Elumale OTT: ಗೆದ್ದು ಸೋತ 'ಏಳುಮಲೆ' ಓಟಿಟಿಗೆ; ಎಲ್ಲಿ ನೋಡಬಹುದು ಅಂದ್ರೆ?
ಈ ವರ್ಷ ಮೊದಲ 7 ತಿಂಗಳು ಕನ್ನಡ ಸಿನಿಮಾಗಳು ದೊಡ್ಡದಾಗಿ ಸದ್ದು ಮಾಡಲಿಲ್ಲ. 'ಎಕ್ಕ' ಹಾಗೂ 'ಸು ಫ್ರಮ್ ಸೋ' ಸಿನಿಮಾ ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಸೆಳೆಯುವಲ್ಲಿ ಯಶಸ್ಸು ಕಂಡಿದ್ದವು. ಸದ್ಯ 'ಕಾಂತಾರ- 1' ಜೋರಾಗಿದೆ. ಈ ನಡುವೆ ತರುಣ್ ಸುಧೀರ್ ನಿರ್ಮಾಣದ 'ಏಳುಮಲೆ' ಚಿತ್ರ ಕೂಡ ಪ್ರೇಕ್ಷಕರ ಮನಗೆದ್ದಿತ್ತು.
ಪುನೀತ್ ರಂಗಸ್ವಾಮಿ ನಿರ್ದೇಶನದ ರೊಮ್ಯಾಂಟಿಕ್ ಥ್ರಿಲ್ಲರ್ ಸಿನಿಮಾ 'ಏಳುಮಲೆ' ಸೆಪ್ಟೆಂಬರ್ 5ರಂದು ತೆರೆಗಪ್ಪಳಿಸಿತ್ತು. ಪ್ರೇಕ್ಷಕರು ಹಾಗೂ ವಿಮರ್ಶಕರಿಂದ ಒಳ್ಳೆ ರೆಸ್ಪಾನ್ಸ್ ಪಡೆದುಕೊಂಡಿತ್ತು. ದೊಡ್ಡಮಟ್ಟದಲ್ಲಿ ಪ್ರೇಕ್ಷಕರನ್ನು ಸೆಳೆಯುವಲ್ಲಿ ವಿಫಲವಾದರೂ ಸಿನಿಮಾ ತಕ್ಕಮಟ್ಟಿಗೆ ಗೆದ್ದಿತ್ತು. ರಾಣಾ ಹಾಗೂ ಪ್ರಿಯಾಂಕ ಆಚಾರ್ ಈ ಚಿತ್ರದ ಲೀಡ್ ರೋಲ್ಗಳಲ್ಲಿ ನಟಿಸಿದ್ದಾರೆ. ಜಗಪತಿ ಬಾಬು, ಕಿಶೋರ್, ನಾಗಾಭರಣ ತಾರಾಗಣದಲ್ಲಿದ್ದಾರೆ.

ಅದ್ವೈತ್ ಗುರುಮೂರ್ತಿ ಛಾಯಾಗ್ರಹಣ, ಡಿ. ಇಮ್ಮಾನ್ ಸಂಗೀತ ಈ ಚಿತ್ರಕ್ಕಿದೆ. ಕಾಡುಗಳ್ಳ ವೀರಪ್ಪನ್ ಸೆರೆ ಹಿಡಿಯಲು ಎಸ್ಟಿಎಫ್(STF) ನಡೆಸಿದ ಕಾರ್ಯಾಚರಣೆ ಹಿನ್ನೆಲೆಯಲ್ಲಿ 'ಏಳುಮಲೆ' ಕಥೆ ಹೆಣೆಯಲಾಗಿದೆ. ಒಂದು ರಾತ್ರಿಯಲ್ಲಿ ನಡೆಯುವ ಕಥೆ ಪ್ರೇಕ್ಷಕರನ್ನು ಸೀಟಿನ ತುದಿಗೆ ತಂದು ಕೂರಿಸುವಂತಿದೆ. 2 ಗಂಟೆ 13 ನಿಮಿಷದ ರೊಮ್ಯಾಂಟಿಕ್ ಥ್ರಿಲ್ಲರ್ ಸಿನಿಮಾ ಪ್ರೇಕ್ಷಕರನ್ನು ಮನಗೆದ್ದಿತ್ತು. ಆದರೂ ನಿರೀಕ್ಷಿತ ಮಟ್ಟದಲ್ಲಿ ಸಿನಿಮಾ ಗೆಲ್ಲಲಿಲ್ಲ.
ಇದೀಗ ಸಿನಿಮಾ ಓಟಿಟಿ ಸ್ಟ್ರೀಮಿಂಗ್ಗೆ ಸಜ್ಜಾಗಿದೆ. ಅಕ್ಟೋಬರ್ 17ರಂದು 'ಏಳುಮಲೆ' ಸಿನಿಮಾ ಜೀ-5 ಓಟಿಟಿ ವೇದಿಕೆಗೆ ಬರಲಿದೆ. ಈಗಾಗಲೇ ನೋಡಿರುವವರು ನೋಡದೇ ಇರುವವರು ಜೀ5ನಲ್ಲಿ ಸಿನಿಮಾ ವೀಕ್ಷಿಸಬಹುದು. ಮೊದಲ ಪ್ರಯತ್ನದಲ್ಲೇ ನಿರ್ದೇಶಕ ಪುನೀತ್ ರಂಗಸ್ವಾಮಿ ಗೆದ್ದಿದ್ದಾರೆ. ಬಹಳ ವಿಭಿನ್ನ ರೀತಿಯಲ್ಲಿ ಕಥೆ ಕಟ್ಟಿಕೊಟ್ಟು ಗಮನ ಸೆಳೆದಿದ್ದಾರೆ. ಅಟ್ಲಾಂಟ ನಾಗೇಂದ್ರ ಜೊತೆ ಸೇರಿ ತರುಣ್ ಸುಧೀರ್ ಸಿನಿಮಾ ನಿರ್ಮಾಣ ಮಾಡಿದ್ದಾರೆ.
