ರಾಜ್. ಬಿ ಶೆಟ್ಟಿ ನಟನೆಯ ಹೊಚ್ಚ ಹೊಸ ಸಿನಿಮಾ ಓಟಿಟಿಗೆ ಬಂತು, ಮಿಸ್ ಮಾಡ್ಬೇಡಿ
'ಭೀಮ' ಹಾಗೂ 'ಕೃಷ್ಣಂ ಪ್ರಣಯ ಸಖಿ' ಚಿತ್ರಗಳನ್ನು ಪ್ರೇಕ್ಷಕರು ಗೆಲ್ಲಿಸಿದ್ದಾರೆ. ನಿಧಾನವಾಗಿ ಕನ್ನಡ ಸಿನಿಮಾಗಳು ಮತ್ತೆ ಸದ್ದು ಮಾಡ್ತಿವೆ. ತೆರೆಮೇಲೆ ಮಾತ್ರವಲ್ಲ ಓಟಿಟಿಯಲ್ಲೂ ಕಾರುಬಾರು ಜೋರಾಗಿದೆ. 25 ದಿನಕ್ಕೆ ದುನಿಯಾ ವಿಜಯ್ ನಟಿಸಿದ 'ಭೀಮ' ಸಿನಿಮಾ ಡಿಜಿಟಲ್ ಪ್ಲಾಟ್ಫಾರ್ಮ್ಗೆ ಬಂದು ಗಮನ ಸೆಳೆದಿದೆ.
ಅದ್ಯಾಕೋ ಗೊತ್ತಿಲ್ಲ ಯಾವುದೇ ಸುಳಿವು ನೀಡದೇ ಕನ್ನಡ ಸಿನಿಮಾಗಳನ್ನು ಓಟಿಟಿಯಲ್ಲಿ ಬಿಡುಗಡೆ ಮಾಡುತ್ತಿದ್ದಾರೆ. ಇತ್ತೀಚೆಗೆ ಬಿಡುಗಡೆಯಾಗಿ ಮೆಚ್ಚುಗೆ ಗಳಿಸಿದ್ದ 'ರೂಪಾಂತರ' ಸಿನಿಮಾ ಸದ್ದಿಲ್ಲದೇ ಬಂದು ಸುದ್ದಿ ಆಗುತ್ತಿದೆ. ರಾಜ್. ಬಿ ಶೆಟ್ಟಿ ಡೈಲಾಗ್ಸ್ ಬರೆದು ಚಿತ್ರದ ಪಾತ್ರವೊಂದಕ್ಕೆ ಜೀವ ತುಂಬಿದ್ದರು. ಜುಲೈ ಕೊನೆ ವಾರದಲ್ಲಿ ತೆರೆಗೆ ಬಂದಿದ್ದ ಸಿನಿಮಾ ಇದೀಗ ಪ್ರೈಂ ವೀಡಿಯೋದಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.

ಮಿಥಿಲೇಶ್ ಎಡವಲತ್ ನಿರ್ದೇಶನದ ಚಿತ್ರದಲ್ಲಿ ಹೊಸ ಪ್ರತಿಭೆಗಳು ನಟಿಸಿದ್ದರು. ಹನುಮಕ್ಕ, ಸೋಮಶೇಖರ್ ಬೋಳೇಗಾಂವ್, ಲೇಖಾ ನಾಯ್ಡು, ಭಾರತ್ ಜಿಬಿ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ನಾಲ್ಕು ಬೇರೆ ಬೇರೆ ಕಥೆಗಳ ಗುಚ್ಛ ಈ ರೂಪಾಂತರ. ಆದರೆ ಕ್ಲೈಮ್ಯಾಕ್ಸ್ನಲ್ಲಿ ಎಲ್ಲವೂ ಒಂದೆಡೆ ಬಂದು ಸೇರುತ್ತದೆ.
'ರೂಪಾಂತರ' ಕಥೆ ಭವಿಷ್ಯದ ಪ್ರಪಂಚದಲ್ಲಿ ಶುರುವಾಗುತ್ತದೆ. ನೀರು, ಗಾಳಿಗೆ ಹಾಹಾಕಾರ ಇರುವ ಕಾಲಘಟ್ಟ ಅದು. ಆಗ ದುಷ್ಟರ ಕೈಗೆ ಸಿಲುಕಿದ ಮುದುಕನೊಬ್ಬ ಕಥೆ ಹೇಳುವುದರೊಂದಿಗೆ ಸಿನಿಮಾ ಪ್ರಾರಂಭವಾಗುತ್ತದೆ. ಆತ ಹೇಳುವ ಬೇರೆ ಕಥೆಗಳು ಮುಂದೆ ಒಂದು ರೇಖೆಗೆ ಬಂದು ನಿಲ್ಲುತ್ತವೆ.
ಬಾಗಲಕೋಟೆಯಿಂದ ನಗರಕ್ಕೆ ಬರುವ ದಂಪತಿ ಕಥೆ ಒಂದ್ಕಡೆ ಇದ್ದರೆ ಅಪವಾದ ಹೊತ್ತ ಭಿಕ್ಷುಕಿಯ ನೋವಿನ ಕಥೆ ಮತ್ತೊಂದು ಕಡೆ. ಇನ್ನು ಮುದುಕ ಹೇಳುವ ಬೆಂಗಳೂರಿನ ರೌಡಿ ಕಥೆಯಲ್ಲಿ ರಾಜ್. ಶೆಟ್ಟಿ ಅಬ್ಬರಿಸಿದ್ದಾರೆ. ಈ ಮೂರು ಕಥೆಗಳ ನಡುವೆ ಮಾದಕ ವ್ಯಸನಿ ಯುವಕನ ನರಳಾಟದ ಗೋಳು ಮತ್ತೊಂದು ಕಥೆಯಲ್ಲಿದೆ.
ರಾಜ್. ಶೆಟ್ಟಿ ಚಿತ್ರಕಥೆಗೆ ಕೈ ಜೋಡಿಸಿರುವುದು ಚಿತ್ರಕ್ಕೆ ಮಾತ್ರವಲ್ಲ ಸಂಭಾಷಣೆಯನ್ನು ಬರೆದಿದ್ದಾರೆ. 'ರೂಪಾಂತರ' ಚಿತ್ರದ ಸ್ಟಾರ್ ಕಲಾವಿದನಾಗಿಯೂ ನಿಂತಿದ್ದಾರೆ. ಪ್ರವೀಣ್ ಶ್ರೇರಿಯಾನ್ ಛಾಯಾಗ್ರಹಣ, ಮಿದುನ್ ಮುಕುಂದನ್ ಸಂಗೀತ ಚಿತ್ರಕ್ಕೆ ಪ್ಲಸ್ ಆಗಿದೆ. ಜಾನಿ ಎಂಟರ್ಟೈನ್ಮೆಂಟ್ ಹಾಗೂ ಮ್ಯಾಂಗೊ ಪಿಕ್ಕಲ್ ಎಂಟರ್ಟೈನ್ಮೆಂಟ್ ಸಂಸ್ಥೆಗಳು ಜಂಟಿಯಾಗಿ ಸಿನಿಮಾ ನಿರ್ಮಿಸಿವೆ.

