ಸಿನಿಮಾ ರಂಗದಿಂದ ದೂರಾಗುವ ಆಲೋಚನೆ ಮಾಡಿದ್ದ ಪವನ್ ಕಲ್ಯಾಣ್! ಏಕೆ?
ಪವನ್ ಕಲ್ಯಾಣ್ ಭಾರತ ಚಿತ್ರರಂಗದ ಸೂಪರ್ ಸ್ಟಾರ್ಗಳಲ್ಲಿ ಒಬ್ಬರು. ಮೊದಲ ದಿನವೇ ಚಿತ್ರಮಂದಿರಗಳನ್ನು ತುಂಬಿಸುವ ಶಕ್ತಿಯುಳ್ಳ ನಟ. ರಾಜಕಾರಣ ಹಾಗೂ ಸಿನಿಮಾ ಎರಡನ್ನೂ ಬ್ಯಾಲೆನ್ಸ್ ಮಾಡುತ್ತಾ ಸಾಗುತ್ತಿರುವ ಪವನ್ ಕಲ್ಯಾಣ್, ಹಿಂದೊಮ್ಮೆ ಸಿನಿಮಾ ರಂಗದಿಂದ ದೂರಾಗುವ ಆಲೋಚನೆ ಮಾಡಿದ್ದರಂತೆ!
ಮೆಗಾಸ್ಟಾರ್ ಚಿರಂಜೀವಿ ಸಹೋದರ ಪವನ್ ಕಲ್ಯಾಣ್, ಬಹಳ ಸುಲಭವಾಗಿ ಸಿನಿಮಾ ರಂಗಕ್ಕೆ ಪ್ರವೇಶ ಪಡೆದುಕೊಂಡರು. ಆದರೆ ನಟನೆ ಅವರಿಗೆ ಸುಲಭವಾಗಿ ಒಲಿಯಲಿಲ್ಲ, ಆರಂಭದ ದಿನಗಳಲ್ಲಿ ನಟಿಸಲು ಬಹಳ ಕಷ್ಟಪಟ್ಟರಂತೆ ಪವನ್ ಕಲ್ಯಾಣ್.
ಸ್ವಭಾವತಃ ಇಂಟ್ರೋವರ್ಟ್ ಆಗಿದ್ದ, ಆತ್ಮವಿಶ್ವಾಸದ ಕೊರತೆ ಇದ್ದ ಪವನ್ ಕಲ್ಯಾಣ್ ಕ್ಯಾಮೆರಾ ಎದುರು ನಟಿಸಲು ಬಹಳ ಕಷ್ಟಪಡುತ್ತಿದ್ದರಂತೆ. ಒಮ್ಮೊಮ್ಮೆಯಂತೂ ಈ ಸಿನಿಮಾಗಳ ಸಹವಾಸವೇ ಸಾಕು ಎಂದುಕೊಂಡಿದ್ದರಂತೆ. ಆದರೆ ಅವರನ್ನು ತಡೆದಿದ್ದು ನಟ ಚಿರಂಜೀವಿಯ ಪತ್ನಿ ಸುರೇಖ!
ಆರಂಭದ ದಿನಗಳಲ್ಲಿ ತಾವು ಅನುಭವಿಸಿದ ಕಷ್ಟದ ಬಗ್ಗೆ 'ಅನ್ಸ್ಟಾಪೆಬಲ್ 2' ಟಾಕ್ ಶೋ ನಲ್ಲಿ ಮಾತನಾಡಿರುವ ನಟ ಪವನ್ ಕಲ್ಯಾಣ್, ಘಟನೆಯೊಂದನ್ನು ನೆನಪಿಸಿಕೊಂಡು, ಆ ಘಟನೆ ಬಳಿಕ ತಾವು ಸಿನಿಮಾದಿಂದ ದೂರ ಉಳಿಯಲು ನಿರ್ಧರಿಸಿದ್ದಾಗಿ ಹೇಳಿಕೊಂಡಿದ್ದಾರೆ.

ಆ ಘಟನೆ ನೆನಪಿಸಿಕೊಂಡ ಪವನ್ ಕಲ್ಯಾಣ್
''ಆರಂಭದ ದಿನಗಳಲ್ಲಿ ಸಿನಿಮಾ ಒಂದಕ್ಕಾಗಿ ನಾನು ವಿಶಾಖಪಟ್ಟಣದ ಜಗದಾಂಬಾ ಸೆಂಟರ್ನ ಮಧ್ಯ ಭಾಗದಲ್ಲಿ ಬಸ್ ಒಂದರ ಮೇಲೆ ನಿಂತು ಡ್ಯಾನ್ಸ್ ಮಾಡಬೇಕಿತ್ತು. ಶೂಟಿಂಗ್ ನೋಡಲು ನೂರಾರು ಮಂದಿ ಜನ ನೆರೆದಿದ್ದರು. ಅಷ್ಟೋಂದು ಕಣ್ಣುಗಳು ನನ್ನನ್ನೇ ನೋಡುತ್ತಿದ್ದುದನ್ನು ನನಗೆ ಹೆದರಿಕೆ ಹುಟ್ಟಿಸಿಬಿಟ್ಟಿತ್ತು, ಅದರಲ್ಲಿಯೂ ಡ್ಯಾನ್ಸ್ ಬೇರೆ, ಡ್ಯಾನ್ಸ್ ಎಂದರೆ ನನಗೆ ಭಯ. ನೀರಿನಿಂದ ಆಚೆ ಹಾಕಿದ ಮೀನಂತಾಗಿಬಿಡುತ್ತೇನೆ'' ಎಂದು ಹಳೆಯ ಘಟನೆ ನೆನಪಿಸಿಕೊಂಡಿದ್ದಾರೆ ಪವನ್ ಕಲ್ಯಾಣ್.

