Modern Masters; ಮೌಳಿ ಸಾಹಸಗಾಥೆಗೆ ದೃಶ್ಯರೂಪ; ಓಟಿಟಿಗೆ ಜಕ್ಕಣ್ಣ ಬಯೋಪಿಕ್
ತೆಲುಗಿನ ಖ್ಯಾತ ಸಿನಿಮಾ ನಿರ್ದೇಶಕ ಎಸ್. ಎಸ್ ರಾಜಮೌಳಿ ಹೆಸರು ಇದೀಗ ಹಾಲಿವುಡ್ಗೂ ತಲುಪಿದೆ. ಒಂದಕ್ಕಿಂತ ಒಂದು ವಿಭಿನ್ನ ಸಿನಿಮಾಗಳಿಂದ ಮೌಳಿ ಪ್ರೇಕ್ಷಕರನ್ನು ರಂಜಿಸುತ್ತಾ ಬರ್ತಿದ್ದಾರೆ. ಸದ್ಯ ಹಾಲಿವುಡ್ ರೇಂಜ್ ಸಿನಿಮಾ ಪ್ಲ್ಯಾನ್ ಮಾಡ್ತಿದ್ದಾರೆ.
ರಾಜಮೌಳಿ ವಿಷನ್, ಮೇಕಿಂಗ್ ನೋಡಿ ಹಾಲಿವುಡ್ ಫಿಲ್ಮ್ ಮೇಕರ್ಸ್ ಕೂಡ ದಂಗಾಗಿದ್ದಾರೆ. ಈವರೆಗೆ ಹಲವು ವಿಭಿನ್ನ ಸಿನಿಮಾಗಳನ್ನು ಮೌಳಿ ಕಟ್ಟಿಕೊಟ್ಟಿದ್ದಾರೆ. ಅವರ ಪ್ರತಿಭೆಗೆ ಜಕ್ಕಣ್ಣ ಎನ್ನುವ ಬಿರುದು ಸಿಕ್ಕಿಬಿಟ್ಟಿದೆ. ಚಿತ್ರರಂಗದಲ್ಲಿ ಸೋಲಿಲ್ಲದ ಸರದಾರ ಎಂದೇ ಖ್ಯಾತರಾಗಿರುವ ಮೌಳಿ ಚಿತ್ರದಿಂದ ಚಿತ್ರಕ್ಕೆ ತಮ್ಮ ಸ್ಟಾರ್ಡಮ್ ಹೆಚ್ಚಿಸಿಕೊಂಡು ಸಾಗಿದ್ದಾರೆ. ತಂದೆ ವಿಜಯೇಂದ್ರ ಪ್ರಸಾದ್ ಹಾದಿಯಲ್ಲೇ ಜಕ್ಕಣ್ಣ ಚಿತ್ರರಂಗಕ್ಕೆ ಬಂದರು. ಆರಂಭದಲ್ಲಿ ಬರಹಗಾರರಾಗಿ ಗುರ್ತಿಸಿಕೊಂಡರು.

ತಂದೆ ಜೊತೆ ಒಂದಷ್ಟು ಸಿನಿಮಾಗಳಿಗೆ ಬರಹಗಾರರಾಗಿ ಕೆಲಸ ಮಾಡಿದ ಬಳಿಕ ಕಿರುತೆರೆ ಧಾರಾವಾಹಿಗೆ ಸಹಾಯಕ ನಿರ್ದೇಶಕರಾಗಿ ಸೇರಿದರು. 'ಸ್ಟೂಡೆಂಟ್ ನಂಬರ್ 1' ಸಿನಿಮಾ ಮೂಲಕ ಸ್ವತಂತ್ರ ನಿರ್ದೇಶಕರಾದ್ದರು. ಮೊದಲ ಸಿನಿಮಾವೇ ಹಿಟ್ ಆಗಿತ್ತು. ಬಳಿಕ ಹಿಂತಿರುಗಿ ನೋಡಲೇಯಿಲ್ಲ. ಹಂತ ಹಂತವಾಗಿ ತಮ್ಮ ಸಿನಿಮಾ ಮೇಕಿಂಗ್ ಗುಣಮಟ್ಟ ಹೆಚ್ಚಿಸಿಕೊಳ್ಳುತ್ತಾ ಬಂದರು.
'ಛತ್ರಪತಿ', 'ಮಗಧೀರ', 'ಯಮದೊಂಗ', 'ವಿಕ್ರಮಾರ್ಕುಡು', 'ಈಗ' ಸಿನಿಮಾಗಳ ಮೂಲಕ ಸ್ಟಾರ್ ಡೈರೆಕ್ಟರ್ ಪಟ್ಟ ಅಲಂಕರಿಸಿದ್ದರು. 'ಬಾಹುಬಲಿ' ಸರಣಿ ಸಿನಿಮಾ ಮಾಡಿ ಜಾದೂ ಮಾಡಿದರು. ಪ್ಯಾನ್ ಇಂಡಿಯಾ ಕಾನ್ಸೆಪ್ಟ್ಕ್ಕೆ ಹೊಸ ರೂಪ ಕೊಟ್ಟರು. ಜೊತೆಗೆ ಒಂದೇ ಕಥೆಯನ್ನು 2 ಭಾಗಗಳಾಗಿ ಹೇಳುವ ಪ್ರಯತ್ನಕ್ಕೂ ಕೈ ಹಾಕಿ ಗಮನ ಸೆಳೆದರು. ಮುಂದೆ ಇದು ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಸಂಚಲನಕ್ಕೆ ಕಾರಣವಾಯಿತು.
ಜಕ್ಕಣ್ಣ ಕಟ್ಟಿಕೊಟ್ಟ 'RRR' ಸಿನಿಮಾ ನೋಡಿ ಹಾಲಿವುಡ್ ಮಂದಿ ಕೂಡ ಹುಬ್ಬೇರಿಸಿದ್ದರು. ಜೇಮ್ಸ್ ಕ್ಯಾಮರೂನ್ ಸಹ ಸಿನಿಮಾ ನೋಡಿ ಕೊಂಡಾಡಿದ್ದರು. ಇದೀಗ ಮಹೇಶ್ ಬಾಬು ಕಾಂಬಿನೇಷನ್ನಲ್ಲಿ ಮತ್ತೊಂದು ದೊಡ್ಡ ಪ್ರಾಜೆಕ್ಟ್ ಕೈಗೆತ್ತಿಕೊಳ್ಳುತ್ತಿದ್ದಾರೆ. ಇದೆಲ್ಲದರ ನಡುವೆ ಮೌಳಿ ಸಾಧನೆಯ ಕಥೆ ಡಾಕ್ಯುಮೆಂಟರಿ ರೂಪದಲ್ಲಿ ಜನರ ಮುಂದೆ ಬರ್ತಿದೆ. ಶೀಘ್ರದಲ್ಲೇ ಓಟಿಟಿಯಲ್ಲಿ ಸ್ಟ್ರೀಮಿಂಗ್ ಆಗಲಿದೆ.