ಒಂದ್ಕಡೆ ನಿರ್ದೇಶಕರಾಗಿ ಗಮನ ಸೆಳೆದಿರುವ ತರುಣ್ ಸುಧೀರ್ ಮತ್ತೊಂದು ಕಡೆ ಚಿತ್ರ ನಿರ್ಮಾಣವನ್ನು ಮುಂದುವರೆಸಿದ್ದಾರೆ. ಹೊಸ ಹೊಸ ಪ್ರತಿಭೆಗಳಿಗೆ ಅವಕಾಶ ಕೊಡುವ ಪ್ರಯತ್ನ ಮಾಡುತ್ತಿದ್ದಾರೆ. ರಾಣಾ ಹಾಗೂ ಪ್ರಿಯಾಂಕ ಸಿಕ್ಕ ಅವಕಾಶವನ್ನು ಉತ್ತಮವಾಗಿ ಬಳಸಿಕೊಂಡಿದ್ದಾರೆ. ಕಥೆಗೆ ತಕ್ಕಂತೆ ನಟಿಸಿ ಇಷ್ಟವಾಗುತ್ತಾರೆ. ಇನ್ನು ಪೋಲಿಸ್ ಹೆಡ್ ಕಾನ್ಸ್ಟೆಬಲ್ ಪಾತ್ರದಲ್ಲಿ ಟಿ. ಎಸ್ ನಾಗಾಭರಣ ಮನಸ್ಸಿನಲ್ಲಿ ಉಳಿಯುತ್ತಾರೆ.
ಕರ್ನಾಟಕ-ತಮಿಳುನಾಡು ಗಡಿಭಾಗದ ಪ್ರೇಮಕಥೆ 'ಏಳುಮಲೆ' ಚಿತ್ರದಲ್ಲಿದೆ. ಮೈಸೂರಿನ ಟೂರಿಸ್ಟ್ ಗಾಡಿ ಡ್ರೈವರ್ ಹರೀಶ(ರಾಣಾ). ಮೈಸೂರಿಗೆ ಓದಲು ಬರುವ ತಮಿಳುನಾಡಿನ ಶ್ರೀಮಂತರ ಮನೆ ಹುಡುಗಿ ರೇವತಿ(ಪ್ರಿಯಾಂಕ ಆಚಾರ್). ಇಬ್ಬರ ನಡುವೆ ಲವ್ವಾಗುತ್ತಿದೆ. ಅತ್ತ ರೇವತಿಗೆ ಬೇರೆ ವರನ ಜೊತೆ ಮದುವೆ ಮಾಡಲು ಪೋಷಕರು ಮುಂದಾಗುತ್ತಾರೆ. ಮನೆಯಿಂದ ಓಡಿ ಬಂದು ಹರೀಶನ ಜೊತೆ ಜೀವನ ಸಾಗಿಸಲು ಮುಂದಾಗುತ್ತಾಳೆ.
ಇತ್ತ ಆಪರೇಷನ್ ಕುಕೂನ್ ಕಾರ್ಯಾಚರಣೆ. ನಡುವೆ ಒಂದು ಲಾಕಪ್ ಡೆತ್. ಇದೆಲ್ಲದರ ನಡುವೆ ಹರೀಶನ ಜೀವನ ಏನೆಲ್ಲಾ ತಿರುವು ಪಡೆದುಕೊಳ್ಳುತ್ತದೆ, ತನ್ನದಲ್ಲದ ತಪ್ಪಿಗೆ ಆತ ಸಿಕ್ಕಿಹಾಕಿಕೊಂಡು ಏನೆಲ್ಲಾ ಆಗುತ್ತದೆ ಎನ್ನುವುದು ಇನ್ನುಳಿದ ಸಿನಿಮಾ ಕತೆ. ಒಂದಾಗಬೇಕು ಎನ್ನುವ ಪ್ರೇಮಿಗಳಿಬ್ಬರ ಚಡಪಡಿಕೆ ಮತ್ತೊಂದು ಕಡೆ ಪೊಲೀಸ್ ಕಾರ್ಯಾಚರಣೆ ಹೀಗೆ ಕಥೆ ನೋಡುಗರನ್ನು ಹಿಡಿದಿಟ್ಟುಕೊಳ್ಳುತ್ತದೆ. ಸಿನಿಮಾ ನೋಡಿದವರು ಮೆಚ್ಚಿಕೊಂಡು ಮತ್ತಷ್ಟು ಜನರಿಗೆ ನೋಡಲು ಹೇಳಿದರು. ಆದರೂ 'ಸು ಫ್ರಮ್ ಸೋ' ಗುಂಗಿನಿಂದ ಹೊರಗೆ ಬರದ ಪ್ರೇಕ್ಷಕರು 'ಏಳುಮಲೆ' ಕೈಹಿಡಿಯಲಿಲ್ಲ.


Click it and Unblock the Notifications











