ಅನ್ನಪೂರ್ಣಿ ವಿವಾದ: ನಟಿ ನಯನತಾರ ಬೆಂಬಲಕ್ಕೆ ನಿಂತ ನಿರ್ದೇಶಕ ವೆಟ್ರಿಮಾರನ್
ಲೇಡಿ ಸೂಪರ್ ಸ್ಟಾರ್ ನಯನತಾರಾ ಅವರ ಇತ್ತೀಚಿನ ಚಿತ್ರ 'ಅನ್ನಪೂರ್ಣಿ: ದಿ ಗಾಡೆಸ್ ಆಫ್ ಫುಡ್' ಇತ್ತೀಚಿನ ದಿನಗಳಲ್ಲಿ ಸಾಕಷ್ಟು ವಿವಾದ ಸೃಷ್ಟಿಸುತ್ತಿದೆ. ಲವ್ ಜಿಹಾದ್ ಆರೋಪ ಮತ್ತು ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಲಾಗಿದೆ ಎಂದು ಆರೋಪಿಸಿ ಚಿತ್ರ ಮತ್ತು ಚಿತ್ರತಂಡದ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಇಷ್ಟು ಮಾತ್ರವಲ್ಲದೇ ಡಿಸೆಂಬರ್ 29 ರಂದು ನೆಟ್ಫ್ಲಿಕ್ ಒಟಿಟಿಯಲ್ಲಿ ಪ್ರದರ್ಶನವಾಗುತ್ತಿದ್ದ ಸಿನಿಮಾವನ್ನು ಹಿಂದೂ ಸಂಘಟನೆಗಳ ಒತ್ತಡದ ನಂತರ ತೆಗೆದುಹಾಕಲಾಗಿದೆ. 'ಪರವಾನಗಿದಾರರ ಕೋರಿಕೆಯ ಮೇರೆಗೆ' ಚಿತ್ರವನ್ನು ತೆಗೆದುಹಾಕಲಾಗಿದೆ ಎಂದು ನೆಟ್ಫ್ಲಿಕ್ ವೇದಿಕೆ ಹೇಳಿತ್ತು. ಈ ಎಲ್ಲಾ ಘಟನೆಗಳ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಿರ್ದೇಶಕ ವೆಟ್ರಿಮಾರನ್ "ಈ ನಿರ್ಧಾರದಿಂದ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಷನ್ (CBFC) ಅಧಿಕಾರಕ್ಕೆ ಧಕ್ಕೆಯಾಗಲಿದೆ" ಎಂದು ಕಿಡಿಕಾರಿದ್ದಾರೆ.

ಅನ್ನಪೂರಣಿ ಬೆಂಬಲಕ್ಕೆ ನಿಂತ ವೆಟ್ರಿಮಾರನ್
ಖ್ಯಾತ ಚಲನಚಿತ್ರ ನಿರ್ದೇಸಕ ವೆಟ್ರಿಮಾರನ್ ಅವರು ನಯನತಾರಾ ಅವರ ಇತ್ತೀಚಿನ ಬಿಡುಗಡೆಯಾದ ಅನ್ನಪೂರ್ಣಿ ಸುತ್ತಲಿನ ವಿವಾದದ ಬಗ್ಗೆ ಮಾತನಾಡಿದ್ದಾರೆ. ಹೀಗೆ ಒಟಿಟಿ ವೇದಿಕೆಯಿಂದ ಸಿನಿಮಾವನ್ನು ತೆಗೆದು ಹಾಕುವುದು ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಷನ್ (CBFC) ಅಧಿಕಾರಕ್ಕೆ ಧಕ್ಕೆಯಾಗಲಿದೆ ಎಂದು ತಮಿಳು ನಿರ್ದೇಶಕರು ಹೇಳಿದ್ದಾರೆ.
ನೆಟ್ಫ್ಲಿಕ್ಸ್ನಿಂದ ಹಠಾತ್ ಆಗಿ ಸಿನಿಮಾ ತೆಗೆದುಹಾಕಿರುವುದು ನೆಟಿಜನ್ಗಳು ವಿರೋಧಿಸಿದ್ದಾರೆ. ಹಲವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಸಾಮಾಜಿಕ ಮಾಧ್ಯಮವನ್ನು ಬಳಸಿಕೊಂಡಿದ್ದಾರೆ. ಇತ್ತೀಚಿಗೆ ಸುದ್ದಿಗೋಷ್ಠಿಯಲ್ಲಿ ನಿರ್ದೇಶಕ ವೆಟ್ರಿಮಾರನ್ ಚಿತ್ರದ ಪರವಾಗಿ ಮಾತನಾಡಿದ್ದಾರೆ. ಸಿಬಿಎಫ್ಸಿ ಪ್ರಮಾಣಪತ್ರ ನೀಡಿದ ಸಿನಿಮಾವೊಂದನ್ನು ಹೊರಗಿನ ಒತ್ತಡದಿಂದ ತೆಗೆದುಹಾಕುವುದು ಹೇಗೆ ಸಾಧ್ಯ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