ಸಿನಿಮಾಗಳಲ್ಲಿ ನಟಿಸಲ್ಲ ಎಂದಿದ್ದ ಪವನ್ ಕಲ್ಯಾಣ್
''ಆ ಜನರನ್ನು ನೋಡಿ ನನಗೆ ಗಾಬರಿಯಾಗಿಬಿಟ್ಟಿತ್ತು, ಅದರಲ್ಲಿಯೂ ಡ್ಯಾನ್ಸ್ ಮಾಡುವುದಂತೂ ಸಾಧ್ಯವೇ ಆಗುತ್ತಿರಲಿಲ್ಲ. ನನ್ನ ಆತ್ಮವಿಶ್ವಾಸ ಸಂಪೂರ್ಣವಾಗಿ ಕುಸಿದು ಹೋಗಿತ್ತು. ನಾನು ನನ್ನ ಅತ್ತಿಗೆ, (ಅಣ್ಣ ಚಿರಂಜೀವಿಯ ಪತ್ನಿ ಸುರೇಖ)ಗೆ ಕರೆ ಮಾಡಿ ನನಗೆ ನಟನೆ ಸಾಕು, ನನಗೆ ಜನರ ಅಟೇನ್ಶನ್ ಅನ್ನು ನಿಭಾಯಿಸಲು ಆಗುತ್ತಿಲ್ಲ. ನಾನು ಇನ್ನು ಮುಂದೆ ಸಿನಿಮಾಗಳಲ್ಲಿ ನಟಿಸುವುದಿಲ್ಲ ಎಂದಿದ್ದೆ. ಆದರೆ ಅವರೇ ನನಗೆ ಧೈರ್ಯ ತುಂಬಿದರು'' ಎಂದಿದ್ದಾರೆ ಪವನ್ ಕಲ್ಯಾಣ್.

ಪವನ್ ಚಿತ್ರರಂಗಕ್ಕೆ ಬರಲು ಕಾರಣ?
ತಾವು ಸಿನಿಮಾಗಳಲ್ಲಿ ನಟಿಸಲು ಕಾರಣರಾದವರ ಬಗ್ಗೆಯೂ ಮಾತನಾಡಿರುವ ಪವನ್ ಕಲ್ಯಾಣ್, ನಾನು ಸಿನಿಮಾ ರಂಗಕ್ಕೆ ಪ್ರಮುಖ ಕಾರಣವೆಂದರೆ ನನ್ನ ಅತ್ತಿಗೆ ಸುರೇಖ ಹಾಗೂ ಅಲ್ಲು ಅರವಿಂದ್ ಅವರ ತಾಯಿ (ಅಲ್ಲು ಅರ್ಜುನ್ ಅಜ್ಜಿ) ಕನಕ ರತ್ನಮ್ಮ. ಅವರೇ ನನಗೆ ಧೈರ್ಯ ತುಂಬಿ ಸಿನಿಮಾಗಳಲ್ಲಿ ನಟಿಸುವಂತೆ ಒತ್ತಾಯಿಸಿದರು. ಅವರಿಂದಲೇ ನಾನು ನಟನೆಗೆ ಬಂದೆ ಎಂದಿದ್ದಾರೆ. ಅಂತೆಯೇ ಪವನ್ ಕಲ್ಯಾಣ್ ನಟಿಸಿದ ಮೊದಲ ಸಿನಿಮಾ ನಿರ್ಮಾಣ ಮಾಡಿದ್ದು ಸಹ ಅಲ್ಲು ಅರ್ಜುನ್ರ ತಂದೆ ಅಲ್ಲು ಅರವಿಂದ್.

ಹಲವು ಸಿನಿಮಾಗಳು ಪವನ್ ಕೈಯಲ್ಲಿವೆ
ಪವನ್ ಕಲ್ಯಾಣ್ ಈಗ ಭಾರತದ ದೊಡ್ಡ ಸೂಪರ್ ಸ್ಟಾರ್ಗಳಲ್ಲಿ ಒಬ್ಬರು. ಮೊದಲ ದಿನವೇ ಚಿತ್ರಮಂದಿರವನ್ನು ತುಂಬಿಸುವ ಶಕ್ತಿಯುಳ್ಳ ಕೆಲವೇ ನಟರಲ್ಲಿ ಪವನ್ ಸಹ ಒಬ್ಬರು. ಪವನ್ ನಟನೆಯ 'ಭೀಮ್ಲಾ ಶಂಕರ್' ಕೆಲವು ದಿನಗಳ ಹಿಂದೆ ಬಿಡುಗಡೆ ಆಗಿ ಹಿಟ್ ಆಗಿದೆ. ಇದೀಗ 'ಹರಿ ಹರ ವೀರ ಮಲ್ಲು' ಸಿನಿಮಾದಲ್ಲಿ ಪವನ್ ನಟಿಸುತ್ತಿದ್ದಾರೆ. ನಿನ್ನೆಯಷ್ಟೆ ಹೊಸ ಸಿನಿಮಾದ ಮುಹೂರ್ತವನ್ನು ಸಹ ಮಾಡಿದ್ದು, ಸುಜಿತ್ ನಿರ್ದೇಶಿಸಲಿರುವ ಈ ಸಿನಿಮಾಕ್ಕೆ 'OG' ಎಂದು ಕರೆಯಲಾಗುತ್ತಿದೆ. ಇದರ ಜೊತೆಗೆ ತ್ರಿವಿಕ್ರಮ್ ನಿರ್ದೇಶನದ ಸಿನಿಮಾ ಒಂದರಲ್ಲಿ ಸಹ ಪವನ್ ನಟಿಸಲಿದ್ದಾರೆ.


Click it and Unblock the Notifications











