Don't Miss!
- News Bengaluru-Tumkur Metro: 52.41 ಕಿ.ಮೀ. ಮಾರ್ಗ, 19 ನಿಲ್ದಾಣಗಳು; ತುಮಕೂರು-ಬೆಂಗಳೂರು ಮೆಟ್ರೋ ಅಪ್ಡೇಟ್
- Lifestyle ಏಪ್ರಿಲ್ನಲ್ಲಿ 14 ದಿನ ರಜೆ, ಏಪ್ರಿಲ್ 1ಕ್ಕೆ ಬ್ಯಾಂಕ್ಗಳಿಗೆ ರಜೆ ಇರಲು ಕಾರಣವೇನು?
- Sports ರೋಹಿತ್ vs ಹಾರ್ದಿಕ್: ಸತತ ಸೋಲಿನ ನಡುವೆಯೇ ಮುಂಬೈ ಇಂಡಿಯನ್ಸ್ ಇಬ್ಭಾಗ!?
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಂದು ಮಲ್ಟಿಪ್ಲೆಕ್ಸ್ನಲ್ಲಿ ಕನ್ನಡ ಸಿನಿಮಾಗಳ ಪರ ದನಿ ಎತ್ತಿದ್ದ ಪುನೀತ್ ತೋರಿಸಿದ ರಾಜಮಾರ್ಗ!
'ಮಲ್ಟಿಪ್ಲೆಕ್ಸ್ಗಳಲ್ಲಿ ಬೇಕಾಬಿಟ್ಟಿ ದರ ನಿಗದಿಪಡಿಸಲಾಗುತ್ತದೆ. ಅಲ್ಲಿ ಹೊರಗಿನಿಂದ ತಿಂಡಿ ತಿನಿಸು ಕೊಂಡೊಯ್ಯುವಂತಿಲ್ಲ. ಅಲ್ಲಿಯೇ ಖರೀದಿಸಿದರೆ ನಾಲ್ಕು ಪಟ್ಟು ಹೆಚ್ಚು ಹಣ ತೆರಬೇಕು. ಗುಣಮಟ್ಟದ ಸೌಲಭ್ಯ ಇರಬಹುದು, ಆದರೆ ಒಂದು ಸಿನಿಮಾ ನೋಡಲು ಸಾವಿರಗಟ್ಟಲೆ ರೂಪಾಯಿ ಖರ್ಚು ಮಾಡಬೇಕೇ?' ಎಂದು ಸಿನಿಮಾ ಪ್ರಿಯರು ಹಲವು ವರ್ಷಗಳಿಂದ ಮಲ್ಟಿಪ್ಲೆಕ್ಸ್ಗಳ ವಿರುದ್ಧ ಕಿಡಿಕಾರುತ್ತಿದ್ದಾರೆ.
Recommended Video
ಮಲ್ಟಿಪ್ಲೆಕ್ಸ್ಗಳ ದರವನ್ನು ತಗ್ಗಿಸಲು ಸರ್ಕಾರ ನಿಯಮ ರೂಪಿಸಿದರೂ ಅದು ಪಾಲನೆಯಾಗುತ್ತಿಲ್ಲ ಎನ್ನುವುದು ಅನೇಕರ ಆರೋಪ. ಹಾಗೆಯೇ ಚಿತ್ರರಂಗದವರೂ ಮಲ್ಟಿಪ್ಲೆಕ್ಸ್ಗಳ ವಿರುದ್ಧ ದೂರುವುದು ಹೊಸತಲ್ಲ. ಕನ್ನಡ ಚಿತ್ರಗಳಿಗೆ ಸರಿಯಾದ ಅವಕಾಶ ನೀಡುವುದಿಲ್ಲ. ಪ್ರೈಮ್ ಟೈಮ್ನಲ್ಲಿ ಕನ್ನಡ ಚಿತ್ರಗಳನ್ನು ಪ್ರದರ್ಶನ ಮಾಡುವುದೇ ಇಲ್ಲ. ಅದರಲ್ಲಿಯೂ ಕನ್ನಡದ ಎಷ್ಟೋ ಚಿತ್ರಗಳಿಗೆ ಮಲ್ಟಿಪ್ಲೆಕ್ಸ್ಗಳಲ್ಲಿ ಜಾಗವೇ ಸಿಗುವುದಿಲ್ಲ ಎಂದು ಚಿತ್ರರಂಗದಿಂದಲೇ ಆರೋಪ ಕೇಳಿಬರುತ್ತಿತ್ತು. ಆದರೆ ಕೊರೊನಾ ವೈರಸ್ ಈ ಚಿತ್ರಣವನ್ನು ಬದಲಿಸುವ ಸೂಚನೆ ನೀಡಿದೆ. ಮುಂದೆ ಓದಿ...