'ಸಿನಿಮಾಗೆ ಅನುಮತಿಸುವ ಅಥವಾ ನಿರ್ಬಂಧಿಸುವ ಹಕ್ಕು ಸಿಬಿಎಫ್ಸಿಗೆ ಮಾತ್ರ'
ಚಲನಚಿತ್ರವನ್ನು ಅನುಮತಿಸುವ ಅಥವಾ ನಿರ್ಬಂಧಿಸುವ ಹಕ್ಕು ಸಿಬಿಎಫ್ಸಿಗೆ ಮಾತ್ರ ಇದೆ ಎಂದು ವೆಟ್ರಿಮಾರನ್ ಹೇಳಿದ್ದು, "ಒಟಿಟಿಯಲ್ಲಿ ಬಿಡುಗಡೆಯಾದವುಗಳಿಗೆ ಸಹ ಭಾರತದಲ್ಲಿ ಸೆನ್ಸಾರ್ ಮಾಡಲಾಗುತ್ತಿದೆ. ಸೆನ್ಸಾರ್ ಬೋರ್ಡ್ (ಭಾರತದಲ್ಲಿ CBFC) ಚಲನಚಿತ್ರವನ್ನು ಅನುಮೋದಿಸಿದರೂ ಸಹ, ಬಾಹ್ಯ ಒತ್ತಡದಿಂದಾಗಿ ಅದನ್ನು ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ಗಳಿಂದ ತೆಗೆದುಹಾಕಬಹುದು. ಅಂತಹ ಸ್ಥಿತಿ ಭಾರತದಲ್ಲಿದೆ" ಎಂದು ಬೇಸರ ಹೊರಹಾಕಿದ್ದಾರೆ.
ಅನ್ನಪೂರ್ಣಿ ಸಿನಿಮಾ ವಿವಾದ
ಅನ್ನಪೂರ್ಣಿ ಚಿತ್ರವು ಲವ್ ಜಿಹಾದ್ ಅನ್ನು ಉತ್ತೇಜಿಸುತ್ತದೆ ಎಂದು ಆರೋಪಿಸಿ ಮುಂಬೈನ ಎಲ್ ಟಿ ಮಾರ್ಗ್ ಪೊಲೀಸ್ ಠಾಣೆಯಲ್ಲಿ ಚಿತ್ರದ ವಿರುದ್ಧ ಮಾಜಿ ಶಿವಸೇನಾ ನಾಯಕ ಎಫ್ಐಆರ್ ದಾಖಲಿಸಿದ್ದಾರೆ. ಇದರ ಜೊತೆಗೆ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲು ಉದ್ದೇಶಪೂರ್ವಕವಾಗಿ ಚಲನಚಿತ್ರವನ್ನು ಮಾಡಲಾಗಿದೆ ಎಂದು ಹೇಳುವ ಹಲವಾರು ದೂರುಗಳು ದಾಖಲಾಗಿವೆ.
ಚಿತ್ರದಲ್ಲಿ ನಾಯಕನಾಗಿ ನಟಿಸಿರುವ ನಟ ಜೈ, ವಾಲ್ಮೀಕಿ ರಾಮಾಯಣವನ್ನು ತಪ್ಪಾಗಿ ಉಲ್ಲೇಖಿಸಿ, ರಾಮ, ಲಕ್ಷ್ಮಣ ಮತ್ತು ಸೀತಾ ದೇವಿಯು ವನವಾಸದಲ್ಲಿದ್ದಾಗ ಮಾಂಸವನ್ನು ಸೇವಿಸಿದ್ದರು ಎಂದು ಹೇಳುತ್ತಾರೆ. ಇದಲ್ಲದೆ, ನಯನತಾರಾ ಪಾತ್ರವು ಬಿರಿಯಾನಿ ಮಾಡುವ ಮೊದಲು ಬುರ್ಖಾ ಧರಿಸಿ ನಮಾಜ್ ಮಾಡುವ ಮತ್ತೊಂದು ದೃಶ್ಯವಿದೆ ಎಂದು ಆರೋಪಿಸಿಲಾಗಿತ್ತು.
ವಿರೋಧ ಹೆಚ್ಚಾದ ಕಾರಣ ನಿರ್ಮಾಪಕರು ಚಲನಚಿತ್ರವನ್ನು ತಕ್ಷಣವೇ ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ನಿಂದ ತೆಗೆದುಹಾಕಿದರು. ಜೊತೆಗೆ ಕ್ಷಮೆಯಾಚನೆಯನ್ನು ಸಹ ಬಿಡುಗಡೆ ಮಾಡಿದರು. ಜೊತೆಗೆ ಚಿತ್ರತಂಡಕ್ಕೆ ಯಾರ ಧಾರ್ಮಿಕ ಭಾವನೆಗಳನ್ನು ನೋಯಿಸುವ ಉದ್ದೇಶವಿಲ್ಲ ಎಂದು ಉಲ್ಲೇಖಿಸಿದ್ದಾರೆ.


Click it and Unblock the Notifications