'ಮಾರ್ಡನ್ ಮಾಸ್ಟರ್ಸ್' ಹೆಸರಿನ ಡಾಕ್ಯುಮೆಂಟರಿಯಲ್ಲಿ ಜಕ್ಕಣ್ಣ ಕಥೆ ರಿವೀಲ್ ಆಗಲಿದೆ. ಆಗಸ್ಟ್ 2ಕ್ಕೆ ನೆಟ್ಫ್ಲಿಕ್ಸ್ನಲ್ಲಿ ಈ ಡಾಕ್ಯೂಮೆಂಟರಿ ಸ್ಟ್ರೀಮಿಂಗ್ ಆಗಲಿದೆ. ಭಾರತೀಯ ಹಾಗೂ ಅಂತರಾಷ್ಟ್ರೀಯ ಸಿನಿಮಾಗಳ ಮೇಲೆ ರಾಜಮೌಳಿ ಪ್ರಭಾವ ಹೇಗಿದೆ ಎನ್ನುವುದನ್ನು ತೋರಿಸಲಾಗುತ್ತಿದೆ. ಹಾಲಿವುಡ್ ನ ಖ್ಯಾತ ನಿರ್ದೇಶಕ ಜೇಮ್ಸ್ ಕ್ಯಾಮರೂನ್, ಜೋ ರುಸ್ಸೋ, ಪ್ರಭಾಸ್, ರಾಣಾ, ಜೂನಿಯರ್ ಎನ್ಟಿಆರ್ ತಮ್ಮ ದೃಷ್ಟಿಕೋನವನ್ನು ಮೌಳಿ ಬಗ್ಗೆ ಹೇಳಲಿದ್ದಾರೆ. ಇದು ಬಯೋಪಿಕ್ ಆಗುತ್ತಾ? ಎನ್ನುವುದನ್ನು ಕಾದು ನೋಡಬೇಕಿದೆ.
ಈಗಾಗಲೇ ಹಲವು ಸಾಧಕರ ಜೀವನಚರಿತ್ರೆ ದೃಶ್ಯರೂಪ ಪಡೆದಿದೆ. ಸಿನಿಮಾ, ಕ್ರೀಡೆ ಹಾಗೂ ರಾಜಕೀಯ ಕ್ಷೇತ್ರದ ಖ್ಯಾತನಾಮರ ಕಥೆಗಳು ತೆರೆಮೇಲೆ ಬಂದಿದೆ. ಕೆಲವು ಓಟಿಟಿಗೆ ಕೂಡ ಬಂದಿದೆ. ಇದೀಗ ಮೌಳಿ ಕಥೆ ಡಾಕ್ಯೂಮೆಂಟರಿ ರೂಪದಲ್ಲಿ ಜನರ ಮುಂದೆ ಬರುತ್ತಿರುವುದು ವಿಶೇಷವೇ ಸರಿ.
ಮಹೇಶ್ ಬಾಬು ಜೊತೆಗಿನ ಸಿನಿಮಾ ಬಳಿಕ 'ಮಹಾಭಾರತ' ಕಾವ್ಯವನ್ನು ತೆರೆಗೆ ತರಲು ರಾಜಮೌಳಿ ಮನಸ್ಸು ಮಾಡಿದ್ದಾರೆ. ಅದು ನನ್ನ ಡ್ರೀಮ್ ಪ್ರಾಜೆಕ್ಟ್ ಎಂದು ಹಲವು ಬಾರಿ ಹೇಳಿದ್ದಾರೆ. ಮಹಾಭಾರತದ ಕಥೆಯನ್ನು ಹಲವು ಭಾಗಗಳಲ್ಲಿ ಕಟ್ಟಿಕೊಡಬೇಕು ಎನ್ನುವುದು ಅವರ ಕನಸ್ಸು. ಅದಕ್ಕಾಗಿ ಸಾಕಷ್ಟು ಕಲಿಯುತ್ತಿದ್ದಾರಂತೆ. 'ಯಮದೊಂಗ', 'ಮಗಧೀರ' ಹಾಗೂ 'ಬಾಹುಬಲಿ' ಸರಣಿ ರೀತಿಯ ಕಾಸ್ಟ್ಯೂಮ್ ಡ್ರಾಮಾಗಳೆಲ್ಲಾ ತಮ್ಮ ಕಲಿಕೆಯ ಭಾಗ ಎಂದಿದ್ದಾರೆ.


Click it and Unblock the Notifications