ಸಿನಿಮಾ ಪ್ರಿಯರಿಗೆ ಸಂತಸದ ಸುದ್ದಿ ನೀಡಿದ ಪುನೀತ್ ರಾಜ್ ಕುಮಾರ್
ಕನ್ನಡಕ್ಕೆ ಆದ್ಯತೆ ಕೊಡಿ ಎಂದಿದ್ದ ಪುನೀತ್
ಎರಡು ತಿಂಗಳ ಹಿಂದೆ ಪಿವಿಆರ್ನ ನೂರನೇ ಸ್ಕ್ರೀನ್ ಉದ್ಘಾಟನೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಟ ಪುನೀತ್ ರಾಜ್ ಕುಮಾರ್, ಮಲ್ಟಿಪ್ಲೆಕ್ಸ್ಗಳನ್ನು ಕನ್ನಡ ಸಿನಿಮಾಗಳ ಬಗ್ಗೆ ಅಸಡ್ಡೆ ತೋರುತ್ತಿವೆ. ಪಿವಿಆರ್ ಕನ್ನಡ ಸಿನಿಮಾಕ್ಕೆ ಆದ್ಯತೆ ನೀಡಬೇಕು ಎಂದಿದ್ದ ಅವರು, ಸಿಂಗಲ್ ಸ್ಕ್ರೀನ್ ಥಿಯೇಟರ್ಗಳಲ್ಲಿ ಕುಳಿತು ಸಿನಿಮಾ ನೋಡುವುದೇ ತಮಗೆ ಇಷ್ಟ ಎಂದಿದ್ದರು. ಈ ಮೂಲಕ ಮಲ್ಟಿಪ್ಲೆಕ್ಸ್ಗಳ ಧೋರಣೆಯನ್ನು ನೇರವಾಗಿಯೇ ವಿರೋಧಿಸಿದ್ದರು.
ಒಟಿಟಿ ವರದಾನ
ಕೊರೊನಾ ವೈರಸ್ ಕಾರಣದಿಂದ ಚಿತ್ರಮಂದಿರಗಳು ಸ್ಥಗಿತಗೊಂಡಿವೆ. ಮಲ್ಟಿಪ್ಲೆಕ್ಸ್ಗಳಿಗೂ ತೀವ್ರ ನಷ್ಟ ಉಂಟಾಗುತ್ತಿವೆ. ಹಾಗೆಯೇ ಸಿನಿಮಾ ಸಿದ್ಧಮಾಡಿಟ್ಟುಕೊಂಡ ನಿರ್ಮಾಪಕರು ಕೂಡ ಅವುಗಳನ್ನು ಬಿಡುಗಡೆ ಮಾಡಲಾಗದೆ ತಮ್ಮ ಸಾಲದ ಮೇಲಿನ ಬಡ್ಡಿಯನ್ನು ತೆರಬೇಕಾಗಿ ಆರ್ಥಿಕ ನಷ್ಟ ಅನುಭವಿಸುವಂತಾಗಿದೆ. ಈ ಸಂಕಷ್ಟದಲ್ಲಿ ಅವರಿಗೆ ಒಟಿಟಿ (ಓವರ್ ದಿ ಟಾಪ್) ಪ್ಲಾಟ್ ಫಾರ್ಮ್ ವರದಾನವಾಗಿ ಸಿಕ್ಕಿದೆ.
ನೇರವಾಗಿ ಅಮೆಜಾನ್ ಪ್ರೈಮ್ನಲ್ಲಿ ಬಿಡುಗಡೆಯಾಗುತ್ತಿವೆ ಏಳು ಸಿನಿಮಾಗಳು: ಇಲ್ಲಿದೆ ಮಾಹಿತಿ
ಒಟಿಟಿ ಬಿಡುಗಡೆಯ ದಾರಿ
ಈ ಹಿಂದೆ ಚಿತ್ರಮಂದಿರದಲ್ಲಿ ಬಿಡುಗಡೆಯಾಗಿ 60 ದಿನಗಳ ನಂತರ ಒಟಿಟಿಯಲ್ಲಿ ಸಿನಿಮಾ ಪ್ರಸಾರ ಮಾಡಲಾಗುತ್ತಿತ್ತು. ಆದರೆ ಆರ್ಥಿಕ ಹೊರೆಯನ್ನು ತಗ್ಗಿಸಲು ಒಟಿಟಿಯಲ್ಲಿಯೇ ನೇರವಾಗಿ ಬಿಡುಗಡೆ ಮಾಡಲು ನಿರ್ಮಾಣ ಸಂಸ್ಥೆಗಳು ಮುಂದಾಗುತ್ತಿವೆ. ಇದರಿಂದ ನಿರ್ಮಾಪಕರಿಗೆ ದೊಡ್ಡ ಮಟ್ಟದ ಲಾಭವಾಗದೆ ಇದ್ದರೂ ಈ ಸಂಕಷ್ಟ ತಗ್ಗಿಸಲು ನೆರವಾಗುತ್ತದೆ.
