ಅನ್ಸ್ಟಾಪಬಲ್ ಬಾಲಯ್ಯ; ದಸರಾ ಡಬಲ್ ಧಮಾಕ
ತೆಲುಗು ನಟ ಹಾಗೂ ಹಿಂದೂಪುರದ ಶಾಸಕ ಬಾಲಕೃಷ್ಣ ತಮ್ಮ ವಿಭಿನ್ನ ವ್ಯಕ್ತಿತ್ವದಿಂದ ಗಮನ ಸೆಳೆಯುತ್ತಾರೆ. ತೆರೆಮೇಲೆ ಮಾತ್ರವಲ್ಲ ಸಾರ್ವಜನಿಕ ಜೀವನದಲ್ಲಿ ಕೂಡ ತಮ್ಮ ರಫ್ ಅಂಡ್ ಟಫ್ ಮ್ಯಾನರಿಸಂನಿಂದ ಸದ್ದು ಮಾಡುತ್ತಾರೆ. ಅಭಿಮಾನಿಗಳ ಜೊತೆ ಗರಂ ಆಗಿ ನಡೆದುಕೊಂಡಿರುವ ಸನ್ನಿವೇಶಗಳು ಇವೆ.
ನಟನೆ ಜೊತೆಗೆ ಇತ್ತೀಚೆಗೆ ಟಾಕ್ ಶೋ ನಿರೂಪಕನಾಗಿಯೂ ಬಾಲಯ್ಯ ಗುರ್ತಿಸಿಕೊಂಡಿದ್ದಾರೆ. ಅಹಾ ಓಟಿಟಿ ಪ್ಲಾಟ್ಫಾರ್ಮ್ಗಾಗಿ ಅನ್ಸ್ಟಾಪಬಲ್ ಎನ್ನುವ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ. ಪ್ರಭಾಸ್, ಪವನ್ ಕಲ್ಯಾಣ್ ಸೇರಿದಂತೆ ಹಲವರು ಈ ಶೋಗೆ ಅತಿಥಿಗಳಾಗಿ ಬಂದು ತಮ್ಮ ಸಿನಿಮಾ ಹಾಗೂ ರಿಯಲ್ ಲೈಫ್ ಬಗ್ಗೆ ಮಾತನಾಡಿದ್ದರು. ತಮ್ಮ ವಿಭಿನ್ನ ಶೈಲಿಯ ನಿರೂಪಣೆಯಿಂದ ಬಾಲಕೃಷ್ಣ ಶೋ ಗೆಲ್ಲಿಸಿದ್ದಾರೆ.

ಸದ್ಯ ಅನ್ಸ್ಟಾಪಬಲ್ ಸೀಸನ್ 4ಕ್ಕೆ ವೇದಿಕೆ ಸಿದ್ಧವಾಗಿದೆ. ಈಗಾಗಲೇ 3 ಸೀಸನ್ ಯಶಸ್ವಿಯಾಗಿ ಮುಕ್ತಾಯವಾಗಿದ್ದು ಹೊಸ ಸೀಸನ್ ಶೀಘ್ರದಲ್ಲೇ ಶುರುವಾಗಲಿದೆ. ಹೊಸ ಟ್ರೈಲರ್ ರಿಲೀಸ್ ಕಾರ್ಯಕ್ರಮ ಕೂಡ ನಡೆದಿದೆ. ಈ ಕಾರ್ಯಕ್ರಮದಲ್ಲಿ ಅಹಾ ಓಟಿಟಿ ಸಂಸ್ಥೆಯ ಸಂಸ್ಥಾಪಕ, ನಿರ್ಮಾಪಕ ಅಲ್ಲು ಅರವಿಂದ್, ಬಾಲಕೃಷ್ಣ ಹಾಗೂ ಅವರ ಕಿರಿ ಮಗಳು ತೇಜಸ್ವಿನಿ ಭಾಗಿ ಆಗಿದ್ದರು.
ಕಾರ್ಯಕ್ರಮದಲ್ಲಿ ಬಾಲಯ್ಯ ಮಗಳು ತೇಜಸ್ವಿನಿ ಮಾತನಾಡಿರುವ ಮಾತುಗಳು ವೈರಲ್ ಆಗುತ್ತಿದೆ. "ಅಪ್ಪ ಮೊದಲಿಗೆ ಶೋ ನಿರೂಪಣೆ ಮಾಡುತ್ತಾರೆ ಎಂದು ಗೊತ್ತಾಗುತ್ತಿದ್ದಂತೆ ಬಹಳ ಅವಮಾನಿಸಿದ್ದರು. ವ್ಯಂಗ್ಯವಾಗಿ ಕಾಮೆಂಟ್ ಮಾಡಿದ್ದರು. ಆದರೆ ಅಪ್ಪ ಯಾವುದೇ ಕೆಲಸ ಮಾಡಿದರೂ ಧೈರ್ಯವಾಗಿ ಮಾಡುತ್ತಾರೆ. ಯಾಲ್ಲರಿಗೂ ಸಹಾಯ ಮಾಡುತ್ತಾರೆ. ಅದೇ ಕಾರಣಕ್ಕೆ ಅವರ ವಿರುದ್ಧ ಬಂದ ಟೀಕೆಗಳನ್ನು ಮೀರಿ ಶೋ ಯಶಸ್ವಿಯಾಯಿತು ಎಂದು ತೇಜಸ್ವಿನಿ ಹೇಳಿದ್ದಾರೆ.
