್ಯರ್ ಕೈ ಜೋಡಿಸಿದ್ದಾರೆ. ನಿರ್ದೇಶಿಸಿದ್ದಾರೆ.
ಇನ್ನೂ ಬಾಲಿವುಡ್ನ ಖ್ಯಾತ ನಿರ್ದೇಶಕ-ನಿರ್ಮಾಪಕ ಫರ್ಹಾನ್ ಅಖ್ತರ್ ತಮ್ಮ ಪಾರ್ಟ್ನರ್ ರಿತೇಶ್ ಸಿಧ್ವಾನಿ ಜೊತೆ ಸೇರಿ 'ಎಕ್ಸೆಲ್ ಎಂಟರ್ಟೈನ್ಮೆಂಟ್' ಬ್ಯಾನರ್ ಅಡಿಯಲ್ಲಿ ಈ ವೆಬ್ ಸರಣಿಯನ್ನ ನಿರ್ಮಿಸಿದ್ದಾರೆ.
ಒಟ್ನಲ್ಲಿ ಸದ್ಯಕ್ಕೆ ಅನೇಕರು ಕಾತುರದಿಂದ ಕಾಯುತ್ತಿರುವ ಮಿರ್ಜಾಪುರ್ ನ ಮೂರನೇ ಸರಣಿ ಬಿಡುಗಡೆಗೆ ಸಿದ್ಧವಾಗಿದೆ. ಚಿತ್ರದ ಟೀಸರ್ ಬಿಡುಗಡೆ ಮಾಡುವ ಮೂಲಕ ಪ್ರಚಾರಕ್ಕೆ ಚಿತ್ರತಂಡ ಚಾಲನೆಯನ್ನೂ ನೀಡಿದೆ. ಗಾಯಗೊಂಡ ಸಿಂಹದ ಉಸಿರು ಅದರ ಘರ್ಜನೆಗಿಂತ ಹೆಚ್ಚು ಭಯಾನಕ ಎಂಬ ಟೀಸರ್ನಲ್ಲಿರುವ ಡೈಲಾಗ್ ಕುತೂಹಲವನ್ನೂ ಹೆಚ್ಚಿಸಿದೆ. ಓಟಿಟಿ ಪ್ರಪಂಚದಲ್ಲಿ ಈ ಬಾರಿ ಗುಡ್ಡು ಪಂಡಿತ್ ಮತ್ತು ಕಾಲಿನ್ ಭಯ್ಯಾ ಮೋಡಿ ಹೇಗಿರುತ್ತೆ ಅನ್ನುವುದನ್ನ ಈಗ ಕಾದು ನೋಡಬೇಕಿದೆ.


Click it and Unblock the Notifications