ಪ್ರದರ್ಶಕರ ಅಸಮಾಧಾನ
ಆದರೆ ನಿರ್ಮಾಪಕರ ನಡೆ ಪ್ರದರ್ಶಕರನ್ನು ಗರಂ ಆಗಿಸಿದೆ. ಒಟಿಟಿಯಲ್ಲಿ ಸಿನಿಮಾ ಬಿಡುಗಡೆ ಮಾಡುವುದು ಸರಿಯಲ್ಲ. ಸಿನಿಮಾ ಮತ್ತು ಮಲ್ಟಿಪ್ಲೆಕ್ಸ್ಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ನಾವು ಪಾಲುದಾರರಂತೆ. ಆದರೆ ನೀವು ಈ ಸನ್ನಿವೇಶದಲ್ಲಿ ಒಟಿಟಿ ಪ್ಲಾಟ್ಫಾರ್ಮ್ಗೆ ಹೋಗುತ್ತಿರುವುದು ಬೇಸರ ತಂದಿದೆ. ಚಿತ್ರಮಂದಿರದಲ್ಲಿಯೇ ಚಿತ್ರ ಪ್ರದರ್ಶನ ಮಾಡಿ ಎಂದು ನಿರ್ಮಾಪಕರನ್ನು ಕೇಳಿಕೊಳ್ಳುತ್ತಿವೆ. ಈ ಸಂಬಂಧ ಐನಾಕ್ಸ್ ಬರೆದಿರುವ ಸುದೀರ್ಘ ಪತ್ರ ವೈರಲ್ ಆಗಿದೆ.
ಒಟಿಟಿಯಲ್ಲಿಯೇ ಬಿಡುಗಡೆಯಾಗುತ್ತಿವೆ ಏಳು ಚಿತ್ರಗಳು
ಜೂನ್ ತಿಂಗಳಿನಿಂದ ವಿವಿಧ ಭಾಷೆಗಳ ಒಟ್ಟು ಏಳು ಸಿನಿಮಾಗಳು ಒಟಿಟಿ ಪ್ಲಾಟ್ ಪಾರ್ಮ್ನಲ್ಲಿ ನೇರವಾಗಿ ತೆರೆ ಕಾಣಲಿವೆ. ಅಮೆಜಾನ್ ಪ್ರೈಮ್ ಈ ಬಗ್ಗೆ ಮಾಹಿತಿ ಹಂಚಿಕೊಂಡಿದೆ. ಅದರಲ್ಲಿ ನಟ ಪುನೀತ್ ರಾಜ್ ಕುಮಾರ್ ಅವರ ನಿರ್ಮಾಣ ಸಂಸ್ಥೆ ಪಿಆರ್ ಕೆ ಪ್ರೊಡಕ್ಷನ್ಸ್ನ ಎರಡು ಚಿತ್ರಗಳು ಸೇರಿವೆ. ಕನ್ನಡದಲ್ಲಿ ಇದೇ ಮೊದಲ ಮಾರಿಗೆ ನಿರ್ಮಾಣ ಸಂಸ್ಥೆಯೊಂದು ನೇರವಾಗಿ ಒಟಿಟಿ ಬಿಡುಗಡೆಯನ್ನು ಘೋಷಿಸಿಕೊಂಡಿರುವುದು.