ತಂದೆಯವರು ಸಿನಿಮಾಗಳಲ್ಲಿ ಮಾಡದ ಪಾತ್ರಗಳಿಲ್ಲ, ಹಾಕದ ಗೆಟಪ್ಗಳಿಲ್ಲ. ಶೋನಲ್ಲಿ ಯಾರೂ ನೋಡದ ತಂದೆಯವರ ಕೋನವನ್ನು ನೋಡಿದ್ದೇವೆ. ತಂದೆ ಶಾಸಕರಾಗಿ ಮೂರು ಬಾರಿ ಗೆದ್ದಿದ್ದಾರೆ. ಅವರ ಬಗ್ಗೆ ಎಷ್ಟು ಹೇಳಿದರೂ ಕಮ್ಮಿನೇ ಎಂದು ತೇಜಸ್ವಿನಿ ವಿವರಿಸಿದ್ದಾರೆ. ಸದ್ಯ ರಿಲೀಸ್ ಆಗಿರುವ ಅನ್ಸ್ಟಾಪಬಲ್-4 ಟ್ರೈಲರ್ನಲ್ಲಿ ಸೂಪರ್ ಹೀರೊ ರೀತಿ ಬಾಲಯ್ಯ ಆನಿಮೇಷನ್ ಗೆಟಪ್ ನೋಡಬಹುದು.
ಇನ್ನು ದಸರಾ ಸಂಭ್ರಮದಲ್ಲಿ ಬಾಲಯ್ಯ ಹಾಗೂ ಬೋಯಪಾಟಿ ಶ್ರೀನು ಕಾಂಬಿನೇಷನ್ 4ನೇ ಸಿನಿಮಾ ಘೋಷಣೆ ಆಗಿದೆ. ಇದಕ್ಕೂ ಮುನ್ನ ಇವರಿಬ್ಬರು 'ಸಿಂಹ', 'ಲೆಜೆಂಡ್' ಹಾಗೂ 'ಅಖಂಡ' ಸಿನಿಮಾಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಹ್ಯಾಟ್ರಿಕ್ ಹಿಟ್ ಕೊಟ್ಟಿರುವ ಜೋಡಿಯ 4ನೇ ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿದೆ. ರಾಮ್ ಅಚಂಟ, ಗೋಪಿ ಅಚಂಟ ಹಾಗೂ ಕೋಟಿ ಪರುಚೂರಿ ಚಿತ್ರವನ್ನು ನಿರ್ಮಾಣ ಮಾಡಲಿದ್ದಾರೆ.
ಬಾಬಿ ನಿರ್ದೇಶನದಲ್ಲಿ ಇನ್ನು ಹೆಸರಿಡದ ಚಿತ್ರದಲ್ಲಿ ಸದ್ಯ ಬಾಲಯ್ಯ ನಟಿಸುತ್ತಿದ್ದಾರೆ. ಇದು ಬಾಲಕೃಷ್ಣ ನಟನೆಯ 109ನೇ ಸಿನಿಮಾ. ಇದಕ್ಕೂ ಮುನ್ನ ಬಂದ 'ವೀರಸಿಂಹ ರೆಡ್ಡಿ' ಹಾಗೂ 'ಭಗವಂತ್ ಕೇಸರಿ' ಸಿನಿಮಾಗಳು ಅಷ್ಟಾಗಿ ಸದ್ದು ಮಾಡಲಿಲ್ಲ. ಹಾಗಾಗಿ ಮುಂದಿನ ಸಿನಿಮಾಗಳ ಮೇಲೆ ಭಾರೀ ನಿರೀಕ್ಷೆಯಿದೆ.
'ಅಖಂಡ' ಸಿನಿಮಾ ಬ್ಲಾಕ್ಬಸ್ಟರ್ ಹಿಟ್ ಆಗಿತ್ತು. ಹಾಗಾಗಿ ಅದರ ಸೀಕ್ವೆಲ್ ಮಾಡಲು ಬಾಲಯ್ಯ- ಬೋಯಪಾಟಿ ಮತ್ತೆ ಕೈ ಜೋಡಿಸುತ್ತಿದ್ದಾರೆ ಎಂದು ಎನ್ನುವ ಚರ್ಚೆ ನಡೀತಿದೆ. ಆದರೆ ಇದು ಆ ಚಿತ್ರದ ಮುಂದುವರೆದ ಭಾಗ ಅಲ್ಲ. ಇದು ಬೇರೆಯದ್ದೇ ಕಥೆ ಎನ್ನುವ ವಾದವೂ ಇದೆ. ಅಕ್ಟೋಬರ್ 16ಕ್ಕೆ ಸಿನಿಮಾ ಸೆಟ್ಟೇರಲಿದೆ. ಆ ಬಳಿಕ ಈ ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿ ಸಿಗಲಿದೆ.


Click it and Unblock the Notifications