ಹಳ್ಳಿಯ ವಯಸ್ಸಾದ ದಂಪತಿಯ ಸಿಟಿ ಕನಸು, ಮಗು ಕದ್ದ ಆರೋಪ ಹೊತ್ತ ಭಿಕ್ಷುಕಿಯನ್ನು ವಿಚಾರಣೆ ನಡೆಸುವ ಪೊಲೀಸ್ ಕಾನ್ಸ್ಸ್ಟೇಬಲ್, ಐಟಿ ಉದ್ಯೋಗಿ ಜೊತೆ ರೌಡಿ ಕಿರಿಕ್, ಆಘಾತದಿಂದ ಮಾದಕ ಗೀಳಿಗೆ ಬಲಿಯಾದ ಯುವಕ ಹೀಗೆ ಕಥೆಗಳು ಸಾಗುತ್ತಾ ಹೋಗುತ್ತದೆ. ಅಲ್ಲಲ್ಲಿ ನೋಡುಗರ ತಾಳ್ಮೆ ಪರೀಕ್ಷಿಸುವ 'ರೂಪಾಂತರ' ಒಂದು ವಿಭಿನ್ನ ಅನುಭವ ಅಂತೂ ನೀಡುತ್ತದೆ.
ರಾಜ್. ಶೆಟ್ಟಿ ಬರವಣಿಗೆ 'ರೂಪಾಂತರ' ಚಿತ್ರದ ಹೈಲೆಟ್. ನಟನೆ ವಿಚಾರಕ್ಕೆ ಬಂದರೆ ವಯಸ್ಸಾದ ದಂಪತಿಯಾಗಿ ಹನುಮಕ್ಕ ಹಾಗೂ ಸೋಮಶೇಖರ್ ಬೋಳೇಗಾಂವ್ ಚಿತ್ರದ ಜೀವಾಳ. ಇನ್ನುಳಿದಂತೆ ಎಲ್ಲರೂ ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ವೀಕೆಂಡ್ನಲ್ಲಿ ಓಟಿಟಿ ಪ್ರಿಯರಿಗೆ 'ರೂಪಾಂತರ' ಒಳ್ಳೆಯ ಆಯ್ಕೆ ಎಂದು ಹೇಳಬಹುದು. ಜೊತೆಗೆ ತಮಿಳಿನ 'ರಘುತಾತ' ಹಾಗೂ ತೆಲುಗಿನ 'ಮಿಸ್ಟರ್ ಬಚ್ಚನ್' ಸಿನಿಮಾಗಳು ಕನ್ನಡಕ್ಕೆ ಡಬ್ ಆಗಿ ಬಂದಿವೆ.
ಒಂದ್ಕಡೆ ಶೆಟ್ರ 'ರೂಪಾಂತರ' ಸಿನಿಮಾ ಓಟಿಟಿಗೆ ಬಂದಿದ್ರೆ ಮತ್ತೊಂದು ಕಡೆ 'ಕೊಂಡಲ್' ಎನ್ನುವ ಸಿನಿಮಾ ತೆರೆಗೆ ಬಂದಿದೆ. 'ಕೊಂಡಲ್' ಮಲಯಾಳಂ ಸಿನಿಮಾ. ಈಗಾಗಲೇ ಕನ್ನಡ ಬಿಟ್ಟು ಮಲಯಾಳಂ ಹಾಗೂ ಹಿಂದಿ ಸಿನಿಮಾಗಳಲ್ಲಿ ರಾಜ್ ನಟಿಸುತ್ತಿದ್ದಾರೆ. ಕೆಲ ದಿನಗಳ ಹಿಂದೆ ಮಮ್ಮುಟಿ ಜೊತೆ ನಟಿಸಿದ್ದ 'ಟರ್ಬೊ' ಚಿತ್ರ ಸದ್ದು ಮಾಡ್ತಿದೆ. ಖಡಕ್ ಲುಕ್ನಲ್ಲಿ ಮಾಲಿವುಡ್ ಮಮ್ಮುಕ ಎದುರು ಶೆಟ್ರು ಅಬ್ಬರಿಸಿದ್ದರು.


Click it and Unblock the Notifications