ಅಮಿತಾಬ್ ಬಚ್ಚನ್ ಸಿನಿಮಾ ಒಟಿಟಿಗೆ: ಗರಂ ಆದ ಐನಾಕ್ಸ್
ಮಲ್ಟಿಪ್ಲೆಕ್ಸ್ಗಳಿಂದ ಬೆದರಿಕೆ
ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಮತ್ತು ಆಯುಷ್ಮಾನ್ ಖುರಾನಾ ನಟನೆಯ ಚಿತ್ರ ಒಟಿಟಿಯಲ್ಲಿ ಬಿಡುಗಡೆ ಮಾಡಲಾಗುತ್ತದೆ ಎಂದಾಗ ಐನಾಕ್ಸ್ ತನ್ನ ಅಸಮಾಧಾನ ವ್ಯಕ್ತಪಡಿಸಿತ್ತು. ಹಾಗೆಯೇ ತಮಿಳು ನಟ ಸೂರ್ಯ ಮತ್ತು ಜ್ಯೋತಿಕಾ ಅವರ ಸಿನಿಮಾಗಳನ್ನು ಬಹಿಷ್ಕಾರ ಮಾಡುವುದಾಗಿ ಚಿತ್ರಮಂದಿರಗಳ ಮಾಲೀಕರು ಎಚ್ಚರಿಕೆ ನೀಡಿದ್ದರು.
ದಿಟ್ಟತನ ತೋರಿದ ಪುನೀತ್
ಈ ಬೆದರಿಕೆಗಳ ನಡುವೆಯೂ ಕೆಲವು ಚಿತ್ರಗಳು ಒಟಿಟಿ ಬಿಡುಗಡೆಗೆ ಮುಂದಾಗಿವೆ. ಪುನೀತ್ ರಾಜ್ ಕುಮಾರ್ ತಮ್ಮ ನಿರ್ಮಾಣದ 'ಲಾ' ಮತ್ತು 'ಫ್ರೆಂಚ್ ಬಿರಿಯಾನಿ' ಎರಡೂ ಚಿತ್ರಗಳನ್ನು ಒಟಿಟಿಯಲ್ಲಿ ಬಿಡುಗಡೆ ಮಾಡಲು ಮುಂದಾಗುವ ಮೂಲಕ ಬದಲಾಗುತ್ತಿರುವ ತಂತ್ರಜ್ಞಾನಕ್ಕೆ ಅನುಗುಣವಾಗಿ ಬದಲಾಗುವ ದಿಟ್ಟತನ ತೋರಿದ್ದಾರೆ. ಇಡೀ ದೇಶದಲ್ಲಿ ಯಾವನಿರ್ಮಾಣ ಸಂಸ್ಥೆಯೂ ತನ್ನ ಎರಡು ಚಿತ್ರಗಳನ್ನು ಒಟಿಟಿಯಲ್ಲಿ ನೇರ ಬಿಡುಗಡೆ ಮಾಡುತ್ತಿಲ್ಲ ಎನ್ನುವುದು ಗಮನಿಸಬೇಕಾದ ಸಂಗತಿ. ಮಲ್ಟಿಪ್ಲೆಕ್ಸ್ಗಳ ಕನ್ನಡ ನಿರ್ಲಕ್ಷ್ಯ ಧೋರಣೆ ವಿರುದ್ಧ ಕಿಡಿಕಾರಿದ್ದ ಪುನೀತ್, ಈಗ ಒಟಿಟಿಯ ಮೂಲಕವೇ ಜನರನ್ನು ತಲುಪುವ ಛಾತಿ ತೋರಿಸಿದ್ದಾರೆ.
ಮಲ್ಟಿಪ್ಲೆಕ್ಸ್ ವಿರುದ್ಧ ಕಿಡಿ
ಮಲ್ಟಿಪ್ಲೆಕ್ಸ್ಗಳು ನಿರ್ಮಾಪಕರಿಗೆ ಬರೆದಿರುವ ಪತ್ರವನ್ನು ಸಿನಿಮಾ ಅಭಿಮಾನಿಗಳು ಟೀಕಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ತೀವ್ರ ಚರ್ಚೆ ನಡೆಯುತ್ತಿದ್ದು, ಟಿಕೆಟ್, ಪಾನೀಯ ಮತ್ತು ತಿನಿಸಿಗೆ ದುಬಾರಿ ಹಣ ಕೀಳುತ್ತಿದ್ದ ಅವರು ಈಗ ಅಂಗಲಾಚುತ್ತಿದ್ದಾರೆ. ಇಷ್ಟು ದಿನ ಮಾಡಿದ ಸುಲಿಗೆಗೆ ತಕ್ಕ ಪಾಠ ಸಿಕ್ಕಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇತ್ತ ಕನ್ನಡದಲ್ಲಿ ಸ್ಟಾರ್ ನಟರೊಬ್ಬರು ಒಟಿಟಿಯ ವೇದಿಕೆಯನ್ನು ಅನುಸರಿಸಿದ್ದು, ಇತರೆ ಅನೇಕ ನಿರ್ಮಾಪಕರಿಗೂ ಸ್ಫೂರ್ತಿ ನೀಡಲಿದೆ.